
ನವದೆಹಲಿ(ಅ.09): ನಷ್ಟದ ಸುಳಿಯಲ್ಲಿದ್ದ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾವನ್ನು(Air India) ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಟಾಟಾ ಸಮೂಹ(Tata Group), ಒಂದು ಗೆಲುವು ಸಾಧಿಸಿದೆ. ಆದರೆ ಆ ಗೆಲುವಿನೊಳಗೇ ಹಲವು ಸಮಸ್ಯೆಗಳ ಬೆಟ್ಟವೇ ಅಡಗಿರುವ ಕಾರಣ ಟಾಟಾ ಸಮೂಹಕ್ಕೆ(Tata Group) ನಿಜವಾದ ಪರೀಕ್ಷೆ ಆರಂಭವಾಗುವುದೇ ಇದೀಗ ಎಂದು ವಿಶ್ಲೇಷಿಸಲಾಗಿದೆ.
ಟಾಟಾ ಸಮೂಹ ತನ್ನ ಬಳಿ ಇರುವ ಅಪಾರ ಮಿಗತೆ ಹಣ ಬಳಸಿ, ಏರ್ ಇಂಡಿಯಾವನ್ನೇನೋ ಖರೀದಿಸಿದೆ. ಆದರೆ ಸರ್ಕಾರಿ ಮನಸ್ಥಿತಿಯ ಕಂಪನಿಯನ್ನು ಮರಳಿ ಸ್ಪರ್ಧಾತ್ಮಕ ಮನಸ್ಥಿತಿಗೆ ತಂದು ಅದನ್ನು ಲಾಭದ ಹಾದಿಯತ್ತ ನಡೆಸುವುದು ದೊಡ್ಡ ಸವಾಲು(Challenge).
ಟಾಟಾ ಗ್ರೂಪ್ ಪಾಲಾದ ಏರ್ ಇಂಡಿಯಾ ವಿಮಾನ ಸಂಸ್ಥೆ; ಭಾವುಕರಾದ ರತನ್ ಟಾಟಾ!
ಇದರ ಜೊತೆಗೆ ಏರ್ ಇಂಡಿಯಾದಲ್ಲಿ(Air India) ಆಗಬೇಕಿರುವ ಬದಲಾವಣೆಗಳು ಹುಡುಕಿದಷ್ಟು, ಬಗೆದಷ್ಟೂ ಸಿಗುತ್ತವೆ. ಉದಾಹರಣೆಗೆ, ಅಲ್ಲಿಯ ಸಿಬ್ಬಂದಿ ಮನಸ್ಥಿತಿ ಬದಲಾಗಬೇಕು, ಕೆಲಸಕ್ಕಿಂತ ಹಿರಿತನ ಮುಖ್ಯ ಎಂಬ ನೀತಿಯಲ್ಲಿ ಬದಲಾವಣೆ ಜಾರಿ ಆಗಬೇಕಿದೆ, ಕಂಪನಿಯ ನೀತಿಯಲ್ಲೇ ಸುಧಾರಣೆ ಕಂಡುಬರಬೇಕಿದೆ, ಉಚಿತ ಸೇವೆಗಳು ಬಂದ್ ಆಗಬೇಕಿದೆ, ಕಂಪನಿಯ ಐಟಿ, ಎಂಜಿನಿಯರಿಂಗ್ ವಿಭಾಗದಲ್ಲಿ ಹೊಸತನ ಕಾಣಬೇಕಿದೆ. ಹಲವು ಮಾರ್ಗಗಳನ್ನು ವಿಲೀನ ಮಾಡಿ ಅವುಗಳನ್ನು ಲಾಭದ ಹಾದಿಗೆ ತರಬೇಕಿದೆ. ಇವೆಲ್ಲಾ ತಕ್ಷಣಕ್ಕೆ ಕಂಪನಿಯ ಮುಂದಿನ ಸವಾಲುಗಳು.
