ರಾಮನಗರದಲ್ಲಿ ಗುಡಿಸಲು ಕಟ್ಟಿ ಮಗಳಿಗೆ ಗಿಫ್ಟ್ ಕೊಟ್ಟ ನಟಿ ಶ್ರುತಿ!

By Suvarna NewsFirst Published Jul 30, 2020, 6:04 PM IST
Highlights

ಶ್ರುತಿ ಇಂದು ನಟಿಯಷ್ಟೇ ಅಲ್ಲ; ಕರ್ನಾಟಕ ಪ್ರವಾಸೋದ್ಯಮ ನಿಮಗದ ಅಧ್ಯಕ್ಷೆ  ಮತ್ತು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ. ಹಾಗಾಗಿ ಕೊವಿಡ್ 19 ಕಾರಣದಿಂದ ಮಾಡಿದ ಲಾಕ್ಡೌನ್ ಅವರಿಗೆ ವೃತ್ತಿಪರವಾಗಿ ಎರಡೆರಡು ತಡೆಗಳನ್ನು ಸೃಷ್ಟಿಸಿತು. ಆದರೆ ಇದುವರೆಗೆ ಹೊರಜಗತ್ತಿಗೆ ತೋರಿಸಿರದ ತಮ್ಮ ಮತ್ತೊಂದು ಪ್ರತಿಭೆಯನ್ನು ಹೊರಗೆಡಹಿದ್ದಾರೆ ಶ್ರುತಿ. ಅದು ಮಗಳು ಗೌರಿಗಾಗಿ ಎರಡು ಮನೆಗಳನ್ನು ಕಟ್ಟಿಕೊಟ್ಟಿದ್ದಾರೆ. ಖುದ್ದಾಗಿ ಸ್ಕೆಚ್ ಹಾಕಿ ಕಾರ್ಮಿಕರ ಜೊತೆ ಬೆರೆತು ಮನೆ ಕಟ್ಟಿದ ತಮ್ಮ ವಿಶೇಷ ಅನುಭವದ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಶ್ರುತಿ ಮಾತನಾಡಿದ್ದಾರೆ.
 

- ಶಶಿಕರ ಪಾತೂರು

ಬಿಗ್ ಬಾಸ್ ಮನೆಯಲ್ಲಿ ಗೆದ್ದ ನಿಮಗೆ ಲಾಕ್ಡೌನ್ ದಿನಗಳು ಕಷ್ಟವಾಗಿರಲಿಕ್ಕಿಲ್ಲವಲ್ಲವೇ?
ಹೌದು; ನಾನು ಒಂದು ರೀತಿ ಜೀವನದಲ್ಲಿ ಎಲ್ಲ ಸಂದರ್ಭಗಳನ್ನು ಎದುರಿಸಿದ್ದೀನಿ. ಅದರಲ್ಲಿಯೂ ನೂರು ದಿನ ಮೊಬೈಲ್ ಕೂಡ ಇರದೆ ಬಿಗ್ ಬಾಸ್ ಮನೆಯಲ್ಲಿದ್ದು ಬಂದಿದ್ದೆ. ಇಲ್ಲಿ ನಮ್ಮನ್ನು ಪ್ರೀತಿಸುವವರು, ನಾನು ಪ್ರೀತಿಸುವವರು ಎಲ್ಲರೂ ಒಟ್ಟಿಗೇ ಇದ್ದೆವು. ಆಹಾರಕ್ಕೂ, ನಿದ್ದೆಗೂ ಕೊರತೆ ಇಲ್ಲ ಎನ್ನುವುದೇ ಲಕ್ಷುರಿ ಎನ್ನುವಂತಾಗಿದೆ. ನನಗೆ ಸಿಕ್ಕಂಥ ಬಂಪರ್ ಟೈಮ್ ಇದು ಎಂದೇ ಹೇಳಬಹುದು. ಹಾಗಾಗಿ ಸಂಪೂರ್ಣ ಲಾಕ್ಡೌನ್ ಆದಾಗ ಮಗಳೊಂದಿಗೆ ರಾಮನಗರದ ತೋಟದ ಮನೆಗೆ ಹೋಗಿ ಸೆಟ್ಲಾಗಿದ್ದೆ. ಬೆಂಗಳೂರಲ್ಲಿ ನಾನು ಒಂದು ಅಪಾರ್ಟ್ಮೆಂಟಲ್ಲಿ ಇದ್ದೀನಿ. ಹಾಗಾಗಿ ಇಲ್ಲಿ ನಾಲ್ಕು ಗೋಡೆಗಳ ನಡುವೆ ಕಷ್ಟವಾಗುತ್ತೆ ಎನ್ನುವ ಕಾರಣದಿಂದ ತೋಟಕ್ಕೆ ಹೋದೆ. ಲಾಕ್ಡೌನ್ ಸಂದರ್ಭದಲ್ಲಿ ರಾಮನಗರ ಜಿಲ್ಲೆ ಗ್ರೀನ್ ಬೆಲ್ಟಾಗಿತ್ತು. ನನ್ನ ಕೃಷಿ ಚಟುವಟಿಕೆಗಳನ್ನು ಮಾಡಲು ಯಾವುದೇ ಕಷ್ಟವಿರಲಿಲ್ಲ. ಅದೇ ಸಂದರ್ಭದಲ್ಲಿ ನನ್ನ ಮಗಳು ಗೌರಿಗೆ ನಾನು ಒಂದು ಕಲ್ಲಿನ ಮನೆ ಕಟ್ಟಿ ಜನ್ಮದಿನಕ್ಕೆ ಗಿಫ್ಟ್ ಮಾಡಿದ್ದೇನೆ. ಸಂಪೂರ್ಣವಾಗಿ ಕಲ್ಲುಗಳನ್ನೇ ಬಳಸಿಕೊಂಡು, ಯಾವುದೇ ರೀತಿಯ ಸಿಮೆಂಟ್ ಇಟ್ಟಿಗೆಗಳ ಬಳಕೆ ಮಾಡದೆ, ಪ್ರಕೃತಿಯಲ್ಲೇ ಸಿಗುವ ಕಲ್ಲು, ಮಣ್ಣು, ಬಿದಿರು, ಹುಲ್ಲುಗಳನ್ನೇ ಬಳಸಿ ಒಂದು ಮನೆಕಟ್ಟಿ ಮಗಳಿಗೆ ಕೊಟ್ಟಿದ್ದೇನೆ. ಅದರಲ್ಲಿ ಒಂದು ಕಲ್ಲಿನ ಮನೆ ಮತ್ತು ಇನ್ನೊಂದು ಟ್ರೀ ಹೌಸ್. ಎರಡನ್ನೂ ಕಟ್ಟಿ ಮುಗಿಸುವ ಹೊತ್ತಿಗೆ ಲಾಕ್ಡೌನ್ ಸಮಯ ಮುಗಿದಿತ್ತು. 

