ಮಾಧ್ಯಮ ಲೋಕದ ದಾರ್ಶನಿಕ ರಾಮೋಜಿರಾವ್‌: ಲಕ್ಷಾಂತರ ಜನರಿಗೆ ಬದುಕುಕೊಟ್ಟ ನೈಜ ಭಾರತ ರತ್ನ!

By Kannadaprabha NewsFirst Published Jun 9, 2024, 7:28 AM IST
Highlights

ನಾನು ಮೊದಲಿಗೆ ಅವರನ್ನು ನೋಡಿದ್ದು 1999ರಲ್ಲಿ. ಆಗ ಎಂಎಸ್ ಕಮ್ಯುನಿಕೇಶನ್‌ನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದ ನಾನು ಯಾವುದಾದರೂ ಒಂದು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಇಂಟರ್ನ್‌ಶಿಪ್‌ ಮಾಡಲೇಬೇಕಾಗಿತ್ತು.

ಎಸ್.ರವಿಕುಮಾರ್, ಎಂಡಿ ಮತ್ತು ಸಿಇಒ, ನ್ಯೂಸ್‌ಫಸ್ಟ್ ಕನ್ನಡ

Ramoji Rao...  ಸುದ್ದಿಮಾಧ್ಯಮಗಳಲ್ಲಿ ಕೆಲಸ ಮಾಡುವವರು ನಾವು. ಪ್ರತಿದಿನ ಸಾಮಾನ್ಯ ಸಂಗತಿಗಳ ಜೊತೆ ಸೆನ್ಸೇಷನಲ್ ಅನ್ನೋ ಸುದ್ದಿಗೆ ಹುಡುಕಾಟ ನಡೆಸುವ ಮನಸ್ಸು ನಮ್ಮದು. ಆದರೆ, ಇವತ್ತು ಸೂರ್ಯ ಉದಯಿಸಿದ ಕೂಡಲೇ ಕೇಳಿ ಬಂದಿದ್ದು ಶಾಕಿಂಗ್ ಸುದ್ದಿ. ಮನಸಿಗೆ ನೋವು ಕೊಡುವ ಸುದ್ದಿ. ಈ ಕಾಲದ ದಾರ್ಶನಿಕ, ಮಾಧ್ಯಮ ಲೋಕದ ದಿಗ್ಗಜ ರಾಮೋಜಿರಾವ್ ಹೃದಯ ಸಂಬಂಧಿ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದರು. ಸುದೀರ್ಘ 25 ವರ್ಷಗಳಿಂದ ಅವರನ್ನು ನೋಡಿದ ನನಗೆ ಈ ಸುದ್ದಿ ಜೀರ್ಣಿಸಿಕೊಳ್ಳೋಕೆ ಸ್ವಲ್ಪ ಸಮಯಬೇಕಾಯ್ತು. ನನ್ನ ವೃತ್ತಿಜೀವನಕ್ಕೆ ಅಡಿಪಾಯ ಹಾಕಿದ ಈ ಟಿವಿ ಸಂಸ್ಥೆಯ ಸಂಸ್ಥಾಪಕರೂ ಆಗಿದ್ದ ರಾಮೋಜಿರಾವ್ ಅವರು ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ಮನಸ್ಸಿಗೆ ನೋವಾಯ್ತು. 

Latest Videos

ನಾನು ಮೊದಲಿಗೆ ಅವರನ್ನು ನೋಡಿದ್ದು 1999ರಲ್ಲಿ. ಆಗ ಎಂಎಸ್ ಕಮ್ಯುನಿಕೇಶನ್‌ನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದ ನಾನು ಯಾವುದಾದರೂ ಒಂದು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಇಂಟರ್ನ್‌ಶಿಪ್‌ ಮಾಡಲೇಬೇಕಾಗಿತ್ತು. ಕರ್ನಾಟಕದಲ್ಲಿ ಅಂತಹ ವ್ಯವಸ್ಥೆ ಆಗ ಇರದ ಕಾರಣ, ನಾನು ಈ ಟಿವಿ ತೆಲುಗು ವಾಹಿನಿಯಲ್ಲಿ ಇಂಟರ್ನ್‌ಶಿಪ್‌ ಮಾಡುವ ಅವಕಾಶ ಸಿಕ್ಕಿತ್ತು. ಹೈದರಾಬಾದ್‌ನ ಸೋಮಾಜಿಗುಡ ಕಚೇರಿಯಲ್ಲಿ ನಾನು ಕೆಲಸ ಮಾಡುತ್ತಿದ್ದೆ. ಆದರೆ, ರಾಮೋಜಿರಾವ್ ಅವರನ್ನು ನೋಡುವ ಅವಕಾಶವೂ ಸಿಕ್ಕಿರಲಿಲ್ಲ. ಅದೃಷ್ಟ ಎನ್ನುವಂತೆ ‘ಈನಾಡು’ ಪತ್ರಿಕೆ ಆರಂಭವಾಗಿ 25 ವರ್ಷ ಆಗಿತ್ತು. 

