ಗಂಡ ಬಿಟ್ಟ, ಲವರ್​ ವೇಶ್ಯಾವಾಟಿಕೆಗೆ ತಳ್ಳಿದ... ಬಾಲಿವುಡ್​ ಸೂಪರ್​ಸ್ಟಾರ್​ ನಟಿಯ ಕರಾಳ ಬದುಕು

By Contributor AsianetFirst Published Jun 14, 2023, 1:43 PM IST
Highlights

ಚಿಕ್ಕವಯಸ್ಸಿನಲ್ಲಿಯೇ ಸೂಪರ್​ಸ್ಟಾರ್​ ಪಟ್ಟಕ್ಕೇರಿದ್ದ ಬಾಲಿವುಡ್​ ನಟಿ ವಿಮಿಯ ಕರಾಳ ಬದುಕಿನ ಕಥೆ ಇದು...
 

ಬಣ್ಣದ ಬದುಕು ಹೊರಗಡೆ ಮಾತ್ರ ನೋಡಲು ಚೆಂದ. ಆದರೆ ಈ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರ ಎಲ್ಲರ ಜೀವನವೂ ಸುಂದರವಾಗಿಲ್ಲ. ಕೆಲವರ ನೈಜ ಜೀವನ ಕರಾಳವಾಗಿರುತ್ತದೆ. ಬಾಲಿವುಡ್‌ನ ಪ್ರಭೆಯಲ್ಲಿ ಎಷ್ಟು ತಾರೆಯರು ಮಿಂಚುತ್ತಾರೋ ಗೊತ್ತಿಲ್ಲ. ಕೆಲವರು ತಮ್ಮ ಸ್ಥಾನವನ್ನು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ, ಕೆಲವರು ಅಲೆದಾಡುತ್ತಲೇ ಇರುತ್ತಾರೆ ಮತ್ತು ಅವರ ಜೀವನವು ನೋವಿನ ತಿರುವಿನಲ್ಲಿ ಕೊನೆಗೊಳ್ಳುತ್ತದೆ. ಅಂಥದ್ದೇ ಒಂದು ಕರಾಳ ಬದುಕಿನ ಕಥೆ ಈ ನಟಿಯದ್ದು.  ತುಂಬಾ ಆಕರ್ಷಕ ಮತ್ತು ಸುಂದರ ನೋಟವನ್ನು ಹೊಂದಿದ್ದ ಕನಸಿನ ರಾಣಿ ಎಂದೇ 70ರ ದಶಕದಲ್ಲಿ ಮನೆಮಾತಾಗಿದ್ದ ನಟಿಯ ಅತ್ಯಂತ ಕರಾಳ ಜೀವನದ ಕಥೆ ಇದು. ಸೂಪರ್​ಸ್ಟಾರ್​ ಪಟ್ಟಕ್ಕೇರಿದ್ದ ನಟಿ ಈಕೆ. ಹಸ್ನ್ ಕಿ ಮಲ್ಲಿಕಾ (Hassan E Mallika) ಎಂಬ ಬಿರುದು ಕೂಡ ಸಿಕ್ಕಿತ್ತು. ಮದುವೆಯಾಗಿ ಎರಡು ಮಕ್ಕಳ ತಾಯಿಯಾದ ಮೇಲೂ ಈಕೆಯ ಬೇಡಿಕೆ ಕುಗ್ಗಿರಲಿಲ್ಲ.  ಆ ಸಮಯದಲ್ಲಿ ಹಲವಾರು ಮಂದಿಯನ್ನು ಹುಚ್ಚೆಬ್ಬಿಸುವ ಸೌಂದರ್ಯ ಘನಿಯಾಗಿದ್ದ ನಟಿಯೇ ವಿಮಿ. ಪಡಬಾರದ ಪಾಡು ಪಟ್ಟು ವೇಶ್ಯೆಯೂ ಆಗಿ 34ನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜ್ಯಸಿದ್ದ ನಟಿಯ ಅತ್ಯಂತ ಭಯಾನಕ ಜೀವನ ಕಥೆ ಯಾವ ಟ್ರ್ಯಾಜಡಿ (Tragedy) ಸಿನಿಮಾಕ್ಕೂ ಬೇರೆಯಾಗಿಲ್ಲ. ಒಂದೊಮ್ಮೆ ಈಕೆಯನ್ನು ನೋಡಲು ಮುಗಿಬೀಳುತ್ತಿದ್ದ ಜನರು, ಈಕೆಯ ಒಂದೇ ಒಂದು ನೋಟಕ್ಕೆ ಹುಚ್ಚೆದ್ದು ಹೋಗುತ್ತಿದ್ದ ಜನರಿದ್ದರೂ ಈಕೆ ಸತ್ತಾಗ ನಾಲ್ಕು ಹೆಗಲು ಕೊಡುವವರೂ ಬರಲಿಲ್ಲ.  ಆಕೆಯ ಮೃತ ದೇಹವನ್ನು ಕೈಗಾಡಿ ಮೇಲೆ ಇಟ್ಟು ಚಿತಾಗಾರಕ್ಕೆ ಕೊಂಡೊಯ್ಯಲಾಯಿತು ಎಂದರೆ ಆಕೆಯ ಬದುಕು ಅದೆಂಥ ದುರಂತವಾಗಿತ್ತು ಊಹಿಸಿ.
 
