Rakshit Shetty: ನಂಬಿಕೆ ನಿಜವಾಗಿದೆ, ಬಲ ಬಂದಿದೆ: ಹೊಸ ಕನಸಿನ ಕತೆ ಹೇಳಿದ ಸಿಂಪಲ್ ಸ್ಟಾರ್‌

By Govindaraj SFirst Published Sep 2, 2022, 4:15 AM IST
Highlights

‘ನಾನು ಸೆವೆನ್‌ ಆಡ್ಸ್‌ ತಂಡ ಕಟ್ಟಿದಾಗ ನನಗೆ ಎಷ್ಟುಸಹಾಯ ಆಗುತ್ತದೆ ಎನ್ನುವುದಕ್ಕಿಂತ ಅದರ ಸದಸ್ಯರು ಒಳ್ಳೆಯ ನಿರ್ದೇಶಕರಾದರೆ ಚಿತ್ರರಂಗಕ್ಕೆ ಸಹಾಯವಾಗುತ್ತದೆ ಎಂಬ ನಂಬಿಕೆ ಇಟ್ಟುಕೊಂಡಿದ್ದೆ. ಇವತ್ತು ಎಲ್ಲವೂ ಚೆನ್ನಾಗಿ ಆಗಿ ದೇವರು ಬಲ ಕೊಟ್ಟಿದ್ದಾನೆ. ಸಿನಿಮಾ ಮಾಡುತ್ತಿದ್ದೇನೆ.’ 

‘ನಾನು ಸೆವೆನ್‌ ಆಡ್ಸ್‌ ತಂಡ ಕಟ್ಟಿದಾಗ ನನಗೆ ಎಷ್ಟುಸಹಾಯ ಆಗುತ್ತದೆ ಎನ್ನುವುದಕ್ಕಿಂತ ಅದರ ಸದಸ್ಯರು ಒಳ್ಳೆಯ ನಿರ್ದೇಶಕರಾದರೆ ಚಿತ್ರರಂಗಕ್ಕೆ ಸಹಾಯವಾಗುತ್ತದೆ ಎಂಬ ನಂಬಿಕೆ ಇಟ್ಟುಕೊಂಡಿದ್ದೆ. ಇವತ್ತು ಎಲ್ಲವೂ ಚೆನ್ನಾಗಿ ಆಗಿ ದೇವರು ಬಲ ಕೊಟ್ಟಿದ್ದಾನೆ. ಸಿನಿಮಾ ಮಾಡುತ್ತಿದ್ದೇನೆ.’ ರಕ್ಷಿತ್‌ ಶೆಟ್ಟಿ ನಿರಾಳವಾಗಿದ್ದರು. ಬ್ಯಾಚುಲರ್‌ ಪಾರ್ಟಿ, ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾದ ಮುಹೂರ್ತ ಮುಗಿಸಿಕೊಂಡು ಬಂದು ಕುಳಿತಿದ್ದರು. ನಿರ್ಮಾಪಕನ ಜವಾಬ್ದಾರಿ ಕುರಿತು ಮಾತನಾಡುತ್ತಿದ್ದರು. ‘ಪ್ರತಿಯೊಬ್ಬ ನಿರ್ದೇಶಕನಿಗೂ ಸಿನಿಮಾ ಮಾಡುವಾಗ ಅವರದೇ ಆಸೆ, ಆಕಾಂಕ್ಷೆ ಇರುತ್ತವೆ. 

ಆದರೆ ಕೆಲವೊಮ್ಮೆ ಅಂದುಕೊಂಡ ಹಾಗೆ ಆಗುವುದಿಲ್ಲ. ಫೈಟ್‌ ಸೇರಿಸಿ, ಹಾಡು ಹಾಕಿ ಅಂತೆಲ್ಲಾ ಒತ್ತಡ ಬರುತ್ತವೆ. ಬಹಳ ಸಲ ನಿರ್ಮಾಪಕರಿಗೆ ಸಿನಿಮಾ ಅರ್ಥ ಆಗಿರುವುದಿಲ್ಲ. ಅವರು ಆ ತರಹದ ಸಿನಿಮಾದ ನಿರ್ಮಾಪಕರಾಗಿರುವುದಿಲ್ಲ. ನಿರ್ಮಾಪಕರಿಗೇ ವಿಶ್ವಾಸ ಇಲ್ಲದಿದ್ದಾಗ ಇಡೀ ತಂಡಕ್ಕೆ ಬೇಸರವಾಗುತ್ತದೆ. ಹಾಗಾಗಬಾರದು ಅಂತಲೇ ಪರಂವಃ ಶುರು ಮಾಡಿದ್ದು. ನಮಗೆ ಆದ ಕೆಲವು ಅನುಭವಗಳು ಬೇರೆಯವರಿಗೆ ಆಗಬಾರದು ಎಂದು. ಚಿತ್ರರಂಗಕ್ಕೆ ಒಳ್ಳೆಯ ಮೇಕರ್‌ಗಳು ಬೇಕಾಗಿರುವ ಸಮಯ ಇದು. ಒಳ್ಳೆಯ ನಿರ್ದೇಶಕನಿಗೂ ಒಳ್ಳೆಯ ಸಮಯ. 