ಘಟಾನುಘಟಿಗಳ ಕ್ಷೇತ್ರದಲ್ಲೇ ಕಾಂಗ್ರೆಸ್‌ಗೆ ಹಿನ್ನಡೆ: ಲೀಡ್ ಕೊಡಿಸದ ಸಚಿವರ ಮೇಲೆ ಕ್ರಮ ಆಗುತ್ತಾ?

ಆ ದಿನ ಕಚೇರಿಯಲ್ಲಿ ಸಂಭ್ರಮ. ರಾಮೋಜಿರಾವ್ ಅವರು ಕಚೇರಿಗೆ ಬರುತ್ತಾರೆ ಅಂದ ಕೂಡಲೇ ಅವರನ್ನು ನೋಡುವ ಕುತೂಹಲ. ವಿಶೇಷ ಏನಂದರೆ, ಅವರು ಈನಾಡು ಕಚೇರಿಯಲ್ಲಿದ್ದ ಪ್ರತಿಯೊಬ್ಬರನ್ನೂ ವೈಯಕ್ತಿಕವಾಗಿ ಕೈ ಕುಲುಕಿ ಮಾತನಾಡಿದರು. ಯಾವ ವ್ಯಕ್ತಿಯನ್ನು ನೋಡಿದರೆಸಾಕು ಅಂದುಕೊಂಡಿದ್ದೆನೋ ಅದೇ ವ್ಯಕ್ತಿ ಕೈಕುಲುಕಿ ನೀನ್ಯಾರು ಅಂತಾ ಮಾತನಾಡಿಸಿದಾಗ ಆದ ರೋಮಾಂಚನ ಇದೆಯಲ್ಲಾ ಅದನ್ನು ಇವತ್ತಿಗೂ ಮರೆಯೋಕೆ ಆಗ್ತಿಲ್ಲ. ಅದೇ ನನ್ನ ಮೊದಲ ಭೇಟಿ. ಅವರೊಂದಿಗಿನ ಮೊದಲ ಅನುಭವ. ಮುಂದೆ 2000ನೇ ಇಸವಿಯಲ್ಲಿ ಅದೇ ಈಟಿವಿ ಸಂಸ್ಥೆಯೊಂದಿಗೆ ನನ್ನ ವೃತ್ತಿಜೀವನ ಆರಂಭವಾಗಿದ್ದು, ರಾಮೋಜಿರಾವ್ ಎಂಬ ವ್ಯಕ್ತಿ ಅನ್ನುವುದಕ್ಕಿಂತ ಒಂದು ಶಕ್ತಿಯನ್ನು ತುಂಬಾ ಹತ್ತಿರದಿಂದ ತಿಳಿದುಕೊಳ್ಳುವ ಅವಕಾಶ ನನಗೆ ಸಿಕ್ಕಿತ್ತು.  

