ಜಿಯಾ ಖಾನ್ ಸಾವಿನ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸೂರಜ್ ಪಂಚೋಲಿ ನಿರ್ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ನೀಡಿದೆ.
ಬಾಲಿವುಡ್ ಖ್ಯಾತ ನಟಿ ಜಿಯಾ ಖಾನ್ ಸಾವಿನ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಬಾಯ್ಫ್ರೆಂಡ್ ಸೂರಜ್ ಪಾಂಚೋಲಿ ನಿರ್ದೋಷಿ ಎಂದು ಮುಂಬೈನ ಸಿಬಿಐ ವಿಶೇಷ ಕೋರ್ಟ್ ಇಂದು (ಏಪ್ರಿಲ್ 28) ತೀರ್ಪು ನೀಡಿದೆ. 10 ವರ್ಷಗಳ ಬಳಿಕ ಈ ತೀರ್ಪು ಬಂದಿದ್ದು ಸೂರಜ್ ಪಾಂಚೋಲಿಗೆ ಬಿಗ್ ರಿಲೀಫ್ ಸಿಕ್ಕಿದೆ. ಗುರುವಾರ (ಏಪ್ರಿಲ್ 20) ಜಿಯಾ ಖಾನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಅಂತಿಮ ವಿಚಾರಣೆ ನಡೆದಿದ್ದು, ನ್ಯಾಯಾಲಯವು ತೀರ್ಪು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟವಾಗಿದ್ದು ಸೂರಜ್ ಪಾಂಚೋಲಿ ಈ ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.
ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸೂರಜ್ ಪಾಂಚೋಲಿ ಅವರನ್ನು ದೋಷಿ ಎಂದು ಪರಿಗಣಿಸಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ, ಹಾಗಾಗಿ ಅವರನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ ಎಂದು ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯದ ನ್ಯಾಯಾಧೀಶ ಎ ಎಸ್ ಸೈಯ್ಯದ್ ಹೇಳಿದ್ದಾರೆ. ನ್ಯಾಯಾಧೀಶರಾದ ಎ ಎಸ್ ಸೈಯ್ಯದ್ ಕಳೆದ ವಾರ ಎರಡೂ ಕಡೆಯ ಅಂತಿಮ ವಾದವನ್ನು ಆಲಿಸಿ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದ್ದರು.
2013ರ ಜೂನ್ 3ರಂದು ನಟಿ ಜಿಯಾ ಖಾನ್ ಜುಹೂ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಆದರೆ ಅದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ಸುದೀರ್ಘ ತನಿಖೆ ನಡೆದಿದೆ. ಜಿಯಾ ಖಾನ್, ಬಾಲಿವುಡ್ ಹಿರಿಯ ನಟ ಆದಿತ್ಯಾ ಚೋಪ್ರಾ ಮತ್ತು ಜರೀನಾ ವಹಾಬ್ ಪುತ್ರ ಸೂರಜ್ ಪಂಚೋಲಿ ಜೊತೆ ಸಂಬಂಧದಲ್ಲಿದ್ದರು ಎನ್ನಲಾಗಿತ್ತು. ಜಿಯಾ ಖಾನ್ ಸಾವಿನ ಬಳಿಕ ಸೂರಜ್ ಪಾಂಚೋಲಿಯನ್ನು ಪೊಲೀಸರು ಬಂಧಿಸಿದ್ದರು. ಭಾರತೀಯ ದಂಡ ಸಂಹಿತೆ ಸೆಕ್ಷನ್ 306 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ಅಧಿಕಾರ ವ್ಯಾಪ್ತಿ ತನಗೆ ಇಲ್ಲ ಎಂದು ಸೆಷನ್ಸ್ ಕೋರ್ಟ್ ಹೇಳಿದ ನಂತರ 2021 ರಲ್ಲಿ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಪ್ರಕರಣವನ್ನು ಮರು ನಿಯೋಜಿಸಲಾಯಿಗಿತ್ತು. ಇದೀಗ ಸೂರಜ್ ಪಾಂಚೋಲಿ ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಸಿನಿಮಾರಂಗದಲ್ಲಿ ದೊಡ್ಡ ಸ್ಟಾರ್ ಆಗಿ ಬೆಳೆಯುವ ಕನಸು ಕಂಡಿದ್ದ ಜಿಯಾ ಖಾನ್ ನಿಶಬ್ದ್, ಘಜಿನಿ, ಹೌಸ್ಫುಲ್ ಸಿನಿಮಾಗಳಲ್ಲಿ ನಟಿಸಿ ಗಮನಸೆಳೆದಿದ್ದರು. ನಿಶಬ್ದ್ ಚಿತ್ರದಲ್ಲಿನ ನಟನೆಗೆ ಅವರಿಗೆ ಫಿಲ್ಮ್ಫೇರ್ ಪ್ರಶಸ್ತಿ ಸಿಕ್ಕಿತ್ತು.