
ಕೆಲವು ಸೆಲೆಬ್ರಿಟಿಗಳು ಹಾಗೂ ಕೆಲವು ರಾಜಕಾರಣಿಗಳಿಗೆ ಹೆಚ್ಚೇನು ವ್ಯತ್ಯಾಸ ಇಲ್ಲ ಎನ್ನುವ ಮಾತೇ ಇದೆ. ದೇಶದಲ್ಲಿ ಯಾವುದಾದರೊಂದು ದುರ್ಘಟನೆ ನಡೆದ ಸಂದರ್ಭದಲ್ಲಿ, ಪತ್ರಕರ್ತರು ಪ್ರಶ್ನೆ ಕೇಳಿದರೆ ಆ ಘಟನೆಯ ಬಗ್ಗೆ ತಮಗೆ ಗೊತ್ತಿಲ್ಲ ಎಂದು ಹೇಳಲು ಆಗದೇ ಎಲ್ಲಾ ಗೊತ್ತಿರುವಂತೆ ವರ್ತಿಸಿ ಅಸಂಬಂಧ ಉತ್ತರ ಕೊಟ್ಟು ಟ್ರೋಲ್ ಆಗುವುದು ಹೊಸ ವಿಷಯವೇನಲ್ಲ. ಅದೇ ರೀತಿ ಟ್ರೋಲ್ಗೆ ಒಳಗಾಗಿರುವವರು ಬಾಲಿವುಡ್ ನಟಿ ಊರ್ವಶಿ ರೌಟೇಲಾ. ನಟ ಸೈಫ್ ಅಲಿ ಖಾನ್ ಅವರ ಮೇಲೆ ನಡೆದ ದಾಳಿ, ಚಾಕು ಇರಿತದ ಬಗ್ಗೆ ನಟಿಗೆ ಪ್ರಶ್ನೆ ಕೇಳಿದಾಗ ಅಸಂಬದ್ಧ ಉತ್ತರ ಕೊಟ್ಟು ಇನ್ನಿಲ್ಲದಂತೆ ಟ್ರೋಲ್ಗೆ ಒಳಗಾಗುತ್ತಿದ್ದಾರೆ ನಟಿ. ಈ ಘಟನೆಯ ಬಗ್ಗೆ ಅಭಿಪ್ರಾಯ ಕೇಳಿದಾಗ ನಟಿ, ಸೈಫ್ಗೆ ಏನಾಗಿದೆ ಎನ್ನುವುದು ತಿಳಿಯದಿದ್ದರೂ ತಿಳಿದಂತೆ ವರ್ತಿಸಿ, ತಮ್ಮ ವಜ್ರದ ಉಂಗುರ, ವಾಚ್ ಪ್ರದರ್ಶಿಸಿದ್ದರು! ಇದೀಗ ವಿಷಯ ಏನೆಂದು ತಿಳಿದು ಪರಿಪರಿ ಕ್ಷಮೆಯಾಚಿಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಪತ್ರಕರ್ತರೊಬ್ಬರು ಊರ್ವಶಿಗೆ ಸೈಫ್ ಬಗ್ಗೆ ಪ್ರಶ್ನಿಸಿದ್ದರು. ಆಗ ನಟಿ, 'ನನಗೆ ಮುಂಬೈನಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಕಳವಳವಿದೆ' ಎಂದಿದ್ದರು. ಇದೇ ವೇಳೆ ಸಿಕ್ಕಿದ್ದೇ ಛಾನ್ಸ್ ಎಂದುಕೊಂಡು ತಾವು ಧರಿಸಿದ್ದ ವಜ್ರದ ಉಂಗುರ ಮತ್ತು ವಜ್ರಲೇಪಿತ ವಾಚ್ ಪ್ರದರ್ಶಿಸುತ್ತಾ, 'ನೋಡಿ, ನನ್ನ ಡಾಕು ಮಹಾರಾಜ್ ಚಿತ್ರ ಬಾಕ್ಸ್ ಆಫೀಸ್ನಲ್ಲಿ 105 ಕೋಟಿ ರೂ.ಗಳನ್ನು ದಾಟಿದೆ. ನನ್ನ ತಾಯಿ ನನಗೆ ಈ ವಜ್ರಖಚಿತ ರೋಲೆಕ್ಸ್ ಅನ್ನು ಉಡುಗೊರೆಯಾಗಿ ನೀಡಿದರು, ನನ್ನ ತಂದೆ ನನಗೆ ಉಂಗುರ ಕೊಟ್ಟರು. ಆದರೆ ನಾವು ಅದನ್ನು ಹೊರಗೆ ಬಹಿರಂಗವಾಗಿ ಧರಿಸುವ ಆತ್ಮವಿಶ್ವಾಸ ಹೊಂದಿಲ್ಲ. ಯಾರಾದರೂ ನಮ್ಮ ಮೇಲೆ ದಾಳಿ ಮಾಡಬಹುದು ಎಂಬ ಅಭದ್ರತೆ ಕಾಡುತ್ತಲೇ ಇರುತ್ತದೆ. ಇದು ತುಂಬಾ ದುರದೃಷ್ಟಕರ' ಎಂದರು. ಈಕೆಗೆ ಏನೂ ತಿಳಿದಿಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ಪತ್ರಕರ್ತ ಸೈಫ್ ಅಲಿ ಖಾನ್ ಮತ್ತು ಅವರ ಕುಟುಂಬದ ವಿಷಯಕ್ಕೆ ನಟಿಯ ಮಾತನ್ನು ತಿರುಗಿಸಿದರು. ಆಗಲೂ ನಟಿ ಮಾತ್ರ ತಮ್ಮ ವಜ್ರದ ಉಂಗುರ ಮತ್ತು ವಾಚ್ ಮೇಲೆ ಗಮನ ಕೇಂದ್ರೀಕರಿಸಿದ್ದರು. ನಟಿಯ ಸಂದರ್ಶನದ ಕ್ಲಿಪ್ ರೆಡ್ಡಿಟ್ನಲ್ಲಿ ಅಪ್ಲೋಡ್ ಆಗಿದ್ದು, ಸಕತ್ ಟ್ರೋಲ್ಗೆ ಒಳಗಾಗುತ್ತಿದ್ದಾರೆ.
ಸೈಫ್ ಚಾಕು ಇರಿತದ ಘಟನೆಗೆ, ನಟಿ ಊರ್ವಶಿ ರೌಟೇಲಾ ವಾಚ್-ಉಂಗುರದ ಲಿಂಕ್! ಎತ್ತಣತ್ತ ಸಂಬಂಧವಿದು?
ಇದೀಗ ವಿಷಯ ತಿಳಿದು ಸೈಫ್ಗೆ ಕ್ಷಮೆ ಕೋರಿದ್ದಾರೆ ನಟಿ. "ಪ್ರಿಯ ಸೈಫ್ ಅಲಿ ಖಾನ್ ಸರ್, ಈ ಸಂದೇಶವು ನಿಮಗೆ ಶಕ್ತಿ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಪರಿಪರಿಯಾಗಿ ಈ ಮೂಲಕ ನಾನು ನಿಮ್ಮ ಕ್ಷಮೆ ಕೋರುತ್ತಿದ್ದೇನೆ. ನಿಮ್ಮ ಪರಿಸ್ಥಿತಿ ಇಷ್ಟು ಸೀರಿಯಲ್ ಇದೆ ಎಂದು ತಿಳಿದಿರಲಿಲ್ಲ. ನೀವು ಎದುರಿಸುತ್ತಿರುವ ಪರಿಸ್ಥಿತಿಯ ತೀವ್ರತೆಯ ಬಗ್ಗೆ ನನಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ. ಅದರ ಬಗ್ಗೆ ಅರಿಯದೇ ನಾನು, ಡಾಕು ಮಹಾರಾಜ್ ಸಿನಿಮಾ ಮತ್ತು ನಾನು ಪಡೆದ ಉಡುಗೊರೆಗಳ ಬಗ್ಗೆ ಮಾತನಾಡಿದೆ. ಇದೀಗ ನನಗೆ ನಾಚಿಕೆಯಾಗುತ್ತಿದೆ. ದಯವಿಟ್ಟು ನನ್ನ ಅಜ್ಞಾನ ಮತ್ತು ಸಂವೇದನಾಹೀನತೆಯ ಬಗ್ಗೆ ಪ್ರಾಮಾಣಿಕ ಕ್ಷಮೆಯಾಚನೆ ಮಾಡುತ್ತಿದ್ದೇನೆ. ಈಗ ನಿಮ್ಮ ಪ್ರಕರಣದ ಗಂಭೀರತೆ ನನಗೆ ತಿಳಿದಿದೆ. ತೀವ್ರವಾಗಿ ಭಾವುಕಳಾಗಿದ್ದೇನೆ. ನಿಮ್ಮ ಶಕ್ತಿಯ ಬಗ್ಗೆ ನನಗೆ ಅಪಾರ ಗೌರವವಿದೆ, ಬೇಗ ಗುಣಮುಖರಾಗಿ, ನಾನು ಯಾವುದೇ ರೀತಿಯಲ್ಲಿ ಸಹಾಯ ಅಥವಾ ಬೆಂಬಲವನ್ನು ನೀಡಲು ಸಾಧ್ಯವಾದರೆ, ದಯವಿಟ್ಟು ನನಗೆ ತಿಳಿಸಲು ಹಿಂಜರಿಯಬೇಡಿ. ಮತ್ತೊಮ್ಮೆ, ವಿಷಾದಿಸುತ್ತೇನೆ' ಎಂದಿದ್ದಾರೆ.
