
'ಧುರಂಧರ್ 2' ನೋಡಿ ದಂಗಾದ ರಮ್ಯಾ! "ಇದು ಸಿನಿಮಾವಲ್ಲ, ತಾಳ್ಮೆಯ ಪರೀಕ್ಷೆ" ಎಂದು ಕಿಡಿಕಾರಿದ ಸ್ಯಾಂಡಲ್ವುಡ್ ಕ್ವೀನ್!
ಸ್ಯಾಂಡಲ್ವುಡ್ ನಟಿ ರಮ್ಯಾ (ದಿವ್ಯ ಸ್ಪಂದನಾ) ಬಾಲಿವುಡ್ನ ಬಹುನಿರೀಕ್ಷಿತ ಮತ್ತು ಅಷ್ಟೇ ವಿವಾದಿತ ಚಿತ್ರ 'ಧುರಂಧರ್ 2' (Dhurandhar 2) ನೋಡಿ ಹೊರಬಂದಿದ್ದು, ಚಿತ್ರದ ಬಗ್ಗೆ ಅತ್ಯಂತ ಕಟುವಾದ ವಿಮರ್ಶೆ ಹಂಚಿಕೊಂಡಿದ್ದಾರೆ. ರಮ್ಯಾ ಅವರ ಪ್ರಕಾರ, ಈ ಸಿನಿಮಾ ಪ್ರೇಕ್ಷಕರಿಗೆ ಮನರಂಜನೆ ನೀಡುವ ಬದಲು ಅವರ ತಾಳ್ಮೆಯ ಕಟ್ಟೆ ಒಡೆಯುವಂತೆ ಮಾಡಿದೆಯಂತೆ!
"ಇದು ಪಠ್ಯಪುಸ್ತಕದಂತೆ ಬೋರಿಂಗ್!"
ಸಿನಿಮಾ ನೋಡಿ ಹೊರಬಂದ ರಮ್ಯಾ ತಮ್ಮ ಟ್ವೀಟ್ನಲ್ಲಿ ಹೀಗೆ ಬರೆದುಕೊಂಡಿದ್ದಾರೆ: "ನಾನು ಇತ್ತೀಚೆಗಷ್ಟೇ 'ಧುರಂಧರ್ 2' ಸಿನಿಮಾ ನೋಡಿದೆ. ಅಬ್ಬಾ! ಒಂದು ಭರವಸೆ ಮೂಡಿಸಿದ ಸಿನಿಮಾವನ್ನು ಹೇಗೆ ಪ್ರೇಕ್ಷಕರ ತಾಳ್ಮೆಯ ಪರೀಕ್ಷೆಯನ್ನಾಗಿ ಬದಲಾಯಿಸಬಹುದು ಎಂಬುದಕ್ಕೆ ಇದೊಂದು 'ಮಾಸ್ಟರ್ ಕ್ಲಾಸ್'. ಇದು ನೋಡಲು ಅತ್ಯಂತ ಬೋರಿಂಗ್ ಆದ ಯಾವುದೋ ವಿಷಯದ ಪಠ್ಯಪುಸ್ತಕದಂತಿದೆ. ಓದುತ್ತಾ ಹೋದಂತೆ ಅಧ್ಯಾಯಗಳು ಮುಗಿಯುವುದೇ ಇಲ್ಲ. ಒಂದು ಹಂತದಲ್ಲಂತೂ ನಮ್ಮ ಮೆದುಳು ಸುಸ್ತಾಗಿ, ತೆರೆಯ ಮೇಲೆ ನಡೆಯುತ್ತಿರುವ ಅತಿರೇಕದ ದೃಶ್ಯಗಳನ್ನು ಕಂಡು ಹತಾಶೆಯಿಂದ ನಗು ಬರಲು ಶುರುವಾಗುತ್ತದೆ."
