
ನವದೆಹಲಿ(ಜೂ.07): ಭಾರತದ ಬ್ಯಾಂಕ್ ಮತ್ತು ಕರೆನ್ಸಿಯನ್ನು ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಪೂರೈಕೆ ಜಾಲದ ಪ್ರಮುಖ ಭಾಗವಾಗಿ ಮಾಡುವ ಅವಶ್ಯಕತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಅಲ್ಲದೆ ಹಣಕಾಸು ಸಂಸ್ಥೆಗಳು ನಿರಂತರವಾಗಿ ಉತ್ತಮ ಹಣಕಾಸು ಮತ್ತು ಕಾರ್ಪೊರೆಟ್ ಆಡಳಿತಕ್ಕೆ ಒತ್ತು ನೀಡಬೇಕು ಎಂದು ಕರೆಕೊಟ್ಟಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೆಟ್ ಸಚಿವಾಲಯ ಹಮ್ಮಿಕೊಂಡಿರುವ ವಿಶೇಷ ಸಪ್ತಾಹ ಯೋಜನೆಗೆ ಸೋಮವಾರ ಇಲ್ಲಿ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ ‘ಭಾರತ ಈಗಾಗಲೇ ಹಣಕಾಸು ಒಳಗೊಳ್ಳುವಿಕೆಯ ಹಲವು ವೇದಿಕೆಗಳನ್ನು ಸೃಷ್ಟಿಸಿದೆ. ಇಂಥ ವೇದಿಕೆಗಳ ಗರಿಷ್ಠ ಸದ್ಭಳಕೆ ನಿಟ್ಟಿನಲ್ಲಿ ಅವುಗಳ ಕುರಿತು ಅರಿವು ಮೂಡಿಸುವ ಅವಶ್ಯಕತೆ ಇದೆ. ಜೊತೆಗೆ ಇಂಥ ಹಣಕಾಸು ಒಳಗೊಳ್ಳುವಿಕೆಯ ಪರಿಹಾರಗಳನ್ನು ಜಾಗತಿಕ ಮಟ್ಟದಲ್ಲೂ ವಿಸ್ತರಿಸುವ ಕೆಲಸ ಆಗಬೇಕಿದೆ’ ಕರೆ ಕೊಟ್ಟಿದ್ದಾರೆ.
‘ನಮ್ಮ ಬ್ಯಾಂಕ್ಗಳು ಮತ್ತು ಕರೆನ್ಸಿಯನ್ನು ಜಾಗತಿಕ ವಹಿವಾಟು ಮತ್ತು ಪೂರೈಕೆ ಜಾಲದ ಪ್ರಮುಖ ಭಾಗವನ್ನಾಗಿ ಮಾಡುವುದು ಹೇಗೆ ಎಂಬುದರ ಬಗ್ಗೆಯೂ ನಾವು ಒತ್ತು ನೀಡಬೇಕಿದೆ. ಏನಾನನ್ನಾದರೂ ಸಾಧಿಸಲು ಭಾರತ ಸಾಮೂಹಿಕವಾಗಿ ನಿರ್ಧರಿಸಿದರೆ, ಆಗ ಭಾರತ ಇಡೀ ವಿಶ್ವಕ್ಕೆ ಒಂದು ಹೊಸ ಭರವಸೆಯಾಗಿ ಹೊರಹೊಮ್ಮಬಲ್ಲದು ಎಂಬುದನ್ನು ನಾವು ಕಳೆದ 8 ವರ್ಷಗಳಲ್ಲಿ ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದ್ದೇವೆ. ಇಂದು, ಇಡೀ ವಿಶ್ವ ನಮ್ಮನ್ನು ಕೇವಲ ಓರ್ವ ಬಳಕೆದಾರನಾಗಿ ನೋಡದೆ, ಭಾರೀ ಬದಲಾವಣೆ, ಸೃಜನಾತ್ಮಕ, ನವೀನ ವ್ಯವಸ್ಥೆಯ ಭರವಸೆಯೆಂದು ಗಮನಿಸುತ್ತಿದೆ’ ಎಂದು ಹೇಳಿದರು.