ಕಲಿಕೆಗೆ ಮುಕ್ತ ಅವಕಾಶ ಕೊಟ್ಟಿದ್ದರು: 2000ನೇ ಇಸವಿಯಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕೆಲಸ ಮಾಡಬೇಕು ಅಂದುಕೊಂಡವರಿಗೆ ಇದ್ದ ಆಯ್ಕೆ ಒಂದೇ ಅದು ಈಟಿವಿ. ನಾವೆಲ್ಲಾ ಕಾಲೇಜ್‌ನಲ್ಲಿ ಥಿಯರಿ ಓದಿದವರು. ಪ್ರಾಕ್ಟಿಕಲ್ ಎಕ್ಸ್‌ಪಿರಿಯನ್ಸ್‌ ಅಂತಾ ಸಿಕ್ಕಿದ್ದೇ ಈಟಿವಿಯಲ್ಲಿ. ಆಗಿನ ಕಾಲಕ್ಕೆ ಎಷ್ಟು ಉದಾರವಾದ ವ್ಯವಸ್ಥೆ ಅಲ್ಲಿತ್ತು ಅಂದ್ರೆ, ಪ್ರೊಡಕ್ಷನ್ ವಿಭಾಗದವರು ಸ್ಕ್ರಿಪ್ಟ್ ಮಾಡುವುದನ್ನು ಕಲಿಯಬಹುದಿತ್ತು. ಎಡಿಟೋರಿಯಲ್ ವಿಭಾಗದವರು ಮತ್ಯಾವುದೋ ವಿಭಾಗದ ಕೆಲಸ ಕಲಿಯಲು ಅವಕಾಶವಿತ್ತು. ಅಂತಹ ಒಂದು ವ್ಯವಸ್ಥೆಯನ್ನು ರಾಮೋಜಿರಾವ್ ಅವರ ಕಲ್ಪಿಸಿಕೊಟ್ಟಿದ್ದರು. ಹೀಗೆ ಕಲಿಯುವ ಸಂದರ್ಭಗಳಲ್ಲಿ ಕೆಲವು ಉಪಕರಣಗಳನ್ನು ನಾವು ಹಾಳು ಮಾಡಿದ್ದೂ ಇದೆ. ಆದರೂ ಅದಕ್ಕಾಗಿ ಯಾವುದೇ ಶಿಕ್ಷೆಗಳಿರಲಿಲ್ಲ. ಬದಲಾಗಿ ಕಲಿಯುವುದಕ್ಕೆ ಪ್ರೋತ್ಸಾಹ ಸಿಗುತ್ತಿತ್ತು. ಇನ್ಫ್ರಾಸ್ಟ್ರಕ್ಚರ್ ವಿಚಾರದಲ್ಲಿ ಕೊರತೆ ಎನ್ನುವ ಪದವೇ ಯಾರ ಬಾಯಲ್ಲೂ ಕೇಳಿ ಬರುತ್ತಿರಲಿಲ್ಲ. ಅವತ್ತಿಗೆ 24ಗಂಟೆಯ ಸುದ್ದಿವಾಹಿನಿಗಳೂ ಇರಲಿಲ್ಲ. ಇವತ್ತು ಇರುವಂತಹ ಕಾಂಪಿಟಿಷನ್ ಕೂಡ ಇರಲಿಲ್ಲ. ಆದರೂ, ಅಗತ್ಯಕ್ಕಿಂತ ಸ್ವಲ್ಪ ಹೆಚ್ಚು ಅನ್ನುವಷ್ಟು ಸೌಲಭ್ಯಗಳು ನಮಗೆ ಇದ್ದವು ಕಲಿಸಿಕೊಡುವ ಉದಾರ ಮನಸು ಅವರಲ್ಲಿತ್ತು. ಕಲಿಯಬೇಕು ಅನ್ನೋ ಹಂಬಲ ನಮ್ಮಲ್ಲಿದ್ರೆ, ಇದಕ್ಕಿಂತ ಇನ್ನೇನು ಬೇಕು.

ರಾಮೋಜಿ ರಾವ್‌ ಎಂದರೆ ಸಮಯಪ್ರಜ್ಞೆ: ಈಟಿವಿಯಲ್ಲಿ ಕೆಲಸ ಮಾಡಿದ ಯಾವುದೇ ಉದ್ಯೋಗಿಯಾದರೂ ಅವರಿಗೆ ಮೊದಲು ತಿಳಿದುಬರುವ ವಿಚಾರವೇ ರಾಮೋಜಿರಾವ್ ಅವರ ಸಮಯಪ್ರಜ್ಞೆ. ಅವರು ಭಾಗವಹಿಸುವ ಯಾವುದೇ ಮೀಟಿಂಗ್ ಆದರೂ ಅಲ್ಲಿದ್ದ ಸೀನಿಯರ್ಸ್ ನಮಗೆ ಹೇಳುತ್ತಾ ಇದ್ದದ್ದು, ರಾಮೋಜಿರಾವ್ ಅವರು ಬರುವ ಸಮಯ ನೋಡಿ ನಮ್ಮ ವಾಚ್ ಟೈಮ್ ಸೆಟ್ ಮಾಡಿಕೊಳ್ಳಬಹುದು ಎನ್ನುವುದು. ಅದು ನನ್ನ ಅನುಭವಕ್ಕೂ ಬರೋಕೆ ತುಂಬಾ ಸಮಯ ಏನು ಬೇಕಾಗಿರಲಿಲ್ಲ. ಉದಾಹರಣೆಗೆ ಹತ್ತು ಗಂಟೆಗೆ ಮೀಟಿಂಗ್ ಅಂದ್ರೆ ಪಕ್ಕಾ10 ಗಂಟೆಗೇ ಮೀಟಿಂಗ್ ಆರಂಭವಾಗುತ್ತಿತ್ತು. ಯಾವುದೇ ಮೀಟಿಂಗ್ ಒಂದು ನಿಮಿಷ ಕೂಡ ತಡ ಆಗಿರುವುದನ್ನು ನಾನು ನೋಡಿಯೂ ಇಲ್ಲಾ. ಕೇಳಿಯೂ ಇಲ್ಲ.

