ಮಹಾಲಕ್ಷ್ಮಿ ಪತಿ ರವೀಂದರ್​ ವಿರುದ್ಧ ದಾಖಲಾಯ್ತು ವಂಚನೆ ಕೇಸ್​! ಏನಿದು ಪ್ರಕರಣ?

By Suvarna NewsFirst Published Jul 11, 2023, 5:17 PM IST
Highlights

ನಿರ್ಮಾಪಕ ರವೀಂದರ್​ ಚಂದ್ರಶೇಖರ್​ ವಿರುದ್ಧ ವಂಚನೆ ಕೇಸ್​ ದಾಖಲಾಗಿದೆ. ಅಮೆರಿಕ ಮೂಲದ ವ್ಯಕ್ತಿಯೊಬ್ಬರು ದಾಖಲಿಸಿರುವ ಈ ಕೇಸ್​ನ ಹಿನ್ನೆಲೆ ಏನು? 
 

ಕಳೆದ ಏಳೆಂಟು ತಿಂಗಳಿಂದ ಅತಿ ಹೆಚ್ಚು ಟ್ರೋಲ್​ಗೆ ಒಳಗಾಗಿರುವ ದಂಪತಿ ಎಂದರೆ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravindra Chandrasekaran) ಮತ್ತು ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ. ಕಳೆದ ಸೆಪ್ಟೆಂಬರ್ 1ರಂದು ತಿರುಪತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಾಗಿನಿಂದಲೂ ಇವರ ಮದುವೆ ವಿಚಾರಕ್ಕೆ ಬಹಳಷ್ಟು ಟ್ರೋಲ್​ ಆಗುತ್ತಲೇ ಇದ್ದಾರೆ.  ಎಲ್ಲಿ ನೋಡಿದರೂ ಇವರದ್ದೇ ವಿಷಯ.  ಈ ಜೋಡಿ ಏನೇ ಮಾಡಲಿ ಅದರ ಚರ್ಚೆ ಭಾರಿ ಜೋರಾಗಿ ನಡೆಯುತ್ತದೆ. ಇದಕ್ಕೆ ಕಾರಣ ಈ ಜೋಡಿಯ ಲುಕ್​. ಅತ್ಯಂತ ಸುಂದರಿಯಾಗಿರುವ ಮಹಾಲಕ್ಷ್ಮಿ ಅವರು, ತೀರಾ ದಪ್ಪ ಇರುವ ರವೀಂದರ್​ ಜೊತೆ ಮದುವೆಯಾಗಿದ್ದಾರೆ ಎನ್ನುವ ಕಾರಣಕ್ಕೆ  ಬಾಹ್ಯ ರೂಪ ನೋಡಿ ಟ್ರೋಲ್​ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲಿಯೂ ಮದುವೆಯಾಗದ ಹುಡುಗರು ಈ ಜೋಡಿಯನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿದ್ದರೆ, ಹುಡುಗಿಯರು ಈಕೆ ಹಣಕ್ಕಾಗಿಯೇ ಮದುವೆಯಾಗಿದ್ದಾರೆ ಎನ್ನುತ್ತಿದ್ದಾರೆ. ರವೀಂದರ್​​ ಅವರ  ಆಸ್ತಿ ನೋಡಿ ಮದುವೆಯಾಗಿದ್ದಾರೆ, ಈ ಜೋಡಿ ಒಟ್ಟಾಗಿ ಇರುವ ಚಾನ್ಸೇ ಇಲ್ಲ ಎಂದವರೇ ಹೆಚ್ಚು. 