ಮನೆಯ ಚಿತ್ರಗಳು ಚೆನ್ನಾಗಿವೆ. ವಿನ್ಯಾಸ ಮಾಡಿದ್ದು ಯಾರು?
ಇದನ್ನು ಕಟ್ಟಲು ಯಾವುದೇ ಇಂಜಿನಿಯರ್ ಇರಲಿಲ್ಲ. ನಾನೇ ಪ್ಲ್ಯಾನ್ ಹಾಕಿ ಕಟ್ಟಿದ್ದೇನೆ! ಮನೆಯ ಇಂಟೀರಿಯರ್ ಮಾಡುವುದು ಮೊದಲಿಂದಲೂ ತುಂಬಾನೇ ಇಷ್ಟ. ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಾನು ಕಟ್ಟಿದ ಮನೆಗೆ ಸಂಪೂರ್ಣವಾಗಿ ನಾನೇ ಇಂಟೀರಿಯರ್ ಮಾಡಿದ್ದೆ. ಈಗಿರುವ ಮನೆಗೂ ನಾನೇ ಇಂಟೀರಿಯರ್ ಮಾಡಿದ್ದೇನೆ. ಸ್ಕೆಚ್ ನಿಂದ ಹಿಡಿದು ಎಲ್ಲವನ್ನು ನಾನೇ ಇಂಟೀರಿಯರ್ ಮಾಡಿದ್ದೆ. ಕೇವಲ ಒಂದಷ್ಟು ಕೆಲಸಗಾರರನ್ನು ಬಳಸಿಕೊಂಡು ನಾನೇ ಖುದ್ದಾಗಿ ಮನೆ ಕಟ್ಟಿದ್ದೇನೆ ಎಂದರೆ ನೀವು ನಂಬಬೇಕು! ಅಲ್ಲದೆ, ಲಾಕ್ಡೌನ್ ಸಮಯದಲ್ಲಿ ನಾನು ಕೂಡ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ. ತೋಟದ ಮನೆಯಲ್ಲಿ ಇದರ ಜತೆಗೆ ನಾನೇ ಒಂದಷ್ಟು ಸೊಪ್ಪು, ತರಕಾರಿಗಳನ್ನು ನಾನೇ ಬೆಳೆದಿದ್ದೇನೆ. ಆರ್ಗಾನಿಕ್ ವೆಜಿಟೆಬಲ್ಸ್ ಬೆಳೆಯುವ ಆಸೆ ನನಗೆ ಮೊದಲಿನಿಂದಲೂ ಇತ್ತು. ಆದರೆ ಸಮಯ ಇರಲಿಲ್ಲ. ಈ ಲಾಕ್ಡೌನ್ ನನಗೆ ಅದರ ಅವಕಾಶ ಮಾಡಿಕೊಟ್ಟಿತು. 
ಮಗಳು ಜಾನಕಿಯ ನಿರಂಜನ್ ಇದೀಗ ನೈಜ ಐಎಎಸ್ ಆಫೀಸರ್

