
ಕನ್ನಡ ಕಿರುತೆರೆಯಲ್ಲಿ ಅನೇಕ ಧಾರಾವಾಹಿಗಳು(Serials) ಪ್ರೇಕ್ಷಕರನ್ನು ರಂಜಿಸುತ್ತಿವೆ. ಧಾರಾವಾಹಿಗಳ ನಡುವೆ ಸಿಕ್ಕಾಪಟ್ಟೆ ಪೈಪೋಟಿ ಕೂಡ ನಡೆಯುತ್ತಿವೆ. ಹಾಗಾಗಿ ಯಾವ ರೀತಿ ವಿಭಿನ್ನವಾದ ಧಾರಾವಾಹಿಗಳನ್ನು ಪ್ರೇಕ್ಷಕರ ಮುಂದಿಡಬಹುದು ಎಂದು ಯೋಚಿಸಿ ಪ್ರೇಕ್ಷಕರ ಮನಸ್ಸಿಗೆ ಮುಟ್ಟುವ ಧಾರಾವಾಹಿಗಳನ್ನು ನಿರ್ಮಾಣ ಮಾಡಿ ಪ್ರಸಾರ ಮಾಡುತ್ತಿವೆ ವಾಹಿನಿಗಳು. ಇತ್ತೀಚಿನ ದಿನಗಳಲ್ಲಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ಧಾರಾವಾಹಿಗಳಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೆಟ್ಟದ ಹೂವು(Bettada Hoovu) ಧಾರಾವಾಹಿ ಕೂಡ ಒಂದು. ಈ ಧಾರಾವಾಹಿ ಬಗ್ಗೆ ಯಾಕೆ ಇಷ್ಟೆಲ್ಲ ಪೀಠಿಕೆ ಅಂತಿದ್ದೀರಾ, ಇದಕ್ಕೆ ಕಾರಣ ಹೂವಿ ಪಾತ್ರದಲ್ಲಿ ನಟಿಸಿರುವ ನಾಯಕಿಯ ಬಗ್ಗೆ ಹಿರಿಯ ನಟ ಶಂಕರ್ ಅಶ್ವಥ್ ಇಟ್ರಸ್ಟಿಂಗ್ ಮಾಹಿತಿ ಬಹಿರಂಗ ಪಡಿಸಿದ್ದಾರೆ.
ಬೆಟ್ಟದ ಹೂವು ಧಾರಾವಾಹಿಯಲ್ಲಿ ನಾಯಕಿ ಹೂವಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿಯ ನಿಜವಾದ ಹೆಸರು ಶ್ರೀವಿದ್ಯಾ(Shri Vidya). ಮೂಲತಃ ಶೃಂಗೇರಿಯವರಾದ ಶ್ರೀವಿದ್ಯಾ ಇದೀಗ ಹೂವಿಯಾಗಿ ಕನ್ನಡ ಕಿರುತೆರೆ ಪ್ರೇಕ್ಷಕರ ಹೃದಯಗೆದ್ದಿದ್ದಾರೆ. ನಟಿ ಶ್ರೀವಿದ್ಯಾ ಬಗ್ಗೆ ಶಂಕರ್ ಅಶ್ವಥ್ ಹೆಮ್ಮೆಯ ಮಾತುಗಳನ್ನು ಆಡಿದ್ದಾರೆ. ಪಿಜಿಗೆ ಬಂದ ಹೆಣ್ಣುಮಗಳು ಇಂದು ಎಲ್ಲರ ಮನಗೆದ್ದಿದ್ದಾರೆ ಎಂದು ಶಂಕರ್ ಅಶ್ವಥ್(Shankar Ashwath) ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
'ನಮ್ಮ ಮನೆಯಲ್ಲಿ ಮೊಗ್ಗಾಗಿದ್ದ ಹೂ ಇಂದು ಬೆಟ್ಟದ ಹೂ ಆಗಿ ಅರಳಿತು. ನಾನು ಹೆಣ್ಣು ಮಗುವಿನ ತಂದೆ ಆಗಬೇಕೆಂಬ ಆಸೆಯನ್ನು ಭಗವಂತ ನನ್ನ ಮಡದಿ ಪಿ ಜಿ ಮಾಡಿದ ಮೂಲಕ ಈಡೇರಿಸುತ್ತಿದ್ದಾನೆ. ನಮ್ಮ ಪಿಜಿಗೆ ಯಾವುದೇ ಹೆಣ್ಣು ಮಕ್ಕಳು ಬಂದರೂ ನಾನು ನನ್ನ ಹೆಂಡತಿ ಮಕ್ಕಳಂತೆ ಕಾಣಲು ಇಚ್ಚಿಸುತ್ತೇವೆ' ಎಂದಿದ್ದಾರೆ.
