
ಕೆಲ ದಿನಗಳ ಹಿಂದೆ ಗುಜರಾತಿನ ಅಹಮ್ಮದಾಬಾದ್ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯದ ವೀಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿಯವರು ಹೋಗಿದ್ದರು. ಅಂತಿಮ ಪಂದ್ಯದಲ್ಲಿ ಭಾರತ ವಿಶ್ವ ಕಪ್ ಗೆಲ್ಲಲು ವಿಫಲವಾಗುತ್ತಿದ್ದಂತೆಯೇ ಪ್ರಧಾನಿಯವರು ಭಾರತದ ಕ್ರೀಡಾಪಟುಗಳು ಇದ್ದ ಕೋಣೆಗೆ ತೆರಳಿ ಅಲ್ಲಿದ್ದವರಿಗೆ ಸಾಂತ್ವನ ಮಾಡಿದರು. ವಿಶ್ವ ಕಪ್ ಗೆಲ್ಲಲು ಸಾಧ್ಯವಾಗದೇ ನೋವಿನಿಂದ ಇದ್ದ ಕ್ರೀಡಾಪಟುಗಳ ಬೆಂಬಲಕ್ಕೆ ನಿಂತರು. ಒಂದೂ ಪಂದ್ಯವನ್ನು ಸೋಲದೇ 10 ಪಂದ್ಯ ಗೆದ್ದು ಅಂತಿಮ ಹಂತಕ್ಕೆ ತಲುಪಿರುವುದು ಸುಲಭದ ಮಾತಲ್ಲ, ಸೋಲು-ಗೆಲುವು ಆಟದಲ್ಲಿ ಇದ್ದದ್ದೇ. ಮುಂದೆ ಅನೇಕ ಅವಕಾಶಗಳು ಇರುವುದಾಗಿ ಕ್ರೀಡಾಪಟುಗಳಿಗೆ ಹುರಿದುಂಬಿಸಿದರು. ಇದರ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪ್ರಧಾನಿಯವರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಹಿಂದೆ ಚಂದ್ರಯಾನ-2 ಸಂದರ್ಭದಲ್ಲಿ ಚಂದ್ರಯಾನ ವಿಫಲವಾದಾಗ ಪ್ರಧಾನಿ ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರನ್ನು ತಬ್ಬಿಕೊಂಡು ಸಂತೈಸಿದ ಚಿತ್ರವನ್ನು ಶೇರ್ ಮಾಡಿದ್ದ ಮೋದಿ ಅಭಿಮಾನಿಗಳು, ಭಾರತ ಖಂಡಿತವಾಗಿಯೂ ಮುಂದಿನ ಸಲ ವಿಶ್ವ ಕಪ್ ಗೆಲ್ಲಲಿದೆ ಎಂದು ಹೇಳುತ್ತಿದ್ದಾರೆ.
ಆದರೆ ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರೋಧಿಗಳು ಮೋದಿಯವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಪ್ರಧಾನಿ ಈ ರೀತಿ ಸಾಂತ್ವನ ಮಾಡಿರುವುದು ನಾಟಕ, ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ನಡೆಸಿದ ಕುತಂತ್ರ ಎಂದು ತಮ್ಮ ಭಾಷಣದಲ್ಲಿ ಹೇಳಿದರು. ಇದೇ ವೇಳೆ ಮೋದಿಯವರು ಅಂದು ಕ್ರಿಕೆಟ್ ನೋಡಲು ಹೋಗಿದ್ದರಿಂದಲೇ ಭಾರತ ಸೋತಿತು, ಇಲ್ಲದಿದ್ದರೆ ವಿಶ್ವಕಪ್ ಗೆಲ್ಲುತ್ತಿತ್ತು ಎಂದಿದ್ದಾರೆ. ಇವರ ಮಾತಿಗೆ ಕಾಂಗ್ರೆಸ್ ಬೆಂಬಲಿಗರು ತಲೆದೂಗಿದ್ದಾರೆ. ಮೋದಿಯವರನ್ನು ಪನೌತಿ ಅಂದರೆ ಅಪಶಕುನ ಎನ್ನುವ ರೀತಿಯಲ್ಲಿ ಹೀಯಾಳಿಕೆ ಮಾಡಿದ್ದು, ಅವರಿಂದಲೇ ಭಾರತ ಸೋತಿತು ಎಂದಿದ್ದಾರೆ.
