'ದರ್ಶನ್'​ ನಟಿ ನವನೀತ್​ ಕೌರ್​ಗೆ ಬಿಜೆಪಿಯಿಂದ ಟಿಕೆಟ್​: ಹನುಮಾನ್​ ಚಾಲೀಸಾದಿಂದ ಸುದ್ದಿಯಾಗಿದ್ದ ಸಂಸದೆ

By Suvarna NewsFirst Published Mar 28, 2024, 5:44 PM IST
Highlights

'ದರ್ಶನ್'​ ಚಿತ್ರದಲ್ಲಿ ನಟಿಸಿದ್ದ ಬಹುಭಾಷಾ ನಟಿ, ಸಂಸದೆ ನವನೀತ್​ ಕೌರ್​ಗೆ ಬಿಜೆಪಿಯಿಂದ ಟಿಕೆಟ್​ ಸಿಕ್ಕಿದೆ. ಹನುಮಾನ್​ ಚಾಲೀಸಾದಿಂದ ಸುದ್ದಿಯಾಗಿದ್ದ ಸಂಸದೆಯ ವಿಶೇಷತೆಗಳೇನು?
 

ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಉದ್ಧವ್ ಠಾಕ್ರೆ ಅವರ ನಿವಾಸದ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಘೋಷಣೆ ಮಾಡುವ ಮೂಲಕ ಬಂಧನಕ್ಕೆ ಒಳಗಾಗಿದ್ದ ಸಂಸದೆ, ದರ್ಶನ್​ ಅಭಿನಯದ ದರ್ಶನ್​ ಚಿತ್ರದ ನಾಯಕಿ, ಬಹುಭಾಷಾ ತಾರೆ ನವನೀತ್​ ರಾಣಾ ಅವರಿಗೆ ಬಿಜೆಪಿ ಟಿಕೆಟ್​ ನೀಡಿದೆ. 7ನೇ ಪಟ್ಟಿಯನ್ನು ಬಿಜೆಪಿ ನಿನ್ನೆ ಅಂದರೆ ಮಾರ್ಚ್​ 27ರಂದು ಬಿಡುಗಡೆ ಮಾಡಿದ್ದು, ಅದರಲ್ಲಿ ಮಹಾರಾಷ್ಟ್ರ ಮೂಲದ ನಟಿ ನವನೀತ್​ ಅವರ ಹೆಸರು ಇದೆ. ನವನೀತ್​ ರಾಣಾ ಅಮರಾವತಿ ಸಂಸದೆ ಆಗಿದ್ದಾರೆ. ಅವರ ಪತಿ ರವಿ ರಾಣಾ ಬಡ್ನೇರಾ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕರಾಗಿದ್ದಾರೆ. ಇಬ್ಬರನ್ನೂ ಹನುಮಾನ್​ ಚಾಲೀಸಾ ಪ್ರಕರಣದಲ್ಲಿ ಬಂಧಿಸಲಾಗಿತ್ತು.   12 ದಿನ ಜೈಲಿನಲ್ಲಿ ಇರಿಸಲಾಗಿತ್ತು.  ಅಲ್ಲಿಂದ ಬಿಡುಗಡೆಯಾಗಿ ಬರುವಾಗಲೇ, ದಂಪತಿ ಕೈಯಲ್ಲಿ ಹನುಮಾನ್​ ಚಾಲೀಸಾ ಪುಸ್ತಕ ಹಿಡಿದು ಬಂದಿದ್ದರು.  ಹನುಮಾನ್ ಚಾಲೀಸಾ ಓದಿದ್ದಕ್ಕಾಗಿ ನಾನು 14 ದಿನ ಯಾಕೆ 14 ವರ್ಷ ಜೈಲಿನಲ್ಲಿ ಇರಲು ಸಿದ್ಧ ಎನ್ನುವ ಮೂಲಕ ವಿರೋಧಿಗಳಿಗೆ ತಿರುಗೇಟು ಕೊಟ್ಟಿದ್ದರು. 

 ಅಷ್ಟಕ್ಕೂ ಇವರ ವಿರುದ್ಧ ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನಲ್ಲಿ ಕೇಸೊಂದು ದಾಖಲಾಗಿದೆ. ಅದರ ನಡುವೆಯೇ,  ಆಂಧ್ರ ಪ್ರದೇಶದ ಅಮರಾವತಿಯಿಂದ ನವನೀತ್ ರಾಣಾ ಅವರ ಲೋಕಸಭೆ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದೆ. ಅಮರಾವತಿ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದೆ ನವನೀತ್ ರಾಣಾ ಅಭ್ಯರ್ಥಿಯಾಗುವುದಕ್ಕೆ ಬಿಜೆಪಿಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಮಹಾಮೈತ್ರಿಕೂಟದ ಮಿತ್ರಪಕ್ಷವಾದ ಪ್ರಹಾರ್‌ನ ಬಚು ಕಾಡು ಕೂಡ ಇವರ ಉಮೇದುವಾರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆದರೆ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿದ ನಂತರ ಬಿಜೆಪಿ ಪಕ್ಷದ ನಾಯಕತ್ವವು ರಾಣಾ ಅವರನ್ನು ಲೋಕಸಭೆಯ ಅಖಾಡಕ್ಕೆ ತಂದಿದೆ. ಹೀಗಾಗಿ ಅಮರಾವತಿಯಲ್ಲಿ ಬಿಜೆಪಿಯಿಂದ ನವನೀತ್ ರಾಣಾ ಮತ್ತು ಕಾಂಗ್ರೆಸ್‌ನ ಬಲವಂತ ವಾಂಖಡೆ ನಡುವೆ ಹಣಾಹಣಿ ನಡೆಯಲಿದೆ.

