ಆದಿಪುರುಷ್ ಚಿತ್ರ ಪ್ರದರ್ಶನದ ಥಿಯೇಟರ್ಗಳಲ್ಲಿ ಒಂದು ಸೀಟನ್ನು ಹನುಮಂತನಿಗೆ ಮೀಸಲಿಡುವ ಕುರಿತು ಹೇಳಿಕೆಗೆ ಮಾನವ ಹಕ್ಕುಗಳ ಕಾರ್ಯಕರ್ತ ಬಾಬು ಗೊಗಿನೇನಿ ಟ್ರೋಲ್ ಮಾಡಿದ್ದಾರೆ.
ಓಂ ರಾವತ್ ಅವರ ಆದಿಪುರುಷ್ (Adipurush) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದೇ 16ರಂದು ಚಿತ್ರ ಬಿಡುಗಡೆಯಾಗಲಿದ್ದು, ನಟ ಪ್ರಭಾಸ್ ರಾಮನಾಗಿ, ಕೃತಿ ಸನೋನ್ ಸೀತೆಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ VFXನಿಂದ ಸಾಕಷ್ಟು ಟೀಕೆ ಎದುರಿಸಿತ್ತು. 2022 ಅಕ್ಟೋಬರ್ 2ರಂದು ಟೀಸರ್ ರಿಲೀಸ್ ಆದಾಗ ಜನರು ಟ್ರೋಲ್ ಮಾಡಿದ್ದರು. ಇದರ ಹೊರತಾಗಿಯೂ ಈ ಚಿತ್ರ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಟಿ ಸಿರೀಸ್ ಪ್ರಾಜೆಕ್ಟ್ನ ಪ್ರೇಕ್ಷಕರಿಂದ ಭಾರೀ ಟೀಕೆ ಎದುರಿಸಿದ ನಂತರ ಚಿತ್ರತಂಡ ಗ್ರಾಫಿಕ್ಸ್ (Graphics) ಬದಲಾಯಿಸಿ ಸಿನಿಮಾದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಚಿತ್ರದ ನಾಯಕ-ನಾಯಕಿಯ ಲುಕ್ ಇದಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಸಿನಿಮಾ ಈಗಾಗಲೇ ತನ್ನ ಬಜೆಟ್ನ ಮುಕ್ಕಾಲು ಭಾಗವನ್ನು ರಿಕವರಿ ಮಾಡಿಕೊಂಡಿದ್ದು, ಸಿನಿಮಾ ಈಗಾಗಲೇ ಭರ್ಜರಿಯಾಗಿ ಲಾಭ ಮಾಡಿದೆ ಎನ್ನುವ ಸುದ್ದಿ ಕೆಲ ದಿನಗಳಿಂದ ಓಡಾಡುತ್ತಿದೆ.
ಚಿತ್ರವನ್ನು ಟೀ ಸೀರಿಸ್ ಹಾಗೂ ರೆಟ್ರೊಪ್ಲಿಸ್ ಸಂಸ್ಥೆಗಳು 500 ಕೋಟಿ ರೂ. ಗೂ ಅಧಿಕ ಬಜೆಟ್ನಲ್ಲಿ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿವೆ. ಸಿನಿಮಾ 5 ಭಾಷೆಗಳಲ್ಲಿ ವಿಶ್ವದಾದ್ಯಂತ ಬಹಳ ಅದ್ಧೂರಿಯಾಗಿ ತೆರೆಗಪ್ಪಳಿಸುತ್ತಿದೆ. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. ‘ಆದಿಪುರುಷ್’ ಚಿತ್ರದ ಹಿಂದಿ ಅವತರಣಿಕೆಯ ಸೆನ್ಸಾರ್ ಸರ್ಟಿಫಿಕೇಟ್ ಲಭ್ಯವಾಗಿದೆ. ಈ ಸಿನಿಮಾದ ಅವಧಿ 2 ಗಂಟೆ 59 ನಿಮಿಷಗಳು ಎಂದು ತಿಳಿದುಬಂದಿದೆ. ಇಷ್ಟೆಲ್ಲಾ ಆದರೂ ಈ ಚಿತ್ರ ವಿವಾದಗಳಿಂದ ಮುಕ್ತವಾಗಿಲ್ಲ. ಒಂದಿಲ್ಲೊಂದು ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ಗೆ ಒಳಗಾಗುತ್ತಲೇ ಇದೆ. ಹೀಗಿರುವಾಗಲೇ ಓಂ ರಾವುತ್ (Om Rawath) ಅವರು ತಿರುಪತಿ ದೇವಸ್ಥಾನದ ಆವರಣದಲ್ಲಿ ನಟಿಗೆ ಕೃತಿಗೆ ಮುತ್ತು ಕೊಟ್ಟು ಅಪ್ಪಿಕೊಂಡು ಮುತ್ತು ಕೊಟ್ಟು ಎಡವಟ್ಟು ಮಾಡಿಕೊಂಡು ಸಿಕ್ಕಾಪಟ್ಟೆ ಟ್ರೋಲ್ ಅನುಭವಿಸಿದ್ದರು. ಇದರ ಬೆನ್ನಲ್ಲೇ 'ಆದಿಪುರುಷ್' ಸಿನಿಮಾ ಬಿಡುಗಡೆಯಾಗುವ ಪ್ರತಿ ಚಿತ್ರಮಂದಿರದಲ್ಲಿ ಒಂದೊಂದು ಸೀಟ್ ಹನುಮಂತನಿಗಾಗಿ ಮೀಸಲಿಡಲು ಚಿತ್ರತಂಡ ನಿರ್ಧರಿಸಿದ್ದು ಇದು ಮತ್ತಷ್ಟು ಟ್ರೋಲ್ಗೆ ಒಳಗಾಗಿದೆ. ರಾಮಾಯಣ ಪಾರಾಯಣ ಮಾಡುವ ಜಾಗಕ್ಕೆ ಹನುಮ ಬರುತ್ತಾನೆ ಎನ್ನುವ ನಂಬಿಕೆಯಿಂದ ಹನುಮಂತನಿಗಾಗಿ ಖಾಲಿ ಬಿಡಲು ನಿರ್ಧರಿಸಿದ್ದೇವೆ ಎಂದು ಚಿತ್ರತಂಡ ಹೇಳಿಕೆ ನೀಡಿದೆ.
ಪ್ರಭಾಸ್, ಕೃತಿ ಫ್ಯಾನ್ಸ್ಗೆ ಬಂಪರ್: ಆದಿಪುರುಷ್ ಚಿತ್ರಕ್ಕೆ 10 ಸಾವಿರ ಉಚಿತ ಟಿಕೆಟ್
ಈ ಬಗ್ಗೆ ಈಗ ವಿಚಾರವಾದಿ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಬಾಬು ಗೊಗಿನೇನಿ (Babu Gogineni) ವ್ಯಂಗ್ಯವಾಡಿದ್ದಾರೆ. ಇದೊಂದು ಮೂಢನಂಬಿಕೆ ಎಂದಿರುವ ಅವರು, ಈ ಕುರಿತು ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ಅದೀಗ ಸಾಕಷ್ಟು ವೈರಲ್ ಆಗಿದೆ. ಈ ಪೋಸ್ಟ್ನಲ್ಲಿ ಅವರು ಹನುಮಂತನಿಗೆ ಒಂದು ಸೀಟು ಬಿಡುವ ವಿಷಯವಾಗಿ ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. 'ಚಿತ್ರ ಮಂದಿರಗಳನ್ನು ದೇವಸ್ಥಾನವಾಗಿ ಬದಲಿಸಲು ಅನುಮತಿ ಇದೆಯಾ? ದೇವಸ್ಥಾನವಾಗಿ ಬದಲಾದರೆ ಅಲ್ಲಿ ಭಕ್ತರು ಪೂಜೆ ಮಾಡಲು ಕಂಚಿನ ಗಂಟೆ, ಆಶೀರ್ವಾದ ಪಡೆಯಲು ಒಂದು ಹಸು, ಸರಿಯಾದ ಕುಲದಿಂದ ಒಬ್ಬ ಪೂಜಾರಿ ವ್ಯವಸ್ಥೆ ಇದ್ಯಾ? ಅಲ್ಲಿ ಭಕ್ತರು ತೆಂಗಿನ ಕಾಯಿ ಒಡೆಯಲು ಅವಕಾಶ ಮಾಡಿಕೊಟ್ಟಿದ್ದೀರಾ?' ಎಂದು ವ್ಯಂಗ್ಯವಾಡಿದ್ದಾರೆ.