ರಮ್ಯಾ ಅವರು ಪ್ರೇಕ್ಷಕರಿಗೆ ಒಂದು ಖಡಕ್ ಸಲಹೆ ನೀಡಿದ್ದಾರೆ. "ನಿಮಗೆ ನಿಜವಾಗಿಯೂ ಈ ಸಿನಿಮಾ ನೋಡಬೇಕು ಅನ್ನಿಸಿದರೆ, ದಯವಿಟ್ಟು ಥಿಯೇಟರ್ಗೆ ಹೋಗಿ ಹಣ ಮತ್ತು ಸಮಯ ವ್ಯರ್ಥ ಮಾಡಿಕೊಳ್ಳಬೇಡಿ. ಇದು ಕೇವಲ 'ಸಿನಿಮಾವನ್ನು ಪೌಸ್ ಮಾಡಿ, ಮೊಬೈಲ್ ಸ್ಕ್ರಾಲ್ ಮಾಡುತ್ತಾ, ನಮ್ಮ ಜೀವನದ ನಿರ್ಧಾರಗಳನ್ನು ನಾವೇ ಪ್ರಶ್ನಿಸಿಕೊಳ್ಳುವಂತಹ' ಕಂಟೆಂಟ್. ಇದು ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗೆ ಸೀಮಿತವಾದ ಸಿನಿಮಾ. ಅಲ್ಲಿ ಬೋರ್ ಆದಾಗ ತಕ್ಷಣ ಒಂದು ಕ್ಲಿಕ್ ಮೂಲಕ ಸಿನಿಮಾದಿಂದ ತಪ್ಪಿಸಿಕೊಳ್ಳಬಹುದು" ಎಂದಿದ್ದಾರೆ.
ರಣವೀರ್ ಸಿಂಗ್ ನಟನೆಗಿಂತ ಕೂದಲೇ ಹೈಲೈಟ್!
ಚಿತ್ರದ ತಾಂತ್ರಿಕ ಅಂಶಗಳ ಬಗ್ಗೆಯೂ ರಮ್ಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿರ್ದೇಶನ, ಸಂಭಾಷಣೆ, ಎಡಿಟಿಂಗ್ ಮತ್ತು ಹಿನ್ನೆಲೆ ಸಂಗೀತ ಎಲ್ಲವೂ ಕಳಪೆ ಮಟ್ಟದಲ್ಲಿದೆ ಎಂದು ಅವರು ದೂರಿದ್ದಾರೆ. ಇನ್ನು ನಾಯಕ ರನ್ವೀರ್ ಸಿಂಗ್ ಬಗ್ಗೆ ಮಾತನಾಡುತ್ತಾ, "ಎಲ್ಲರೂ ರಣವೀರ್ ಸಿಂಗ್ ಈ ಸಿನಿಮಾವನ್ನು ಹೊತ್ತು ಸಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಅವರು ಏನನ್ನು ಹೊತ್ತಿದ್ದಾರೆ? ನನಗೆ ಅಲ್ಲಿ ಕಂಡಿದ್ದು ಅವರ ಕೂದಲು ಮಾತ್ರ! ಮೊದಲ ಭಾಗದಲ್ಲಿ ಅವರ ಹೇರ್ ಸ್ಟೈಲ್ಗೆ ಒಂದು ವ್ಯಕ್ತಿತ್ವವಿತ್ತು, ಆದರೆ ಇಲ್ಲಿ ಅವರ ಕೂದಲು ಪ್ರತಿ ದೃಶ್ಯಕ್ಕೂ ಅಡ್ಡಗಾಲಾಗಿ ನಿಂತಿದೆ. ಬಹುಶಃ ಪೋಷಕ ನಟನ ಪ್ರಶಸ್ತಿಗೆ ರಣವೀರ್ ಸಿಂಗ್ ಬದಲಿಗೆ ಅವರ ಕೂದಲನ್ನು ನಾಮಿನೇಟ್ ಮಾಡಬಹುದು" ಎಂದು ವ್ಯಂಗ್ಯವಾಡಿದ್ದಾರೆ.