ನಾನು ಈಟಿವಿ ನ್ಯೂಸ್‌ನಲ್ಲಿ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಅವತ್ತಿಗೆ ನನಗೆ ಕೇವಲ ಎರಡು ವರ್ಷಗಳ ಅನುಭವ. ಅದೇ ಸಮಯದಲ್ಲಿ ಈಟಿವಿ ಗುಜರಾತ್ ಮತ್ತು ಈಟಿವಿ ಮಧ್ಯಪ್ರದೇಶ ಚಾನಲ್‌ಗಳನ್ನು ಆರಂಭಿಸುವುದಕ್ಕೆ ಮ್ಯಾನೇಜ್ಮೆಂಟ್ ನಿರ್ಧರಿಸಿತ್ತು. ನನಗೆ ಇದೇ ಸಂದರ್ಭದಲ್ಲಿ ಅದ್ಭುತವಾದ ಅವಕಾಶ ಒಂದನ್ನು ಸಂಸ್ಥೆ ಒದಗಿಸಿ ಕೊಟ್ಟಿತು. ಪತ್ರಕರ್ತರಿಗೆ ಟೆಲಿಷನ್ ಪ್ರೊಡಕ್ಷನ್, ಸ್ಟೋರಿ ಪ್ರೆಸೆಂಟೇಷನ್ ಮತ್ತು ಟೆಲಿವಿಷನ್‌ ವಾಹಿನಿಗೆ ಸುದ್ದಿ ವರದಿಗಾರಿಕೆ ಕುರಿತು ತರಬೇತಿ ನೀಡುವ ಗುರುತರ ಜವಾಬ್ದಾರಿಯನ್ನು ನನ್ನ ಹೆಗಲಿಗೆ ವಹಿಸಿದ್ರು, ಇಲ್ಲಿ ಎಷ್ಟು ವರ್ಷ ಎಕ್ಸ್‌ಪಿರಿಯನ್ಸ್‌ ಆಗಿದೆ ಅನ್ನುವುದಕ್ಕಿಂತ ಈ ಕೆಲಸ ಯಾರು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲರು ಎನ್ನುವುದು ಮುಖ್ಯವಾಗಿತ್ತು. ಅಂದರೆ, ಯಾವುದೇ ಪೂರ್ವಾಗ್ರಹಗಳಿಲ್ಲದೇ, ಟ್ಯಾಲೆಂಟ್‌ಗಳನ್ನು ಗುರುತಿಸುವ ವ್ಯವಸ್ಥೆ ಕೂಡ ಅಲ್ಲಿ ಇತ್ತು. ಇದು ನನ್ನ ಸೌಭಾಗ್ಯ.
ಪ್ರತಿ ಉದ್ಯೋಗಿಯನ್ನು ಭೇಟಿ ಆಗುತ್ತಿದ್ದರು

ಈಟಿವಿ ಸಂಸ್ಥೆಯಲ್ಲಿ ನಾವು ಊಹೆ ಮಾಡಿಕೊಳ್ಳುವುದಕ್ಕೂ ಆಗದ ವ್ಯವಸ್ಥೆ ಜಾರಿಯಲ್ಲಿತ್ತು. ನಾನು ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಆಗಲೇ ಕರ್ನಾಟಕ, ಆಂಧ್ರ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಉರ್ದು ಹೀಗೆ ಇಡೀ ದೇಶದಲ್ಲಿ ಈಟಿವಿಯ 11 ಚಾನಲ್‌ಗಳು ಕಾರ್ಯನಿರ್ವಹಿಸುತ್ತಿದ್ದವು. ಪ್ರತಿ ಮೂರು ತಿಂಗಳಿಗೆ ಒಮ್ಮೆ ಪ್ರತಿ ಚಾನಲ್‌ಗಳನ್ನು ರಿಪೋರ್ಟರ್, ಎಡಿಟೋರಿಯಲ್ ಸಿಬ್ಬಂದಿ, ಪ್ರೊಡಕ್ಷನ್ ಸಿಬ್ಬಂದಿ ಹೀಗೆ ಬೇರೆ ಬೇರೆ ವಿಭಾಗದ ಉದ್ಯೋಗಿಗಳನ್ನು ಭೇಟಿ ಮಾಡುವುದು ಸಂಪ್ರದಾಯವಾಗಿತ್ತು. ಪ್ರತಿ ಮೂರು ತಿಂಗಳಿಗೊಮ್ಮೆ ರೊಟೇಷನ್ ಆಧಾರದಲ್ಲಿ ಎಲ್ಲ ಉದ್ಯೋಗಿಗಳನ್ನು ಅವರು ಭೇಟಿ ಮಾಡುತ್ತಿದ್ದರು. ಇದೇ ರೀತಿ ಈಟಿವಿ ಸಮೂಹ ಸಂಸ್ಥೆಯ ಬೇರೆ ಬೇರೆ ಉದ್ಯೋಗಿಗಳನ್ನೂ ಅವರು ಭೇಟಿ ಮಾಡುತ್ತಿದ್ರು. ಇವತ್ತಿಗೂ ನನ್ನನ್ನು ಕಾಡುವ ಪ್ರಶ್ನೆ ಅದೇ. ಒಬ್ಬ ವ್ಯಕ್ತಿ ಅಷ್ಟೊಂದು ಜನರನ್ನು ಭೇಟಿ ಮಾಡಿ ಮಾತಾಡೋಕೆ ಹೇಗೆ ಸಾಧ್ಯ? ಸಮಯ ಹೇಗೆ ಮ್ಯಾನೇಜ್ ಮಾಡ್ತಿದ್ರು ಎನ್ನುವುದನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಆದರೆ, ಅವರಿಗೆ ಅದು ಸಾಧ್ಯವಾಗಿತ್ತು.

