
Business Desk:'ಟಾಟಾ' (TATA) ಈ ಹೆಸರು ಕೇಳಿದ್ರೇನೆ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಗೌರವದ ಜೊತೆಗೆ ಆತ್ಮೀಯ ಭಾವವೊಂದು ಮೂಡುತ್ತದೆ. ಇದಕ್ಕೆ ಕಾರಣ ಟಾಟಾ ಮನೆತನ ಈ ದೇಶಕ್ಕೆ ನೀಡಿರೋ ಕೊಡುಗೆ. ಬರೀ ಭಾರತೀಯ ಉದ್ಯಮ ರಂಗಕ್ಕಷ್ಟೇ ಅಲ್ಲ, ಈ ದೇಶದ ಅಭಿವೃದ್ಧಿಗೆ ಟಾಟಾ ಕುಟುಂಬ ನೀಡಿರೋ ಕೊಡುಗೆ ಅನನ್ಯ. ಇದನ್ನೆಲ್ಲ ನೆನಪಿಸಿಕೊಳ್ಳೋದಕ್ಕೆ ಕಾರಣವಿದೆ. ಇಂದು (ಮಾರ್ಚ್ 3) ಟಾಟಾ ಸಮೂಹದ (Tata Group) ಸಂಸ್ಥಾಪಕ (Founder) ಜೆಮ್ಶೆಡ್ ಜೀ ಟಾಟಾ (Jamsetji Tata) ಅವರ ಜನ್ಮದಿನ (Birthday).
1839ರ ಮಾರ್ಚ್ 3ರಂದು ಗುಜರಾತಿನ ನವ್ಸಾರಿ ಎಂಬಲ್ಲಿ ಜನಿಸಿದ ಜೆಮ್ಶೆಡ್ ಜೀ ಟಾಟಾ ಅವರ ಪೂರ್ಣ ಹೆಸರು ಜೆಮ್ಶೆಡ್ ಜೀ ನುಸ್ಸೆರ್ವಾಂಜಿ ಟಾಟಾ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಜೆಮ್ಶೆಡ್ ಜೀ ಅವರ ತಂದೆ ಪಾರ್ಸಿ ದೇವಾಲಯದ ಅರ್ಚಕರಾಗಿದ್ದರು. ಜೊತೆಗೆ ಚಿಕ್ಕ ಉದ್ಯಮ ಕೂಡ ನಡೆಸುತ್ತಿದ್ದರು. ಮುಂದೆ ಇವರ ಕುಟುಂಬ ನವ್ಸಾರಿಯಿಂದ ಮುಂಬೈಗೆ ವಲಸೆ ಬಂದ ಕಾರಣ ಜೆಮ್ಶೆಡ್ ಜೀ ಟಾಟಾ ಮುಂಬೈನಲ್ಲೇ ಶಿಕ್ಷಣ ಪೂರ್ಣಗೊಳಿಸಿದರು.
Indian Billionaire: ಭಾರತದಲ್ಲಿ ಏರಿದ ದೊಡ್ಡ ಕುಳಗಳ ಲೆಕ್ಕ!
