
ಜೈಲಿನಲ್ಲಿದ್ದಾಗ 4000 ಕೈದಿಗಳು ಬರೆದಿದ್ದ ಕಥೆಯ ಪುಟಗಳನ್ನು ಬಿಚ್ಚಿಟ್ಟ ಸಂಜಯ್ ದತ್!
ಬಾಲಿವುಡ್ನ ‘ಸಂಜು ಬಾಬಾ’ ಎಂದೇ ಖ್ಯಾತರಾಗಿರುವ ನಟ ಸಂಜಯ್ ದತ್ (Sanjay Dutt) ತಮ್ಮ ಅಭಿಮಾನಿಗಳಿಗೆ ಇತ್ತೀಚೆಗೆ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ. ದಶಕಗಳ ಹಿಂದೆ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ ‘ಖಲ್ನಾಯಕ್’ ಚಿತ್ರದ ಸೀಕ್ವೆಲ್ ‘ಖಲ್ನಾಯಕ್ ರಿಟರ್ನ್ಸ್’ ಶೀಘ್ರದಲ್ಲೇ ಸೆಟ್ಟೇರಲಿದೆ ಎಂದು ಅವರು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಘೋಷಣೆಯ ಬೆನ್ನಲ್ಲೇ ಸಂಜಯ್ ದತ್ ಅವರು ಹಂಚಿಕೊಂಡಿರುವ ಒಂದು ವಿಷಯ ಈಗ ಇಡೀ ಚಿತ್ರರಂಗವೇ ಬೆರಗಾಗುವಂತೆ ಮಾಡಿದೆ.
1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ದತ್ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಈ ಸೀಕ್ವೆಲ್ ಮಾಡುವ ಆಲೋಚನೆ ಅವರಿಗೆ ಬಂದಿತ್ತಂತೆ. ಮುಂಬೈನ ಪೋಸ್ಟರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಜಯ್ ದತ್, "ಖಲ್ನಾಯಕ್ ಚಿತ್ರದ ಪಯಣ ಬಹಳ ಸುದೀರ್ಘವಾದುದು. ಜೈಲಿನಲ್ಲಿದ್ದಾಗ ನಾನು ಅಲ್ಲಿನ ಸಹ-ಕೈದಿಗಳ ಬಳಿ ಈ ಚಿತ್ರದ ಸೀಕ್ವೆಲ್ ನೋಡಲು ನಿಮಗೆ ಆಸಕ್ತಿ ಇದೆಯೇ ಎಂದು ಕೇಳಿದ್ದೆ. ಆಗ ಅಲ್ಲಿನ ಸುಮಾರು 4,000 ಕೈದಿಗಳು ಹೌದು ಎಂದು ಉತ್ಸಾಹದಿಂದ ಉತ್ತರಿಸಿದ್ದರು" ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.
ಅಷ್ಟೇ ಅಲ್ಲದೆ, ಈ 4,000 ಕೈದಿಗಳಿಗೆ ಚಿತ್ರದ ಕಥೆ ಹೇಗಿರಬೇಕು ಎಂಬ ಬಗ್ಗೆ ತಲಾ ಒಂದು ಪುಟ ಬರೆಯುವಂತೆ ಸಂಜು ಬಾಬಾ ಕೇಳಿಕೊಂಡಿದ್ದರಂತೆ. "ಆ 4,000 ಪುಟಗಳನ್ನು ಓದಲು ನನಗೆ ಸಾಕಷ್ಟು ಸಮಯ ಹಿಡಿಯಿತು. ನಂತರ ನಾನು ಪೆರೋಲ್ ಮೇಲೆ ಹೊರಬಂದಾಗ, ನಿರ್ದೇಶಕ ಸುಭಾಷ್ ಘಾಯ್ ಅವರನ್ನು ಭೇಟಿಯಾಗಿ ಈ ವಿಷಯ ತಿಳಿಸಿದೆ. ಅವರು ಆ ಕಥೆಯ ಎಳೆಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿ, ಖಂಡಿತವಾಗಿಯೂ ಈ ಸಿನಿಮಾ ಮಾಡೋಣ ಎಂದು ಗ್ರೀನ್ ಸಿಗ್ನಲ್ ನೀಡಿದರು" ಎಂದು ಸಂಜಯ್ ದತ್ ಅಚ್ಚರಿಯ ವಿಷಯವನ್ನು ಹಂಚಿಕೊಂಡಿದ್ದಾರೆ.
