ಎರಡೇ ತಿಂಗಳಲ್ಲಿ ಚಾಮರಾಜನಗರ ಜಿಲ್ಲೆಯ ಕೈಗಾರಿಕಾ ಚಿತ್ರಣವೇ ಬದಲು: ಸಚಿವ ಸೋಮಣ್ಣ

By Kannadaprabha NewsFirst Published Jul 13, 2022, 2:51 PM IST
Highlights

*  ಜಿಲ್ಲೆಯ ಕೈಗಾರಿಕೆಗಳ ಅಭಿವೃದ್ಧಿಗೆ ಅಗತ್ಯ ಕ್ರಮ
*  ಕೈಗಾರಿಕೆಗಳು ಹೆಚ್ಚು ಸ್ಥಾಪನೆಯಾಗಿ ಜಿಲ್ಲೆಯ ಜನರಿಗೆ ಉದ್ಯೋಗ ಅವಕಾಶಗಳು ಲಭಿಸಬೇಕಿದೆ
*  ಈ ನಿಟ್ಟಿನಲ್ಲಿ ಪ್ರಥಮ ಆದ್ಯತೆ ನೀಡಲಿದ್ದು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು 

ಚಾಮರಾಜನಗರ(ಜು.13):  ಮುಂದಿನ ಎರಡು ತಿಂಗಳಲ್ಲಿ ಜಿಲ್ಲೆಯ ಕೈಗಾರಿಕಾ ಪ್ರದೇಶದ ಚಿತ್ರಣವೇ ಬದಲಾಗಲಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳು ಒದಗಿಸುವ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿರುವ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಿರುವ ಎಲ್ಲಾ ಮೂಲ ಸೌಕರ್ಯ ಹಾಗೂ ಇನ್ನಿತರ ಅಗತ್ಯ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ತಿಳಿಸಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕೈಗಾರಿಕಾ ನಿವೇಶನಗಳ ಅಭಿವೃದ್ಧಿ ಹೊಸ ಕೈಗಾರಿಕೆಗಳ ಸ್ಥಾಪನೆ ಹಾಗೂ ಉದ್ಯೋಗ ಸೃಷ್ಠಿ ಕುರಿತು ಹಿರಿಯ ಅ​ಧಿಕಾರಿಗಳು ಹಾಗೂ ಉದ್ಯಮ ಸಂಸ್ಥೆಗಳ ಪ್ರತಿನಿಧಿ​ಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಬದನಗುಪ್ಪೆ- ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶ ವಿಸ್ತಾರವಾಗಿದ್ದು ಇಲ್ಲಿ ಕೈಗಾರಿಕಾ ಕಾರ್ಯ ಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕಿದೆ. ಕೈಗಾರಿಕೆಗಳು ಹೆಚ್ಚು ಸ್ಥಾಪನೆಯಾಗಿ ಜಿಲ್ಲೆಯ ಜನರಿಗೆ ಉದ್ಯೋಗ ಅವಕಾಶಗಳು ಲಭಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಥಮ ಆದ್ಯತೆ ನೀಡಲಿದ್ದು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಉದ್ದೇಶದಿಂದಲೇ ಇಂದಿನ ಮಹತ್ವದ ಸಭೆ ನಡೆಸಲಾಗುತ್ತಿದೆ ಎಂದರು.

ಶ್ರೀನಿವಾಸ ಪ್ರಸಾದ್‌ ವಿಚಾರಣೆಗೆ ಹೈಕೋರ್ಟ್ ತಡೆ

ಈಗಾಗಲೇ ಬದನಗುಪ್ಪೆ- ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್‌, ನೀರು, ರಸ್ತೆ ಇನ್ನಿತರ ಸೌಲಭ್ಯ ಲಭ್ಯವಿದೆ. ಇವುಗಳನ್ನು ಮತ್ತಷ್ಟು ಸಮರ್ಪಕವಾಗಿ ಕಲ್ಪಿಸುವ ದಿಸೆಯಲ್ಲಿ ಅ​ಧಿಕಾರಿಗಳು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ವಿದ್ಯುತ್‌ ಅಡಚಣೆಗೆ ಅವಕಾಶವಾಗಬಾರದು. ಕೈಗಾರಿಕೆಗೆ ಪೂರಕವಾಗಿರುವ ಸೌಲಭ್ಯಗಳನ್ನು ಒದಗಿಸುವ ಸಂಬಂಧ ನೋಡಿಕೊಳ್ಳಲು ಹಾಗೂ ಸಮಸ್ಯೆಗಳನ್ನು ಪರಿಹರಿಸಲು ನೋಡಲ್‌ ಅ​ಧಿಕಾರಿಯೊಬ್ಬರನ್ನು ನೇಮಿಸುವಂತೆ ತಿಳಿಸಿದರು.