 ವಿಮಿಯ ಬಗ್ಗೆ ಹೇಳುವುದಾದರೆ ಈಕೆ, ಸುನಿಲ್ ದತ್ ಮತ್ತು ರಾಜ್‌ಕುಮಾರ್ ಅವರ ಮೊದಲ ಚಿತ್ರ 'ಹುಮ್ರಾಜ್' ನಲ್ಲಿ ನಾಯಕಿಯಾಗಿ ನಟಿಸಿದರು. ಇಂದಿಗೂ ಬಾಲಿವುಡ್​ ಪ್ರಿಯರು ಆಕೆಯ ಅಭಿನಯವನ್ನು ನೆನಪಿಸಿಕೊಳ್ಳುತ್ತಾರೆ.   ಈಕೆ  1943 ರಲ್ಲಿ ಪಂಜಾಬ್‌ನ ಜಲಂಧರ್‌ನಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲಿ, ವಿಮಿ ಆ ಕಾಲದ ಪ್ರಸಿದ್ಧ ಕೈಗಾರಿಕೋದ್ಯಮಿಯ ಮಗ ಶಿವ ಅಗರ್ವಾಲ್ (Shiv Agarwal) ಅವರನ್ನು ವಿವಾಹವಾದರು. ಇವರ ಮದುವೆಗೆ ವಿಮಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಮದುವೆಯಿಂದ ವಿಮಿಗೆ 2 ಮಕ್ಕಳಿದ್ದರು. ಆಗಿನ ಕಲ್ಕತ್ತಾದಲ್ಲಿ ತಮ್ಮ ಪತಿಯೊಂದಿಗೆ ಪಾರ್ಟಿಗೆ ಬಂದಾಗ ಈಕೆ  ಸಂಗೀತ ನಿರ್ದೇಶಕ ರವಿಯನ್ನು ಭೇಟಿಯಾದರು.  ರವಿ ವಿಮಿಯ ಸೌಂದರ್ಯಕ್ಕೆ ಮಾರುಹೋದರು. ‘ನೀನೇಕೆ ಸಿನಿಮಾಗಳಲ್ಲಿ ಕೆಲಸ ಮಾಡಬಾರದು’ ಎಂದು ವಿಮಿಗೆ ರವಿ ಕೇಳಿದರು.  'ನಾನು ಇಬ್ಬರು ಮಕ್ಕಳ ತಾಯಿ, ನನಗೆ ಸಿನಿಮಾದಲ್ಲಿ ಕೆಲಸ ಕೊಡುವವರು ಯಾರು?' ಎಂದು ವಿಮಿ ಹೇಳಿದರೂ, ರವಿ ಅವರು ವಿಮಿ ಮತ್ತು ಆಕೆಯ ಪತಿ ಶಿವ ಅವರನ್ನು ಮುಂಬೈಗೆ ಕರೆಸಿ ನಂತರ ಬಿಆರ್ ಚೋಪ್ರಾ ಅವರನ್ನು ಭೇಟಿಯಾಗುವಂತೆ ಮಾಡಿದರು. ಇಲ್ಲಿ ಬಿಆರ್ ಚೋಪ್ರಾ ಅವರಿಗೆ ಮೊದಲ ಚಿತ್ರ 'ಹುಮ್ರಾಜ್' ನಲ್ಲಿ ನಟಿಸುವ ಅವಕಾಶ ಕಲ್ಪಿಸಿದರು.