ಹಿಮಾಚಲ ಪ್ರದೇಶದಿಂದ ಸ್ಪರ್ಧಿಸಲ್ಲ: ಕಂಗನಾ ರಣಾವತ್​ ವಿಡಿಯೋ ವೈರಲ್​- ನಟಿ ಹೇಳಿದ್ದೇನು?

ಅಂದಹಾಗೆ ನವನೀತ್ ಅವರು ಇದಾಗಲೇ  ಸಂಸದೆಯಾಗಿ ಗುರುತಿಸಿಕೊಂಡಿದ್ದಾರೆ. 2019ರ  ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ನಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಜಂಟಿ ಅಭ್ಯರ್ಥಿಯಾಗಿ ಅಮರಾವತಿಯಲ್ಲಿ ಸ್ಪರ್ಧೆ ಮಾಡಿದ್ದ ನವನೀತ್ ಕೌರ್ ಗೆಲುವು ಪಡೆದು ಸಂಸದರಾಗಿದ್ದರು.  ಬಳಿಕ ಬಿಜೆಪಿ ಸೇರ್ಪಡೆಗೊಂಡಿದ್ದರು.  ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿಯನ್ನು ಮತ್ತಷ್ಟು ಬಲ ಪಡಿಸಲು ತಾನು ಬಿಜೆಪಿ ಸೇರಿಕೊಂಡಿರುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಅವರಿಗೂ ಟಿಕೆಟ್​ ಸಿಕ್ಕಿದೆ.  

ಅಂದಹಾಗೆ ನವನೀತ್​ ಅವರು ಕನ್ನಡ ಮಾತ್ರವಲ್ಲದೇ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಿಂದಿ ಭಾಷೆಗಳ ಚಿತ್ರಗಳಲ್ಲಿ ನವನೀತ್ ಕೌರ್ ನಟಿಸಿದ್ದಾರೆ. ಹನುಮಾನ್​ ಚಾಲೀಸಾ ವಿವಾದದ ಸಂದರ್ಭದಲ್ಲಿ ಉದ್ಧವ್ ಠಾಕ್ರೆ ವಿರುದ್ಧ ಕಿಡಿ ಕಾರಿದ್ದ ನವನೀತ್ ರಾಣಾ, ಮುಂಬರುವ ದಿನಗಳಲ್ಲಿ  ಹನುಮಂತನ ಹೆಸರು ಮತ್ತು ರಾಮನ ಹೆಸರನ್ನು ಹೇಳುವವರಿಗೆ ಕಿರುಕುಳ ನೀಡಿದರೆ ಅದರ ಪರಿಣಾಮಗಳೇನು ಎಂಬುದಾಗಿ ತಿಳಿಸಿಕೊಡುತ್ತೇನೆ.  ಮುಂಬರುವ ಚುನಾವಣೆಯಲ್ಲಿ ಪೂರ್ಣ ಬಲದೊಂದಿಗೆ ಸಾರ್ವಜನಿಕರ ಬಳಿಗೆ ತೆರಳಿ ಮಹಾರಾಷ್ಟ್ರ ಸರ್ಕಾರದ ದುರಹಂಕಾರವನ್ನು ಹೇಳುತ್ತೇನೆ.  ಉದ್ಧವ್ ಠಾಕ್ರೆ ನನ್ನ ವಿರುದ್ಧ ಮಾಡಿದ ದೌರ್ಜನ್ಯವನ್ನು ಮರೆಯುವುದಿಲ್ಲ. ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ  ಎಂದು ಹೇಳಿದ್ದರು. ಅದೇ ಸಮಯದಲ್ಲಿ, ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಾ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರದಲ್ಲಿ ಎಲ್ಲಿಂದಲಾದರೂ ಚುನಾವಣೆಗೆ ಸ್ಪರ್ಧಿಸಬೇಕು ಮತ್ತು ನಾನು ಅವರ ವಿರುದ್ಧ ನಿಲ್ಲುತ್ತೇನೆ ಎಂದಿದ್ದರು. 

ಕಂಗನಾ ಹಾದಿ ತುಳಿಯಲಿದ್ದಾರಾ ಸೈಫ್​ ಅಲಿ ಪುತ್ರಿ? ರಾಜಕೀಯ ಎಂಟ್ರಿಗೆ ಸುಳಿವು ನೀಡಿದ ನಟಿ ಹೇಳಿದ್ದೇನು?

click me!