ಸಿನಿಮಾದಲ್ಲಿನ ಅತಿಯಾದ ಮತ್ತು ಅತಾರ್ಕಿಕ ಹಿಂಸಾಚಾರದ ಬಗ್ಗೆ ರಮ್ಯಾ ಕಿಡಿಕಾರಿದ್ದಾರೆ. "ಇದು ಸಿನಿಮಾವಲ್ಲ, ಬದಲಿಗೆ ಕೈಗೆ ಸಿಕ್ಕ ವಸ್ತುವಿನಿಂದ ಹೇಗೆಲ್ಲಾ ಕೊಲೆ ಮಾಡಬಹುದು ಎಂಬ ಹ್ಯಾಂಡ್ಬುಕ್ ನಂತಿದೆ. ಸಿರಿಂಜ್, ಸ್ಪ್ಯಾನರ್, ಚಾಕು, ಬಾಂಬ್... ಪ್ರತಿಯೊಂದನ್ನೂ ಆಯುಧವನ್ನಾಗಿ ಬಳಸಿದ್ದಾರೆ. ನಿರ್ದೇಶಕರು ಒಂದು ದೃಶ್ಯಕ್ಕಿಂತ ಇನ್ನೊಂದು ದೃಶ್ಯ ಎಷ್ಟು ಹಿಂಸಾತ್ಮಕವಾಗಿರಬೇಕು ಎಂಬ ಸ್ಪರ್ಧೆಗೆ ಬಿದ್ದಂತಿದೆ. ನಟನ ಎರಡು ಕಾಲುಗಳನ್ನು ಕತ್ತರಿಸಿ, ಆತನನ್ನು ಕೆರೋಸಿನ್ನಲ್ಲಿ ಮುಳುಗಿಸಿದರೂ, ಆತ ಅದ್ಭುತವಾಗಿ ಭಾಷಣ ಮಾಡುತ್ತಿರುತ್ತಾನೆ! ಇದಕ್ಕೆ ಆಸ್ಕರ್ ಅಲ್ಲ, ವೈದ್ಯಕೀಯ ಲೋಕದ ನೋಬೆಲ್ ಪ್ರಶಸ್ತಿಯನ್ನೇ ನೀಡಬೇಕು" ಎಂದು ಕಾಲೆಳೆದಿದ್ದಾರೆ.
ರಮ್ಯಾ ಅವರ ಅಂತಿಮ ತೀರ್ಪು:
ಒಟ್ಟಾರೆಯಾಗಿ ರಮ್ಯಾ ಅವರಿಗೆ 'ಧುರಂಧರ್ 2' ಒಂದು ದೊಡ್ಡ ನಿರಾಸೆ ಮೂಡಿಸಿದೆ. "ರಣವೀರ್ ಸಿಂಗ್ ಅವರೇ, ನೀವು ಇಂತಹ ಸಿನಿಮಾಗಳಿಗಿಂತಲೂ ಮಿಗಿಲಾದ ಅದ್ಭುತ ನಟ. ಇನ್ನು ನಿರ್ದೇಶಕ ಆದಿತ್ಯ ಧರ್ ಅವರೇ, ಅತಿಯಾದ ದೇಶಪ್ರೇಮ ಮತ್ತು ಪ್ರಚಾರದ (Propaganda) ಅಮಲಿನಿಂದ ಹೊರಬನ್ನಿ" ಎಂದು ಕಿವಿಮಾತು ಹೇಳಿದ್ದಾರೆ. 'ಧುರಂಧರ್ 2' ಏಕೆ ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ ಎಂದು ಹೇಳುವ ಮೂಲಕ ರಮ್ಯಾ ತಮ್ಮ ವಿಮರ್ಶೆಯನ್ನು ಮುಕ್ತಾಯಗೊಳಿಸಿದ್ದಾರೆ. ಸದ್ಯ ರಮ್ಯಾ ಅವರ ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಿನಿಮಾ ಪ್ರೇಕ್ಷಕರಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.