
ನವದೆಹಲಿ: ಟೀಂ ಇಂಡಿಯಾ ಅನುಭವಿ ಆರಂಭಿಕ ಬ್ಯಾಟರ್, ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿಗೆ ವಿದಾಯ ಘೋಷಿಸಿದ್ದಾರೆ. ಎಡಗೈ ಆರಂಭಿಕ ಬ್ಯಾಟರ್ ಆಗಿರುವ ಡೆಲ್ಲಿ ಮೂಲದ ಅಗ್ರಶ್ರೇಯಾಂಕಿತ ಬ್ಯಾಟರ್, ಟೀಂ ಇಂಡಿಯಾಗೆ ಹಲವಾರು ಬಾರಿ ಏಕಾಂಗಿಯಾಗಿ ಗೆಲುವು ತಂದುಕೊಟ್ಟಿದ್ದಾರೆ.
ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಂದೇಶದ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಧವನ್ ಪ್ರಕಟಿಸಿದ್ದಾರೆ. 2010ರಿಂದ 2022ರ ಅವಧಿಯ ಸುದೀರ್ಘ ವೃತ್ತಿಜೀವನದಲ್ಲಿ ಶಿಖರ್ ಧವನ್ 34 ಟೆಸ್ಟ್, 167 ಏಕದಿನ ಹಾಗೂ 68 ಟಿ20 ಪಂದ್ಯಗಳಲ್ಲಿ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇನ್ನು ಇದೇ ವೇಳೆ ಧವನ್ ತಾವು ಅಂತಾರಾಷ್ಟ್ರೀಯ ಕ್ರಿಕೆಟ್ ಮಾತ್ರವಲ್ಲದೇ ದೇಶಿ ಕ್ರಿಕೆಟ್ಗೂ ವಿದಾಯ ಘೋಷಿಸಿದ್ದಾರೆ. ಇನ್ನು ತಾವು ಐಪಿಎಲ್ನಲ್ಲಿ ಮುಂದುವರೆಯುವ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲವಾದರೂ, ಇನ್ನೊಂದು ವರ್ಷ ಧವನ್ ಐಪಿಎಲ್ ಆಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಧವನ್, ಪಂಜಾಬ್ ಕಿಂಗ್ಸ್ ತಂಡವನ್ನು ಮೊದಲಾರ್ಧದಲ್ಲಿ ನಾಯಕನಾಗಿ ಮುನ್ನಡೆಸಿದ್ದರು. ಆದರೆ ದ್ವಿತಿಯಾರ್ಧಕ್ಕೂ ಮುನ್ನ ಗಾಯಗೊಂಡ ಧವನ್ ಕೇವಲ ಬೆಂಚ್ಗಷ್ಟೇ ಸೀಮಿತವಾಗಿದ್ದರು.
"ನನಗೆ ಕ್ರಿಕೆಟ್ನಲ್ಲಿ ನನ್ನ ದೇಶವನ್ನು ಪ್ರತಿನಿಧಿಸಬೇಕು ಎನ್ನುವ ಒಂದೇ ಒಂದು ಕನಸಿತ್ತು. ಅದನ್ನು ನಾನು ಸಾಧಿಸಿದ್ದೇನೆ. ಈ ನನ್ನ ಪಯಣದಲ್ಲಿ ನನಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮೊದಲನೆಯದಾಗಿ ನನ್ನ ಕುಟುಂಬ, ನನ್ನ ಬಾಲ್ಯದ ಕೋಚ್ ಆಗಿದ್ದ ದಿವಂಗತ ತಾರಕ್ ಸಿನ್ಹಾ ಹಾಗೂ ಮದನ್ ಶರ್ಮಾ ಅವರಿಂದಲೇ ನಾನು ಕ್ರಿಕೆಟ್ನ ಆರಂಭಿಕ ಪಾಠಗಳನ್ನು ಕಲಿತಿದ್ದು" ಎಂದು ಧವನ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
"ಇನ್ನು ನನ್ನ ತಂಡಕ್ಕೆ ಧನ್ಯವಾದಗಳನ್ನು ಹೇಳಲೇಬೇಕು, ಯಾಕಂದರೆ ಅಷ್ಟು ದೀರ್ಘಕಾಲ ನಾನು ತಂಡದ ಜತೆಗಿದ್ದೆ. ನನಗೆ ಮತ್ತೊಂದು ಕುಟುಂಬ ಸಿಕ್ಕಂತೆ ಆಯಿತು. ಇದರಿಂದಲೇ ನಾನು ಹೆಸರು, ಪ್ರೀತಿ ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಲು ಸಾಧ್ಯವಾಯಿತು" ಎಂದು ಗಬ್ಬರ್ ಸಿಂಗ್ ಖ್ಯಾತಿಯ ಧವನ್ ಹೇಳಿದ್ದಾರೆ
