
ಸಂಸದೆ ಕಂಗನಾ ರಣಾವತ್ ಅವರ ಕೊನೆಯ ಚಿತ್ರ ಎಂದೇ ಬಿಂಬಿತವಾಗಿರುವ ಎಮರ್ಜೆನ್ಸಿ ಬಿಡುಗಡೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಇದೇ 17ರಂದು ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ ತಕ್ಷಣ ವಿವಾದಗಳ ಸುಳಿ ಸುತ್ತಿಕೊಂಡು ಬಿಡುತ್ತಿರುವ ಚಿತ್ರ ಇದು. ಇದಾಗಲೇ ನಾಲ್ಕೈದು ಬಾರಿ ಚಿತ್ರ ಬಿಡುಗಡೆಯ ಸಮೀಪಕ್ಕೆ ಬಂದು ನಂತರ ಸ್ಟಾಪ್ ಆಗಿದೆ. ಕಳೆದ ಬಾರಿ ಇನ್ನೇನು ಬಿಡುಗಡೆಗೆ ಸೆನ್ಸಾರ್ ಮಂಡಳಿ ಅನುಮತಿ ಸಿಕ್ಕಿದ್ದರೂ ಕುತೂಹಲದ ಘಟ್ಟದಲ್ಲಿ, ಅಚ್ಚರಿಯ ಬೆಳವಣಿಗೆಯ ನಡುವೆ, ಸೆನ್ಸಾರ್ ಮಂಡಳಿ ಯೂಟರ್ನ್ ಹೊಡೆಯಿತು. ಕೊನೆಗೂ ಎಮರ್ಜೆನ್ಸಿಗೆ ಬಿಡುಗಡೆಯ ಭಾಗ್ಯ ಸಿಗಲೇ ಇಲ್ಲ. ಹೀಗೆ ನಾಲ್ಕೈದು ಬಾರಿ ಡೇಟ್ ಫಿಕ್ಸ್ ಆಗಿ ಮುಂದಕ್ಕೆ ಸಾಗುತ್ತಲೇ ಇರುವ ಈ ಚಿತ್ರಕ್ಕೆ ಈಗ ಹೊಸ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಝೀ ಸ್ಟುಡಿಯೋಸ್ ಮತ್ತು ಮಣಿಕರ್ಣಿಕಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬರುತ್ತಿರುವ 'ಎಮರ್ಜೆನ್ಸಿ' ಚಿತ್ರವು ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿಯನ್ನು ಆಧರಿಸಿದ ಮೆಗಾ-ಬಜೆಟ್ ಚಲನಚಿತ್ರವಾಗಿದೆ.
ಈ ಚಿತ್ರದಲ್ಲಿ 1975ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರ ಕರೆ ಕೊಟ್ಟ ಎಮರ್ಜೆನ್ಸಿ, ಆ ಕರೆಯಿಂದ ಆಗಿರುವ ಘಟನಾವಳಿಗಳು, ಎಮರ್ಜೆನ್ಸಿಯ ಕರಾಳ ಮುಖ, ಬರ್ಬರ ಹತ್ಯಾಕಾಂಡ, ಈ ದೇಶದ ಮೇಲೆ ಆಗಿದ್ದ ಪರಿಣಾಮ ಎಲ್ಲವನ್ನೂ ತೋರಿಸಲಾಗಿದೆ ಎಂದು ಇದಾಗಲೇ ನಟಿ ಕಂಗನಾ ರಣಾವತ್ ಹೇಳಿದ್ದಾರೆ. ಇದೀಗ ಕುತೂಹಲದ ಘಟ್ಟದಲ್ಲಿ ಈ ಚಿತ್ರವನ್ನು ನೋಡುವಂತೆ ಕಂಗನಾ, ಸಂಸದೆ, ಇಂದಿರಾಗಾಂಧಿಯವರ ಮೊಮ್ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಆಹ್ವಾನ ನೀಡಿದ್ದಾರಂತೆ! ಸಂಸತ್ತಿನಲ್ಲಿ ಪ್ರಿಯಾಂಕಾ ಅವರು ಸಿಕ್ಕಾಗ ಎಮರ್ಜೆನ್ಸಿ ಚಿತ್ರ ಮಾಡಿದ್ದೇನೆ, ನೀವೂ ನೋಡಬೇಕು ಎಂದು ಹೇಳಿದ್ದಾರಂತೆ.
ಈ ಕುರಿತು ಖುದ್ದು ನಟಿ ಕಂಗನಾ, ಪಿಟಿಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ನಿಮ್ಮ ಎಮರ್ಜೆನ್ಸಿ ಸಿನಿಮಾ ಬಗ್ಗೆ ಮಾತನಾಡಲು ಗಾಂಧಿ ಕುಟುಂಬದವರು ನಿಮ್ಮ ಬಳಿ ಯಾರಾದರೂ ಬಂದಿದ್ರಾ ಎನ್ನುವ ಪ್ರಶ್ನೆಗೆ ಉತ್ತರವಾಗಿ ಕಂಗನಾ, 'ಸದ್ಯ ಯಾರೂ ಬಂದಿಲ್ಲ. ಈ ಬಗ್ಗೆ ಗಾಂಧಿ ಕುಟುಂಬದ ಯಾರೂ ನನ್ನ ಬಳಿ ಮಾತನಾಡಿಲ್ಲ. ಆದರೆ ನಾನು ಸಂಸತ್ತಿನಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಿದ್ದೆ. ಆಗ ಅವರು ಸಿನಿಮಾದಲ್ಲಿನ ನನ್ನ ಕೆಲಸ ಮತ್ತು ಕೇಶ ವಿನ್ಯಾಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ಎಮರ್ಜೆನ್ಸಿ ಸಿನಿಮಾ ಮಾಡಿದ್ದೇನೆ, ನೀವು ನೋಡಬೇಕು ಎಂದು ಅವರಿಗೆ ಆಹ್ವಾನಿಸಿದೆ. ಅದಕ್ಕೆ ಪ್ರಿಯಾಂಕಾ, ಓಕೆ, ನೋಡೋಣ ಎಂದು ಉತ್ತರ ಕೊಟ್ಟರು ಎಂದು ಕಂಗನಾ ಹೇಳಿದ್ದಾರೆ.
ಇದಾಗಲೇ ಕಳೆದ ವರ್ಷ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿತ್ತು. ಎರಡು ದಿನಗಳ ಹಿಮದೆ ಮತ್ತೊಂದು ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಎಮರ್ಜೆನ್ಸಿಯ ಘೋಷಣೆ ಆಗುತ್ತಿದ್ದಂತೆಯೇ, ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ, ಸಚಿವ ಸಂಪುಟದ ಪರ್ಮಿಷನ್ ಬೇಕು ಎಂದು ಹೇಳುತ್ತಿದ್ದಂತೆಯೇ, ಇಂದಿರಾ ಗಾಂಧಿ, ನಾನೇ ಕ್ಯಾಬಿನೆಟ್ ಎನ್ನುವ ಡೈಲಾಗ್ ಇದೆ. ಇದೇ ವೇಳೆ, ಇಂದಿರಾ ಅವರ ಬಹು ಚರ್ಚಿತ ಘೋಷಣೆಯಾಗಿರುವ ಇಂದಿರಾನೇ ಇಂಡಿಯಾ, ಇಂಡಿಯಾನೇ ಇಂದಿರಾ ಎಂದೂ ಈ ಪ್ರೊಮೋದಲ್ಲಿ ತೋರಿಸಲಾಗಿದೆ. ಕೊನೆಗೆ ಯುದ್ಧನೇ ಕೊನೆಗೆ ದಾರಿ ಎನ್ನುವ ಮೂಲಕ, ನಡೆದಿರುವ ಯುದ್ಧ, ಅದರಲ್ಲಿ ಮಹಿಳೆ, ಮಕ್ಕಳು ಎನ್ನಲೇ ಅಸಂಖ್ಯ ಭಾರತೀಯರ ಬರ್ಬರ ಹತ್ಯೆ, ಹೋರಾಟಗಾರರಿಗೆ ಆಗಿರುವ ಭಯಾನಕ ಶಿಕ್ಷೆಗಳನ್ನೂ ಈ ಪ್ರೊಮೋದಲ್ಲಿ ತೋರಿಸಲಾಗಿದೆ. ಈ ಚಿತ್ರದಲ್ಲಿ ಎಮರ್ಜೆನ್ಸಿಯ ಬಹಿರಂಗಗೊಳ್ಳದ ಸತ್ಯ ಇದೆ ಎಂದು ಹೇಳಿಕೊಂಡಿದೆ ಚಿತ್ರತಂಡ.
ಕಂಗನಾ ಮದ್ವೆ ಯಾವಾಗ? ಸಂಸದ ಚಿರಾಗ್ ಪಾಸ್ವಾನ್ ಜೊತೆ ಏನು ನಡೀತಿದೆ? ಬಾಯ್ಬಿಟ್ಟ ನಟಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.