ಅಷ್ಟಕ್ಕೂ ನಟಿ ಊರ್ವಶಿ, ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತಾರೆ. ಕೆಲ ತಿಂಗಳ ಹಿಂದೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಚಿನ್ನದ ಐ ಫೋನ್ ಕಳೆದುಕೊಂಡೆ ಎಂದು ಹೇಳುವ ಮೂಲಕ ಸದ್ದು ಮಾಡಿದ್ದರು. ಅದಾದ ಬಳಿಕ ಈಕೆಯ ಹುಟ್ಟುಹಬ್ಬದಂದು ಗಾಯಕ ಯೋಯೋ ಸಿಂಗ್ ಚಿನ್ನದ ಕೇಕ್ ಮಾಡಿಸಿಕೊಂಡು ಬಂದು ಸುದ್ದಿಯಾಗಿದ್ದರು. ಕೊನೆಗೆ, ಅವರು ಜಾಲತಾಣದಲ್ಲಿ ಹಲ್ಚಲ್ ಸೃಷ್ಟಿಸಿದ್ದು, ಸ್ನಾನಕ್ಕೆಂದು ಬಾತ್ರೂಮ್ಗೆ ಹೋಗಿರುವ ವಿಡಿಯೋ ಒಂದು ವೈರಲ್ ಆಗಿದ್ದ ಕಾರಣದಿಂದ, ಈ ವಿಡಿಯೋದಲ್ಲಿ ನಟಿ ಕೂದಲನ್ನು ಸರಿ ಮಾಡಿಕೊಂಡು ಬಾತ್ರೂಮ್ಗೆ ಹೋಗುವುದನ್ನು ನೋಡಬಹುದು. ಅಲ್ಲಿ ಬಟ್ಟೆ ತೆಗೆಯಲು ಕೈಹಾಕಿದ್ದರು. ಅಷ್ಟರಲ್ಲಿ ವಿಡಿಯೋ ಕಟ್ ಆಗಿತ್ತು. ನಂತರ ನಟಿ, ಇದು ವಿಷಾದನೀಯ ಘಟನೆ ಎಂದಿದ್ದರು. ಆ ವಿಡಿಯೋ ನೋಡಿ ನನಗೂ ಆ ಕ್ಷಣದಲ್ಲಿ ಶಾಕ್ ಆಯಿತು. ಇದು ಹೇಗೆ ಲೀಕ್ ಆಯಿತು ಎನ್ನುವುದು ಗೊತ್ತಿಲ್ಲ. ಆದರೆ ಅದು ನನ್ನ ಸಿನಿಮಾದ ಶೂಟಿಂಗ್ ಕ್ಲಿಪ್ಪಿಂಗೇ ವಿನಾ ಅಸಲಿಯದ್ದು ಅಲ್ಲ ಎಂದಿದ್ದರು.
ನನ್ನ ಜಾತಕದಲ್ಲಿ ಕಟನಿ ಯೋಗ, ಮದ್ವೆಯಾದ್ರೆ ತೊಂದ್ರೆ ಎನ್ನುತ್ತಲೇ ನೋವು ಬಿಚ್ಚಿಟ್ಟ ಊರ್ವಶಿ ರೌಟೇಲಾ !
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.