ಈ ದಂಪತಿಗೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಈಗ ರವೀಂದರ್​ ಅವರಿಗೆ ಭಾರಿ ಶಾಕ್​ ಆಗಿರುವ ಘಟನೆಯೊಂದು ನಡೆದಿದೆ.   ನಿರ್ಮಾಪಕ ರವೀಂದರ್​ ಚಂದ್ರಶೇಖರನ್​ ವಿರುದ್ಧ ವಂಚನೆ ಆರೋಪ ದಾಖಲಾಗಿದ್ದು, ಚೆನ್ನೈ ಕೇಂದ್ರ ಅಪರಾಧ ವಿಭಾಗ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.   ರವೀಂದರ್ ಚಂದ್ರಶೇಖರ್ ವಿರುದ್ಧ ಕೇಂದ್ರ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ.  15 ಲಕ್ಷ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಮಹಾಲಕ್ಷ್ಮಿ (Mahalakshmi) ಪತಿ ರವೀಂದರ್ ಚಂದ್ರಶೇಖರ್ ಪೊಲೀಸ್ ಠಾಣೆಗೆ ಹಾಜರಾಗಿ ವಿವರಣೆ ನೀಡಿದ್ದಾರೆ.

Latest Videos

ಮಗನನ್ನು ಪರಿಚಯಿಸಿದ ನಟಿ ಮಹಾಲಕ್ಷ್ಮಿ: ಮೊದಲ ಪತಿಯೂ ಜೊತೆಯಲ್ಲಿ!

ಅಷ್ಟಕ್ಕೂ ಇವರ ಮೇಲೆ ಕೇಸ್​ ಹಾಕಿರುವವರು ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ವಿಜಯ್​ ಎಂಬುವವರು. ಇವರು ನೀಡಿರುವ ದೂರಿನ ಆಧಾರದ ಮೇಲೆ ರವೀಂದರ್​ ವಿರುದ್ಧ ಪ್ರಕರಣ ದಾಖಲಾಗಿದೆ.  ವಿಚಾರಣೆಗೆ ಬರುವಂತೆ ರವಿಂದರ್ ಅವರಿಗೆ ನೋಟಿಸ್​ ನೀಡಲಾಗಿತ್ತು. ಇದರ ಆಧಾರದ ಮೇಲೆ  ರವೀಂದರ್​ ಅವರು ವಿಚಾರಣೆಯನ್ನೂ ಎದುರಿಸಿದ್ದಾರೆ ಎನ್ನಲಾಗಿದೆ.  15 ಲಕ್ಷ ರೂಪಾಯಿಯ ವಂಚನೆಗೆ ಕಾರಣವಾಗಿರುವುದು ವಿಜಯ್​ ಅವರು ನೀಡಿರುವ ದೂರಿನ ಆಧಾರದ ಮೇಲೆ. ವಿಜಯ್​ ದೂರಿನ ಪ್ರಕಾರ ಅವರು ಭಾರೀ ಮೊತ್ತದ ಹಣವನ್ನು ಸಿನಿಮಾ ಪ್ರಾಜೆಕ್ಟ್​ (Cinema Project) ಒಂದಕ್ಕೆ ರವೀಂದರ್​ ಜತೆ ಸೇರಿ ಹೂಡಿಕೆ ಮಾಡಿದ್ದರಂತೆ. ಆದರೆ, ರವಿಂದರ್​ ಅವರ ಸಿನಿಮಾದ ಬೆಳವಣಿಗೆ ಬಗ್ಗೆ ಯಾವುದೇ ಮಾಹಿತಿ ನೀಡಿದೆ, ತಮ್ಮ ಬದ್ಧತೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಇದರಿಂದ ಮೋಸ ಹೋಗಿದ್ದೇನೆ ಎಂದು ಭಾವಿಸಿ ರವೀಂದರ್​ ವಿರುದ್ಧ ದೂರು ನೀಡಿದ್ದಾರೆ. ಸಾಲವನ್ನು ವಾಪಸ್​ ನೀಡುವಂತೆ ಹಲವು ಬಾರಿ ಕೇಳಿಕೊಂಡರೂ  ಪ್ರಯೋಜನವಾಗಿಲ್ಲ. ಆದ್ದರಿಂದ ದೂರು ದಾಖಲಿಸಿರುವುದಾಗಿ ವಿಜಯ್​ ಹೇಳಿದ್ದಾರೆ.