ಡೆಲಿವರಿ ಬಾಯ್ ಕೆಲಸ ಮಾಡ್ತಿದ್ದೆ; ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟ 'ಕನ್ಯಾಕುಮಾರಿ' ನಟ ಧ್ರುವ
'ಎರಡು ವರ್ಷಗಳ ಹಿಂದೆ ಈ ಹೆಣ್ಣುಮಗಳು ವ್ಯಾಸಂಗಕ್ಕೆ ಶೃಂಗೇರಿಯಿಂದ ಮೈಸೂರಿಗೆ ಬಂದು ನಮ್ಮೊಡನೆ ಮಗಳಂತೆಯೇ ಇದ್ದು, ಹೆಸರಿಗೆ ತಕ್ಕಂತೆ ಶ್ರೀವಿದ್ಯಾ ಆದಳು. ಈಗ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೆಟ್ಟದ ಹೂ ಧಾರವಾಹಿಯಲ್ಲಿ ನಮ್ಮ ಶ್ರೀವಿದ್ಯಾ ಹೂವಿ- ಮುಖ್ಯ ಪಾತ್ರವಹಿಸಿ ಎಲ್ಲರ ಮನ ಗೆಲ್ಲುತ್ತಿದ್ದಾಳೆ. ಈ ಹೂ ಬೆಟ್ಟದಷ್ಟು ಬೃಹದಾಕಾರವಾಗಿ ಬೆಳೆಯಲೆಂದು ಆಶಿಸುತ್ತೇನೆ. ಈ ಹೆಣ್ಣು ಮಗುವಿಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ' ಎಂದು ಶಂಕರ್ ಅಶ್ವಥ್ ಕೇಳಿಕೊಂಡಿದ್ದಾರೆ.
ಅಂದಹಾಗೆ ಶಂಕರ್ ಅಶ್ವಥ್ ಕೇವಲ ನಟನೆ ಮಾತ್ರವಲ್ಲದೆ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಮೈಸೂರಿನಲ್ಲಿ ಪಿಜಿಯನ್ನು ನಡೆಸುತ್ತಿದ್ದಾರೆ. ಇದೀಗ ಅವರ ಪಿಜಿಯಲ್ಲಿ ಓದಿದ ಹೆಣ್ಣು ಮಗಳು ಧಾರಾವಾಹಿಗೆ ಎಂಟ್ರಿ ಕೊಟ್ಟು ಖ್ಯಾತಿಗಳಿಸಿರುವುದು ಅಶ್ವಥ್ ಅವರಿಗೆ ಸಂತಸ ತಂದಿದೆ. ಅಶ್ವಥ್ ಸಹ ಸದ್ಯ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ. ರಾಮಾಚಾರಿ ತಂದೆಯ ಪಾತ್ರದಲ್ಲಿ ಶಂಕರ್ ಅಶ್ವಥ್ ಕಾಣಿಸಿಕೊಂಡಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿ 'ಕನ್ನಡತಿ' ರಂಜನಿ; ಅಭಿಮಾನಿಗಳಿಂದ ಸಿಕ್ತು ಭರ್ಜರಿ ಗಿಫ್ಟ್
