RRR Movie pre release ಪ್ರೇಕ್ಷಕರ ಮಧ್ಯೆ ಅಪ್ಪು ಭಾವಚಿತ್ರ, ಕನ್ನಡದಲ್ಲಿ ಎನ್‌ಟಿಆರ್ ಭಾಷಣ!

By Kannadaprabha NewsFirst Published Mar 20, 2022, 5:28 AM IST
Highlights
  • ವರ್ಣರಂಜಿತ ವೇದಿಕೆಯಲ್ಲಿ ಆರ್‌ಆರ್‌ಆರ್‌ ಪ್ರೀ ರೀಲಿಸ್‌ ಇವೆಂಟ್‌
  • ಕಾರ್ಯಕ್ರಮಕ್ಕೆ ಹರಿದು ಬಂದ ಅಭಿಮಾನಿ ಸಾಗರ
  • ಇವೆಂಟ್‌ನಲ್ಲೂ ಅಪ್ಪು ಚಿತ್ರಗಳ ಪ್ರದರ್ಶನ

ಚಿಕ್ಕಬಳ್ಳಾಪುರ(ಮಾ.20) ಕನ್ನಡ ಸೇರಿ ಐದು ಭಾಷೆಯಲ್ಲಿ ಇದೇ ಮಾ.25ಕ್ಕೆ ತೆರೆ ಕಾಣುತ್ತಿರುವ ಸ್ಟಾರ್‌ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ ಆರ್‌ಆರ್‌ಆರ್‌ ಚಿತ್ರದ ಪ್ರೀ ರೀಲಿಸ್‌ ಇವೆಂಟ್‌ಗೆ ಪ್ರೇಕ್ಷಕರು ಸಾಗರದಂತೆ ಹರಿದು ಬಂದರು. ವಿಶೇಷ ಅಂದರೆ ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರ ಮಧ್ಯೆ ಅಪ್ಪು ಭಾವಚಿತ್ರಗಳನ್ನು ಹಿಡಿದು ಅಭಿಮಾನ ತೋರಿದ್ದು ಎಲ್ಲರ ಗಮನ ಸೆಳೆಯಿತು.

ನಗರದ ಹೊರ ವಲಯದ ಅಗಲಗುರ್ಕಿ ಸಮೀಪ ಚಿಕ್ಕನಹಳ್ಳಿ ಕ್ರಾಸ್‌ನಲ್ಲಿ ಬರೋಬ್ಬರಿ 70 ಎಕರೆ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ವರ್ಣರಂಜಿತ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್‌, ಕನ್ನಡದ ಹಿರಿಯ ನಟರಾದ ಡಾ.ಶಿವರಾಜ್‌ ಕುಮಾರ್‌ ಸೇರಿದಂತೆ ಚಿತ್ರರಂಗದ ಹಲವು ದಿಗ್ಗಜರು ಪಾಲ್ಗೊಂಡು ಚಿತ್ರ ತಂಡಕ್ಕೆ ಶುಭ ಕೋರಿದರು.

Latest Videos

RRR Movie: ರಾಜಮೌಳಿ ಚಿತ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ!

ಎನ್‌ಟಿಆರ್‌ ಕನ್ನಡ ಭಾಷಣ
ವಿಶೇಷವಾಗಿ ಆರ್‌ಆರ್‌ಆರ್‌ ಚಿತ್ರದಲ್ಲಿ ಅಭಿನಯಸಿರುವ ಜೂನಿಯರ್‌ ಎನ್‌ಟಿಆರ್‌ ತಾರಕರಾಮ್‌ ಕನ್ನಡದಲ್ಲಿ ಭಾಷಣ ಮಾಡಿ ಗಮನ ಸೆಳೆದರು. ನಮ್ಮ ಅಮ್ಮನದು ಕುಂದಾಪುರ ಎಂದು ಹೇಳಿ ಕನ್ನಡದ ಮೇಲಿನ ಅಭಿಮಾನ, ಪ್ರೀತಿ ತೋರಿಸಿದರು. ಕನ್ನಡದ ಹಿರಿಯ ನಟ ಶಿವರಾಜ್‌ ಕುಮಾರ್‌ ಮಾತನಾಡಿ, ತುಂಬ ಸಂತೋಷ ಆಗುತ್ತಿದೆ. ಸ್ವಲ್ಪ ದುಃಖ ಆಗುತ್ತಿದೆ. ಅಪ್ಪು ನಾವು ಕಳೆದುಕೊಂಡ ಮೇಲೆ ದುಃಖದಲ್ಲಿದ್ದೇವೆ. ಸರ್ಕಾರ, ಇಡೀ ಚಲನಚಿತ್ರ ತಂಡ ನಮ್ಮೊಂದಿಗೆ ಇದೆ. ಸಿಎಂ ಬೊಮ್ಮಾಯಿ ಅಣ್ಣನ ಸ್ಥಾನದಲ್ಲಿ ನಿಂತರು. ರಾಮಚರಣ್‌, ಎನ್‌ಟಿಆರ್‌ ಬಂದು ನಾವು ನಿಮಗೆ ಸಹೋದರರಂತೆ ಇದ್ದೇವೆಂದರು. ಅಪ್ಪುರನ್ನು ಇವರಲ್ಲಿ ಕಾಣುತ್ತೇನೆ. ಅಪ್ಪು ಎಲ್ಲೂ ಹೋಗಿಲ್ಲ. ನಿಮ್ಮ ಮನಸ್ಸಿನಲ್ಲಿದ್ದಾರೆ. ಎಲ್ಲರ ಕಣ್ಣುಗಳಲ್ಲಿದ್ದಾರೆಂದರು. ರಾಜಮೌಳಿ ದೊಡ್ಡ ಅಭಿಮಾನಿ ನಾನು. ಎನ್‌ಟಿಆರ್‌ ರಾಮಚರಣ್‌, ಪವನ್‌ ಕಲ್ಯಾಣ್‌, ಚಿರಂಜೀವಿ ಸಿನಿಮಾಗಳನ್ನು ಮೊದಲ ದಿನವೇ ದುಡ್ಡು ಕೊಟ್ಟು ಮೊದಲ ದಿನವೇ ಟಾಕೀಸ್‌ ಹೋಗಿ ನೋಡುತ್ತೇನೆಂದರು. 