ಮತ್ತೊಂದು ವಿಶೇಷ ಏನಂದರೆ, ಹೀಗೆ ಭೇಟಿ ಮಾಡುವ ಮೊದಲು ನಾವು ಕೆಲಸ ಮಾಡುತ್ತಿರುವ ವಿಭಾಗದ ಕುಂದು ಕೊರತೆಗಳು, ಅಭಿಪ್ರಾಯಗಳು, ಸಲಹೆಗಳನ್ನು ವರದಿ ರೂಪದಲ್ಲಿ ಸಿದ್ದಪಡಿಸಿ ಅವರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೆವು. ನಿಗದಿತ ದಿನದಂದು ನಮ್ಮನ್ನು ಅವರು ಭೇಟಿ ಮಾಡುತ್ತಿದ್ದರು. ಆಶ್ಚರ್ಯ ಅಂದರೆ ನಾವು ಕೊಡುವ ಪ್ರತಿಯೊಬ್ಬರ ವರದಿಯನ್ನು ಓದಿ ಅವುಗಳಲ್ಲಿ ತುಂಬಾ ಗಂಭೀರವಾದ ವಿಚಾರಗಳನ್ನು, ಅತ್ಯುತ್ತಮ ಸಲಹೆಗಳನ್ನು, ಉಪಯುಕ್ತವಾಗುವಂತಹ ಅಭಿಪ್ರಾಯಗಳನ್ನು ಅವರು ಮಾರ್ಕ್ ಮಾಡಿಕೊಂಡು ಬರುತ್ತಿದ್ದರು. ಆ ವಿಚಾರಗಳ ಬಗ್ಗೆ ಮೀಟಿಂಗ್‌ನಲ್ಲಿ ಚರ್ಚೆ ಮಾಡುತ್ತಿದ್ರು. 

ಉತ್ತಮವಾಗಿ ಕೆಲಸ ಮಾಡಿರುವಂತಹ ಉದ್ಯೋಗಿಗಳಿಗೆ ಅಭಿನಂದಿಸುತ್ತಿದ್ದರು. ನಾವು ಪ್ರಸ್ತಾಪ ಮಾಡಿರುವ ಸಮಸ್ಯೆಗಳ ಬಗ್ಗೆ ಕೂಡಲೇ ಸ್ಪಂದಿಸುವಂತೆ ಸಂಬಂಧಪಟ್ಟ ವಿಭಾಗಗಳ ಮುಖ್ಯಸ್ಥರಿಗೆ ಸೂಚನೆ ಕೊಡುತ್ತಿದ್ದರು. ಹೊಸದಾಗಿ ಕೆಲಸಕ್ಕೆ ಸೇರಿದ ಟ್ರೈನಿಯಿಂದ ಹಿಡಿದು ಹಿರಿಯರ ತನಕ ಯಾರೇ ಉತ್ತಮ ಸಲಹೆ ಕೊಟ್ಟರೂ ಅದನ್ನು ಸ್ವೀಕರಿಸುತ್ತಿದ್ದರು. ಜೊತೆಗೆ ಅನುಷ್ಠಾನ ಮಾಡುತ್ತಿದ್ದರು. ಇದು, ಬಹುಶಃ ಭಾರತದ ಮಾಧ್ಯಮಗಳಲ್ಲೇ ಮೋಸ್ಟ್ ಡೆಮಾಕ್ರೆಟಿಕ್ ಸೆಟಪ್ ಅಂದ್ರೆ ಆಶ್ಚರ್ಯವಿಲ್ಲ. ನಾವು ಭೇಟಿ ಮಾಡೋದೆ ಕಷ್ಟ ಅಂದುಕೊಂಡಿರೋ ವ್ಯಕ್ತಿ, ಅತ್ಯಂತ ಸಂಯಮದಿಂದ ನಮ್ಮ ಮಾತುಗಳನ್ನು ಆಲಿಸುತ್ತಿದ್ದರು, ಅದಕ್ಕೆ ಸ್ಪಂದಿಸುತ್ತಿದ್ದರು ಅನ್ನೋದೇ ಜೀವನಪೂರ್ತಿ ಮರೆಯಲಾರದ ಅನುಭವ. ಇದು ಆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರತಿಯೊಬ್ಬರಿಗೂ ಸಹಜವಾಗಿಯೇ ರಾಮೋಜಿರಾವ್ ಅವರ ಮೇಲಿನ ಗೌರವ ಹೆಚ್ಚಾಗುವಂತೆ ಮಾಡಿತ್ತು.