ಸಾಯಿ ಪಲ್ಲವಿ 'ಗಾರ್ಗಿ'ಗೆ ರಕ್ಷಿತ್ ಸಾಥ್; ಹೃದಯ ಕದಲಿಸಿದ ಸಿನಿಮಾ ಎಂದ ಸಿಂಪಲ್ ಸ್ಟಾರ್

ಚೆನ್ನಾಗಿ ಸಿನಿಮಾ ಮಾಡಿದರೆ ಓಟಿಟಿ, ಟಿವಿ, ಡಬ್ಬಿಂಗ್‌ನಿಂದಲೇ ದುಡ್ಡು ಬರುತ್ತದೆ. ಒಳ್ಳೆಯ ಸಿನಿಮಾ ಮಾಡುವುದಕ್ಕೆ ಏನೇನು ಸಾಧ್ಯವೋ ಅದನ್ನೆಲ್ಲವನ್ನೂ ನಾನು ಮಾಡುತ್ತಿದ್ದೇನೆ’ ಎಂದರು. ಪರಂವಃ ಎಂಬ ಕನಸನ್ನು ಇನ್ನೂ ದೊಡ್ಡದಾಗಿ ವಿಸ್ತರಿಸುವ ಆಸೆ ರಕ್ಷಿತ್‌ ಶೆಟ್ಟಿ ಅವರಿಗಿದೆ. ‘ಕಿರಿಕ್‌ ಪಾರ್ಟಿ ಸಿನಿಮಾ ನಂತರ ನಮ್ಮ ತಂಡದವರಿಗೆ ಮೊದಲು ನಿಮಗೆ ನೀವು ರೆಡಿ ಅನ್ನಿಸಬೇಕು. ನೀವು ರೆಡಿ ಇದ್ದರೆ ಹೇಳಿ ಎಂದಿದ್ದೆ. ಕಿರಣ್‌ರಾಜ್‌ ಸಿನಿಮಾ ಮಾಡಿದರು. ಈಗ ಅಭಿಜಿತ್‌, ಚಂದ್ರಜಿತ್‌ ಸಿನಿಮಾ ಮಾಡುತ್ತಿದ್ದಾರೆ. ಅನಿರುದ್ಧ ಕೊಡ್ಗಿ ಸ್ಕ್ರಿಪ್ಟ್ ರೆಡಿ ಇದೆ. ಅವರ ಸಿನಿಮಾ ಕೂಡ ಮೂರ್ನಾಲ್ಕು ತಿಂಗಳಲ್ಲಿ ಶುರುವಾಗಬಹುದು. 

ಅದಲ್ಲದೇ ವೆಬ್‌ ಸೀರೀಸ್‌ ಮಾಡುವ ಆಲೋಚನೆಯೂ ಇದೆ. ಎಲ್ಲವೂ ಸರಿ ಇದ್ದು, ಚೆನ್ನಾಗಿ ಇರುವವರೆಗೆ ವರ್ಷಕ್ಕೆ 10 ಸಿನಿಮಾಗಳನ್ನೂ ಮಾಡಬಹುದು. ಒಟ್ಟಾರೆ ಪರಂವಾಃ ಸಂಸ್ಥೆಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸಬೇಕು. ಇದಲ್ಲದೇ ಪರಂವಾಃ ಸ್ಪಾಟ್‌ಲೈಟ್‌ ಹೆಸರಿನಲ್ಲಿ ಬೇರೆ ತಂಡಗಳಿಗೆ ಪ್ರೋತ್ಸಾಹ ನೀಡುವ ಕೆಲಸ ನಡೆಯುತ್ತಿದೆ. ರು.1 ಕೋಟಿಗೂ ಕಡಿಮೆ ಬಜೆಟ್‌ನ ಚಿತ್ರಗಳಿಗೆ ಅಲ್ಲಿ ಜಾಗವಿದೆ’ ಎನ್ನುತ್ತಾರೆ ರಕ್ಷಿತ್‌. ಮುಂದಿನ ಸಿನಿಮಾಗಳ ಕುರಿತಂತೆ ಮಾತನಾಡುತ್ತಾ, ‘ಸಪ್ತಸಾಗರದಾಚೆ ಎಲ್ಲೋ ಚಿತ್ರಕ್ಕೆ 50 ದಿನ ಚಿತ್ರೀಕರಣ ಬಾಕಿ ಇದೆ. 

777 ಚಾರ್ಲಿಯಿಂದ 150 ಕೋಟಿ ಲಾಭ: ಶೇ. 15ರಷ್ಟು ಹಂಚಿದ ರಕ್ಷಿತ್ ಶೆಟ್ಟಿ

ಅದನ್ನು ಕನ್ನಡ, ತಮಿಳು, ಮಲಯಾಳಂ, ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡುವ ಆಲೋಚನೆ ಇದೆ. ಹಿಂದಿಯಲ್ಲಿ ಬಿಡುಗಡೆ ಮಾಡಲು ಪ್ರಚಾರಕ್ಕೆ ತುಂಬಾ ಹಣ ಬೇಕು. ಅಲ್ಲಿ ಇಂಥಾ ಸಿನಿಮಾ ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ ಹಿಂದಿಯಲ್ಲಿ ಬಿಡುಗಡೆ ಮಾಡುತ್ತಿಲ್ಲ. ನವೆಂಬರ್‌ನಿಂದ ರಿಚರ್ಡ್‌ ಆ್ಯಂಟನಿ ಸಿನಿಮಾದ ಕೆಲಸ ಶುರುವಾಗುತ್ತದೆ. ಇಲ್ಲಿ ಉಳಿದವರು ಕಂಡಂತೆ ಥರ ಇರುವುದಿಲ್ಲ. ಹೊಸದು ಮತ್ತು ಹಳೆಯದು ನೇರವಾಗಿ ಕತೆ ಹೇಳುತ್ತೇನೆ’ ಎಂದು ಹೇಳಿ ರಕ್ಷಿತ್‌ ಮಾತು ನಿಲ್ಲಿಸಿದರು. ಮಾತು ನಿಂತರೂ ದನಿ ಉಳಿಯುತ್ತದೆ. ರಕ್ಷಿತ್‌ ಶೆಟ್ಟಿಕನಸುಗಳು ಮುಂದುವರಿಯುತ್ತವೆ.

click me!