ಕಚೇರಿ ತೆರೆಯಲು ಸೂಚನೆ:

ಚಾಮರಾಜನಗರದಲ್ಲಿಯೇ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಮಗದ ಕಚೇರಿಗಳನ್ನು ತೆರೆಯಬೇಕು. ಈಗಾಗಲೇ ಕೈಗಾರಿಕೆ ಸ್ಥಾಪನೆಗಾಗಿ ಭೂಮಿ ಖರೀದಿಸಿರುವವರಿಗೆ ಕೈಗಾರಿಕಾ ಘಟಕ ಉದ್ಯಮಗಳನ್ನು ಸ್ಥಾಪಿಸುವ ಸಂಬಂಧ ಸುತ್ತೋಲೆಯನ್ನು ಅ​ಧಿಕಾರಿಗಳು ಹೊರಡಿಸಬೇಕು ಎಂದು ಸಚಿವರು ಸೂಚಿಸಿದರು.

ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆ ಹಾಗೂ ಅಭಿವೃದ್ಧಿ ಸಂಬಂಧ ಆ. 5 ಅಥವಾ 6ರಂದು ಸಭೆ ನಿಗದಿ ಮಾಡಲಾಗುವುದು. ಈ ಸಭೆಯಲ್ಲಿ ಇನ್ನಷ್ಟುವಿವರವಾಗಿ ಕೈಗಾರಿಕೆಗಳ ಪ್ರಗತಿ ಕುರಿತು ಚರ್ಚೆ ನಡೆಸಿ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಗುಂಡ್ಲುಪೇಟೆ ಕೈಗಾರಿಕಾ ಪ್ರದೇಶಕ್ಕೆ ಅಗತ್ಯವಿರುವ ನೀರು ಇನ್ನಿತರ ಸೌಕರ್ಯಗಳನ್ನು ಒದಗಿಸಲು ಸೂಕ್ತ ಕ್ರಮಗಳನ್ನು ವಹಿಸಬೇಕು ಎಂದರು.

ಗ್ರಾನೈಟ್‌ ಪಾರ್ಕ್ ಸ್ಧಾಪನೆಗೆ ಸೂಚನೆ:

ಗ್ರಾನೈಟ್‌ ಪಾರ್ಕ್ ಸ್ಥಾಪನೆಗೂ ಜಿಲ್ಲೆಯಲ್ಲಿ ಉತ್ತಮ ಅವಕಾಶವಿದ್ದು ಇತರೆ ರಾಜ್ಯಗಳಲ್ಲಿ ಸ್ಥಾಪನೆಯಾಗಿರುವ ಈ ಬಗೆಯ ಉದ್ಯಮಗಳನ್ನು ಅಧ್ಯಯನ ಮಾಡಬೇಕು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅ​ಧಿಕಾರಿಗಳು ಈ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ತರಬೇತಿ ಮತ್ತು ಉಪಕರಣಾಗಾರ (ಜಿಟಿಟಿಸಿ) ಚಾಮರಾಜನಗರದಲ್ಲಿಯೂ ಸ್ಥಾಪನೆಯಾಗಬೇಕು. ಉದ್ಯಮಗಳಿಗೆ ಅಗತ್ಯವಿರುವ ಹಣಕಾಸು ನೆರವು ದೊರೆಯಲು ಬ್ಯಾಂಕ್‌ ಅ​ಧಿಕಾರಿಗಳ ಸಭೆ ಕರೆಯಬೇಕು. ಒಟ್ಟಾರೆ ಜಿಲ್ಲೆಯಲ್ಲಿ ಹೆಚ್ಚು ಕೈಗಾರಿಕೆ ಉದ್ದಿಮೆಗಳ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟು ಉದ್ಯೋಗ ಅವಕಾಶಗಳಿಗೆ ನೆರವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ತಿಳಿಸಿದರು.

ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ಕೈಗಾರಿಕಾ ಪ್ರದೇಶದಲ್ಲಿ ರಸ್ತೆ, ವಿದ್ಯುತ್‌, ನೀರು ಸೌಕರ್ಯ ಒದಗಿಸಲಾಗಿದೆ. ಇಲ್ಲಿ ಆಸ್ಪತ್ರೆ, ಪೊಲೀಸ್‌ ಠಾಣೆ, ಅಗ್ನಿಶಾಮಕ ಠಾಣೆಯಂತಹ ಸೌಕರ್ಯಗಳನ್ನು ಒದಗಿಸಬೇಕಿದೆ ಎಂದರು.

ಶಾಸಕರಾದ ಸಿ.ಎಸ್‌. ನಿರಂಜನ್‌ಕುಮಾರ್‌ ಅವರು ಮಾತನಾಡಿ ಗುಂಡ್ಲುಪೇಟೆ ಕೈಗಾರಿಕಾ ಪ್ರದೇಶವು ಸ್ಥಾಪನೆಯಾಗಿ ಹಲವು ವರ್ಷಗಳಾಗಿವೆ. ಇಲ್ಲಿಯೂ ನೀರು, ಇನ್ನಿತರ ಸೌಕರ್ಯಗಳನ್ನು ಕಲ್ಪಿಸಬೇಕಿದೆ. ಅ​ಧಿಕಾರಿಗಳು ಸೂಕ್ತ ಪರಿಹಾರೋಪಾಯಗಳಿಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.

ಚಾಮರಾಜನಗರ ಸಣ್ಣ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಎ.ಜಯಸಿಂಹ, ಪರಿಶಿಷ್ಟಜಾತಿ, ಪರಿಶಿಷ ಪಂಗಡಗಳ ಉದ್ಯಮಿ ಸಂಘಗಳ ಅಧ್ಯಕ್ಷ ಮಂಜುನಾಥ್‌ ಅವರು ಕೈಗಾರಿಕೋದ್ಯಮಿಗಳು, ಸಣ್ಣ ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಒದಗಿಸಬೇಕಿರುವ ಸೌಕರ್ಯಗಳ ಕುರಿತು ಸಭೆಯಲ್ಲಿ ಮಾತನಾಡಿದರು.

ಡೀಸಿ ಚಾರುಲತಾ ಸೋಮಲ್‌, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಶಿವಶಂಕರ್‌, ಜಿಪಂ ಸಿಇಒ ಕೆ.ಎಂ. ಗಾಯಿತ್ರಿ, ಎಸ್ಪಿ ಟಿ.ಪಿ. ಶಿವಕುಮಾರ್‌, ಎಎಸ್ಪಿ ಕೆ.ಎಸ್‌. ಸುಂದರ್‌ ರಾಜ್‌, ಎಡಿಸಿ ಎಸ್‌. ಕಾತ್ಯಾಯಿನಿದೇವಿ, ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್‌ ಮಹೇಶ್‌, ವಿಶೇಷ ಭೂಸ್ವಾ​ೕಧಿನಾಧಿ​ಕಾರಿ ಪ್ರಿಯದರ್ಶಿನಿ, ಹಿರಿಯ ಅಧಿ​ಕಾರಿ ಆನಂದ್‌, ಇಲಾಖೆಯ ಪ್ರತಿನಿ​ಧಿ ಪ್ರಭಾಕರ್‌, ಜಂಟಿ ನಿರ್ದೇಶಕ ಶಂಕರನಾರಾಯಣ, ಉಪನಿರ್ದೇಶಕ ರಾಜೇಂದ್ರಪ್ರಸಾದ್‌, ಉದ್ಯಮಗಳ ಪ್ರತಿನಿಧಿ​ಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಚಾಮರಾಜನಗರ ಬಹಳ ಇಚ್ಛಾಶಕ್ತಿಯಿಂದ ನಾವೆಲ್ಲರೂ ಒಗ್ಗಟ್ಟಿನಿಂದ ಅಭಿವೃದ್ಧಿ ಪರ ಯೋಚನೆ ಮಾಡಬೇಕಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಅನುದಾನ ಬಿಡುಗಡೆ ಮಾಡುವ ಭರವಸೆ ಇದೆ. ಜಿಲ್ಲೆಯಲ್ಲಿ ಕ್ವಾರಿ ಹೊಂದಿರುವ ಉದ್ಯಮಿಗಳು ಸ್ವತಃ ಕಾರ್ಖಾನೆ ತೆಗೆದು ಜಿಲ್ಲೆಯ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಡಿ ಅಂತ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.  

ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಜಲ ಸಿರಿ, ನೋಡು ಬಾ ಭರಚುಕ್ಕಿ ಜಲಪಾತದ ಸೊಬಗ

ಕೆಲ್ಲಂಬಳ್ಳಿ-ಬದನಗುಪ್ಪೆ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪಿಸಲು ಟಾಟಾದವರಿಗೆ 300 ಎಕರೆ ಆಫರ್‌ ಮಾಡಿದ್ದೇವೆ, ಚಾಮರಾಜನಗರ ಜಿಲ್ಲೆಯೇ ಮೊದಲ ಆಯ್ಕೆಯಾಗಿದ್ದು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಾಡಲಾಗುತ್ತಿದೆ. ಸಾಧ್ಯವಾದಷ್ಟುಕಾರ್ಖಾನೆ ಸ್ಥಾಪನೆ ಮಾಡುವವರಿಗೆ ಮಾತ್ರ ಲಭ್ಯವಿರುವ ನಿವೇಶನ ನೀಡಲು ಸೂಚಿಸಲಾಗಿದೆ ಅಂತ ಕೆಐಎಡಿಬಿ ಸಿಇಒ ಶಿವಶಂಕರ್‌ ತಿಳಿಸಿದ್ದಾರೆ. 

ರೈತರಿಂದ 23 ಲಕ್ಷಕ್ಕೆ ನಿವೇಶನ ಖರೀದಿಸಿ, ಉದ್ಯಮಿಗಳಿಗೆ 40 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಕೆಐಎಡಿಬಿ ಹಾಗೂ ಜಿಲ್ಲಾಡಳಿತ ವತಿಯಿಂದ ರಸ್ತೆ, ವಿದ್ಯುತ್‌, ಕುಡಿಯುವ ನೀರು ಹೊರತುಪಡಿಸಿ ಏನು ಸೌಲಭ್ಯ ಕಲ್ಪಿಸಿದ್ದೀರಿ. ಕೈಗಾರಿಕಾ ಪ್ರದೇಶಗಳಿಗೆ ಸಮಗ್ರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕಡೆ ಇಲಾಖೆ ಚಿಂತನೆ ನಡೆಸಬೇಕು ಅಂತ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದ್ದಾರೆ.  

ಕೆಲ್ಲಂಬಳ್ಳಿ-ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಸೂಕ್ತ ರಕ್ಷಣೆಯಿಲ್ಲ, ಕಾಡು ಪ್ರಾಣಿಗಳ ಹಾವಳಿಯೂ ಜಾಸ್ತಿಯಾಗಿದೆ. ಇಷ್ಟೇ ಅಲ್ಲದೆ ವಿದ್ಯುತ್‌ ಸಂಪರ್ಕ, ನೀರಿನ ಸೌಲಭ್ಯ, ರಸ್ತೆಗಳು, ಬ್ಯಾಂಕರ್ಸ್‌ ಸಮಸ್ಯೆಯಂತ ಸಾಕಷ್ಟುನ್ಯೂನ್ಯತೆಗಳಿದ್ದು, ಜಿಲ್ಲಾಡಳಿತ ಹಾಗೂ ಕೆಐಎಡಿಬಿ ಸೂಕ್ತ ಸಹಕಾರವಿಲ್ಲದೆ ಕೆಲವು ಮೈಸೂರಿನ ಉದ್ಯಮಿಗಳು ವಾಪಸ್‌ ಆಗಿದ್ದಾರೆ, ನಗರದಲ್ಲಿ ಕೆಐಎಡಿಬಿ ಕಚೇರಿ ನಿರ್ಮಾಣ ಆಗಬೇಕು ಅಂತ ಚಾಸಿಯಾ ಅಧ್ಯಕ್ಷ ಎ. ಜಯಸಿಂಹ ತಿಳಿಸಿದ್ದಾರೆ. 
 

click me!