ಡಿ ಬಾಸ್ ನೀವಂದುಕೊಂಡ ಹಾಗಲ್ಲ ಗೊತ್ತಾ!

By Suvarna NewsFirst Published Feb 16, 2021, 1:38 PM IST
Highlights

ಡಿ ಬಾಸ್, ಬಾಕ್ಸ್ ಆಫೀಸ್ ಸುಲ್ತಾನಾ, ಚಾಲೆಂಜಿಂಗ್ ಸ್ಟಾರ್ ಎಲ್ಲವೂ ಆಗಿರುವ ದರ್ಶನ್ ತೂಗುದೀಪ ಅವರ ಬರ್ತ್ ಡೇ. ಅವರು ಬೆಳೆದು ಬಂದ ಹಾದಿ, ಈಗ ಬದುಕುತ್ತಿರುವ ರೀತಿ ಕಂಡು ಸ್ಫೂರ್ತಿ ಪಡೆದವರು ಹಲವರು. ಅವರನ್ನು ಡಿ ಬಾಸ್ ಅಂತ ಕರೆದು ಮೆರೆಸಿದವರು ಹಲವರು. ಆದರೆ ದರ್ಶನ್ ನೀವಂದುಕೊಂಡ ಹಾಗಲ್ಲ.

ಡಿ ಬಾಸ್, ಬಾಕ್ಸ್ ಆಫೀಸ್ ಸುಲ್ತಾನಾ, ಚಾಲೆಂಜಿಂಗ್ ಸ್ಟಾರ್ ಎಲ್ಲವೂ ಆಗಿರುವ ದರ್ಶನ್ ತೂಗುದೀಪ ಅವರ ಬರ್ತ್ ಡೇ. ಅವರು ಬೆಳೆದು ಬಂದ ಹಾದಿ, ಈಗ ಬದುಕುತ್ತಿರುವ ರೀತಿ ಕಂಡು ಸ್ಫೂರ್ತಿ ಪಡೆದವರು ಹಲವರು. ಅವರನ್ನು ಡಿ ಬಾಸ್ ಅಂತ ಕರೆದು ಮೆರೆಸಿದವರು ಹಲವರು. ಆದರೆ ದರ್ಶನ್ ನೀವಂದುಕೊಂಡ ಹಾಗಲ್ಲ. 

ದರ್ಶನ್ ತೂಗುದೀಪ ತಂದೆ ತೂಗುದೀಪ ಶ್ರೀನಿವಾಸ್ ಕನ್ನಡದ ಪ್ರಸಿದ್ಧ ಖಳನಟ. ಶಾಲಾ ದಿನಗಳಿಂದಲೇ ಅದ್ಭುತ ಅಭಿನಯದ ಮೂಲಕ ಶಹಭಾಸ್ ಅನಿಸಿಕೊಂಡವರು. ಮುಂದೆ ಎಂಪಿ ಶಂಕರ್ ಅವರು ಶ್ರೀನಿವಾಸ್ ಅವರನ್ನು ಒತ್ತಾಯದಿಂದ ನಾಟಕದಲ್ಲಿ ಅಭಿನಯಿಸುವಂತೆ ಹೇಳುತ್ತಾರೆ. ತನ್ನ ಕಾಲೇಜು ವಿದ್ಯಾಭ್ಯಾಸಕ್ಕೆ ಅರ್ಧಕ್ಕೆ ತೊರೆದು ಶ್ರೀನಿವಾಸ್ ರಂಗಭೂಮಿಗೆ ಬರುತ್ತಾರೆ. ಅಲ್ಲಿಂದ ಸಿನಿಮಾ ಹಾದಿ. ಅದು 1966ನೇ ಇಸವಿ. ಕೆಎಸ್‌ಎಲ್‌ ಸ್ವಾಮಿ ಅವರ 'ತೂಗುದೀಪ' ಚಿತ್ರದಲ್ಲಿ ಶ್ರೀನಿವಾಸ್ ಅಮೋಘ ಅಭಿನಯ ತೋರುತ್ತಾರೆ. ಆಮೇಲಿಂದ ಅವರ ಹೆಸರಿನ ಜೊತೆಗೇ ತೂಗುದೀಪವೂ ಸೇರಿಕೊಳ್ಳುತ್ತೆ. ಈಗ ಅವರ ಮಗ ದರ್ಶನ್ ಹೆಸರಲ್ಲೂ ಆ ತೂಗುದೀಪ ರಾರಾಜಿಸುತ್ತಿದೆ. ಒಂದು ಕಾಲದ ಮಹಾನ್ ಖಳನಟನಾಗಿ ಮೆರೆದ ಅವರ ಬದುಕಿನ ಕೊನೆಯ ದಿನಗಳು ಬಹಳ ಕಠಿಣವಾಗಿದ್ದವು. ಸಕ್ಕರೆ ಖಾಯಿಲೆ ಜೊತೆಗೆ ಕಿಡ್ನಿ ವೈಫಲ್ಯವೂ ಆದಾಗ ದರ್ಶನ್ ತಾಯಿ ಮೀನಾ ತೂಗುದೀಪ ಅವರೇ ತಮ್ಮ ಕಿಡ್ನಿ ಕೊಟ್ಟು ಗಂಡನನ್ನು ಉಳಿಸಿಕೊಳ್ಳುತ್ತಾರೆ. ಪತಿಯನ್ನು ಉಳಿಸಿಕೊಳ್ಳಲು ಹಗಲಿರುಳೂ ಕಷ್ಟಪಡುತ್ತಾರೆ ಮೀನಾ. ಆಗ ಅಮ್ಮನ ಕಷ್ಟಕ್ಕೆ ನೆರವಾಗಲು ಮುಂದೆ ಬಂದದ್ದು ದರ್ಶನ್ ಎಳೆಯ ಹೆಗಲು. ಹಾಲು ಮಾರುತ್ತಾ, ಲೈಟ್ ಬಾಯ್ ಆಗಿ ದುಡಿಯುತ್ತಾ ಅಮ್ಮನಿಗೆ ನೆರವಾಗುತ್ತಾರೆ ದರ್ಶನ್. ಇಷ್ಟೆಲ್ಲ ಆದರೂ ವೈದ್ಯರು ಮಾಡಿದ ಎಡವಟ್ಟು ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಅವರನ್ನೇ ಬಲಿ ಪಡೆಯುತ್ತೆ.

