
ಗಾನ ಕೋಗಿಲೆ ಎಸ್ ಜಾನಕಿ ಅಸ್ತಂಗತ
'ದಕ್ಷಿಣ ಭಾರತದ ಗಾನಕೋಗಿಲೆ" ಎಂದೇ ಪ್ರಸಿದ್ಧರಾದ ಮೇರು ಹಿನ್ನೆಲೆ ಗಾಯಕಿ ಎಸ್. ಜಾನಕಿಯವರು, ಕರ್ನಾಟಕದ ಮೈಸೂರಿನಲ್ಲಿ ತಮ್ಮ ಕೊನೆಯ ಉಸಿರು ಚೆಲ್ಲಿದ್ದಾರೆ. ಎಸ್ ಜಾನಕಿ ಅವರು ಭಾರತೀಯ ಚಿತ್ರರಂಗ ಕಂಡ ಅತ್ಯದ್ಭುತ ಹಿನ್ನಲೆ ಗಾಯಕಿ. ಜಗತ್ತಿನ 22ಕ್ಕೂ ಅಧಿಕ ಭಾಷೆಗಳ ಹಾಡುಗಳನ್ನು ಹಾಡಿರುವ ಎಸ್ ಜಾನಕಿಯವರು ಭಾರತದ ಸರ್ಕಾರದ ಅತ್ಯನ್ನತ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಎಸ್ ಜಾನಕಿಯವರು ಗಾಯಕಿಯಾಗಿ ಮಾತ್ರವಲ್ಲದೇ ಗೀತಸಾಹಿತಿ ಮತ್ತು ಸಂಗೀತ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಆದರೆ, ಅವರ ಸಂಗೀತದ ಅಪರಿಮಿತ, ಅಮೋಘ ಸಾಧನೆಯ ಎದುರು ಬೇರೆ ಎಲ್ಲವೂ ಗೌಣವಾಗಿವೆ ಎನ್ನಬಹುದು. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಾವಿರಾರು ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಭಾರತದ ಹಲವು ಭಾಷೆಗಳಲ್ಲಿ ಹಾಡಿರುವ ಎಸ್ ಜಾನಕಿಯವರು ತಮ್ಮ ಸುದೀರ್ಘ ಸಂಗೀತದ ಪಯಣದಲ್ಲಿ ಸುಮಾರು 48,000 ಸಾವಿರ ಹಾಡುಗಳಿಗೆ ಧ್ವನಿಯಾಗಿರುವ ಎಸ್ ಜಾನಕಿಯವರು 10,000ಕ್ಕೂ ಹೆಚ್ಚು ಸಿನಿಮಾ ಗೀತೆಗಳಿಗೆ ಹಿನ್ನೆಲೆ ಗಾಯಕಿಯಾಗಿದ್ದಾರೆ. ತಮ್ಮ ಅದ್ಭುತ ಧ್ವನಿ ವೈವಿಧ್ಯತೆಗೆ ಹೆಸರಾಗಿರುವ ಎಸ್ ಜಾನಕಿಯವರು ಚಿಕ್ಕ ಮಕ್ಕಳಂತೆ ಕೂಡ ಹಾಡಬಲ್ಲವರಾಗಿದ್ದು, ಅನೇಕ ಹಾಡುಗಳನ್ನು ಮಕ್ಕಳಂತೆ ಹಾಡಿ ಸಂಗೀತಪ್ರೇಮಿಗಳನ್ನು ರಂಜಿಸಿದ್ದಾರೆ.
'ದಕ್ಷಿಣ ಭಾರತದ ಕೋಗಿಲೆ' ಎಂದೇ ಖ್ಯಾತಿ ಪಡೆದಿದ್ದ ಗಾಯಕಿ ಎಸ್ ಜಾನಕಿಯವರು ತಮ್ಮ 88ನೆಯ ವಯಸ್ಸಿನಲ್ಲಿ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಅವರನ್ನು ಭೌತಿಕವಾಗಿ ಕಳೆದುಕೊಂಡಿರುವ ಭಾರತ ಹಾಗೂ ಜಗತ್ತಿನ ಸಂಗೀತಪ್ರೇಮಿಗಳು ಈ ಸಂಗೀತದ ಮೇರುಪ್ರತಿಭೆಯ ಅಗಲುವಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ.