ಭಾರತೀಯ ಉದ್ಯಮದ ಪಿತಾಮಹ
ಜೆಮ್ಶೆಡ್ ಜೀ ಟಾಟಾ ಅವರನ್ನು ಭಾರತೀಯ ಉದ್ಯಮದ ಪಿತಾಮಹ ಎಂದೇ ಕರೆಯಲಾಗುತ್ತದೆ. 1870ರಲ್ಲೇ ಜವಳಿ ಉದ್ಯಮ ಪ್ರಾರಂಭಿಸೋ ಮೂಲಕ ಜೆಮ್ಶೆಡ್ ಜೀ ಟಾಟಾ ತಮ್ಮ ಉದ್ಯಮ ಯಾನ ಪ್ರಾರಂಭಿಸುತ್ತಾರೆ. ಆ ಕಾಲದಲ್ಲೇ ಅವರು ಉಕ್ಕು ಹಾಗೂ ಇಂಧನ ಕೈಗಾರಿಕೆಗಳಿಗೆ ಭವಿಷ್ಯದಲ್ಲಿ ಬಹಳ ಬೇಡಿಕೆಯಿದೆ ಎಂಬುದನ್ನು ಅರಿತುಕೊಂಡಿದ್ದರು. ಇವರ ಈ ಮುಂದಾಲೋಚನೆಯೇ ಭಾರತದಲ್ಲಿ ಉಕ್ಕು ಹಾಗೂ ವಿದ್ಯುತ್ ಕೈಗಾರಿಕೆಗಳ ಬೆಳವಣಿಗೆಗೆ ಭದ್ರ ಅಡಿಪಾಯ ಒದಗಿಸಿತು. ಅಷ್ಟೇ ಅಲ್ಲ, ಭಾರತದಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಬುನಾದಿ ಕಲ್ಪಿಸೋ ಜೊತೆಗೆ ಕೈಗಾರೀಕರಣಗೊಂಡ ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಗೊಳ್ಳಲು ಮುಖ್ಯ ಕಾರಣವೂ ಆಯಿತು.ಜೇಮ್ ಶೇಡ್ ಪುರವನ್ನು ಭಾರತದ ಪ್ರಥಮ ಯೋಜನಾಬದ್ಧ ಕೈಗಾರಿಕಾ ನಗರವಾಗಿ ರೂಪಿಸಿದ ಕೀರ್ತಿ ಜೆಮ್ಶೆಡ್ ಜೀ ಟಾಟಾ ಅವರಿಗೆ ಸಲ್ಲುತ್ತದೆ.
ಭಾರತದ ಕೈಗಾರಿಕಾ ರಂಗದ ಕುರಿತು ದೂರದೃಷ್ಟಿ ಹೊಂದಿದ ಜೆಮ್ಶೆಡ್ ಜೀ ಟಾಟಾ ಅಂದು ಹುಟ್ಟುಹಾಕಿದ ಟಾಟಾ ಸಮೂಹ ಸಂಸ್ಥೆ ಇಂದು ಬೆಳೆದು ಹೆಮ್ಮಾರವಾಗಿದ್ದು, ಒಟ್ಟು 31 ಕಂಪೆನಿಗಳನ್ನೊಳಗೊಂಡಿದೆ. ಜೆಮ್ಶೆಡ್ ಜೀ ಟಾಟಾ ಅವರ ದೂರದೃಷ್ಟಿಯನ್ನು ಗಮನಿಸಿದ್ದ ಭಾರತದ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರನ್ನು 'ಜಗತ್ತಿನ ಕೈಗಾರಿಕಾ ರಂಗದ ಏಕ ವ್ಯಕ್ತಿ ಯೋಜನಾ ಆಯೋಗ' ಎಂದು ಕರೆದಿದ್ದರು.
ಟಾಟಾ ಕುಟುಂಬದೆಡೆಗೆ ಪ್ರತಿಯೊಬ್ಬ ಭಾರತೀಯನು ಪ್ರೀತಿ, ಗೌರವ ಹೊಂದಲು ಕಾರಣ ಬರೀ ಉದ್ಯಮ ರಂಗದ ಸಾಧನೆಯಷ್ಟೇ ಅಲ್ಲ, ಬದಲಿಗೆ ದೇಶದೆಡೆಗೆ ಅವರಿಗಿರೋ ಭಕ್ತಿ ಹಾಗೂ ಕಾಳಜಿ. ಜೆಮ್ಶೆಡ್ ಜೀ ಟಾಟಾ ಬರೀ ಉದ್ಯಮಿಯಷ್ಟೇ ಆಗಿರಲಿಲ್ಲ, ಬದಲಿಗೆ ಅವರೊಬ್ಬ ಅಪ್ಪಟ್ಟ ದೇಶಪ್ರೇಮಿ, ಮಾನವತಾವಾದಿ ಹಾಗೂ ಉನ್ನತ ಮೌಲ್ಯಗಳನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು.