ಮಗಳು ಮತ್ತು ತಂದೆ ಮಹೇಂದರ್ ಜೊತೆಗಿನ ಸಂಬಂಧ, ಮಾತುಕತೆ ಹೇಗಿದೆ?
ಮಗಳು ಮಾತನಾಡುತ್ತಾಳೆ. ನನಗೆ ಅವರಿಂದ ವಿಚ್ಛೇದನವಾಗಿದೆ. ಅವರಿಗೆ ಬೇರೆ ಮದುವೆಯಾಗಿದೆ. ಅದರ ಹೊರತಾಗಿಯೂ ಮಹೇಂದರ್ ಅವರ ಜತೆಗೆ ನನಗೆ ಮಾತನಾಡಬೇಕಾದ ಅನಿವಾರ್ಯತೆ ಬಂದಿಲ್ಲ. ಮಗಳು ಸದ್ಯಕ್ಕೆ ನನ್ನ ಜೊತೆಗೆ ಇದ್ದಾಳೆ. ಆದರೆ ಆಕೆ ಯಾವಾಗ ಬೇಕಾದರೂ ಆಕೆಯ ತಂದೆಯನ್ನು ನೋಡಲು ಹೋಗಬಹುದು. ನನ್ನ ಕಡೆಯಿಂದ ಯಾವುದೇ ನಿಬಂಧನೆಗಳಿಲ್ಲ. ನಿಜ ಹೇಳಬೇಕೆಂದರೆ ಅವರಿಬ್ಬರ ಸಂಬಂಧ ಚೆನ್ನಾಗಿಯೇ ಇರಲಿ ಎನ್ನುವುದೇ ನನ್ನ ಆಸೆ. ಅದಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಮಾತ್ರವಲ್ಲ ನನ್ನ ಆಸೆಯೂ ಅದೇನೆ. 

ಸುಮಲತಾ ಗೊರೋನಾ ಗೆದ್ದಿದ್ದು ಹೇಗೆ?

ಗೌರಿ ಕೂಡ ಸಿನಿಮಾರಂಗ ಪ್ರವೇಶಿಸಬಹುದೇ? 
ತುಂಬ ಜನ ಕೇಳಿದ್ದಾರೆ. ಆದರೆ ಅವಳಿಗೆ ನಟನೆಯಲ್ಲಿ ಅಂಥ ಇಂಟರೆಸ್ಟ್ ಇಲ್ಲ. ಬಹುಶಃ ಅವಳಿಗೆ ಸಿನಿಮಾದಲ್ಲಿ ಕಲಾವಿದೆಯಾಗುವ ಆಸಕ್ತಿ ಅಷ್ಟೇನೂ ಇಲ್ಲ. ಆದರೆ ಸಂಗೀತದಲ್ಲಿ ಒಲವಿದೆ. ಗಾಯಕಿಯಾಗುವ ಆಸೆಯೂ ಅವಳಲ್ಲಿದೆ. ಮಾತ್ರವಲ್ಲ ಈಗ ದ್ವಿತೀಯ ಪಿಯುಸಿಯಲ್ಲಿದ್ದಾಳೆ ಅಷ್ಟೇ. ಮುಂದೆ ಆಸಕ್ತಿ ಬರಲೂಬಹುದು. ಸದ್ಯಕ್ಕೆಕಾಲೇಜ್ ವಿದ್ಯಾಭ್ಯಾಸದಲ್ಲಿ ಮುಳುಗೇಳುವುದೇ ಕಷ್ಟವಾಗಿರುವ ಕಾರಣ ಅದರಲ್ಲೇ ಹೆಚ್ಚು ತೊಡಗಿಸಿಕೊಳ್ಳುತ್ತಾಳೆ. ಹಾಗಾಗಿ ಸಂಗೀತಕ್ಕೆ ಕೂಡ ತರಬೇತಿ ಪಡೆಯುತ್ತಿಲ್ಲ. ಸಿಕ್ಕ ಸಮಯದಲ್ಲಿ ಅವಳಷ್ಟಕ್ಕೇ ಹಾಡುತ್ತಾಳೆ. ಅದನ್ನು ಇನ್ಸ್ಟಾಗ್ರಾಮಲ್ಲಿ ಹಂಚಿಕೊಂಡಿರುವುದನ್ನು ಗಮನಿಸಬಹದು. 

"

click me!