ಪ್ರಕಾಶ್ ರಾಜ್ ಮಾನಸಿಕ ಆರೋಗ್ಯಕ್ಕಾಗಿ ಕಂಗನಾ ಫ್ಯಾನ್ಸ್ ಕ್ಲಬ್ ಸೇರಬೇಕಂತೆ! ನಟಿ ಟಾಂಗ್
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಬಿಜೆಪಿ ಫ್ಯಾನ್, ನಟಿ ಕಂಗನಾ ರಣಾವತ್ ಕೆಂಡಾಮಂಡಲ ಆಗಿದ್ದಾರೆ. ಪ್ರಧಾನಿ ಮೋದಿಯವರನ್ನು ಅಪಶಕುನ ಎಂದು ಕರೆದವರಿಗೆ ನಟಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮುಟ್ಟಿದ್ದೆಲ್ಲವೂ ಚಿನ್ನ, ಅವರು ಎಂದಿಗೂ ಸೋಲಿಲ್ಲದ ಸರದಾರ ಎಂದಿರುವ ಕಂಗನಾ, ಅಪಶಕುನ ಎಂದು ಹೇಳಿಕೆ ಕೊಟ್ಟದವರ ವಿರುದ್ಧ ಕಿಡಿ ಕಾರಿದ್ದಾರೆ. ಮೋದಿಯವರ ಆಡಳಿತದಲ್ಲಿ ಗುಜರಾತ್ ವೇಗವಾಗಿ ಬೆಳೆಯುತ್ತಿರುವ ರಾಜ್ಯವಾಗಿದೆ. ಅವರು ಪ್ರಧಾನಿಯಾದ ಮೇಲೆ ಭಾರತದ ಆರ್ಥಿಕತೆಯು 4 ಟ್ರಿಲಿಯನ್ಗೆ ತಲುಪಿದೆ. ಹಲವು ದಶಕಗಳ ಕಾಲ ಆಡಳಿತ ನಡೆಸಿದ್ದರೂ ಭಾರತದ ಆರ್ಥಿಕತೆ 10ನೇ ಸ್ಥಾನದಲ್ಲಿತ್ತು. ಮೋದಿಯವರು ಪ್ರಧಾನಿಯಾದ ಕೆಲವೇ ವರ್ಷಗಳಿಂದ ಐದನೇ ಸ್ಥಾನಕ್ಕೆ ತಲುಪಿದ್ದು, ಯಾರಿಗೂ ಕಾಣಿಸುವುದಿಲ್ಲವೇ ಎಂದು ಪ್ರಶ್ನಿಸಿರುವ ನಟಿ, ರಾಜಕೀಯದ ದುರುದ್ದೇಶದಿಂದ ಇಂಥ ಕೀಳು ಮಟ್ಟದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ನಟಿ ಕಂಗನಾ, ರಾಜಕೀಯಕ್ಕೆ ಎಂಟ್ರಿ ಕೊಡುವ ಸುಳಿವು ನೀಡಿದ್ದರು. ತೇಜಸ್ ಚಿತ್ರದ ಬಿಡುಗಡೆಯ ನಂತರ ಗುಜರಾತ್ನ ದ್ವಾರಕಾದ ಜಗತ್ ಮಂದಿರಕ್ಕೆ ತೆರಳಿದ ನಟಿ ಇದಾದ ಬಳಿಕ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವೊಂದು ಮಾಹಿತಿ ಶೇರ್ ಮಾಡಿಕೊಂಡಿದ್ದರು. ಮಾಧ್ಯಮದವರೊಂದಿಗೆ ಮಾತನಾಡಿದ್ದ ಕಂಗನಾ, ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ್ದರು. ಮುಂದಿನ ದಿನಗಳಲ್ಲಿ ಶ್ರೀಕೃಷ್ಣನ ಆಶೀರ್ವಾದವಿದ್ದರೆ ನಾನೂ ಕೂಡ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಕಂಗನಾ ಹೇಳಿದ್ದರು.
ಶ್ರೀಕೃಷ್ಣ ದಯೆ ತೋರಿದರೆ.... ರಾಜಕೀಯ ಎಂಟ್ರಿಗೆ ನಟಿ ಕಂಗನಾ ರಣಾವತ್ ಕೊಟ್ರು ದೊಡ್ಡ ಸುಳಿವು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.