"ಪೂರ್ಣ ಕಥೆಯನ್ನು ಓದಬೇಕೆಂದರೆ ನಾವು ಪುಟವನ್ನು ತಿರುವಿ ಹಾಕಲೇಬೇಕು ಎನ್ನುವ ಮಾತಿನಂತೆ, ಆದನ್ನೇ ನಾನೀಗ ಮಾಡುತ್ತಿದ್ದೇನೆ. ನಾನಿಂದು ಅಂತಾರಾಷ್ಟ್ರೀಯ ಹಾಗೂ ದೇಶಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ನಾನು ತುಂಬಾ ಶಾಂತ ರೀತಿಯಿಂದಲೇ ಈ ನಿರ್ಧಾರವನ್ನು ಕೈಗೊಂಡಿದ್ದೇನೆ. ಯಾಕೆಂದರೆ ನಾನು ದೇಶಕ್ಕಾಗಿ ಸಾಕಷ್ಟು ಪಂದ್ಯಗಳನ್ನು ಆಡಿದ್ದೇನೆ. ಈ ಅವಕಾಶ ನೀಡಿದ ಬಿಸಿಸಿಐ ಹಾಗೂ ಡೆಲ್ಲಿ ಕ್ರಿಕೆಟ್ ಸಂಸ್ಥೆಗೆ ಆಭಾರಿಯಾಗಿದ್ದೇನೆ. ಇದೇ ವೇಳೆ ನನ್ನ ಕ್ರಿಕೆಟ್ ಬದುಕಿನುದ್ದಕ್ಕೂ ಅಪಾರ ಪ್ರೀತಿ ಹಾಗೂ ಬೆಂಬಲ ನೀಡಿದ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ" ಎಂದು ಧವನ್ ಹೇಳಿದ್ದಾರೆ.
IPL 2025 ಕೆ ಎಲ್ ರಾಹುಲ್ ಜತೆ ಈ ಮೂವರು ಕನ್ನಡಿಗರನ್ನು ಕರೆತರಲು ಆರ್ಸಿಬಿ ಮಾಸ್ಟರ್ ಪ್ಲಾನ್..!
"ಮತ್ತೊಮ್ಮೆ ದೇಶವನ್ನು ಪ್ರತಿನಿಧಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ಪಡುವುದಕ್ಕಿಂತ, ಇಷ್ಟು ದೀರ್ಘಕಾಲ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ ಎಂದು ಖುಷಿ ಪಡಬೇಕು ಎಂದು ನನಗೆ ನಾನೇ ಹೇಳಿಕೊಳ್ಳುತ್ತೇನೆ. ಎಂದು ಶಿಖರ್ ಧವನ್ ಹೇಳಿದ್ದಾರೆ.
2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶಾಖಪಟ್ಟಣಂನಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಧವನ್, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 10 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಇದರಲ್ಲಿ ಏಕದಿನ ಕ್ರಿಕೆಟ್ನಲ್ಲಿ 17 ಹಾಗೂ ಟೆಸ್ಟ್ನಲ್ಲಿ 7 ಸೇರಿ ಒಟ್ಟು 24 ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದಾರೆ.
ಇನ್ನು 2013ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಶಿಖರ್ ಧವನ್ ಮಹತ್ವದ ಪಾತ್ರ ವಹಿಸಿದ್ದರು. ಆ ಟೂರ್ನಿಯಲ್ಲಿ ಶಿಖರ್ ಧವನ್ ಕೇವಲ 5 ಪಂದ್ಯಗಳನ್ನಾಡಿ 90.75ರ ಬ್ಯಾಟಿಂಗ್ ಸರಾಸರಿಯಲ್ಲಿ 2 ಶತಕ ಹಾಗೂ ಒಂದು ಅರ್ಧಶತಕ ಸಹಿತ 363 ರನ್ ಸಿಡಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.