
ಪ್ರಿಯಾ ಕೆರ್ವಾಶೆ
- ‘ವಿರಾಟಪುರ ವಿರಾಗಿ’ಯಂಥಾ ಚಿತ್ರಕ್ಕೆ ಸಂಗೀತ ನೀಡುವುದು ಅಂದುಕೊಂಡಷ್ಟುಸರಳ ಸಂಗತಿ ಅಲ್ಲ. ಆದರೆ ಈ ಕಾರ್ಯ ಬಹಳ ಸರಾಗವಾಗಿ ನಡೆದದ್ದು ಗುರುಗಳ ಕೃಪೆ ಎಂದೇ ಭಾವಿಸುತ್ತೇನೆ.
- ಇದು ಬಹಳ ಚಾಲೆಂಜಿಂಗ್ ಅನಿಸುವ ಸಬ್ಜೆಕ್ಟ್. ಜೀವನ ಕಥನದ ವಿಷಯ ಅಂತಾದಾಗ ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತೆ. ಅದರಲ್ಲೂ ಕುಮಾರ ಶಿವಯೋಗಿಗಳಂಥಾ ಅಧ್ಯಾತ್ಮ ಗುರುಗಳ ಕುರಿತ ಚಿತ್ರ ಎಂದಾಗ ದುಪ್ಪಟ್ಟು ಎಚ್ಚರದಿಂದ ಕೆಲಸ ಮಾಡಬೇಕಾಗುತ್ತದೆ. ಏಕೆಂದರೆ ಕೋಟ್ಯಾಂತರ ಭಕ್ತರ ಭಾವನೆಗಳು ಇರುತ್ತವೆ. ಸಂಗೀತವೂ ಮುಖ್ಯವಾಗುತ್ತೆ.
- ಈ ಸಿನಿಮಾದ ಕಥೆಗೆ ಪೂರಕವಾದ ವಚನಗಳನ್ನು ನಿರ್ದೇಶಕರು ಮೊದಲೇ ಆಯ್ಕೆ ಮಾಡಿದ್ದರು. ಈ ವಚನಗಳಿಗೆ ಸಂಗೀತ ಸಂಯೋಜಿಸುವುದು ಒಂಥರ ಬೆಂಕಿ ಮುಟ್ಟಿದ ಹಾಗೆ. ಅರ್ಥ ಹಾಳಾಗದಂತೆ, ಒಳಾರ್ಥಗಳನ್ನು ಅರ್ಥ ಮಾಡಿಕೊಂಡು ಪದಗಳನ್ನು ಎಲ್ಲಿ ಒಡೆಯಬೇಕು, ಹೇಗೆ ಸರಿಯಾಗಿ ಉಚ್ಛರಿಸಬೇಕು ಅನ್ನುವುದೆಲ್ಲ ಅರಿತುಕೊಂಡು ಮುಂದುವರಿಯಬೇಕು. ಇದಕ್ಕಾಗಿ ಒಂದಿಷ್ಟುಸಿದ್ಧತೆ ಮಾಡಿಕೊಂಡೆವು. ಅರ್ಥ ತಿಳಿಯಲು ಅನೇಕ ಪಂಡಿತರನ್ನು ಸಂಪರ್ಕಿಸಿದ್ದೆವು. ಸ್ವಾಮೀಜಿಗಳೂ ಸಲಹೆ ಸೂಚನೆಗಳನ್ನು ನೀಡುತ್ತಲೇ ಇದ್ದರು. ಆದಷ್ಟುನೈಜತೆಗೆ ಹತ್ತಿರ ಇರುವಂತೆ ಸಂಗೀತ ನೀಡಬೇಕಿತ್ತು. ಸತ್ಯದ ಹತ್ತಿರ ಹೋಗುವಾಗ ಸಹಜತೆ ಬಹಳ ಮುಖ್ಯ.
- ನಾನು ಈ ಥರದ ಸಂಗೀತ ಸಂಯೋಜನೆ ಇಷ್ಟರವರೆಗೆ ಮಾಡಿಲ್ಲ. ಇದೊಂದು ಭಿನ್ನ ಅನುಭವ. ದೇವರನ್ನು ಪ್ರೀತಿಸುವ ವ್ಯಕ್ತಿ ನಾನು. ತಂದೆಯವರನ್ನೇ ಮೊದಲ ಗುರು ಅಂದುಕೊಂಡಿದ್ದೇನೆ. ಗುರು ಕನೆಕ್ಷನ್ ಇದರಲ್ಲೂ ಬಂದಿರುವುದು ನನಗೂ ಕನೆಕ್ಟ್ ಆಯ್ತು.
