
ಆರ್. ಕೇಶವಮೂರ್ತಿ
ತೆರೆ ಮೇಲೆ ಬಂದು ತುಂಬಾ ವರ್ಷಗಳಾಯಿತು ಅಲ್ವಾ?
ಹೌದು. ನೂರು ಜನ್ಮಕು, ಬಿಗ್ಬಾಸ್ ಶೋ ಆದ ಮೇಲೆ ನಾನು ಚಿತ್ರರಂಗದಿಂದ ದೂರ ಆಗಿದ್ದೆ. ಆದರೂ ಸಿನಿಮಾ ಎನ್ನುವುದು ನನ್ನ ಶಾಲೆ, ನನ್ನ ಕನಸಿನ ಕ್ಷೇತ್ರ. ಹೀಗಾಗಿ ತುಂಬಾ ವರ್ಷಗಳ ನಂತರವಾದರೂ ಮರಳಿ ಬಂದಿರುವ ಖುಷಿ ಇದೆ.
ಇದ್ದಕ್ಕಿದ್ದಂತೆ ದೂರ ಆಗಿದ್ದು ಯಾಕೆ? ಈ ವೇಳೆ ಏನು ಮಾಡುತ್ತಿದ್ರಿ?
ನನ್ನ ನಾನು ಹೊಸದಾಗಿ ರೂಪಿಸಿಕೊಳ್ಳಬೇಕಿತ್ತು. ಜತೆಗೆ ನನ್ನದೇ ಬ್ಯುಸಿನೆಸ್ ಇತ್ತು. ಈ ಕಾರಣಕ್ಕೆ ಚಿತ್ರರಂಗದಲ್ಲಿ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ನಾನು ದುಬೈನಲ್ಲಿ ಇದ್ದೆ. ಅಲ್ಲಿ ಕೆಲಸ ಮಾಡುತ್ತಿದ್ದೆ.
ತುಂಬಾ ವರ್ಷಗಳ ನಂತರ ಮರಳಿ ಬಂದ ನಿಮಗೇ ನೀವು ಕೇಳಿಕೊಂಡ ಪ್ರಶ್ನೆಗಳೇನು?
ನಾನು ಹೀರೋ ಆದರೆ ಜನ ನೋಡುತ್ತಾರೆಯೇ, ನನ್ನ ಕೊನೆ ತನಕ ಸ್ಕ್ರೀನ್ ಮೇಲೆ ನೋಡಲು ಸಾಧ್ಯವೇ, ತೆರೆಗೆ ನನ್ನ ಪಾತ್ರ ತೂಕವಾಗಿರುತ್ತದೆಯೇ, ನಾನು ಯಾರು ಅಂತ ಪ್ರೇಕ್ಷಕರಿಗೆ ಗೊತ್ತಾಗುತ್ತದೆಯೇ... ಇತ್ಯಾದಿ ಪ್ರಶ್ನೆಗಳು ನನ್ನಲ್ಲೇ ಹುಟ್ಟಿಕೊಂಡವು. ಆದರೆ, ಈ ಎಲ್ಲದಕ್ಕೂ ನಾನು ಮಾಡುವ ‘ಡಿಯರ್ ಸತ್ಯ’ ಸಿನಿಮಾ ಉತ್ತರವಾಗಬೇಕು ಎಂದುಕೊಂಡು ನಾಲ್ಕು ವರ್ಷಗಳ ಹಿಂದೆ ಈ ಚಿತ್ರಕ್ಕೆ ಚಾಲನೆ ಕೊಟ್ವಿ.
ಇಲ್ಲಿ ಯಾವ ರೀತಿಯ ಕತೆ ಇದೆ?
ನಾನು ಚೆನ್ನೈನಲ್ಲಿ ಇದ್ದಾಗ ನೋಡಿದ ಒಂದು ನೈಜ ಘಟನೆ ಈ ಕತೆಗೆ ಅಡಿಪಾಯ. ಆ ನೈಜ ಘಟನೆ ಇಟ್ಟುಕೊಂಡು ಇಡೀ ಸಿನಿಮಾ ರೂಪಿಸಿದ್ದೇವೆ. ಒಬ್ಬ ಫುಡ್ ಡೆಲಿವರಿ ಮಾಡುವ ಹುಡುಗನ ಕತೆ. ಜತೆಗೆ ತಾಯಿ ಮತ್ತು ಮಗನ ಸೆಂಟಿಮೆಂಟ್, ಪ್ರೇಯಸಿಗಾಗಿ ಎದುರು ನೋಡುತ್ತಿರುವ ಪ್ರೇಮಿ, ಒಂದು ಕೊಲೆ, ಅದಕ್ಕೆ ನಾಲ್ಕು ಮುಖಗಳು. ಹೀರೋ ಯಾವ ದಿಕ್ಕಿನಲ್ಲಿ ಪ್ರಯಾಣಿಸುತ್ತಾನೆ ಎಂಬುದು ಚಿತ್ರದ ತಿರುವು.
ಚಿತ್ರದಲ್ಲಿ ನಿಮಗೆ ಇಷ್ಟವಾಗಿದ್ದೇನು?
ನನ್ನ ಲುಕ್ಕು. ಚಿತ್ರದ ಲಾಂಚ್ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಬಂದಿದ್ದರು. ಅವರು ನನ್ನ ನೋಡಿ ನೀನೇನಾ ಸಂತೋಷ್ ಎಂದು ಅಚ್ಚರಿಯಿಂದ ಕೇಳಿದರು. ಆ ಮಟ್ಟಿಗೆ ನಾನು ಬದಲಾಗಿದ್ದೆ.
ಈಗ ಸಿನಿಮಾ ಬಿಡುಗಡೆ ಆಗಿದ್ದು, ಪ್ರೇಕ್ಷಕರ ಸ್ಪಂದನೆ ಹೇಗಿದೆ?
ನಿರೀಕ್ಷೆಯಂತೆ ಜನ ಚಪ್ಪಾಳೆ ತಟ್ಟುತ್ತಿದ್ದಾರೆ. ಎಲ್ಲರೂ ಚಿತ್ರದ ಕ್ಲೈಮ್ಯಾಕ್ಸ್ ಮೆಚ್ಚಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಎರಡು ರೀತಿಯ ಕ್ಲೈಮ್ಯಾಕ್ಸ್ಗಳು ಇವೆ. ಇದೇ ಚಿತ್ರದ ಹೈಲೈಟ್. ಇದೊಂದು ನೈಜ ಕತೆಯ ಮಾಸ್ ಆ್ಯಕ್ಷನ್ ಸಿನಿಮಾ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.