ದಿ ಕೇರಳ ಸ್ಟೋರಿ ಯಶಸ್ಸನ್ನು ಕಮಲ್ ಹಾಸನ್, ನಾಸಿರುದ್ದೀನ್ ಶಾ ಅವರಂತ ದೊಡ್ಡ ಸ್ಟಾರ್ಗಳಿಂದನೂ ತಡೆಯಲು ಸಾಧ್ಯವಾಗಿಲ್ಲ ಎಂದು ನಟಿ ಅದಾ ಶರ್ಮಾ ಹೇಳಿದ್ದಾರೆ.
ದಿ ಕೇರಳ ಸ್ಟೋರಿ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಕಡಿಮೆ ಬಜೆಟ್ ನಲ್ಲಿ ಬಂದ ದಿ ಕೇರಳ ಸ್ಟೋರಿ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಮಾಯಿ ಮಾಡಿದೆ. ಭಾರಿ ವಿವಾದ, ಬ್ಯಾನ್, ಟೀಕೆಗಳ ನಡುವೆಯೂ ಕೇರಳ ಸ್ಟೋರಿ ಸಿನಿಮಾ ಗೆದ್ದು ಬೀಗಿದೆ. ಸಿನಿಮಾದ ವಿರುದ್ಧ ಅನೇಕರು ಆಕ್ರೋಶ ಹೊರ ಹಾಕಿದ್ದರು. ಪ್ರೇಕ್ಷಕಕರು ಮಾತ್ರವಲ್ಲದೇ ದೊಡ್ಡ ದೊಡ್ಡ ಸ್ಟಾರ್ಸ್ ಕೂಡ ಕೇರಳ ಸ್ಟೋರಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ನಟಿ ಅದಾ ಶರ್ಮಾ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಯಾರಿಂದನೂ ಸಿನಿಮಾದ ಸಕ್ಸಸ್ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅದಾ ಪ್ರತಿಕ್ರಿಯೆ ನೀಡಿದ್ದಾರೆ. ಕಮಲ್ ಹಾಸನ್ ಮತ್ತು ನಾಸಿರುದ್ದೀನ್ ಶಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 'ನಮ್ಮ ದೇಶದಲ್ಲಿ ನಾವು ಹೊಂದಿರುವ ವಾಕ್ ಸ್ವಾತಂತ್ರ್ಯದ ಬಗ್ಗೆ ತುಂಬಾ ಸಂತೋಷಪಟ್ಟಿದ್ದೇನೆ. ಚಲನಚಿತ್ರವನ್ನು ನೋಡದೆ ಅದನ್ನು ಅಪಖ್ಯಾತಿಗೊಳಿಸಬಹುದು, ಲೇಬಲ್ ಮಾಡಬಹುದು ಮತ್ತು ಸಾರ್ವಜನಿಕವಾಗಿ ಕಿತ್ತುಹಾಕಬಹುದು. ಯಾರಾದರೂ ಯಾರ ಬಗ್ಗೆ ಬೇಕಾದರೂ ಹೇಳಬಹುದು ಮತ್ತು ಹಾನಿಯಾಗದಂತೆ ಬದುಕಬಹುದು ಅದು ಭಾರತದ ಸೌಂದರ್ಯ. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ಜನರು ಸಹಬಾಳ್ವೆ ಮಾಡಬಹುದು. ಅಂತಹ ಪ್ರಸಿದ್ಧ ನಟರು ಚಿತ್ರದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ನಂತರವೂ ಪ್ರೇಕ್ಷಕರು ಇನ್ನೂ ಚಿತ್ರಮಂದಿರಗಳಿಗೆ ಹೋಗಿ ಬೆಂಬಲಿಸಲು ಆಯ್ಕೆ ಮಾಡಿಕೊಂಡಿರುವುದು ಅದ್ಭುತವಾಗಿದೆ. ಭಯೋತ್ಪಾದನೆಯ ವಿರುದ್ಧ ನಿಂತ ಚಿತ್ರ' ಎಂದು ಹೇಳಿದ್ದಾರೆ.
'ಕೇರಳ ಸ್ಟೋರಿ' ಬ್ಯಾನ್ ಬೆಂಬಲಿಸಿ ಹೇಳಿಕೆ ವೈರಲ್: ನಟ ನವಾಜುದ್ದೀನ್ ಸಿದ್ಧಿಕಿ ಕೆಂಡಾಮಂಡಲ
ಕಮಲ್ ಹಾಸನ್ ಹೇಳಿದ್ದೇನು?
ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಕಮಲ್ ಹಾಸನ್, 'ನಾನು ನಿಮಗೆ ಹೇಳಿದ್ದೇನೆ, ನಾನು ಪ್ರೊಪೊಗಾಂಡ ಚಿತ್ರಗಳ ವಿರುದ್ಧ ಇದ್ದೇನೆ. ನೀವು ಟೈಟಲ್ ಕೆಳ ಭಾಗದಲ್ಲಿ ನೈಜ ಕಥೆ ಎಂದು ಬರೆದರೆ ಸಾಕಾಗುವುದಿಲ್ಲ. ಅದು ನಿಜವಾಗಿಯೂ ನೈಜ ಕಥೆಯಾಗಿರಬೇಕು ಮತ್ತು ಅದು ನಿಜವಲ್ಲ' ಎಂದು ಹೇಳಿದ್ದಾರೆ.
ಕೇರಳ ಸ್ಟೋರಿ ನೋಡಲ್ಲ, ಈ ಚಿತ್ರದ ಸಕ್ಸಸ್ ಡೇಂಜರಸ್ ಟ್ರೆಂಡ್: ನಾಸಿರುದ್ದೀನ್ ಶಾ!
ನಾಸಿರುದ್ದೀನ್ ಶಾ ಹೇಳಿದ್ದೇನು?
ಕೇರಳ ಸ್ಟೋರಿ ಚಿತ್ರದ ಯಶಸ್ಸನ್ನು ಅಪಾಯಕಾರಿ ಟ್ರೆಂಡ್ ಎಂದು ನಾಸಿರುದ್ದೀನ್ ಶಾ ಎಂದಿದ್ದರು. ಅದಲ್ಲದೆ, ಈ ಟ್ರೆಂಡ್ಅನ್ನು ನಾಜಿ ಜರ್ಮನಿಗೆ ಅವರು ಹೋಲಿಕೆ ಮಾಡಿದ್ದರು. 'ಒಂದು ಹಂತದಲ್ಲಿ ಇದು ಅಪಾಯಕಾರಿ ಟ್ರೆಂಡ್. ಇದರಲ್ಲಿ ಯಾವುದೇ ಅನುಮಾನವಿಲ್ಲ. ಅದರೊಂದಿಗೆ ನಾವು ಹಿಟ್ಲರ್ ಇದ್ದ ಸಮಯದ ನಾಜಿ ಜರ್ಮನಿಯ ರೀತಿ ಸಾಗುತ್ತಿದ್ದೇವೆ. ನಿರ್ಮಾಪಕರು ಹಾಗೂ ನಿರ್ದೇಶಕರು ಸಹ ಆಯ್ಕೆ ಮಾಡಲ್ಪಟ್ಟವರು ಸುಪ್ರೀಂ ಲೀಡರ್ ಬಗ್ಗೆ ಹೊಗಳುತ್ತಾ, ಆತ ದೇಶವಾಸಿಗಳಿಗಾಗಿ ಮಾಡಿದ ಕಾರ್ಯಗಳನ್ನು ಹೊಗಳುತ್ತಾ, ಯಹೂದಿ ಸಮುದಾಯದ ಮೇಲೆ ಆಕ್ರಮಣ ಮಾಡಲಾಗಿತ್ತು. ಆ ಸಮಯದಲ್ಲಿ ಜರ್ಮನಿಯಲ್ಲಿ ಸಾಕಷ್ಟು ಸಿನಿಮಾ ನಿರ್ದೇಶಕರು ದೇಶವನ್ನು ತೊರೆದರು. ಹಾಲಿವುಡ್ಗೆ ಬಂದು ಅಲ್ಲಿ ಚಿತ್ರಗಳನ್ನು ಮಾಡಿದರು. ಅದೇ ರೀತಿಯ ಕಥೆ ಇಲ್ಲಿಯೂ ಆಗುತ್ತಿದೆ. ಒಂದೋ ಬಲಭಾಗದಲ್ಲಿ ಇರಿ, ತಟಸ್ಥರಾಗಿರಿ ಅಥವಾ ಸರ್ಕಾರದ ಪರವಾಗಿರಿ ಎನ್ನುವ ಸ್ಥಿತಿ ನಿರ್ಮಾಣವಾಗಿದೆ' ಎಂದಿದ್ದರು.