GST Collection: ಶೇ. 18 ರಷ್ಟು ಏರಿಕೆ ಕಂಡ ಜಿಎಸ್ಟಿ ಸಂಗ್ರಹ
ಕೊಡುಗೈ ದಾನಿ
ಜೆಮ್ಶೆಡ್ ಜೀ ಟಾಟಾ ಪರೋಪಕಾರಿಯಾಗಿದ್ದರು. ಅವರ ಈ ಗುಣವನ್ನು ಅವರ ಕುಟುಂಬ ಇಲ್ಲಿಯ ತನಕ ಪಾಲಿಸಿಕೊಂಡು ಬಂದಿದೆ ಕೂಡ. ಇದಕ್ಕೆ ಪ್ರಸ್ತುತ ಟಾಟಾ ಸಮೂಹ ಸಂಸ್ಥೆ ಮುಖ್ಯಸ್ಥರಾಗಿರೋ ರತನ್ ಟಾಟಾ ಅವರೇ ನಿದರ್ಶನ. ಭಾರತ ಬಡತನದಿಂದ ಹೊರಬರಬೇಕೆಂದ್ರೆ ಯುವಜನರಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂಬ ಅಭಿಪ್ರಾಯವನ್ನು ಜೆಮ್ಶೆಡ್ ಜೀ ಟಾಟಾ ಹೊಂದಿದ್ದರು. ಈ ಯೋಚನೆಯೇ 1892ರಲ್ಲಿ ಜೆಎನ್ ಟಾಟಾ ದತ್ತಿ(Endowment) ನಿಧಿ ಸ್ಥಾಪನೆಗೆ ಕಾರಣವಾಯಿತು. ಬಹುಶಃ ಶಿಕ್ಷಣಕ್ಕಾಗಿ ನೆರವು ನೀಡೋ ಜಗತ್ತಿನ ಮೊಟ್ಟಮೊದಲ ಪ್ರಯತ್ನ ಇದಾಗಿರಬಹುದು. ಜಾತಿ, ಧರ್ಮದ ಹಂಗಿಲ್ಲದೆ ಭಾರತೀಯ ಪ್ರತಿಭೆಗಳಿಗೆ ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಜೆಎನ್ ಟಾಟಾ ದತ್ತಿ ನೆರವು ನೀಡಿತು. ಈ ಕಾರ್ಯವನ್ನು ಈ ಸಂಸ್ಥೆ ಮೂಲಕ ಟಾಟಾ ಕುಟುಂಬದ ಕುಡಿಗಳು ಇಂದಿನ ತನಕ ಮುಂದುವರಿಸಿಕೊಂಡು ಬಂದಿದ್ದಾರೆ.
ಶತಮಾನದ ಅತಿದೊಡ್ಡ ದಾನಿ
2021ರಲ್ಲಿ ಹುರೂನ್ ಮತ್ತು ಎಡೆಲ್ಗೀವ್ ಫೌಂಡೇಷನ್ ಸಿದ್ಧಪಡಿಸಿರುವ ಶತಮಾನದ ಅತಿದೊಡ್ಡ ದಾನಿಗಳ ಪಟ್ಟಿಯಲ್ಲಿ ಟಾಟಾ ಸಮೂಹದ ಸಂಸ್ಥಾಪಕರಾದ ಜೆಮ್ಶೆಡ್ ಜೀ ಟಾಟಾ ವಿಶ್ವದಲ್ಲೇ ನಂ.1 ಸ್ಥಾನದಲ್ಲಿದ್ದರು. ಜೆಮ್ಶೆಡ್ ಜೀ ಟಾಟಾ ಅವರು 1892ರಲ್ಲೇ ದಾನದ ಕೆಲಸ ಆರಂಭಿಸಿದ್ದರು. ಅಂದಿನಿಂದ ಇಂದಿನವರೆಗೆ ಟಾಟಾ ಸಮೂಹವು ಶಿಕ್ಷಣ, ಆರೋಗ್ಯ ಮತ್ತಿತರೆ ವಲಯಕ್ಕೆ ನೀಡಿರುವ ದಾನದ ಮೊತ್ತ 7.2 ಲಕ್ಷ ಕೋಟಿಗಿಂತಲೂ ಹೆಚ್ಚು. ಈ ಮೂಲಕ ಅದು ವಾರನ್ ಬಫೆಟ್ ಸೇರಿದಂತೆ ಇನ್ನಿತರ ವಿಶ್ವದ ಬೃಹತ್ ಕಂಪನಿಗಳಿಗಿಂತಲೂ ಮುಂದಿದೆ ಎಂದು ವಿಶ್ವದ 50 ಅತಿದೊಡ್ಡ ದಾನಿಗಳ ವರದಿಯಲ್ಲಿ ಹೇಳಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.