ಇನ್ನು ಬೆಟ್ಟದ ಹೂವು ಧಾರಾವಾಹಿ ಹೇಳುವುದಾದರೆ, ಸತೀಶ್ ಕೃಷ್ಣ (Sathish Krishna) ಧಾರಾವಾಹಿ ನಿರ್ದೇಶನ ಮಾಡುತ್ತಿದ್ದಾರೆ. ಡಾ. ನಾಗೇಂದ್ರ ಪ್ರಸಾದ್ (Nagendra Prasad) ಟೈಟಲ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಪ್ರವೀಣ್.ಡಿ.ರಾವ್ (Praveen D Rao) ಸಂಗೀತ ನೀಡಿದ್ದಾರೆ. ಶ್ರೀವಿದ್ಯಾ, ದರ್ಶಕ್, ಪ್ರಕೃತಿ ಪ್ರಸಾದ್, ಶ್ರೀನಿವಾಸ್ ಪ್ರಭು, ಪದ್ಮಜಾ ರಾವ್, ಪ್ರವೀಣ್.ಡಿ.ರಾವ್, ಸ್ವಾತಿ, ಸುನೇತ್ರ ಪಂಡಿತ್, ಅಂಬರೀಷ್ ಸಾರಂಗಿ, ನಾರಾಯಣ ಸ್ವಾಮಿ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಕಥಾ ನಾಯಕ ರಾಹುಲ್ ಒಬ್ಬ ಮಿಡಲ್ ಕ್ಲಾಸ್ ಫ್ಯಾಮಿಲಿಯ ಹುಡುಗ. 7 ವರ್ಷಗಳಿಂದ ಮಾಲಿನಿ ಎಂಬ ಹುಡುಗಿಯನ್ನು ಇಷ್ಟಪಡುತ್ತಿರುತ್ತಾನೆ. ಆ ಹುಡುಗಿ ತುಂಬಾನೆ ಶ್ರೀಮಂತ ಕುಟುಂಬಕ್ಕೆ ಸೇರಿದವಳಾಗಿದ್ದು, ಇಬ್ಬರ ಮನ್ನೆಯಲ್ಲಿಯೂ ಇವರ ಪ್ರೀತಿಯನ್ನು ಒಪ್ಪಿಕೊಂಡಿರುತ್ತಾರೆ ಆದರೆ ರಾಹುಲ್ ಒಬ್ಬ ಜರ್ನಲಿಸ್ಟ್ (Journalist). ನಕ್ಸಲೆಟ್ (Naxalite) ಒಬ್ಬನನ್ನು ಇಂಟರ್ವ್ಯೂ ಮಾಡಬೇಕು ಅನ್ನೋದು ಅವನ ಬಹಳ ವರ್ಷದ ಕನಸು. ಆ ಒಂದು ಚಾನ್ಸ್ ಸಿಕ್ಕಿದಾಗ ರಾಹುಲ್ ಕಾಡಿಗೆ ಹೋಗುತ್ತಾನೆ.
ಸಮಯದ ಕೈಗೊಂಬೆಯಾಗಿ ಹೂವಿ ಎಂಬ ಹುಡುಗಿಯನ್ನ ಮದುವೆಯಾಗುತ್ತಾನೆ. ಹೆಂಡತಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿರುವ ರಾಹುಲ್ ಮನೆ ಕೆಲಸದವಳನ್ನಾಗಿ ಮಾಡಿಕೊಂಡಿದ್ದಾರೆ. ಹೂವಿ ತನ್ನ ಹೆಂಡತಿ ಎಂದು ಯಾರ ಬಳಿಯೂ ಬಹಿರಂಗ ಪಡಿಸಿಲ್ಲ. ಇದೀಗ ರಾಹುಲ್ ತಾನು ಪ್ರೀತಿಸಿದ ಮಾಲಿನಿಯನ್ನು ಮದುವೆಯಾಗುತ್ತಿದ್ದಾನೆ. ಮದುವೆ ಸಂಭ್ರಮ ಜೋರಾಗಿ ನಡೆಯುತ್ತಿದೆ. ರಾಹುಲ್ ಪ್ರೀತಿಸಿದ ಹುಡುಗಿ ಮಾಲಿನಿಗೆ ತಾಳಿ ಕಟ್ಟುತ್ತಾನಾ ಅಥವಾ ಸತ್ಯಾ ಬಹಿರಂಗವಾಗಿ ಹೂವಿಯನ್ನೇ ಹೆಂಡತಿ ಎಂದು ಒಪ್ಪಿಕೊಳ್ಳುತ್ತಾನಾ ಎನ್ನುವುದು ಕುತೂಹಲ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.