ಲಕ್ಷ್ಮೀ ದೇವಿಗೆ ಇದೆಂಥ ಅವಮಾನ! ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಯ್ತು 'ಗಂಧೀಬಾತ್​' ಪೋಸ್ಟರ್​
  
ವಿಮಿಗೆ ಚಲನಚಿತ್ರಗಳಲ್ಲಿ ಕೆಲಸ ಮಾಡುವುದು ಅತ್ತೆಯವರಿಗೆ ಇಷ್ಟವಿರಲಿಲ್ಲ, ಆದರೆ ಆಕೆಗೆ ತನ್ನ ಗಂಡನ ಬೆಂಬಲ ಸಿಕ್ಕಿತು. ಪತಿ ತಂದೆ ತಾಯಿಯ ಮಾತನ್ನೂ ಕೇಳದಿದ್ದಾಗ ತಂದೆ-ತಾಯಿ ಇಬ್ಬರನ್ನೂ  ಆಸ್ತಿಯಿಂದ ಹೊರಹಾಕಿ ಮನೆಯಿಂದಲೂ ಹೊರಗಟ್ಟಿದರು. ಈಗ ಮನೆ ನಡೆಸುವ ಸಂಪೂರ್ಣ ಜವಾಬ್ದಾರಿ ವಿಮಿಯ ಹೆಗಲ ಮೇಲೆ ಬಿದ್ದಿತ್ತು. ವಿಮಿ 1967 ರಲ್ಲಿ ಬಿಡುಗಡೆಯಾದ 'ಹುಮ್ರಾಜ್' (Humraj) ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ರಾಜ್‌ಕುಮಾರ್, ಸುನೀಲ್ ದತ್, ಮುಮ್ತಾಜ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದರೂ ಹೆಚ್ಚಿನ ಜನರ ಕಣ್ಣು ವಿಮಿ ಸೌಂದರ್ಯದ ಮೇಲಿತ್ತು.

 ವಿಮಿ (Vimi) ಅನೇಕ  ಚಿತ್ರಗಳಲ್ಲಿ ಕೆಲಸ ಮಾಡಿದರು. ಆ ಕಾಲದ ಪ್ರಸಿದ್ಧ  ನಟ ಸುನೀಲ್ ದತ್, ಶಶಿ ಕಪೂರ್, ರಾಜ್ ಕುಮಾರ್ ಅವರ ಜೊತೆ ಕೆಲಸ ಮಾಡಿದರು.   ಬಿ.ಆರ್.ಚೋಪ್ರಾ ಅವರೊಂದಿಗೆ ಸಿನಿಮಾ ಪ್ರವೇಶಿಸಿದ ವಿಮಿ ಅವರ ಜತೆ 3 ಚಿತ್ರಗಳಿಗೆ ಒಪ್ಪಂದ ಮಾಡಿಕೊಂಡಿದ್ದರು. ವಿಮಿಗೆ ಹಲವು ಚಿತ್ರಗಳಿಗೆ ಆಫರ್‌ಗಳು ಬಂದಿದ್ದವು, ಆದರೆ ಬಿಆರ್ ಚೋಪ್ರಾ ಅವರ ಒಪ್ಪಂದದಿಂದಾಗಿ ಅವರು ಚಿತ್ರಗಳಿಗೆ ಸಹಿ ಹಾಕಲು ಸಾಧ್ಯವಾಗಲಿಲ್ಲ. ಒಂದು ದಿನ ಅವರಿಬ್ಬರೂ ಒಂದು ಚಿತ್ರದ ಬಗ್ಗೆ ಜಗಳವಾಡಿದರು ಮತ್ತು ಬಿಆರ್ ಚೋಪ್ರಾ ಅವರನ್ನು ಒಪ್ಪಂದದಿಂದ ಬಿಡುಗಡೆ ಮಾಡಿದರು. ಈಗ ವಿಮಿಗೆ ಕೆಲಸ ಸಿಕ್ಕಿತು, ಆದರೆ ಚಿತ್ರಗಳು ವಿಫಲವಾದ ಕಾರಣ ಯಶಸ್ಸು ಕಳೆದುಹೋಯಿತು. ಫ್ಲಾಪ್ ಚಿತ್ರಗಳ ನಂತರವೇ ನಿರ್ಮಾಪಕರು ಈಕೆಗೆ ಚಿತ್ರಗಳನ್ನು ನೀಡಲಿಲ್ಲ.  ಕೈಯಲ್ಲಿ ಹಣವಿಲ್ಲದೇ  ಆರ್ಥಿಕ ಮುಗ್ಗಟ್ಟಿನ ಕಾಲ ಬಂದಾಗ ಪತಿ ಶಿವು ಕುಡಿತದ ಚಟಕ್ಕೆ ಬಿದ್ದು ವಿಮಿಯೊಂದಿಗೆ ಜಗಳವಾಡತೊಡಗಿದರು. ಸಣ್ಣ ನಿರ್ಮಾಪಕರ ಜೊತೆ ಸಣ್ಣಪುಟ್ಟ ಕೆಲಸ ಮಾಡುವಂತೆ ಶಿವ್ ವಿಮಿ ಮೇಲೆ ಒತ್ತಡ ಹೇರಿದ್ದರು. ಹೀಗಾಗಿ  ಆಕೆಯ ಪತಿಯೊಂದಿಗೆ ಸಂಬಂಧ ಹದಗೆಟ್ಟಿತ್ತು. ಅದೇ ಸಮಯದಲ್ಲಿ, ವಿಮಿ ಚಲನಚಿತ್ರ ನಿರ್ಮಾಪಕ ಜಾಲಿಯೊಂದಿಗೆ ಪ್ರೀತಿಯಲ್ಲಿ ಬಿದ್ದರು. ಪತಿಯನ್ನು ತೊರೆದು ಜಾಲಿಯೊಂದಿಗೆ ವಾಸಿಸಲು ಪ್ರಾರಂಭಿಸಿದರು. ಈ ಪ್ರೇಮವೂ ವಿಮಿಯ ಜೀವನದಲ್ಲಿ ಕೆಲವೇ ದಿನಗಳು ಉಳಿಯಲಿತ್ತು. ಕೆಲವು ದಿನಗಳ ನಂತರ ಜಾಲಿ ವಿಮಿ ಕುಡಿತದ ಚಟಕ್ಕೆ ಬಿದ್ದರು. ಪ್ರಿಯಕರ ಜಾಲಿ (Jolly) ಆಕೆಯನ್ನು  ವೇಶ್ಯಾವಾಟಿಕೆಯತ್ತ ತಳ್ಳಿದ. ವಿಮಿಯ ವೃತ್ತಿಜೀವನ ಸಂಪೂರ್ಣ ಹಾಳಾಗಿ ಹೋಯಿತು.