ರಾಜ್ಯದ ಕೃಷಿ ಇಲಾಖೆಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ರಾಯಭಾರಿ ...

ಅಪ್ಪ ತೀರಿಕೊಂಡಾಗ ದರ್ಶನ್ ಹದಿನೆಂಟು ವರ್ಷದ ಹುಡುಗ. ಅಷ್ಟರಲ್ಲಾಗಲೇ ಬದುಕು ಅವರಿಗೆ ಸಾಕಷ್ಟು ಕಲಿಸಿತ್ತು. ಅಂದು ಕಲಿತ ಬದುಕಿನ ಪಾಠಗಳನ್ನು ಅವರು ಇಂದಿಗೂ ಮರೆತಿಲ್ಲ. ಇವತ್ತು ದರ್ಶನ್ ವ್ಯಕ್ತಿತ್ವದಲ್ಲಿರುವ ನೇರ ನಡೆ, ಇತರರಿಗೆ ನೆರವಾಗುವ ಗುಣ, ಕೆಲವೊಂದು ವಿಚಾರದಲ್ಲಿ ಕಠಿಣತೆ ಎಲ್ಲ ಆ ಅನುಭವದಿಂದ ಬಂದದ್ದು.
ಅಂಥಾ ದೊಡ್ಡ ಖಳ ನಟನ ಮಗನಾದರೂ ದರ್ಶನ್ ಬದುಕಿನ ಆರಂಭದ ದಿನಗಳು ಬಹಳ ಕಠಿಣವಾಗಿದ್ದವು. ಸಿನಿಮಾದಲ್ಲಿ ಲೈಟಿಂಗ್, ಸೌಂಡ್ ಇತ್ಯಾದಿ ಕೆಲಸಗಳನ್ನು ಮಾಡುತ್ತಲೇ ಅವರು ಕಲಾವಿದರ ನಟನೆಯನ್ನು ಗಮನಿಸುತ್ತಿದ್ದರು. ತಾನೂ ಮುಂದೊಂದು ದಿನ ನಟನಾಗಬಹುದೇನೋ ಎಂದೆಲ್ಲ ಅಂದುಕೊಳ್ಳುತ್ತಿದ್ದರು. ಆದರೆ ಅಂದುಕೊಂಡದ್ದಲ್ಲೇ ಈಡೇರುವ ಬಗ್ಗೆ ಅವರಿಗೂ ಸಾಕಷ್ಟು ಅನುಮಾನಗಳಿದ್ದವು. ಈಗ ಸಿನಿಮಾ ಇಂಡಸ್ಟ್ರಿಯನ್ನು ತಗೊಂಡರೆ ಅದೆಷ್ಟು ಜನ ಲೈಟಿಂಗ್ ಮಾಡುತ್ತಾ ಹೊಟ್ಟೆಹೊರೆಯುತ್ತಿಲ್ಲ! ಅವರಲ್ಲಿ ಒಂದಿಷ್ಟು ಜನರಾದರೂ ನಟನಾಗುವ ಕನಸು ಕಂಡಿರಬಹುದು. ಆದರೆ ಅವರೆಲ್ಲ ದರ್ಶನ್ ಥರ ಆಗೋದು ಬಹಳ ಕಷ್ಟ. ಅದೊಂದು ಕೆಪ್ಯಾಸಿಟಿ. ಕೆಲವರಿಗೆ ಮಾತ್ರ ವರ್ಕೌಟ್ ಆಗುತ್ತೆ. 