ಎಸ್ ಜಾನಕಿಯವರು 1938 ರಲ್ಲಿ ಆಂಧ್ರಪ್ರದೇಶದ ಗುಂಟೂರಿನ ಹಳ್ಳಿಯಲ್ಲಿ ಜನಿಸಿದರು. ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿಯಿದ್ದ ಜಾನಕಿಯವರು ನಾದಸ್ವರ ವಿದ್ವಾನ್ ಶ್ರೀ ಪೈಡಿಸ್ವಾಮಿಯವರ ಹತ್ತಿರ ಸಂಗೀತ ಕಲಿತರು. ತಮ್ಮ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಗಾಯನ ಆರಂಭಿಸಿದ ಜಾನಕಿಯವರು ತಮ್ಮ ಚಿಕ್ಕಪ್ಪನ ಸಲಹೆಯಂತೆ ಚೆನ್ನೈಗೆ ಬಂದು ಎವಿಎಮ್ ಸ್ಟುಡಿಯೋದಲ್ಲಿ ಗಾಯಕಿಯಾಗಿ ಸೇರಿದರು. 1957 ರಲ್ಲಿ ಚಿತ್ರಗಳಲ್ಲಿ ಹಾಡಲು ಆರಂಭಿಸಿದ ಜಾನಕಿ ಅದೇ ವರ್ಷದಲ್ಲಿ ಆರು ಬಾಷೆಗಳಲ್ಲಿ ಹಾಡಿದರು.
ಸಂಗೀತ ನಿರ್ದೇಶಕ ಇಳಯರಾಜ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಎಲ್ಲಾ ಸಂಗೀತ ನಿರ್ದೇಶಕರು ಹಾಗೂ ಸಾಹಿತಿಗಳ ಹಾಡುಗಳಿಗೆ ಧ್ವನಿಯಾಗಿದ್ದಾರೆ ಎಸ್ ಜಾನಕಿಯವರು. ಮತ್ತು ಹಿನ್ನಲೆ ಗಾಯಕ ಎಸ್.ಪಿ.ಬಾಲಸುಪ್ರಬ್ರಹ್ಮಣ್ಯಂ ಜೊತೆ ಅತಿ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದಾರೆ. ಕನ್ನಡದಲ್ಲಿ ಡಾ. ರಾಜಕುಮಾರ್ ಜೊತೆ ಅತಿ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಮೇರು ಗಾಯಕಿ ಎಸ್ ಜಾನಕಿಯವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ. ಎಸ್ ಜಾನಕಿಯವರು 1959ರಲ್ಲಿ ವಿ ರಾಮಪ್ರಸಾದ್ರನ್ನು ವಿವಾಹವಾದರು. 1997 ರಲ್ಲಿ ಪತಿಯ ಮರಣದ ನಂತರ ಪುತ್ರನ ಜೊತೆ ಹೈದರಾಬಾದಿನಲ್ಲಿ ನೆಲೆಸಿದ್ರು. ಆ ಬಳಿಕ ನವೀನ್ ಅನ್ನೋ ಕೇರ್ ಟೇಕರ್ ಒಬ್ಬರ ಜೊತೆ ಮೈಸೂರಿನಲ್ಲಿ ನೆಲೆಸಿದ್ರು ಈ ಲೆಜೆಂಡ್ ಗಾಯಕಿ ಎಸ್ ಜಾನಕಿ.