ಇನ್ನೂ ಒಂದಿಷ್ಟು ಕುಹಕವಾಡಿರುವ ಅವರು, ಅನ್ನದಾನಕ್ಕೆ ಹುಂಡಿ ಇರಬೇಕಲ್ಲವೇ? ಹಿಂದೂಯೇತರರು ಸಿನಿಮಾ ನೋಡ್ಬಾರ್ದಾ? ಅಂಥವರು ಬಂದ್ರೆ ಟಿಕೆಟ್ (Ticket) ತೆಗೆದುಕೊಳ್ಳುವ ಮುನ್ನ ರಿಜಿಸ್ಟರ್ನಲ್ಲಿ ಸಹಿ ಮಾಡಲು ರಿಜಿಸ್ಟರ್ ಪುಸ್ತಕ ಇಡ್ತೀರಾ? ಮುಟ್ಟಾದ ಮಹಿಳೆಯರು ಬಂದ್ರೆ ಗತಿ ಏನು? ಅವ್ರು ಸಿನಿಮಾ ನೋಡ್ಬೋದಾ? ಚಿತ್ರಮಂದಿರಲ್ಲಿ ಚಿಪ್ಸ್, ಮೆಕ್ಸಿಕನ್, ಪಾಪ್ಕಾರ್ನ್, ಬರ್ಗರ್ಗಳು, ಕೋಕ್ ಬದ್ಲು ಪ್ರಸಾದ ಏನಾದ್ರೂ ಕೊಡ್ತಾರಾ? ಪ್ರಸಾದವನ್ನು ಉಚಿತವಾಗಿ ನೀಡುವ ವ್ಯವಸ್ಥೆ ಮಾಡುತ್ತಿದ್ದಾರಾ? ಮುಟ್ಟಾದ ಮಹಿಳೆಯರು ಬ್ರಹ್ಮಚಾರಿಗಳು ಇರುವ ಸಿನಿಮಾ ಥಿಯೇಟರ್ಗಳಿಗೆ ಅಥವಾ ಸಿನಿಮಾ ತೋರಿಸುವ ದೇವಸ್ಥಾನಗಳಿಗೆ ಪ್ರವೇಶಿಸಬಹುದೇ?" ಎಂದು ಹಲವಾರು ಪ್ರಶ್ನೆಗಳನ್ನು ಇಟ್ಟಿದ್ದಾರೆ.
ಟ್ರೋಲ್ಗಳಿಗೆ ಹೆದರಿದ್ರಾ? 'ಆದಿಪುರುಷ್' ಪ್ರಮೋಷನ್ನಿಂದ ದೂರಸರಿದಿದ್ದೇಕೆ ಸೈಫ್?
ಇನ್ನೂ ಒಂದಿಷ್ಟು ಬರೆದಿರುವ ಅವರು, ' ಪುರುಷರು ಅಂಗಿ ಇಲ್ಲದೇ ಪ್ರವೇಶಿಸ್ಬೇಕಾ, ಚರ್ಮದ ವಸ್ತು, ಚರ್ಮದ ಬೆಲ್ಟ್ಗಳನ್ನು (Leather Belt) ಧರಿಸದೇ ಚಪ್ಪಲಿ ಧರಿಸಲು ಅವಕಾಶ ಇಲ್ವಾ? ರಾಹುಕಾಲದಲ್ಲಿ ಶೋ ಇದ್ದರೆ ಏನು ಮಾಡಬೇಕು? ಥಿಯೇಟರ್ ವಾಸ್ತು ಪ್ರಕಾರ ಇಲ್ಲದಿದ್ದರೆ ಪರಿಹಾರ ಯಾರು ಕೊಡಬೇಕು? ಪೂರ್ವ ದಿಕ್ಕಿಗೆ ನಮಿಸಬೇಕು ಅಂದರೆ, ಆ ದಿಕ್ಕು ತೋರಿಸುವ ದಿಕ್ಸೂಚಿ ಪ್ರತಿ ಥಿಯೇಟರ್ನಲ್ಲಿ ಇರುತ್ತಾ?" ಎಂದು ಬಾಬು ಗೊಗಿನೇನಿ ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ಗೆ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ.