
ಬಾಲಿವುಡ್ ಬಾಯಿ ಬಂದ್ ಯಾಕೆ?
ದಕ್ಷಿಣ ಭಾರತವೇ ಇಡೀ ಭಾರತೀಯ ಚಿತ್ರರಂಗವನ್ನು ಆಳುತ್ತಿದೆ ಎಂಬ ಕಾಲ ಇತ್ತೀಚಿನ ವರ್ಷಗಳಲ್ಲಿ ಸೃಷ್ಟಿಯಾಗಿತ್ತು. ಅದಕ್ಕೆ ಕಾರಣವಾಗಿದ್ದು ಸೌತ್ ಇಂಡಿಯನ್ ಚಿತ್ರಗಳಾದ ಬಾಹುಬಲಿ 2, ಪುಷ್ಪ 2 ಹಾಗೂ ಕೆಜಿಎಫ್ 2 ಹಾಗೂ ಕಾಂತಾರ ಪ್ರೀಕ್ವೆಲ್ ಸಿನಿಮಾಗಳು. ಆದರೆ, ಇದೀಗ ಅಬ್ಬರಿಸುತ್ತಿರುವ ಆದಿತ್ಯ ಧರ್(Aditya Dhar) ನಿರ್ದೇಶನ ಹಾಗೂ ರಣವೀರ್ ಸಿಂಗ್ (Ranveer Singh) ನಟನೆಯ 'ಧುರಂಧರ್ 2' (Dhurandhar 2) ಸಿನಿಮಾ ಇಡೀಯ ಈ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡಿದೆ. ಕಾರಣ, ವಿದೇಶದಲ್ಲಿ ಅತಿ ಹೆಚ್ಚು ಗಳಿಸಿದ್ದ ಬಾಹುಬಲಿ 2 ಸಿನಿಮಾದ ಗಳಿಕೆಯನ್ನೂ ಹಿಂದಿಕ್ಕಿ ಧುರಂಧರ್ 2 ಸಿನಿಮಾ ವಿದೇಶದಲ್ಲಿ ಅತೀ ಹೆಚ್ಚು ಕಲೆಕಷ್ನ್ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಂತಿದೆ.
ಇನ್ನು, ಜಗತ್ತಿನಾದ್ಯಂತ ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾದ ದಾಖಲೆ ಆಮೀರ್ ಖಾನ್ ನಟನೆಯ 'ದಂಗಲ್' ಚಿತ್ರಕ್ಕಿದೆ. ಇದು 2000 ಕೋಟಿಗಿಂತಲೂ ಹೆಚ್ಚಿನ ಗಳಿಕೆ ಮಾಡಿ ನಂಬರ್ 1 ಸ್ಥಾನದಲ್ಲಿದೆ. ಸದ್ಯ ಧುರಂಧರ್ 2 ಸಿನಿಮಾ ಜಗತ್ತಿನಲ್ಲಿ 1500 ಕೋಟಿ ಗಳಿಕೆ ಮಾಡಿ ಭಾರತೀಯ ಸಿನಿಮಾರಂಗದ ನಂಬರ್ 1 ಸ್ಥಾನಕ್ಕೇರಲು ನಾಗಾಲೋಟದಲ್ಲಿ ಓಡುತ್ತಿದೆ. ಕೇವಲ 12 ದಿನದಲ್ಲಿ 1500 ಕೋಟಿ ಸನಿಹಕ್ಕೆ ಬಂದು ನಿಂತಿರೋದು ಸಾಮಾನ್ಯ ಸಾಧನೆಯಲ್ಲ. ಮುಂದೆ ಈ ಸಿನಿಮಾ ದಂಗಲ್ ಗಳಿಕೆ ಮೀರುವುದು ಪಕ್ಕಾ ಎನ್ನಲಾಗುತ್ತಿದೆ.
ಆದರೆ, ಅಚ್ಚರಿ ಎಂದರೆ ಇತ್ತೀಚೆಗೆ ಮಕಾಡೆ ಮಲಗಿದ್ದ ಬಾಲಿವುಡ್ ಚಿತ್ರರಂಗಕ್ಕೆ ಈ ಗೆಲವು ಒಂಥರಾ 'ಬೂಸ್ಟ್' ಆಗಿದೆ. ಧುರಂಧರ್ 1, ಹಾಗೂ ಧುರಂಧರ್ 2 ಸಿನಿಮಾದ ಯಶಸ್ಸು ನಿಜವಾಗಿಯೂ ಬಾಲಿವುಡ್ ಚಿತ್ರರಂಗಕ್ಕೆ ಮರಳಿ ಆತ್ಮವಿಶ್ವಾಸವನ್ನು ತಂದುಕೊಟ್ಟಿದೆ. ಆದರೆ, ಅಚ್ಚರಿ ಎಂಬಂತೆ ಧುರಂಧರ್ 2 ಸಿನಿಮಾದ ಯಶಸ್ಸಿಗೆ ಬಾಲಿವುಡ್ ಮಂದಿ ಖುಷಿಯಾಗಿ ಕುಣಿದಾಡುವುದನ್ನು ಬಿಟ್ಟು ಕಪ್ಪೆಚಿಪ್ಪು ಸೇರಿಕೊಂಡಂತೆ ವರ್ತಿಸುತ್ತಿದ್ದಾರೆ ಎನ್ನಬಹುದು. ಕಾರಣ, ರಾಮ್ ಗೋಪಾಲ್ ವರ್ಮಾ ಹಾಗೂ ನಟ ಅನುಪಮ್ ಖೇರ್ ಬಿಟ್ಟರೆ ಬಾಲಿವುಡ್ನ ಯಾವುದೇ ಒಬ್ಬ ಸ್ಟಾರ್ ನಟನಟಿಯರು ಈ ಸಿನಿಮಾದ ಗೆಲುವನ್ನು ಸಂಭ್ರಮಿಸಿ ಒಂದು ಪೋಸ್ಟ್ ಮಾಡಿಲ್ಲ. ಇದು ಹಲವರ ಅಚ್ಚರಿಗೆ ಕಾರಣವಾಗಿದೆ.
ಮೊದಲೊಂದು ಕಾಲವಿತ್ತು- ಬಾಲಿವುಡ್ ಅಂದ್ರೆ ಅಮೀರ್ ಖಾನ್, ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಅಕ್ಷಯ್ ಕುಮಾರ್ ಅಷ್ಟೇ ಸ್ಟಾರ್ ನಟರು ಅನ್ನೋದು. ಅದಕ್ಕಿಂತ ಮೊದಲು ಅಮಿತಾಭ್ ಬಚ್ಚನ್ ಸ್ಟಾರ್ ಗಿರಿ ಹೊಂದಿದ್ದರೂ ಈ ಮೂವರು ಖಾನ್ಗಳೇ ಬಾಲಿವುಡ್ ಆಳುತ್ತಿದ್ದಾರೆ ಎಂಬ ವಾತಾವರಣವಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅದು ಬದಲಾಗಿದೆ. ಛಾವಾ ಸೂಪರ್ ಸಿನಿಮಾ ಮೂಲಕ ನಟ ವಿಕ್ಕಿ ಕೌಶಲ್ ಸ್ಟಾರ್ ನಟರಾಗಿದ್ದರು. ಇದೀಗ ಸಂಪೂರ್ಣವಾಗಿ ರಣವೀರ್ ಸಿಂಗ್ ಬಾಲಿವುಡ್ ಚಿತ್ರರಂಗವನ್ನು ಆಳುತ್ತಿದ್ದಾರೆ.
ಆದರೆ, ಈಗ ಬಾಲಿವುಡ್ ತನ್ನ ಬಾಯನ್ನು ಬಂದ್ ಮಾಡಿಕೊಂಡು ಕುಳಿತಿರುವುದನ್ನು ನೋಡಿದರೆ, ಸೋಷಿಯಲ್ ಮೀಡಿಯಾದಲ್ಲಿ ಹಲವರು ಶಾಕ್ ಆಗಿದ್ದಾರೆ. ತಮ್ಮದೇ ಚಿತ್ರವೊಂದು ಹಳೆಯ ದಾಖಲೆಗಳೆಲ್ಲವನ್ನೂ ಪುಡಿಪುಡಿ ಮಾಡುತ್ತ ಹೊಸ ದಾಖಲೆ ಸೃಷ್ಟಿಸುತ್ತಿದ್ದರೆ ಕೆಲವರನ್ನು ಬಿಟ್ಟರೆ ಮಿಕ್ಕವರು ಮೌನಕ್ಕೆ ಜಾರಿದ್ದಾರೆ. ಆದರೆ, ಮಹೇಶ್ ಬಾಬು, ಅಲ್ಲು ಅರ್ಜುನ್, ಪವಲ್ ಕಲ್ಯಾಣ್, ಜೂನಿಯರ್ ಎನ್ಟಿಆರ್, ರಾಜಮೌಳಿ ಸೇರಿದಂತೆ ತುಂಬಾ ಮಂದಿ ದಕ್ಷಿಣ ಭಾರತದ ಸ್ಟಾರ್ಗಳು, ನಿರ್ದೇಶಕರು ಬಾಲಿವುಡ್ನ ಧುರಂಧರ್ 2 ಚಿತ್ರವನ್ನು ಹಾಡಿಹೊಗಳುತ್ತಿದ್ದಾರೆ. ಹಾಗಿದ್ದರೆ ಬಾಲಿವುಡ್ಗೆ ಏನಾಗಿದೆ?
ಸೋಷಿಯಲ್ ಮೀಡಿಯಾಗಳಲ್ಲಿ ಹಲವರ ಪ್ರಕಾರ, ಬಾಲಿವುಡ್ 'ಲೆಫ್ಟ್-ರೈಟ್' ಅಂತ ಎರಡು ಭಾಗವಾಗಿಹೋಗಿದೆ. ದೇಶಭಕ್ತಿ ಸಾರುವ ಧುರಂಧರ್ 1 ಹಾಗೂ ಧುರಂಧರ್ 2 ಚಿತ್ರವನ್ನು ಹಲವರು ಯಾವುದೋ ಒಂದು ಪಕ್ಷದ 'ಪ್ರೊಪಗಾಂಡ' ಸಿನಿಮಾ ಎಂಬಂತೆ ಭಾವಿಸುತ್ತಿದ್ದಾರೆ. ಆದರೆ ಈ ಸಿನಿಮಾ ಎರಡು ಪಕ್ಷಗಳು ಅಧಿಕಾರದಲ್ಲಿದ್ದಾಗ ನಡೆದ ಕಥೆ ಆಧಾರಿತ ಸಿನಿಮಾ. ಆದರೆ, ಬಾಲಿವುಡ್ ಇದನ್ನು 'ಅರ್ಥ' ಮಾಡಿಕೊಳ್ಳುವ ಬದಲು 'ಅಪಾರ್ಥ' ಮಾಡಿಕೊಂಡು ಮೌನಕ್ಕೆ ಶರಣಾಗಿದೆ. ತನ್ನ ಅಭೂತಪೂರ್ವ ಗೆಲುವನ್ನೂ ಕಡೆಗಣಿಸುತ್ತಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿದೆ.
ಅದೇನೇ ಇದ್ದರೂ, ಸದ್ಯ ಧುರಂಧರ್ 2 ಸಿನಿಮಾ ಜಗತ್ತಿನಾದ್ಯಂತ ಮೆಚ್ಚುಗೆ ಪಡೆಯುತ್ತ ಹೊಸಹೊಸ ದಾಖಲೆ ಸೃಷ್ಟಿಸುತ್ತ ಸಾಗುತ್ತಿದೆ. 12ನೇ ದಿನಕ್ಕೆ ಇಷ್ಟೊಂದು ಕಲೆಕ್ಷನ್ ಮಾಡಿರುವ ಈ ಸಿನಿಮಾ ಮುಂದೆ ಇನ್ನೂ ಹೆಚ್ಚಿನ ಗಳಿಕೆ ಮಾಡೋದಂತೂ ಖಂಡಿತ. ಒಟ್ಟಿನಲ್ಲಿ, ಧುರಂಧರ್ 2 ಚಿತ್ರದ ಗಳಿಕೆ ಸದ್ಯಕ್ಕಂತೂ ಯಾವುದೇ ಬ್ರೇಕ್ ಇಲ್ಲದೇ ನಾಗಾಲೋಟ ಮುಂದುವರಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.