ಎಲ್ಲಾ ಭಾಷೆಗಳಿಗೆ ಸಮಾನ ಗೌರವ ಕೊಡೋದನ್ನು ಅವರು ರೂಢಿಸಿಕೊಂಡಿದ್ದರು. ಕನ್ನಡವೂ ಸೇರಿದಂತೆ ಯಾವುದೇ ಭಾಷೆಯಲ್ಲಿ ಹೊಸ ಚಾನೆಲ್ ಆರಂಭವಾದಾಗ, ಮೊದಲ ಮಾತುಗಳನ್ನು ಅದೇ ಭಾಷೆಯಲ್ಲಿ ಹೇಳ್ತಿದ್ರು. ಇದರಿಂದಾಗಿ ಪ್ರತಿರಾಜ್ಯದವರಿಗೆ ಇದು ನಮ್ಮ ಚಾನೆಲ್ ಅನ್ನುವ ಭಾವನೆ ಮೂಡಿಸ್ತಿತ್ತು. ಅಷ್ಟೇ ಅಲ್ಲಾ ಕರ್ನಾಟಕದಲ್ಲೂ ಕರಾವಳಿ ಕನ್ನಡ, ಉತ್ತರ ಕರ್ನಾಟಕ, ಗಡಿಪ್ರದೇಶಗಳ ಕನ್ನಡ ಬೇರೆ ಬೇರೆ ಇರೋದು ಗೊತ್ತೇ ಇದೆ. ಸುದ್ದಿಗೆ ಸಂಬಂಧಿಸಿದಂತೆ ಜನರ ಪ್ರತಿಕ್ರಿಯೆ ತೆಗೆದುಕೊಳ್ಳುವಾಗ ಆಯಾ ಭಾಗದ ಭಾಷೆಯಲ್ಲಿ ಜನರ ಪ್ರತಿಕ್ರಿಯೆ ಪಡೆದುಕೊಳ್ಳಬೇಕು ಅಂತಾ ಅನೇಕ ಬಾರಿ ಸೂಚನೆ ಕೊಟ್ಟಿದ್ದಿದೆ. ಇದು ಅವರಲ್ಲಿರುವ ದೂರದೃಷ್ಟಿಗೆ ಸಾಕ್ಷಿಯಾಗಿತ್ತು.

ಫಿಲ್ಮ್‌ಸಿಟಿ ಎಂಬ ಮಿನಿ ಭಾರತ: ರಾಮೋಜಿರಾವ್ ಯಾಕೆ ದಾರ್ಶನಿಕ ಅಂತೀವಿ ಅವರಿಗೆ ದೂರದೃಷ್ಟಿ ಎಷ್ಟರಮಟ್ಟಿಗೆ ಇತ್ತು ಅನ್ನೋದಕ್ಕೆ ಮತ್ತೊಂದು ಉದಾಹರಣೆ. ಅವರು ದೇಶದ ವಿವಿಧ ಭಾಷೆಗಳಲ್ಲಿ ಆರಂಭಿಸಿದ್ದ ಚಾನೆಲ್‌ಗಳನ್ನು ನ್ಯೂಸ್‌ ರೂಂ ಮತ್ತು ಸ್ಟುಡಿಯೋಗಳು ರಾಮೋಜಿ ಫಿಲ್ಮ್ ಸಿಟಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದವು. ಇದು ನಿಜವಾದ ಅರ್ಥದಲ್ಲಿ ಮಿನಿ ಭಾರತವೇ ಆಗಿತ್ತು. ಎಲ್ಲ ಭಾಷೆಯನ್ನು ಮಾತನಾಡುವ ಜನರು ಒಂದೇ ಜಾಗದಲ್ಲಿದ್ದರು ಎನ್ನುವುದೇ ಆಶ್ಚರ್ಯಪಡುವಂತಹ ಸಂಗತಿ. ಒಂದೇ ಫ್ಲೋರ್‌ನಲ್ಲಿ ಹಲವು ಭಾಷೆಗಳ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದರಿಂದ ಬೇರೆ ಬೇರೆ ರಾಜ್ಯದಲ್ಲಿ ಏನಾಗುತ್ತಿದೆ ಅನ್ನೋ ಮಾಹಿತಿ ನಮಗೆ ಕುಳಿತ ಜಾಗದಲ್ಲಿಯೇ ಸಿಗುತ್ತಿತ್ತು. ಕನ್ನಡದ ಯಾವುದೋ ಒಂದು ಪ್ರಮುಖ ಬೆಳವಣಿಗೆ ಇತರೆ ರಾಜ್ಯದ ಸಿಬ್ಬಂದಿಗೆ ತಕ್ಷಣ ಸಿಗುತ್ತಿತ್ತು. 

ಅದೇ ರೀತಿ ಪಶ್ಚಿಮ ಬಂಗಾಳ, ಗುಜರಾತ್, ಅಂಧ್ರಪ್ರದೇಶದ ಸುದ್ದಿಗಳು ನಮಗೂ ಅಷ್ಟೇ ವೇಗವಾಗಿ ಸಿಗುತ್ತಿತ್ತು. ಇದರಿಂದಾಗಿ ಒಂದು ಭಾಷೆಯ ಚಾನೆಲ್‌ನವರು ಮತ್ತೊಂದು ಭಾಷೆಯ ಚಾನಲ್‌ನವರ ಜೊತೆ ವ್ಯವಹರಿಸುತ್ತಾ ಇದ್ರು. ಇದರಿಂದಾಗಿ ಹಲವು ಭಾಷೆಯ ಸಿಬ್ಬಂದಿ ಜೊತೆಗೆ ನಮಗೆ ಸೌಹಾರ್ದತೆ ಇತ್ತು. ನನಗೆ ಈಗಲೂ ಚೆನ್ನಾಗಿ ನೆನಪಿದೆ ಕನ್ನಡದಲ್ಲಿ ಕೆಲಸ ಮಾಡ್ತಿದ್ದ ನನ್ನ ಎಷ್ಟೋ ಸಹೋದ್ಯೋಗಿಗಳು, ಬೆಂಗಾಲಿ ಭಾಷೆ ಕಲಿತಿದ್ರು, ಗುಜರಾತಿ ಭಾಷೆ ಕಲಿತಿದ್ರು, ತೆಲುಗು ಕಲಿತಿದ್ರು. ಉಳಿದ ಭಾಷೆಯವರಿಗೂ ಅಂತಾದ್ದೇ ಅವಕಾಶ ಸಿಕ್ಕಿತ್ತು. ಅವರ ಹಬ್ಬ ಹರಿದಿನಗಳಿಗೆ ನಾವು ಶುಭಾಶಯ ಕೋರುತ್ತಿದ್ದೆವು. ನಮ್ಮ ಹಬ್ಬ ಹರಿದಿನಗಳಲ್ಲಿ  ಅವರು ಶುಭಾಶಯ ಕೋರುತ್ತಿದ್ದರು. ಅಲ್ಲಿ ನಮಗೆ ನಿಜವಾದ ಸಾಂಸ್ಕೃತಿಕ ವಿನಿಮಯ ಆಗ್ತಿತ್ತು. 

ಅಷ್ಟೇ ಅಲ್ಲಾ ಊಟ ತಿಂಡಿಯ ವಿಚಾರಗಳಲ್ಲೂ ನಮಗೆ ಆ ವೈವಿಧ್ಯದ ಪರಿಚಯವಾಗ್ತಿತ್ತು. ದೇಶ ಸುತ್ತಬೇಕು ಕೋಶ ಓದಬೇಕು ಅನ್ನೋ ಒಂದು ಮಾತಿದೆ. ಆದರೆ, ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕೆಲಸ ಮಾಡಿದ್ರೆ ಸಾಕು, ದೇಶವನ್ನೂ ಸುತ್ತಬೇಕಾಗಿಲ್ಲ, ಕೋಶವನ್ನೂ ಓದಬೇಕಾಗಿಲ್ಲ ಅಂತಾ ನಾವೆಲ್ಲಾ ತಮಾಷೆಯಾಗಿ ಮಾತನಾಡಿಕೊಂಡಿದ್ದೇವೆ.  ರಾಮೋಜಿರಾವ್ ಉದ್ಯೋಗಿಗಳ ವಿಚಾರದಲ್ಲಿ, ಅವರ ಪ್ರತಿಯೊಂದು ವಿಚಾರಗಳಲ್ಲೂ ಎಷ್ಟು ಕಾಳಜಿವಹಿಸುತ್ತಿದ್ದರು ಅನ್ನೋದನ್ನ ನಾನು ಹೇಳಲೇಬೇಕು. ನಾವೆಲ್ಲಾ ಕೆಲಸಕ್ಕೆಂದು ಹೈದರಾಬಾದ್‌ಗೆ ಹೋದಾಗ ಅದು ದೂರದ ಪ್ರದೇಶ, ನಮ್ಮವರು ಅನ್ನೋದು ಇಲ್ಲದ ಊರು, ಎಲ್ಲಿ ಹೋಗಬೇಕು ಎಲ್ಲಿ ಉಳಿದುಕೊಳ್ಳಬೇಕು ಅನ್ನೋ ಪ್ರಶ್ನೆ ಇದ್ದೇ ಇರುತ್ತೆ. ವಿಶೇಷ ಏನಂದ್ರೆ ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ಫಿಲ್ಮ್‌ಸಿಟಿಯಲ್ಲಿ ಸುಮಾರು 15 ದಿನಗಳವರೆಗೆ ಉಳಿದುಕೊಳ್ಳೋಕೆ ವ್ಯವಸ್ಥೆ ಇತ್ತು.

