ಆಧಾರ್​ ಕಾರ್ಡ್​ ಕಾಂಟ್ರವರ್ಸಿಗೆ ಸಿಲುಕಿದ ಕಂಗನಾ ರಣಾವತ್​! ಸಂಸದೆಯಾದ್ರೂ ಹಿಂಬಾಲಿಸ್ತಿದೆ ವಿವಾದ

By Suchethana DFirst Published Jul 13, 2024, 11:43 AM IST
Highlights

ಕಾಂಟ್ರವರ್ಸಿ ಮಾತುಗಳಿಂದಲೇ ಸದ್ದು ಮಾಡುತ್ತಿದ್ದ ನಟಿ ಕಂಗನಾ ರಣಾವತ್​ ಸಂಸದೆಯಾದ ಮೇಲೂ ಆಧಾರ್​ ಕಾರ್ಡ್​ ಕಾಂಟ್ರವರ್ಸಿಗೆ ಸಿಲುಕಿದ್ದಾರೆ. ಏನಿದು?
 

ಕಂಗನಾ ರಣಾವತ್​ ಹೆಸರಿನ ಜೊತೆ ಜೊತೆಗೇ ಕೇಳಿಬರುವ ಶಬ್ದ ಕಾಂಟ್ರವರ್ಸಿ. ನಟಿಯಾಗಿದ್ದಾಗಲೂ ನೇರ ದಿಟ್ಟವಾಗಿ ಖಡಕ್​ ಆಗಿ ಮನಸ್ಸಿಗೆ ಬಂದಂತೆ ಹೇಳುತ್ತಲೇ ಇಲ್ಲಸಲ್ಲದ ವಿವಾದ ಸೃಷ್ಟಿ ಮಾಡಿಕೊಳ್ಳುತ್ತಿದ್ದ ನಟಿ ಕಂಗನಾ, ಈಗ ಸಂಸದೆಯಾದ ಮೇಲೂ ಸುದ್ದಿ ಮಾಡುತ್ತಿದ್ದಾರೆ.  ರಾಜಕೀಯ ಪ್ರವೇಶ ಮಾಡುತ್ತಿದ್ದಂತೆಯೇ ಪ್ರಥಮ ಹಂತದಲ್ಲಿಯೇ ಲೋಕಸಭೆಯನ್ನು ಪ್ರವೇಶಿಸಲಿರುವ ಅದರಲ್ಲಿಯೂ ಭರ್ಜರಿ ಗೆಲುವಿನೊಂದಿಗೆ ಸಂಸದೆಯಾಗಿರುವ ಕಂಗನಾ ಈಚೆಗೆ  ಸಿಐಎಸ್ಎಫ್  ಮಹಿಳಾ ಸೆಕ್ಯುರಿಟಿ ಸಿಬ್ಬಂದಿಯೊಬ್ಬರಿಂದ ಹೊಡೆಸಿಕೊಂಡ ಸುದ್ದಿ ಭಾರಿ ಹಲ್​ಚಲ್​ ಸೃಷ್ಟಿಯಾಗಿತ್ತು.  ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಕಂಗನಾ ಗೆಲುವು ಸಾಧಿಸುತ್ತಿದ್ದಂತೆಯೇ ಈ ಘಟನೆ ಅಭಿಮಾನಿಗಳನ್ನು ದಂಗು ಬಡಿಸಿತ್ತು. ಈ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಕಂಗನಾ ರಣಾವತ್​ ಇನ್ನೊಂದು ಕಾಂಟ್ರವರ್ಸಿ ಮಾಡಿಕೊಂಡಿದ್ದಾರೆ.

ಅದೇನೆಂದರೆ ಜನರು ತಮ್ಮನ್ನು ನೋಡಲು ಬರುವುದಾದರೆ ಅವರು ಕಡ್ಡಾಯವಾಗಿ ಆಧಾರ್​ ಕಾರ್ಡ್​ ತರಬೇಕು ಎನ್ನುವುದು.  ನನ್ನ ಕ್ಷೇತ್ರದ ಜನರು ನನ್ನನ್ನು ಯಾವುದೇ ಕಾರಣಕ್ಕೆ ಭೇಟಿಯಾಗಲು ಬಯಸಿದರೆ ಅವರು ಆಧಾರ್ ಕಾರ್ಡ್​ ತರಬೇಕು ಎಂದು ಹೇಳಿದ್ದಾರೆ. ಅಷ್ಟಕ್ಕೂ ಅವರು ಹೀಗೆ ಹೇಳಿರುವ ಹಿಂದೆ ಕಾರಣವೂ ಇದೆ. ಅದೇನೆಂದ್ರೆ, ತಮ್ಮನ್ನು ಭೇಟಿಯಾಗಲು ಬರುವವರು ಮಂಡಿ ಲೋಕಸಭಾ ಕ್ಷೇತ್ರದ ಜನರು ಹೌದೋ ಅಲ್ಲವೋ ಎಂದು ನೋಡುವುದಕ್ಕಾಗಿ ಆಧಾರ್​ ಕಾರ್ಡ್​ ಕಡ್ಡಾಯ ಎಂದಿದ್ದಾರೆ.  ಆಧಾರ್ ಕಾರ್ಡ್ ಹೊಂದಿರುವುದು ಅವಶ್ಯಕ. ಇದರಿಂದ ನೀವು ಯಾವುದೇ ಅನಾನುಕೂಲತೆಯನ್ನು ಎದುರಿಸುವುದಿಲ್ಲ. ನೀವು ಮೇಲಿನ ಹಿಮಾಚಲ ಪ್ರದೇಶದವರಾಗಿದ್ದರೆ ನಮ್ಮ ಕುಲು ಮನಾಲಿ ಮನೆಗೆ ಬನ್ನಿ. ನೀವು ಮಂಡಿಯವರಾಗಿದ್ದರೆ ಮಂಡಿ ಕಚೇರಿಗೆ ಬನ್ನಿ ಎಂದೂ ಕಂಗನಾ ಹೇಳಿದ್ದಾರೆ. ಕೆಲಸದ ವಿಚಾರವಾಗಿ ಯಾರನ್ನಾದರೂ ಖುದ್ದಾಗಿ ಭೇಟಿಯಾದರೆ ತುಂಬಾ ಒಳ್ಳೆಯದು. ಜನರು ತಮ್ಮ ಸಮಸ್ಯೆಗಳನ್ನು ಅಂಚೆ ಮೂಲಕವೂ ಹೇಳಬಹುದು ಎಂದಿದ್ದಾರೆ ಕಂಗನಾ. 

Latest Videos

'ವೀಕೆಂಡ್' ವಿರುದ್ಧ ಅಸಮಾಧಾನ ಹೊರಹಾಕಿದ ಸಂಸದೆ ಕಂಗನಾ ಖಡಕ್​ ಮಾತೀಗ ವೈರಲ್​

ಆದರೆ ಈ ಮಾತು ಇದೀಗ ಸಕತ್​ ಕಾಂಟ್ರವರ್ಸಿ ಆಗುತ್ತಿದೆ. ಮಂಡಿ ಕ್ಷೇತ್ರದಲ್ಲಿ ಪರಾಭವಗೊಂಡಿರುವ ಕಾಂಗ್ರೆಸ್​ ಅಭ್ಯರ್ಥಿ ಈ ಮಾತಿಗೆ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಮಾತ್ರವಲ್ಲದೇ ವಿಪಕ್ಷಗಳೂ ಕಂಗನಾ ವಿರುದ್ಧ ಹರಿಹಾಯುತ್ತಿವೆ. ಮಂಡಿಯಿಂದ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಯಾಗಿದ್ದ ಮತ್ತು ಪ್ರಸ್ತುತ ಹಿಮಾಚಲ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿರುವ ವಿಕ್ರಮಾದಿತ್ಯ ಸಿಂಗ್, ಕಂಗನಾ ಮಾತಿಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಯೊಬ್ಬರು ತಮ್ಮ ಸಂಸದೀಯ ಕ್ಷೇತ್ರದ ಜನರಿಗೆ ಬೇಕಾದರೆ ಬರಲಿ ಎಂದು ಹೇಳುವುದು ಉತ್ತಮ ನಡವಳಿಕೆಯಲ್ಲ. ಜನಪ್ರತಿನಿಧಿ  ಸ್ವಂತ ರಾಜ್ಯದವರೇ ಆಗಿರಲಿ, ಪ್ರವಾಸಿಗರೇ ಇರಲಿ, ಸಾರ್ವಜನಿಕ ಪ್ರತಿನಿಧಿಗಳು ಎಲ್ಲರನ್ನೂ ಭೇಟಿಯಾಗಬೇಕು. ಹೀಗೆ ಅಧಾರ್​ ಕಾರ್ಡ್​ ತರುವಂತೆ ಹೇಳುವುಸು ಸರಿಯಲ್ಲ ಎಂದು ಸೋಷಿಯಲ್​ ಮೀಡಿಯಾದಲ್ಲಿ ಟೀಕಿಸಿದ್ದಾರೆ.
 

ಚುನಾವಣಾ ಪ್ರಚಾರದ ಸಮಯದಲ್ಲಿ,  ಕಾಂಗ್ರೆಸ್​ ಸೇರಿದಂತೆ ವಿವಿಧ ಪಕ್ಷಗಳ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾಗಲೂ ಕಂಗನಾ ಟೀಕೆಗೆ ಒಳಗಾಗಿದ್ದರು.  ಪ್ರತಿಪಕ್ಷ ನಾಯಕರಿಗೆ ಏನಾಗಿದೆ? ಒಬ್ಬರು ಚಂದ್ರನ ಮೇಲೆ ಆಲೂಗಡ್ಡೆ ಬೆಳೆಯುವ ಬಗ್ಗೆ ಮಾತನಾಡುತ್ತಾರೆ. ಅತ್ತ ತೇಜಸ್ವಿ ಸೂರ್ಯ ನೋಡಿದ್ರೆ ಮೀನು ತಿನ್ನುತ್ತಾ ಎಲ್ಲರ ಮೇಲೆ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಹೇಳಿಬಿಟ್ಟಿದ್ದರು. ಅಸಲಿಗೆ ಅವರು ಹೇಳಹೊರಟಿದ್ದು ತೇಜಸ್ವಿ ಯಾದವ್​ ಬಗ್ಗೆ. ಆದರೆ ಯಾದವ್​ ಬದಲು ಸೂರ್ಯ ಎಂದು ಬಾಯಿ ತಪ್ಪಿ ಹೇಳುತ್ತಾ ಸಕತ್​ ಟ್ರೋಲ್​ಗೆ ಒಳಗಾಗಿದ್ದರು.  ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌(Tejaswi Yadav) ಅವರನ್ನು ಟೀಕಿಸುವ ಭರದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಹೆಸರು ಹೇಳಿ  ಮತ್ತೆ ಟ್ರೋಲ್​ಗೆ ಒಳಗಾಗಿದ್ದರು. 

ಪಂಜಾಬ್​ ಉಗ್ರವಾದವನ್ನು ಪ್ರಶ್ನಿಸುತ್ತಲೇ ಕೆನ್ನೆಗೆ ಹೊಡೆದ ಘಟನೆಗೆ ಪ್ರತಿಕ್ರಿಯೆ ನೀಡಿದ ಕಂಗನಾ

click me!