ಹಾನಗಲ್ಲ ಕುಮಾರ ಶಿವಯೋಗಿ ಜೀವನ ಚರಿತ್ರೆ ಆಧರಿತ ‘ವಿರಾಟಪುರ ವಿರಾಗಿ’; ಬಿ.ಎಸ್. ಲಿಂಗದೇವರು ನಿರ್ದೇಶನ
- ದೈಹಿಕ ಶ್ರಮ, ಮಾನಸಿಕ ಶ್ರಮ ಇತ್ತು. ಆದರೆ ದಿನದ ಕೊನೆಯಲ್ಲಿ ಕೆಲಸ ಮಾಡಿದ್ದೇ ಗೊತ್ತಾಗದಷ್ಟುಹಗುರತೆ ಇತ್ತು. ಎಲ್ಲವನ್ನೂ ಗುರುಗಳೇ ನಮ್ಮ ಜೊತೆಯಲ್ಲಿದ್ದು ಮುನ್ನಡೆಸಿದ ಹಾಗಿತ್ತು. ಹೀಗಾಗಿ ಇಲ್ಲಿ ನಾನೊಂದು ನಿಮಿತ್ತ ಮಾತ್ರ. ಎಲ್ಲ ಅದರ ಪಾಡಿಗೆ ನಡ್ಕೊಂಡು ಹೋಯ್ತು ಎನ್ನಬಹುದು.
- ಬೇಸಿಕ್ ಕಂಪೊಸಿಷನ್ ಅಷ್ಟೇ ರೆಡಿ ಮಾಡಿಕೊಂಡು ಸಂಗೀತಗಾರರನ್ನು ಕರೆಸಿ ಹಾಡಿಸಿ ಅದಕ್ಕೆ ತಕ್ಕಂತೆ ಸ್ವರಗಳನ್ನು ಅಲ್ಲೇ ಕಂಪೋಸ್ ಮಾಡಿದ್ದು ಮತ್ತೊಂದು ವಿಶಿಷ್ಟಅನುಭವ. - ಇವತ್ತು ನಮ್ಮ ರಾಜ್ಯದಲ್ಲಿ ಶಾಸ್ತ್ರೀಯ ಸಂಗೀತ ಇಷ್ಟರಮಟ್ಟಿಗೆ ಉಳಿದಿದೆ ಎಂದರೆ ಇದಕ್ಕೆ ಹಾನಗಲ್ ಕುಮಾರ ಸ್ವಾಮಿಗಳೇ ಕಾರಣ ಎಂದು ನನ್ನ ಭಾವನೆ. ಅವರು ಪಂಚಾಕ್ಷರಿ ಗವಾಯಿಗಳ ಥರ ಶಿಷ್ಯರನ್ನು ಗುರುತಿಸಿ ಅವರಿಗೆ ಸಂಗೀತ ಕಲಿಸಿ ಸಂಗೀತ ಪರಂಪರೆ ಬೆಳೆಸಿದರು. ಅವರ ಗದ್ದುಗೆಯಲ್ಲಿ ಸಂಗೀತ ಸೇವೆಗಳು ಇವತ್ತಿಗೂ ನಡೆಯುತ್ತಿವೆ. ಸಂಗೀತ ಆಸಕ್ತರಿಗೆ, ಅಭ್ಯಾಸಿಗಳಿಗೆ ಈ ತಾಣ ಸ್ಫೂರ್ತಿ ನೀಡುತ್ತಿವೆ. ನಮ್ಮ ಈ ಚಿತ್ರದಲ್ಲಿ ಹಾಡಿದ ಸಂಗೀತ ಕಟ್ಟಿ, ರವೀಂದ್ರ ಸೊರಗಾವಿ ಮೊದಲಾದರು ತಾವೇ ಮುಂದಾಗಿ ಬಂದು ಹಾಡಿದ್ದು ವಿಶೇಷವಾಗಿತ್ತು. ಬದರಿ ಪ್ರಸಾದ್, ದೀಪ್ತಿ ಭಟ್ ಮೊದಲಾದವರು ಈ ಚಿತ್ರಕ್ಕೆ ಹಾಡಿದ್ದಾರೆ. ಈ ಹಾಡುಗಳು ಕಥೆಯನ್ನು ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಕೊಂಡೊಯ್ಯವ ತಂತುಗಳ ಹಾಗೆ ಬಂದಿವೆ.
Viratapurva Viragi ವಿರಾಟಪುರ ವಿರಾಗಿ ಸಿನಿಮಾದ ಮೊದಲ ನೋಟ ಅನಾವರಣ
- ಎರಡು ದಿನಗಳ ಹಿಂದೆ ಬಿಡುಗಡೆಯಾದ ‘ನೋಡಲಾಗದೆ’ ಹಾಡಿಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈ ಹಾಡು ಜನರಿಗೆ ಕನೆಕ್ಟ್ ಆಗುತ್ತಿದೆ. ಅನೇಕರು ಕರೆ ಮಾಡಿ ಈ ಹಾಡು ಕೇಳುತ್ತಾ ನಮ್ಮ ಕಣ್ಣಲ್ಲಿ ನೀರು ಬಂತು ಅನ್ನುವ ಮಾತುಗಳನ್ನು ಹೇಳಿದ್ದಾರೆ.
- ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ಕೆಲಸ ಮಾಡಿದ್ದೇವೆ. ಫಲ ಏನಿದ್ದರೂ ಭಗವಂತ ಕೊಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.