ವಾಲ್ಮೀಕಿ ನಿಗಮ ಕೇಸ್‌ ತನಿಖೆಗೆ ಸಿಬಿಐನಿಂದ ಪತ್ರ ಬಂದಿಲ್ಲ: ಸಚಿವ ಪರಮೇಶ್ವರ್‌

ಈ ಅವಧಿಯಲ್ಲಿ ನಾವು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗಿತ್ತು. ಇದಲ್ಲದೇ ಫಿಲ್ಮ್‌ಸಿಟಿಯಲ್ಲಿರೋ ಆಫೀಸ್‌ಗೆ ಹೋಗೋಕೆ ಬರೋಕೆ ಹೈದರಾಬಾದ್‌ನ ಮೂಲೆ ಮೂಲೆಯಿಂದಲೂ ಬಸ್‌ ವ್ಯವಸ್ಥೆ ಇತ್ತು. ಅದು ಕೂಡ ಉಚಿತವಾಗಿ. ಉದ್ಯೋಗಿಗಳ ಅನುಕೂಲಕ್ಕಾಗಿಯೇ ಕ್ಯಾಂಟೀನ್ ಕೂಡ ಇತ್ತು. ಕೇವಲ ಐಡಿ ಕಾರ್ಡ್ ತೋರಿಸಿ ನಮಗೆ ಬೇಕಾದ ಊಟ ತಿಂಡಿ ಮಾಡುವ ಅವಕಾಶವಿತ್ತು. ಅದಕ್ಕೆ ತಗುಲುವ ವೆಚ್ಚವನ್ನು ಸಂಬಳದಲ್ಲಿ ಸರಿದೂಗಿಸೋ ವ್ಯವಸ್ಥೆ ಮಾಡಲಾಗಿತ್ತು. ಇದರಿಂದಾಗಿ ಜೇಬಿನಲ್ಲಿ ದುಡ್ಡಿರಲೇಬೇಕು ಅನ್ನುವ ಪರಿಸ್ಥಿತಿಯಂತೂ ಇರಲಿಲ್ಲ. ಬದುಕು ರೂಪಿಸಿಕೊಳ್ಳೋಕೆ ಇದಕ್ಕಿಂತ ಇನ್ನೇನು ಬೇಕು ಹೇಳಿ. ಕೆಲಸಕೊಟ್ಟು, ತರಬೇತಿ ಕೊಟ್ಟು, ಸೌಲಭ್ಯಕೊಟ್ಟು, ಸಂಬಳ ಕೊಟ್ಟು ಬದುಕು ರೂಪಿಸಿಕೊಳ್ಳೋಕೆ ಅವಕಾಶ ಕೊಟ್ಟ ಮಹಾನ್ ವ್ಯಕ್ತಿ ರಾಮೋಜಿರಾವ್. ನ್ಯೂಸ್ ಚಾನಲ್, ನ್ಯೂಸ್‌ ಪೇಪರ್‌, ಹೋಟೆಲ್ ಉದ್ಯಮ, ಫಿಲ್ಮ್ ನಿರ್ಮಾಣ ಹೀಗೆ ವಿವಿಧ ಉದ್ಯಮಗಳ ಮೂಲಕ ಪ್ರತ್ಯಕ್ಷವಾಗಿ  ಹಾಗೂ ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಬದುಕುಕೊಟ್ಟ ರಾಮೋಜಿರಾವ್ ನಿಜವಾದ ಭಾರತರತ್ನ.

click me!