ಮೂಲ ‘ಖಲ್ನಾಯಕ್’ ಚಿತ್ರದ ನಿರ್ದೇಶಕ ಸುಭಾಷ್ ಘಾಯ್ ಕೂಡ ಈ ಯೋಜನೆಗೆ ಸಾಥ್ ನೀಡಿದ್ದಾರೆ. "ಸಂಜಯ್ ದತ್ ಮತ್ತು ಅವರ ಪತ್ನಿ ಮಾನ್ಯತಾ ಅವರಿಗೆ ಈ ಕಥೆಯನ್ನು ಮತ್ತೆ ತೆರೆಗೆ ತರಬೇಕೆಂಬ ತೀವ್ರ ಹಂಬಲವಿತ್ತು. ಸಂಜು ಅವರ ಈ ವಿಷನ್ ಮೇಲೆ ನನಗೆ ನಂಬಿಕೆಯಿದೆ. ಈ ಸಿನಿಮಾ ಮೊದಲ ಭಾಗಕ್ಕಿಂತಲೂ ಹೆಚ್ಚು ಅದ್ಭುತವಾಗಿ ಮೂಡಿಬರಲಿದೆ" ಎಂದು ಸುಭಾಷ್ ಘಾಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಫಸ್ಟ್ ಲುಕ್ ಬಿಡುಗಡೆ: ಕಾಯುತ್ತಿದ್ದಾರೆ ಅಭಿಮಾನಿಗಳು
ಏಪ್ರಿಲ್ 24ರಂದು ಸಂಜಯ್ ದತ್ ‘ಖಲ್ನಾಯಕ್ ರಿಟರ್ನ್ಸ್’ ಚಿತ್ರದ ಫಸ್ಟ್ ಲುಕ್ ಮತ್ತು ಪೋಸ್ಟರ್ಗಳನ್ನು ಬಿಡುಗಡೆ ಮಾಡಿದ್ದಾರೆ. "ಕೆಲವು ಕಥೆಗಳು ಕೊನೆಯಾಗುವುದಿಲ್ಲ, ಅವು ಮತ್ತೆ ಆರಂಭವಾಗುತ್ತವೆ" ಎಂಬ ಕ್ಯಾಪ್ಷನ್ನೊಂದಿಗೆ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಐಕಾನಿಕ್ ‘ಖಲ್ನಾಯಕ್ ಹೂಂ ಮೈ’ ಹಾಡು ಹಿನ್ನೆಲೆಯಲ್ಲಿ ಕೇಳಿಬರುತ್ತಿದೆ. ಪೋಸ್ಟರ್ನಲ್ಲಿ ಸಂಜಯ್ ದತ್ ಅವರ ರಗಡ್ ಲುಕ್ ಮತ್ತು ಭಯಾನಕ ನಗು ಅಭಿಮಾನಿಗಳಲ್ಲಿ ಕುತೂಹಲವನ್ನು ಇಮ್ಮಡಿಗೊಳಿಸಿದೆ.
1993ರಲ್ಲಿ ಬಿಡುಗಡೆಯಾಗಿದ್ದ ‘ಖಲ್ನಾಯಕ್’ ಚಿತ್ರದಲ್ಲಿ ಸಂಜಯ್ ದತ್ ‘ಬಲ್ಲು’ ಎಂಬ ಪಾತ್ರದಲ್ಲಿ ನಟಿಸಿದ್ದರು. ಮಾಧುರಿ ದೀಕ್ಷಿತ್ ಮತ್ತು ಜಾಕಿ ಶ್ರಾಫ್ ಅವರ ಪ್ರಮುಖ ಪಾತ್ರಗಳಿದ್ದ ಈ ಚಿತ್ರವು ಅಂದು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತ್ತು. ಈಗ 30 ವರ್ಷಗಳ ನಂತರ ಮತ್ತೆ ಅದೇ ‘ಖಲ್ನಾಯಕ್’ ಅಬ್ಬರಿಸಲು ಸಿದ್ಧವಾಗುತ್ತಿರುವುದು ಬಾಲಿವುಡ್ನಲ್ಲಿ ದೊಡ್ಡ ಸುದ್ದಿಯಾಗಿದೆ. ಸದ್ಯಕ್ಕೆ ಚಿತ್ರದ ತಾರಾಗಣ ಮತ್ತು ಬಿಡುಗಡೆಯ ದಿನಾಂಕವನ್ನು ಗುಟ್ಟಾಗಿಡಲಾಗಿದ್ದು, ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.