ನನ್ನನ್ನು ಹೊಸದಾಗಿ ತೋರಿಸುವ ಚಿತ್ರಗಳಿಗೆ ಸ್ವಾಗತ: ಶಿವರಾಜ್‌ಕುಮಾರ್

By Kannadaprabha NewsFirst Published Jul 12, 2021, 11:02 AM IST
Highlights

ಜು.12 ನಟ ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬ. ಚಿತ್ರಗಳ ಶೂಟಿಂಗ್‌ನಲ್ಲಿ ಬ್ಯುಸಿಯಲ್ಲಿರುವ ಶಿವಣ್ಣ ಜತೆಗಿನ ಮಾತುಕತೆ ಇಲ್ಲಿದೆ.
 

ಆರ್. ಕೇಶವಮೂರ್ತಿ

ಈ ವರ್ಷವೂ ಅಭಿಮಾನಿಗಳ ಜತೆಗೆ ಹುಟ್ಟು ಹಬ್ಬ ಮಾಡಿಕೊಳ್ಳುತ್ತಿಲ್ಲವಲ್ಲ?

ಸದ್ಯದ ಪರಿಸ್ಥಿತಿ ಇದಕ್ಕೆ ಕಾರಣ. ಬೇಸರ ಇದೆ. ಅಭಿಮಾನಿಗಳು ಯಾವುದೇ ಪ್ರತಿಫಲ ಇಲ್ಲದೆ ನನ್ನ ಹೆಸರಿನಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಇಂಥ ಅಭಿಮಾನಿಗಳನ್ನು ಪಡೆದುಕೊಂಡಿರುವುದು ನನ್ನ ಪುಣ್ಯ. ಅವರನ್ನು ಈ ವರ್ಷವೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಪ್ರೀತಿ ಯಾವತ್ತೂ ಇರುತ್ತದೆ.

ಲಾಕ್‌ಡೌನ್ ನಂತರ ಶೂಟಿಂಗ್‌ನಲ್ಲಿ ತುಂಬಾ ಬ್ಯುಸಿ ಆಗಿದ್ದೀರಿ ಅನಿಸುತ್ತದೆ?

ಕೆಲಸವೇ ಮುಖ್ಯ ಅಂದುಕೊಂಡಿರುವ ವ್ಯಕ್ತಿ. ಹೀಗಾಗಿ ಒಪ್ಪಿಕೊಂಡಿರುವ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದೇನೆ. ಸದ್ಯಕ್ಕೆ ‘ಶಿವಪ್ಪ’ ಚಿತ್ರಕ್ಕೆ ಫೈನಲ್ ಶೂಟಿಂಗ್ ನಡೆಯುತ್ತಿದೆ. ಈಗಷ್ಟೆ ಧನಂಜಯ್ ಮತ್ತು ನನ್ನ ಕಾಂಬಿನೇಷನ್‌ನ ಫೈಟಿಂಗ್ ದೃಶ್ಯಗಳು ಚಿತ್ರೀಕರಣ ಆಗಿವೆ.

ಸಿನಿ ಕಾರ್ಮಿಕರ ನೆರವಿಗೆ ನಿಂತ ಡಾ.ಶಿವರಾಜ್‌ಕುಮಾರ್! 

ಈ ಲಾಕ್‌ಡೌನ್ ಸಮಯದಲ್ಲಿ ಎಷ್ಟು ಕತೆ ಕೇಳಿದ್ದೀರಿ?

ತುಂಬಾ ಕತೆ ಕೇಳಿದ್ದೇನೆ. ಎಲ್ಲರಿಗೂ ನನ್ನ ಹೊಸ ರೀತಿಯಲ್ಲಿ ತೋರಿಸಬೇಕೆಂಬ ಆಸೆ ಇದೆ. ಹೀಗೆ ನನ್ನ ಹೊಸದಾಗಿ ಪ್ರೆಸೆಂಟ್ ಮಾಡುವ ಚಿತ್ರಗಳಿಗೆ ನಾನು ಸದಾ ರೆಡಿ ಇರುತ್ತೇನೆ. ಎಸ್.ನಾರಾಯಣ್, ಹರ್ಷ, ಆರ್.ಚಂದ್ರು ಅವರ ಅಸೋಸಿಯೇಟ್ ಹಾಗೂ ‘ಮಮ್ಮಿ’ ಚಿತ್ರದ ನಿರ್ದೇಶಕ ಲೋಹಿತ್ ಸೇರಿದಂತೆ ಹಲವರ ಕತೆ ಕೇಳಿದ್ದೇನೆ. ಹೊಸದಾಗಿವೆ.

ಇದೇ ಮೊದಲ ಬಾರಿಗೆ ಗುಜರಾತ್, ಮುಂಬೈ, ಚೆನ್ನೈನಲ್ಲಿ ಅಭಿಮಾನಿಗಳು ನನ್ನ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಹುಟ್ಟುಹಬ್ಬದ ನೆಪದಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇಂಥ ಅಭಿಮಾನಿಗಳನ್ನು ಪಡೆದಿರುವ ನಾನೇ ಪುಣ್ಯವಂತ. ಅಭಿಮಾನಿಗಳ ಈ ಪ್ರೀತಿ ಮತ್ತು ಅಭಿಮಾನಕ್ಕೆ ನಾನು ಯಾವಾಗಲೂ ಋಣಿ.