ಕಳೆದ 10 ವರ್ಷಗಳಿಂದ ಚಿತ್ರರಂಗದ ಹಿನ್ನೆಲೆ ಗಾಯನದಿಂದ ದೂರವಿದ್ದ ಎಸ್. ಜಾನಕಿಯವರು 2017, ಅಕ್ಟೋಬರ್ 28ರಂದು ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರದಲ್ಲಿ ತಮ್ಮ ಸುದೀರ್ಘ ಸಂಗೀತ ಪಯಣಕ್ಕೆ ಅಧಿಕೃತವಾಗಿ ವಿದಾಯ ಘೋಷಿಸಿದ್ದರು. ಮಲಯಾಳಂನ ‘10 ಕಲ್ಪನಕಳ್’ ಚಿತ್ರದ ‘ಅಮ್ಮಪೂವಿನು’ ಎಂಬ ಹಾಡು ಅವರ ವೃತ್ತಿ ಬದುಕಿನ ಕೊನೆಯ ಹಾಡು.
ಎಸ್. ಜಾನಕಿ ಅವರ ಏಕೈಕ ಪುತ್ರ ಮುರಳಿ ಕೃಷ್ಣ. ಅವರು ವೃತ್ತಿಯಲ್ಲಿ ಭರತನಾಟ್ಯ ಕಲಾವಿದರಾಗಿದ್ರು. ದುರದೃಷ್ಟವಶಾತ್, ಮುರಳಿ ಕೃಷ್ಣ ತಮ್ಮ 65ನೇ ವಯಸ್ಸಿನಲ್ಲಿ 2026ರ ಜನವರಿ 22ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಆ ಬಳಿಕ ಸಾಕುಮಗ ನವೀನ್ ಜೊತೆಗೆ ಎಸ್ ಜಾನಕಿ ವಾಸವಿದ್ದರು. ಕಳೆದ ವಾರವಷ್ಟೇ ಕೊಲ್ಲೂರು ದೇಗುಲಕ್ಕೆ ಭೇಟಿ ಕೊಟ್ಟಿದ್ದರು ಎಸ್.ಜಾನಕಿ.
ಇಂದು ಮಧ್ಯಾಹ್ನ, ಜುಲೈ 11, 2026 ರಂದು ಮಧ್ಯಾಹ್ನ 12:49 ಕ್ಕೆ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ಆಸ್ಪತ್ರೆಗೆ ದಾಖಲಿಸಿದಾಗ ಅವರ ಸ್ಥಿತಿ ಗಂಭೀರವಾಗಿತ್ತು. ಅವರನ್ನು ತಕ್ಷಣವೇ ತಪಾಸಣೆ ಮಾಡಿ ಹೆಚ್ಚಿನ ನಿರ್ವಹಣೆಗಾಗಿ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು. ತೀವ್ರ ವೈದ್ಯಕೀಯ ಆರೈಕೆ ಮತ್ತು ನುರಿತವೈದ್ಯರ ತಂಡದ ನಿರಂತರ ಮೇಲ್ವಿಚಾರಣೆಯ ಹೊರತಾಗಿಯೂ, ಚಿಕಿತ್ಸೆಯ ಸಮಯದಲ್ಲಿ ಅವರಿಗೆ ಹೃದಯ ಸ್ತಂಭನ ಉಂಟಾಯಿತು. ಸಂಜೆ 7:30 ಕ್ಕೆ ನಿಧನರಾದರು ಎಂದು ಘೋಷಿಸಲಾಯಿತು.
ಈ ಮೂಲಕ, 'ದಕ್ಷಿಣ ಭಾರತದ ಕೋಗಿಲೆ' ಎಂದೇ ಖ್ಯಾತಿ ಪಡೆದಿದ್ದ ಗಾಯಕಿ ಎಸ್ ಜಾನಕಿಯವರು ತಮ್ಮ 88ನೆಯ ವಯಸ್ಸಿನಲ್ಲಿ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಅವರನ್ನು ಭೌತಿಕವಾಗಿ ಕಳೆದುಕೊಂಡಿರುವ ಭಾರತ ಹಾಗೂ ಜಗತ್ತಿನ ಸಂಗೀತಪ್ರೇಮಿಗಳು ಈ ಸಂಗೀತದ ಮೇರುಪ್ರತಿಭೆಯ ಅಗಲುವಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.