ಭಾರತಕ್ಕೆ ಒಲಿದ ಎರಡು ಆಸ್ಕರ್ ಪ್ರಶಸ್ತಿಗಳಿಗೆ ಕರ್ನಾಟಕದ ನಂಟಿದೆ ಎನ್ನುವುದು ಕನ್ನಡಿಗರಿಗೆ ವಿಶೇಷವಾಗಿದೆ.
'ಆಸ್ಕರ್ 2023' ಭಾರತೀಯರಿಗೆ ತುಂಬಾ ವಿಶೇಷವಾಗಿತ್ತು. 95ನೇ ಅಕಾಡೆಮಿ ಅವಾರ್ಡ್ ಸಮಾರಂಭದಲ್ಲಿ ಭಾರತ ಎರಡು ಆಸ್ಕರ್ ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ. ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆರ್ ಆರ್ ಆರ್ ಸಿನಿಮಾದ 'ನಾಟು ನಾಟು..' ಹಾಡು ಮತ್ತು ಅತ್ಯುತ್ತಮ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ ವಿಭಾಗದಲ್ಲಿ 'ದಿ ಎಲಿಫೆಂಡ್ ವಿಸ್ಪರ್ಸ್' ಪ್ರಶಸ್ತಿ ಗೆದ್ದುಕೊಂಡಿದೆ. ಆಸ್ಕರ್ ಪ್ರಶಸ್ತಿ ಬಾಚಿಕೊಂಡ ಈ ಎರಡು ಚಿತ್ರಕ್ಕೂ ಕನ್ನಡದ ನಂಟಿದೆ ಎನ್ನುವುದೇ ವಿಶೇಷ. ಏನದು ಅಂತೀರಾ?
ಮೊದಲಿಗೆ ಇಡೀ ವಿಶ್ವದ ಗಮನ ಸೆಳೆದಿರುವ ಆರ್ಆರ್ಆರ್ ಚಿತ್ರದ ನಿರ್ದೇಶಕ ರಾಜಮೌಳಿ ಕರ್ನಾಟಕ ಮೂಲದವರು. ಕರ್ನಾಟದಲ್ಲಿ ಹುಟ್ಟಿದ ರಾಜಮೌಳಿ ಖ್ಯಾತಿ ಗಳಿಸಿದ್ದು ಟಾಲಿವುಡ್ನಲ್ಲಿ. ಜೊತೆಗೆ ಈ ಚಿತ್ರದ ಆಡಿಯೋ ಹಕ್ಕು ಹೊಂದಿರುವುದು ಕರ್ನಾಟಕದ ಲಹರಿ ಸಂಸ್ಥೆ. ಹಾಗಾಗಿ ಆರ್ ಆರ್ ಆರ್ ಗೆದ್ದ ಆಸ್ಕರ್ ಪ್ರಶಸ್ತಿಗೆ ಕರ್ನಾಟಕದ ನಂಟಿದೆ. ಆರ್ ಆರ್ ಆರ್ ಸಿನಿಮಾದ ದಕ್ಷಿಣ ಭಾರತದ ಹಾಡುಗಳ ಹಕ್ಕು ಲಹರಿ ವೇಲು ಮಾಲಿಕತ್ವದ ಲಹರಿ ಸಂಸ್ಥೆಯಲ್ಲಿದೆ.
ಸಾಕ್ಷ್ಯಚಿತ್ರದ ಮೂಲಕ ಆನೆ ಪ್ರೀತಿ ಅನಾವರಣ, ಆಸ್ಕರ್ ಪ್ರಶಸ್ತಿ ಕುರಿತು ಅರಣ್ಯಾಧಿಕಾರಿ ಮನದಾಳ!
ಆರ್ ಆರ್ ಆರ್ ಆಸ್ಕರ್ ಗೆಲ್ಲುತ್ತಿದ್ದಂತೆ ಲಹರಿ ವೇಲು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ವಿಡಿಯೋ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಕನ್ನಡಾಂಬೆ ಮಡಿಲಿಗೆ, ಭಾರತಾಂಬೆ ಮಡಿಲಿಗೆ, ಸಂಗೀತ ಪ್ರೀಯರಿಗೆ, ಸಾಹಿತಿ, ಸಿನಿಮಾ ನಿರ್ಮಾಪಕರು ಹಾಗೂ ಎಲ್ಲಾ ಭಾರತೀಯರಿಗೆ ಈ ಪ್ರಶಸ್ತಿ ಅರ್ಪಣೆ' ಎಂದು ಹೇಳಿದ್ದಾರೆ. ಇಂಥ ಹಾಡನ್ನು ಲಹರಿ ಸಂಸ್ಥೆಯಲ್ಲಿ ರಿಲೀಸ್ ಮಾಡಿ ವಿಶ್ವದಾದ್ಯಂತ ಪ್ರಚಾರ ಮಾಡಿದ್ದಕ್ಕೆ ತುಂಬಾ ಸಂತೋಷವಾಗಿದೆ' ಎಂದು ಲಹರಿ ವೇಲು ಹೇಳಿದ್ದಾರೆ.
ಅನಾಥ ಆನೆ ಮರಿಗಳನ್ನು ಮಕ್ಕಳಂತೆ ಸಾಕಿದ ಬೊಮ್ಮನ್-ಬೆಳ್ಳಿ ದಂಪತಿಯ ಸ್ಫೂರ್ತಿದಾಯಕ ಜೀವನಕ್ಕೆ 'ಆಸ್ಕರ್' ಗರಿ
ದಿ ಎಲಿಫೆಂಟ್ ವಿಸ್ಪರ್ಸ್
ದಿ ಎಲಿಫೆಂಟ್ ವಿಸ್ಪರ್ಸ್ ಸಾಕ್ಷ್ಯಚಿತ್ರ ಕಾರ್ತಿಕಿ ಗೊನ್ಸಾಲ್ವಿಸ್ ಸಾರಥ್ಯದಲ್ಲಿ ಮೂಡಿಬಂದಿದೆ. ಊಟಿಯಲ್ಲಿ ಹುಟ್ಟಿ ಬೆಳೆದ ಕಾರ್ತಿಕಿ ಇಂದು ದಿ ಎಲಿಫೆಂಟ್ ವಿಸ್ಪರ್ಸ್ ಮೂಲಕ ಜಗತ್ತಿನ ಗಮನ ಸೆಳೆಯುತ್ತಿದ್ದಾರೆ. ಈ ಸಾಕ್ಷ್ಯಚಿತ್ರ ತಯಾರಿಸಲು ಕಾರ್ತಿಕಿ ಬರೋಬ್ಬರಿ 6 ವರ್ಷಗಳು ಶ್ರಮಿಸಿದ್ದಾರೆ. ಸುಮಾರು 6 ವರ್ಷಗಳಿಂದ ಬೆಟ್ಟದ ಜನರೊಂದಿಗೆ ಪ್ರಯಾಣಿಸಿ ಈ ಸಾಕ್ಷ್ಯಚಿತ್ರವನ್ನು ತಯಾರಿಸಿದ್ದಾರೆ. ಅಂದಹಾಗೆ ಈ ಡಾಕ್ಯೂಮೆಂಟರಿಯಲ್ಲಿ ತಮಿಳುನಾಡಿನ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಎರಡು ಆನೆ ಮರಿಗಳನ್ನು ಸಾಕಿದ ಸ್ಫೂರ್ತಿದಾಯಕ ಜೀವನವನ್ನು ತೋರಿಸಲಾಗಿದೆ.