ರಿಷಬ್ ಶೆಟ್ಟಿ ಜತೆಗೆ ಸಿನಿಮಾ ಮಾಡುತ್ತಿದ್ದೀರಲ್ಲ?

ಹೌದು. ಕತೆ ಚೆನ್ನಾಗಿದೆ. ಆ ಕಾರಣಕ್ಕೆ ನಾನು ಒಪ್ಪಿಕೊಂಡೆ. ಇನ್ನು ಜಯಣ್ಣ ಹಾಗೂ ಭೋಗೇಂದ್ರ ನಿರ್ಮಾಪಕರು ಎಂದ ಮೇಲೆ ಮೇಕಿಂಗ್‌ನಲ್ಲೂ ಕಡಿಮೆ ಮಾಡಲ್ಲ. ಬೇರೆ ರೀತಿಯ ಸಿನಿಮಾ ಆಗಲಿದೆ ಎನ್ನುವ ಭರವಸೆ ಇದೆ.

ನಿತ್ಯ 500 ಮಂದಿಗೆ ನಟ ಶಿವಣ್ಣ ಊಟ, ತಿಂಡಿ, ಚಹಾ ‘ಆಸರೆ’! 

ನೀವು ಈ ಕತೆ ಒಪ್ಪಲು ಮುಖ್ಯ ಕಾರಣ?

ಒಂದು ಹಂತಕ್ಕೆ ಹೋದ ಮೇಲೆ ಈ ರೀತಿ ಕತೆ ಮಾಡಕ್ಕೆ ಆಗಲ್ಲ. ಆದರೆ, ರಿಷಬ್ ಅವರೇ ಈ ಕತೆ ಚೆನ್ನಾಗಿರುತ್ತದೆ ಅಂತ ಹೇಳಿದರು. ಅವರು ಮಂಗಳೂರು ಶೈಲಿನಲ್ಲಿ ಕತೆ ಹೇಳುವುದೇ ಚೆನ್ನಾಗಿರುತ್ತದೆ ಕೇಳಕ್ಕೆ. ಮಾನವೀಯ ನೆಲೆಗಟ್ಟಿನಲ್ಲಿ ಮೂಡಿರುವ ಕತೆ. ನನಗೆ ಬಹಳ ಖುಷಿ ಆಯಿತು ಕತೆ ಕೇಳಿ.

ಚಿತ್ರರಂಗಕ್ಕೆ ಕಾಲಿಡುವ ಮುನ್ನ ಶಿವರಾಜ್‌ಕುಮಾರ್ ಕೊಟ್ಟ ಆಡಿಷನ್ ವಿಡಿಯೋ ವೈರಲ್! 

ಬೇರೆ ಯಾವ ಚಿತ್ರಗಳು ಇವೆ?

ತೆಲುಗಿನ ನಿರ್ಮಾಪಕ ಹಾಗೂ ನಿರ್ದೇಶಕರ ಚಿತ್ರ ಒಪ್ಪಿದ್ದೇನೆ. ಇದೊಂದು ಪಕ್ಕಾ ಪ್ರೇಮ ಕತೆಯ ಸಿನಿಮಾ. ಮಾಸ್ ಸಿನಿಮಾಗಳ ಸಾಲಿನಲ್ಲಿ ಬದಲಾವಣೆ ಇರಲಿ ಅಂತ ಒಪ್ಪಿರುವೆ. ಈ ಚಿತ್ರದ ನಂತರ ನಮ್ಮದೇ ಬ್ಯಾನರ್‌ನಲ್ಲಿ ವೇದ ಹೆಸರಿನ ಸಿನಿಮಾ ಸೆಟ್ಟೇರಲಿದೆ. ಈ ಚಿತ್ರಗಳ ನಡುವೆ ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾ ಇದೆ. ಒಟ್ಟು ಮೂರು ಹೊಸ ಸಿನಿಮಾಗಳು ಇವೆ.

ಬಿಡುವಿನ ವೇಳೆಯನ್ನು ಹೇಗೆ ಕಳೆದಿದ್ದೀರಿ?

ಕುಟುಂಬದ ಜತೆಗೆ. ಉಳಿದಂತೆ ಹತ್ತಾರು ಭಾಷೆಯ ಹಲವು ವೆಬ್ ಸರಣಿ ಹಾಗೂ ಸಿನಿಮಾಗಳನ್ನು ನೋಡುವ ಮೂಲಕ. ಇದರ ಜತೆಗೆ ಯಾರಾದರು ಬಂದು ಕತೆ ಹೇಳುತ್ತೇನೆ ಎಂದರೆ ಅವರ ಜತೆ ಕತೆ ಕೇಳುವುದು. ಆರೋಗ್ಯದ ದೃಷ್ಟಿಯಿಂದ ಸಂಜೆ ಹೊತ್ತು ವರ್ಕ್‌ಔಟ್, ಸಿನಿಮಾ, ಕತೆ, ಕುಟುಂಬ ಇಷ್ಟರಲ್ಲೇ ಸಮಯ ಕಳೆದಿದ್ದೇನೆ.

click me!