ಅಷ್ಟಕ್ಕೂ ಈ ದೂರನ್ನು ಆನ್​ಲೈನ್​ ಮೂಲಕ ದಾಖಲು ಮಾಡಲಾಗಿದೆ. ದೂರನ್ನು ಪಡೆದುಕೊಂಡಿರುವ  ಚೆನ್ನೈ ಕೇಂದ್ರ ಅಪರಾಧ ವಿಭಾಗ ರವೀಂದರ್​ ಅವರನ್ನು ವಿಚಾರಣೆಗೆ ಬರುವಂತೆ ಕರೆದಿದೆ. ನಿರ್ಮಾಣ ಕಂಪೆನಿ ಲಿಬ್ರಾ ಪ್ರೊಡಕ್ಷನ್​ನ ಮಾಲೀಕ (Production owner) ರವೀಂದರ್ ಚಂದ್ರಶೇಖರ್   ವಿರುದ್ಧ ಸಾಕ್ಷಿಗಳನ್ನು  ಕಲೆಹಾಕಲಾಗುತ್ತಿದೆ. ಆದರೆ ಈ ನಡುವೆಯೇ  ನೋಟಿಸ್ ಸ್ವೀಕರಿಸಿರುವ ತಕ್ಷಣ ರವೀಂದರ್ ಅವರು ತನಿಖೆಗೆ ಹಾಜರಾಗಿ, ಅಧಿಕಾರಿಗಳೊಂದಿಗೆ ಸಹಕರಿಸಿದ್ದಾರೆ ಮತ್ತು ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಎರಡೂ ಕಡೆ ಮಾಡಿರುವ ಆರೋಪಗಳ ಸಿಂಧುತ್ವವನ್ನು ನಿರ್ಧರಿಸಲು ಇಬ್ಬರೂ ಪ್ರಸ್ತುತಪಡಿಸಿದ ಸಾಕ್ಷ್ಯಗಳು, ಹೇಳಿಕೆಗಳು ಮತ್ತು ದಾಖಲೆಗಳನ್ನು ಪೊಲೀಸರು ಸಂಪೂರ್ಣವಾಗಿ ಪರಿಶೀಲಿಸಲಿದ್ದಾರೆ.  

ಮಹಾಲಕ್ಷ್ಮಿ-ರವೀಂದರ್​ ಡಿವೋರ್ಸ್​ ಕೊಡ್ತಿದ್ದಾರಾ? ಇನ್​ಸ್ಟಾಗ್ರಾಮ್​ನಲ್ಲಿ ನಟಿ ಹೇಳಿದ್ದೇನು?
 
ಅಂದಹಾಗೆ ಮಹಾಲಕ್ಷ್ಮಿ  ನಿರೂಪಕಿ ಜೊತೆ  ಕಿರುತೆರೆ ನಟಿ ಕೂಡ. ರವೀಂದರ್ ಅವರ ಜೊತೆಯಲ್ಲಿ  ಅನೇಕ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. ರವೀಂದರ್ ನಿರ್ಮಾಣ ಮಾಡಿದ ಧಾರಾವಾಹಿಯಲ್ಲಿ ಮಹಾಲಕ್ಷ್ಮಿ ನಟಿಸಿದ್ದಾರೆ. ಸೆಟ್​ನಲ್ಲಿಯೇ  ಇವರ ಲವ್​ ಶುರುವಾಗಿ, ಮದುವೆಯಾಗಿದ್ದಾರೆ.  ದಂಪತಿ ಬೇರ್ಪಟ್ಟಿದ್ದಾರೆ ಎಂಬ ಸುಳ್ಳು ಸುದ್ದಿಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ.   ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮಹಾಲಕ್ಷ್ಮೀ ಅವರು ತಾವು ಮತ್ತು ರವೀಂದರ್​ ಒಟ್ಟಿಗೆ ಇರುವ ಫೋಟೋಗಳನ್ನು ಪೋಸ್ಟ್​ ಮಾಡುವ ಮೂಲಕ ಸುಳ್ಳು ಸುದ್ದಿ ಹರಡುವವರಿಗೆ ತಿರುಗೇಟು ನೀಡುತ್ತಲೇ ಇದ್ದಾರೆ.
 

click me!