ಜನ ಸಮರ್ಥ ಪೋರ್ಟಲ್:
ಇದೇ ವೇಳೆ ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ರೈತರಿಗೆ ಸಾಲ ನೀಡುವ 13 ಸರ್ಕಾರಿ ಯೋಜನೆಗಳ ಕುರಿತು ಒಂದೇ ಕಡೆ ಮಾಹಿತಿ ನೀಡುವ ಜನ ಸಮರ್ಥ ಪೋರ್ಟಲ್ಗೆ ಮೋದಿ ಚಾಲನೆ ನೀಡಿದರು.
ಜನಾಡಳಿತ:
ಈ ಹಿಂದೆಲ್ಲಾ ಸರ್ಕಾರದ ಕೇಂದ್ರೀಕೃತ ಆಡಳಿತ ಜಾರಿಯಲ್ಲಿದ್ದು, ಅದರ ಪರಿಣಾಮವನ್ನು ದೇಶ ಅನುಭವಿಸಿದೆ. ಆದರೆ ಇದೀಗ ನಾವು ಜನ ಕೇಂದ್ರೀಕೃತ ಆಡಳಿತ ವ್ಯವಸ್ಥೆ ರೂಪಿಸಿದ್ದೇವೆ. ಈ ಹಿಂದೆ ಸರ್ಕಾರಿ ಯೋಜನೆಗಳ ಲಾಭದ ಪ್ರಯೋಜನ ಪಡೆಯಲು ಜನರೇ ಸರ್ಕಾರದ ಬಳಿ ಹೋಗಬೇಕಿತ್ತು. ಆದರೆ ಇದೀಗ ಸರ್ಕಾರವೇ ಯೋಜನೆಯನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುತ್ತಿದೆ. ಜನ ಸಮರ್ಥ ಪೋರ್ಟಲ್ ಇದಕ್ಕೊಂದು ಉದಾಹರಣೆ. ಇದು ವಿದ್ಯಾರ್ಥಿಗಳು, ರೈತರು, ಉದ್ಯಮಿಗಳ ಜೀವನವನ್ನು ಮತ್ತಷ್ಟುಸರಳಗೊಳಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
Personal Finance: ಸುಲಭವಾಗಿ ಸಾಲ ಸಿಗುತ್ತೆ ಅಂತಾ ಕಂಡ ಕಂಡಲ್ಲಿ ಸಾಲ ತೆಗೆದ್ಕೊಳ್ಬೇಡಿ
ಇದೇ ವೇಳೆ ನಮ್ಮ ಸರ್ಕಾರ ಜಾರಿಗೆ ಬಂದ ಮೇಲೆ 30000ಕ್ಕೂ ಹೆಚ್ಚು ಅನುಸರಣೆಗಳನ್ನು, 1500ಕ್ಕೂ ಹೆಚ್ಚು ಬೇಡದ ಕಾನೂನು ರದ್ದುಪಡಿಸಲಾಗಿದೆ, ಜಿಎಸ್ಟಿ ತೆರಿಗೆ ಪದ್ಧತಿ ಸರಳೀಕರಣದ ಕಾರಣ ಪ್ರತಿ ತಿಂಗಳು 1 ಲಕ್ಷ ಕೋಟಿ ರು.ಗಿಂತ ಹೆಚ್ಚಿನ ಜಿಎಸ್ಟಿಸಂಗ್ರಹ ಸಾಮಾನ್ಯವಾಗಿದೆ, ಇಪಿಎಫ್ಒ ನೋಂದಣಿಯಲ್ಲೂ ಹೆಚ್ಚಳವಾಗಿದೆ, ಜಿಇಎಂ ಪೋರ್ಟಲ್ ಮೂಲಕ 1 ಲಕ್ಷ ಕೋಟಿ ರು.ಗೂ ಹೆಚ್ಚಿನ ಖರೀದಿ ನಡೆಸಲಾಗಿದೆ, ದೇಶದಲ್ಲೀಗ 70000ಕ್ಕೂ ಹೆಚ್ಚು ಸ್ಟಾರ್ಟಪ್ಗಳಿವೆ, ಆತ್ಮನಿರ್ಭರ ಭಾರತ ಮತ್ತು ವೋಕಲ್ ಫಾರ್ ಲೋಕಲ್ ಯೋಜನೆಗಳಿಗೆ ಜನರು ಭಾವನಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮೋದಿ ಹೇಳಿದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.