ಶಿವಮೊಗ್ಗದಲ್ಲಿ ರಾಜ್ಯ ಮಹಿಳಾ ಕ್ರಿಕೆಟ್ ಟೂರ್ನಿ, ಬಿಸಿಸಿಐ ವೇಳಾಪಟ್ಟಿ ಪ್ರಕಟ!

By Suvarna NewsFirst Published Dec 24, 2022, 4:23 PM IST
Highlights

ಪ್ರಥಮ ಬಾರಿಗೆ ಬಿಸಿಸಿಐ ದೇಶದಲ್ಲಿ 15 ವರ್ಷ ವಯೋಮಿತಿಯ ಅಂತರ್ ರಾಜ್ಯ ಮಹಿಳಾ ಕ್ರಿಕೆಟ್ ಟೂರ್ನಿ ಆಯೋಜಿಸುತ್ತಿದೆ. ವಿವಿಧ ರಾಜ್ಯಗಳ 36 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದೆ. 
 

ಶಿವಮೊಗ್ಗ(ಡಿ.24): ಬಿಸಿಸಿಐ ಇದೇ ಮೊದಲ ಬಾರಿಗೆ 15 ವರ್ಷ ವಯೋಮಿತಿಯ ಅಂತರ್ ರಾಜ್ಯ ಮಹಿಳಾ ಕ್ರಿಕೆಟ್ ಟೂರ್ನಿ ಆಯೋಜಿಸುತ್ತಿದೆ. ವಿವಿಧ ರಾಜ್ಯಗಳ 36 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ. ರಾಜ್ಯದ 6 ಕಡೆಗಳಲ್ಲಿ ಈ ಟೂರ್ನಿ ನಡೆಯಲಿದೆ. ಡಿಸೆಂಬರ್ 26 ರಿಂದ ಜನವರಿ 3 ರ ವರೆಗೆ ಶಿವಮೊಗ್ಗದಲ್ಲಿ ಅಂತರ್ ರಾಜ್ಯ ಮಹಿಳಾ ಕ್ರಿಕೆಟ್ ಟೂರ್ನಿ ಆಯೋಜನೆಗೊಳ್ಳಲಿದೆ. ಈಗಾಗಲೇ ಶಿವಮೊಗ್ಗ ಮಹತ್ವದ ಟೂರ್ನಿ ಆಯೋಜನೆಗೆ ಸಕಲ ಸಿದ್ದತೆ ಮಾಡಿಕೊಂಡಿದೆ. ಈ ಕುರಿತು ಶಿವಮೊಗ್ಗದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನ ಸಂಚಾಲಕ ಸದಾನಂದ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಕ್ರಿಕೆಟ್ ಸಂಸ್ಥೆ ಶಿವಮೊಗ್ಗದ ಎರಡು ಮೈದಾನ ಹಾಗೂ  ಜೆಎನ್ ಸಿಸಿ ಮೈದಾನದಲ್ಲಿ ಪಂದ್ಯಾವಳಿಗಳು ನಡೆಯಲಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ 36 ತಂಡಗಳನ್ನು  6 ವಿಭಾಗಗಳಾಗಿ ವಿಂಗಡಿಸಲಾಗಿದೆ. ಎ,ಬಿ,ಸಿ,ಡಿ ಗುಂಪುಗಳಲ್ಲಿ ತಂಡಗಳು ಹೋರಾಟ ನಡೆಸಲಿದೆ. ಎ ಗುಂಪಿನ 6 ತಂಡಗಳ ಪಂದ್ಯಾವಳಿ ಗಳು ನವುಲೆಯ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ಜೆಎನ್ ಎನ್ ಸಿ ಇ ಮತ್ತು ಟರ್ಫ್ ಅಂಕಣದಲ್ಲಿ ನಡೆಯಲಿದೆ.

 

ಒಂದೇ ದಿನ 407 ರನ್ ಚಚ್ಚಿದ ಸಾಗರದ ಹುಡುಗ ತನ್ಮಯ್; ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ

ಎ ಗುಂಪಿನಲ್ಲಿ ಪಶ್ಚಿಮ ಬಂಗಾಳ, ತಮಿಳು ನಾಡು, ಉತ್ತರಖಂಡ, ವಿಧರ್ಭ, ಹಿಮಾಚಲ ಪ್ರದೇಶ ಮತ್ತು ತ್ರಿಪುರದ ತಂಡಗಳು ಶಿವಮೊಗ್ಗದಲ್ಲಿ ಆಡಲಿವೆ. ಇದು 35 ಒವರ್ ಗಳ ಏಕದಿನ ಪಂದ್ಯ ಆಗಿರಲಿದೆ. ಡಿ.26 ರಂದು  ಡಿಸಿ ಡಾ.ಸೆಲ್ವಮಣಿ, ಎಸ್ಪಿ ಮಿಥುನ್ ಕುಮಾರ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಬಿಸಿಸಿಐ ನ ತೀರ್ಪುಗಾರರು ಈ ಪಂದ್ಯಾವಳಿ ವೀಕ್ಷಿಸಲು ಆಗಮಿಸಲಿದ್ದಾರೆ.