ದಿನಕ್ಕೆ 100 ಸಿಗರೇಟ್​- ಕ್ಯಾನ್ಸರ್​ ಹೊಗೆಯಿಂದ ಸುತ್ತುವರಿದಿದ್ದೇನೆ: ಶಾರುಖ್​ ಖಾನ್​!

ವೇಶ್ಯಾವಾಟಿಕೆಯಲ್ಲಿ ದೇಹ ನಲುಗಿ ಹೋಯಿತು. ರೋಗ ಮೈಗೆ ಅಂಟಿತು. ಬದುಕು ಕುಸಿಯಿತು. ಒಂಟಿಯಾಗಿ ಹೋದರು.  ಕೇವಲ 34 ನೇ ವಯಸ್ಸಿನಲ್ಲಿ, ವಿಮಿಯ ಯಕೃತ್ತು ಸಂಪೂರ್ಣವಾಗಿ ಹಾನಿಗೊಳಗಾಯಿತು. ಕಾಯಿಲೆಗೆ ಚಿಕಿತ್ಸೆ ಪಡೆಯಲು ಹಣವಿರಲಿಲ್ಲ. ಆಸ್ಪತ್ರೆಯ ಸಾಮಾನ್ಯ ವಾರ್ಡ್‌ನಲ್ಲಿ ದಾಖಲಿಸಲಾಯಿತು. 1977ರಲ್ಲಿ ಅಲ್ಲಿಯೇ ಆಕೆ ಕೊನೆಯುಸಿರು ಬಿಟ್ಟರು.  ವಿಮಿ ಸತ್ತಾಗ, ಆಕೆಯ ಶವಕ್ಕೆ  ಹೆಗಲು ಕೊಡುವವರು ಯಾರೂ ಇರಲಿಲ್ಲ ಮತ್ತು ಅವರನ್ನು ಸ್ಮಶಾನಕ್ಕೆ ಕರೆದೊಯ್ಯುವವರು ಯಾರೂ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಐಷಾರಾಮಿ ಕಾರುಗಳಲ್ಲಿ ಸಂಚರಿಸುತ್ತಿದ್ದ ವಿಮಿಯ ಮೃತದೇಹವನ್ನು ಕೈಗಾಡಿಯಲ್ಲಿಟ್ಟು ಚಿತಾಗಾರಕ್ಕೆ ಕೊಂಡೊಯ್ಯಲಾಯಿತು.

click me!