ದರ್ಶನ್ ಹುಟ್ಟುಹಬ್ಬಕ್ಕೂ ಮುನ್ನವೇ ವೈರಲ್ ಆಯ್ತು ಕಾಮನ್ ಡಿಪಿ! ...

ಲೈಟಿಂಗ್‌ ಕೆಲಸ ಮಾಡುವಾಗಲೂ ದರ್ಶನ್‌ಗೆ ಎಂಥಾ ಶ್ರದ್ಧೆ ಅಂದರೆ ದೊಡ್ಡ ದೊಡ್ಡ ಲೈಟ್‌ಗಳನ್ನು ಒಬ್ಬನೇ ಹೊರುತ್ತಿದ್ದರು. ಒಮ್ಮೆ ಅದನ್ನು ಗಮನಿಸಿದ ಪಾರ್ವತಮ್ಮ ರಾಜ್‌ಕುಮಾರ್‌, ನಿರ್ದೇಶಕರನ್ನು ಕರೆದು ಕೈ ಮುಗಿದು ಹೇಳಿದರಂತೆ, ಆ ಹುಡುಗನ ಮೇಲೆ ಹೆಚ್ಚು ಹೊರೆ ಹೊರೆಸಬೇಡಿ ಅಂತ. ಅದಕ್ಕೆ ತೂಗುದೀಪ ಶ್ರೀನಿವಾಸ್‌ ಮೇಲಿದ್ದ ಗೌರವವೂ ಒಂದು ಕಾರಣ. 


 ಇನ್ನೊಂದು ವಿಚಾರ ಗೊತ್ತಾ, ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಅವರಿಗೆ ಮಗ ಸಿನಿಮಾ ಜಗತ್ತಿಗೆ ಕಾಲಿಡಲೇ ಬಾರದು ಅಂತ ಹಠ ಇತ್ತು. ಹೀಗಾಗಿ ಅವರು ಬದುಕಿರುವವರೆಗೂ ದರ್ಶನ್ ನಟನೆಯ ಕನಸನ್ನು ಮರೆತೇ ಬಿಟ್ಟ ಹಾಗಿದ್ದರು. ಆದರೆ ಅವರೂ ಕಲಾವಿದನ ಮಗನೇ ಅಲ್ವಾ, ಅಪ್ಪ ತೀರಿಕೊಂಡ ಸ್ವಲ್ಪ ಕಾಲಕ್ಕೇ ನೀನಾಸಂ ರಂಗಶಿಕ್ಷಣ ಕೇಂದ್ರಕ್ಕೆ ಸೇರಿ ಅಭಿನಯ ಕಲಿಯಲು ಹೊರಟರು. ಈ ನಡುವೆ ಹೊಟ್ಟೆಪಾಡಿಗಾಗಿ ಸೋಪ್ ಆಡ್‌ನಲ್ಲಿ ನಟಿಸುತ್ತಿದ್ದರು. ಆಮೇಲೆ ಟೆಲಿ ಸೀರಿಯಲ್‌ನಲ್ಲಿ ಪಾತ್ರ ಮಾಡಿ ಮೆಜೆಸ್ಟಿಕ್‌ ಸಿನಿಮಾ ಬಳಿಕ ಕನ್ನಡದ ಚಾಲೆಂಜಿಂಗ್ ಸ್ಟಾರ್ ಆಗಿ ಮೆರೆದರು. 
"
ಇಂದಿಗೂ ಅವರು ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಎಷ್ಟೋ ಜನ ಬದುಕು ಕಂಡುಕೊಳ್ಳಲು ನೆರವಾಗಿದ್ದಾರೆ. ಶೇಷಾದ್ರಿಪುರದಲ್ಲಿ ಬಿರಿಯಾನಿ ಹೊಟೇಲ್ ನಡೆಸುವ ಕೃಷ್ಣ ದರ್ಶನ್ ಸಹಾಯ ನೆನೆಸುತ್ತಾರೆ. ಆದರೆ ದರ್ಶನ್‌ ಮಾತ್ರ ಇದ್ಯಾವುದನ್ನೂ ನೆನಪಿಟ್ಟುಕೊಂಡಿಲ್ಲ. ಹೀಗಾಗಿ ಡಿ ಬಾಸ್ ಅಂದರೆ ತೋರಿಕೆಯ ಖದರು, ಗತ್ತು ಅಲ್ಲವೇ ಅಲ್ಲ. ಡಿ ಬಾಸ್‌ ಅಂದರೆ ಮಾನವೀಯತೆ, ಛಲ, ಶ್ರದ್ಧೆ, ನಟನೆಯ ಗೀಳು. ಅಂಥಾ ಸ್ಟಾರ್ ನಟನಿಗೆ ಹ್ಯಾಪಿ ಬರ್ತ್ ಡೇ ಹೇಳಲೇ ಬೇಕು. 



 

click me!