RRR; ಉಕ್ರೇನ್ ಬಾಡಿಗಾರ್ಡ್ ಗೆ ನಟ ರಾಮ್ ಚರಣ್ ನೆರವು

ಅಭಿಮಾನಿಗಳಿಗೆ ಬಿತ್ತು ಬೆತ್ತದ ರುಚಿ
ಆರ್‌ಆರ್‌ಆರ್‌ ಪ್ರೀ ರೀಲಿಸ್‌ ಇವೆಂಟ್‌ ನೋಡಲು ಬಂದ ಅಭಿಮಾನಿಗಳಿಗೆ ಪೊಲೀಸರ ಬೆತ್ತದ ರುಚಿ ಸಿಕ್ತು. ಕಾರ್ಯಕ್ರಮ ವೀಕ್ಷಣೆಗೆ ನಿರೀಕ್ಷೆಗೂ ಮೀರಿ ಜನ ಆಂಧ್ರ, ತಮಿಳುನಾಡು, ಕರ್ನಾಟಕದ ವಿವಿಧ ಭಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ಪ್ರವೇಶ ಸಿಗದೇ ಅಭಿಮಾನಿಗಳು ಕೆಲಕಾಲ ಏಕಾಏಕಿ ವೇದಿಕೆ ಕಡೆ ನುಗ್ಗಲು ಯತ್ನಿಸಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿ ಜನರನ್ನು ನಿಯಂತ್ರಿಸಲು ಹರಸಾಹ ಪಡಬೇಕಾಯಿತು.

ಟ್ರಾಫಿಕ್‌ ಜಾಮ್‌ ಜಾಮ್‌
ದಕ್ಷಿಣ ಭಾರತದಲ್ಲಿಯೆ ಸಿನಿಮಾ ರಂಗದಲ್ಲಿ ಅತಿ ದೊಡ್ಡ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಚಿಕ್ಕಬಳ್ಳಾಪುರದಲ್ಲಿ ಶನಿವಾರ ನಡೆದ ಆರ್‌ಆರ್‌ಆರ್‌ ಪ್ರೀ ರೀಲಿಸ್‌ ಇವೆಂಟ್‌ನಲ್ಲಿ ಲಕ್ಷಾಂತರ ಜನ ಪಾಲ್ಗೊಂಡಿದ್ದ ಕಾರಣಕ್ಕೆ ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-7 ಬೆಂಗಳೂರು, ಹೈದ್ರಾಬಾದ್‌ ನಡುವಿನ ಹೆದ್ದಾರಿಯಲ್ಲಿ ಬೆಳಗ್ಗೆಯಿಂದ ಕಾರ್ಯಕ್ರಮ ಮುಗಿಯುವರೆಗೂ ವಾಹನಗಳ ದಟ್ಟಣೆಯಿಂದ ಕೂಡಿ ಸಾಕಷ್ಟುಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನ ಸವಾರರು ಪರದಾಡಬೇಕಾಯಿತು.

ಭಾರತದ ದೇಶಕ್ಕೆ ಅನ್ವಯವಾಗುವ ರೀತಿ 75 ವರ್ಷದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶಕ್ಕಾಗಿ ಹೋರಾಡಿ ಮಡಿದ ನಾಯಕರನ್ನು ಚಿತ್ರದಲ್ಲಿ ಬಿಂಬಿಸುವ ಮೂಲಕ ಆರ್‌ಆರ್‌ಆರ್‌ ಚಿತ್ರ ತಂಡ ಉತ್ತಮ ಸಂದೇಶ ನೀಡಲು ಹೊರಟಿದೆಯೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.ಚಿಕ್ಕಬಳ್ಳಾಪುರ ಸಮೀಪ ಶನಿವಾರ ಸಂಜೆ ಆರ್‌ಆರ್‌ಆರ್‌ ಪ್ರೀ ರೀಲಿಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ಜನ ಸರೋವರ ರೀತಿಯಲ್ಲಿ ಸಾಗರ ಸೇರಿದೆ. ಶಿವೋತ್ಸವದ ದಿನ ಇಷ್ಟೊಂದು ಜನ ನೋಡಿದ್ದೆ. ನಿನ್ನೆ ಹೋಳಿ ಹಬ್ಬ ಮುಗಿದಿದೆ. ಯುಗಾದಿ ಬರುತ್ತಿದೆ. ಆದರೆ ಆರ್‌ಆರ್‌ಆರ್‌ ಸಿನಿಮಾ ಹಬ್ಬವಾಗಿದೆ ಎಂದರು.

click me!