ವಯೋ ಪರೀಕ್ಷೆ: ರಾಜ್ಯದ 14 ಆಟಗಾರ್ತಿಯರು ವಿಫಲ
ಚೊಚ್ಚಲ ಆವೃತ್ತಿಯ ರಾಷ್ಟ್ರೀಯ ಮಹಿಳಾ ಅಂಡರ್‌-15 ಏಕದಿನ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳಿರುವಾಗ ಕರ್ನಾಟಕದ 14 ಮಂದಿ ಆಟಗಾರ್ತಿಯರು ವಯೋಮಿತಿ ಪರೀಕ್ಷೆಯಲ್ಲಿ ವಿಫಲಗೊಂಡು ತಂಡದಿಂದ ಹೊರಬಿದ್ದಿದ್ದಾರೆ. ಅಕ್ಟೋಬರ್‌ನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) 10 ಜಿಲ್ಲೆಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಿ, 25 ಮಂದಿಯನ್ನು ತರಬೇತಿ ಶಿಬಿರಕ್ಕೆ ಆಯ್ಕೆ ಮಾಡಿತ್ತು. ಇತ್ತೀಚೆಗೆ ಬಿಸಿಸಿಐ ವಯಸ್ಸು ಪತ್ತೆಗಾಗಿ ನಡೆಸಿದ ಮೂಳೆ ಪರೀಕ್ಷೆಯಲ್ಲಿ ಅವರು ಪಾಲ್ಗೊಂಡಿದ್ದು, 11 ಮಂದಿ ಮಾತ್ರ ಪಾಸಾಗಿದ್ದಾರೆ. ಈ ಬಗ್ಗೆ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್‌ ಭಟ್‌, ‘ಕರ್ನಾಟಕ ಮಾತ್ರವಲ್ಲದೇ ಇತರೆ ರಾಜ್ಯಗಳ ಕೆಲ ಆಟಗಾರ್ತಿಯರೂ ಪರೀಕ್ಷೆಯಲ್ಲಿ ವಿಫಲಗೊಂಡಿದ್ದಾರೆ. ನಮ್ಮ ತಂಡಕ್ಕೆ 14 ಬದಲಿ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಯಾವುದೇ ಗೊಂದಲಗಳಿಲ್ಲದೇ ಟೂರ್ನಿಯಲ್ಲಿ ಆಡಲಿದ್ದಾರೆ’ ಎಂದು ತಿಳಿಸಿದ್ದಾರೆ. ಟೂರ್ನಿ ಡಿ.26ಕ್ಕೆ ಆರಂಭಗೊಳ್ಳಲಿದೆ.

KSCA: ಮಾಜಿ ಸ್ಪಿನ್ನರ್‌ ರಘುರಾಮ್‌ ಭಟ್‌ ಕೆಎಸ್‌ಸಿಎ ಅಧ್ಯಕ್ಷ

ಕೆಎಸ್‌ಸಿಎ ಧಾರವಾಡ ವಲಯಕ್ಕೆ ಸವಡಿ ಅಧ್ಯಕ್ಷ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಹುಬ್ಬಳ್ಳಿ-ಧಾರವಾಡ ವಲಯದ ಅಧ್ಯಕ್ಷರಾಗಿ ಸತತ ಐದನೇ ಬಾರಿಗೆ ಪಾಲಿಕೆಯ ಮಾಜಿ ಮೇಯರ್‌, ಹಾಲಿ ಸದಸ್ಯ ವೀರಣ್ಣ ಸವಡಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ನೂತನ ವ್ಯವಸ್ಥಾಪಕ ಸಮಿತಿ ಸಭೆಯಲ್ಲಿ ಈ ಆಯ್ಕೆಯನ್ನು ಘೋಷಿಸಲಾಗಿದೆ ಎಂದು ಸಮಿತಿ ಕಾರ್ಯದರ್ಶಿ ಶಂಕರ್‌ ಎ. ತಿಳಿಸಿದ್ದಾರೆ. ಬೆಳಗಾವಿ, ಕಾರವಾರ, ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳನ್ನು ಒಳಗೊಂಡ ಧಾರವಾಡ ವಲಯಕ್ಕೆ ಅಧ್ಯಕ್ಷರಾದ ವೀರಣ್ಣ ಸವಡಿ, ಹುಬ್ಬಳ್ಳಿ-ಧಾರವಾಡ ಅಷ್ಟೇ ಅಲ್ಲದೇ ಧಾರವಾಡ ವಲಯ ವ್ಯಾಪ್ತಿಯಲ್ಲಿ ಕ್ರಿಕೆಟ್‌ ಬೆಳವಣಿಗೆಗೆ ಅವಿರತ ಶ್ರಮವಹಿಸುತ್ತಿದ್ದಾರೆ. ಈ ಬದ್ಧತೆಯನ್ನು ಪರಿಗಣಿಸಿ ಕೆಎಸ್‌ಸಿಎ ಅವರನ್ನು ಐದನೇ ಬಾರಿಗೆ ಪುನರಾಯ್ಕೆ ಮಾಡಿದೆ. 

click me!