ಜೊತೆಗೆ ಟಾಟಾ ಸಮೂಹ ಈಗಾಗಲೇ ಭಾರತದಲ್ಲಿ ಏರ್ ಏಷ್ಯಾ(Asia) ಮತ್ತು ವಿಸ್ತಾರಾ ಕಂಪನಿಗಳ ಮೂಲಕ ಸೇವೆ ನೀಡುತ್ತಿದೆ. ಈ ಎರಡು ಕಂಪನಿಗಳು ಸೇವೆ ನೀಡುವ ಮಾರ್ಗದಲ್ಲಿ ಏರ್ ಇಂಡಿಯಾದ ಮಾರ್ಗಗಳೂ ಇವೆ. ಹೀಗಾಗಿ ತನ್ನದೇ ಕಂಪನಿಗಳು ಪರಸ್ಪರ ಸ್ಪರ್ಧಿಸದಂತೆ ನೋಡಿಕೊಳ್ಳಬೇಕಿದೆ. ಅಥವಾ ಮೂರೂ ಕಂಪನಿಗಳನ್ನು ವಿಲೀನ ಮಾಡಿ ಬೃಹತ್ ಕಂಪನಿ ನಿರ್ಮಾಣದತ್ತ ಹೆಜ್ಜೆ ಇಡಬೇಕಿದೆ.
ಏರ್ ಇಂಡಿಯಾ ಸಂಸ್ಥೆ ಟಾಟಾ ಗ್ರೂಪ್ ಪಾಲಾಗಿಲ್ಲ ; ಸ್ಪಷ್ಟನೆ ನೀಡಿದ ಕೇಂದ್ರ!
ಇದೆಲ್ಲದರ ಜೊತೆಗೆ ಕಂಪನಿಯಲ್ಲಿನ ಅನಗತ್ಯ ಸಿಬ್ಬಂದಿ ತೆಗೆದುಹಾಕಬೇಕಿದೆ. ಬ್ರಿಟೀಷ್ ಏರ್ವೇಸ್ನಲ್ಲಿ(Birish Airways) ಒಂದು ವಿಮಾನಕ್ಕೆ ಸರಾಸರಿ 178, ಸಿಂಗಾಪುರ ಏರ್ಲೈನ್ಸ್ನಲ್ಲಿ 140, ಲುಫ್ತಾನ್ಸಾದಲ್ಲಿ 127 ಸಿಬ್ಬಂದಿಗಳು ಇದ್ದರೆ, ಏರ್ ಇಂಡಿಯಾದಲ್ಲಿ 221 ಸಿಬ್ಬಂದಿಗಳು ಇದ್ದಾರೆ. ಇದು ವಿಶ್ವದಲ್ಲೇ ಯಾವುದೇ ವಿಮಾನಯಾನ ಕಂಪನಿಯಲ್ಲಿ ಹೊಂದಿರುವ ಅತಿ ಹೆಚ್ಚು ಸಿಬ್ಬಂದಿ. ಈ ವಿಷಯ ನಿರ್ವಹಣೆ ಕೂಡಾ ಕಂಪನಿಯ ಪಾಲಿಗೆ ಅತಿದೊಡ್ಡ ಸಮಸ್ಯೆ.
ರತನ್ ಟಾಟಾ(Ratan Tat) ಭಾವುಕ ಪತ್ರ!
ಟಾಟಾ ಸನ್ಸ್ ಬಿಡ್ ಗೆದ್ದ ಬೆನ್ನಲ್ಲೇ ಟಾಟಾ ಗ್ರೂಪ್ ಮುಖ್ಯಸ್ಛ ರಚನ್ ಟಾಟಾ(Ratan Tata) ಸಂತಸ ಹಂಚಿಕೊಂಡಿದ್ದಾರೆ. ಇದೇ ವೇಳೆ ಭಾವುಕ ಪತ್ರವೊಂದನ್ನು ಬರೆದಿದ್ದಾರೆ. ಟಾಟಾ ಸಮೂಹ ಸಂಸ್ಥೆ ಏರ್ ಇಂಡಿಯಾ ಬಿಡ್ ಗೆದ್ದಿದೆ ಅನ್ನೋದು ಸಂತೋಷದ ವಿಚಾರ. ಏರ್ ಇಂಡಿಯಾವನ್ನು ಮತ್ತೆ ಕಟ್ಟುವ ಮಹತ್ತರ ಜವಾಬ್ದಾರಿಯನ್ನು ಟಾಟಾ ವಹಿಸಿಕೊಳ್ಳುತ್ತಿದೆ. ವಿಮಾನಯಾನದಲ್ಲಿ ಟಾಟಾ ಸಂಸ್ಥೆ ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧಿಯಾಗಿ ಬೆಳೆಯಲಿದೆ. ಭಾವನಾತ್ಮಕವಾಗಿ ಹೇಳುವಾದರೆ, ಒಂದು ಕಾಲದಲ್ಲಿ ಏರ್ ಇಂಡಿಯಾ ಆರ್ಜೆಡಿ ಟಾಟಾ(RJD Tata) ಒಡೆತನದಲ್ಲಿತ್ತು. ಈ ಮೂಲಕ ಏರ್ ಇಂಡಿಯಾ ಪ್ರತಿಷ್ಠಿತ ಕಂಪನಿಯಾಗಿ ಬೆಳೆದಿತ್ತು. ಕೈತಪ್ಪಿಹೋಗಿದ್ದ ವಿಮಾನಯಾನ ಸಂಸ್ಥೆಯನ್ನು ಮರಳಿ ಪಡೆಯುವಲ್ಲಿ ಟಾಟಾ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಆರ್ಜೆಡಿ ಟಾಟಾ ಇದ್ದರೆ ಸಂತಸ ಇಮ್ಮಡಿಯಾಗುತ್ತಿತ್ತು. ಈ ಸಂದರ್ಭದಲ್ಲಿ ನಾನು ಏರ್ ಇಂಡಿಯಾವನ್ನು ಖಾಸಗೀಕರಣ(privatisation) ಮಾಡುವ ನಿರ್ಧಾರ ತೆಗೆದ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ರತನ್ ಟಾಟಾ ಹೇಳಿದ್ದಾರೆ.
ಸಾಲದ ಸುಳಿಯಲ್ಲಿ ಒದ್ದಾಡುತ್ತಿದ್ದ ಏರ್ ಇಂಡಿಯಾ ಸಂಸ್ಥೆಯ ನಿರ್ವಹಣೆ ಸರ್ಕಾರಕ್ಕೆ ತೀವ್ರ ತಲೆನೋವಾಗಿತ್ತು. ಪ್ರತಿ ವರ್ಷ ಸಾಲದ ಹೊರೆ ಹೆಚ್ಚಾಗುತ್ತಲೇ ಹೋಗಿತ್ತು. ಸದ್ಯ ಏರ್ ಇಂಡಿಯಾ ಮೇಲೆ ಬರೋಬ್ಬರಿ 61,562 ಸಾವಿರ ಕೋಟಿ ರೂಪಾಯಿ ಸಾಲ ಇದೆ. 2018ರಿಂದ ಏರ್ ಇಂಡಿಯಾ ಮಾರಾಟಕ್ಕೆ ಕೇಂದ್ರ ಸರ್ಕಾರ ತಯಾರಿ ಮಾಡಿತ್ತು. ಆದರೆ ಭಾರಿ ವಿರೋಧದಿಂದ ಪ್ರಸ್ತಾವನೆಯನ್ನು ಕೈಬಿಟ್ಟಿತು. ಇದೀಗ ಆರ್ಥಿಕ ಹೊರೆಯಿಂದ ಬಚಾವಾಗಲು ಕೇಂದ್ರ ಸರ್ಕಾರ ಕೊನೆಗೂ ಏರ್ ಇಂಡಿಯಾವನ್ನು ಟಾಟಾ ಸನ್ಸ್ ಸಂಸ್ಥೆಗೆ ಮಾರಾಟ ಮಾಡಿದೆ.
ಸ್ಯಾನ್ಫ್ರಾನ್ಸಿಸ್ಕೋದಿಂದ 16 ತಾಸಲ್ಲಿ ಪ್ರಯಾಣಿಕರ ಹೊತ್ತು ತಂದು ಏರ್ ಇಂಡಿಯಾ ಲೇಡಿ ಪೈಲಟ್ಗಳು
ಏರ್ ಇಂಡಿಯಾ ಸಂಸ್ಥೆಯ ಬಿಡ್ಗೆ ಟಾಟಾ ಸನ್ಸ್ ಸಲ್ಲಿಸಿದ್ದ ಮನವಿಯನ್ನು ಕೇಂದ್ರ ಸರ್ಕಾರ ಪುರಸ್ಕರಿಸಿದೆ. 18,000 ಕೋಟಿ ರೂಪಾಯಿಗೆ ಟಾಟಾ ಸನ್ಸ್, ಏರ್ ಇಂಡಿಯಾ ಖರೀದಿಗೆ ಬಿಡ್ ಸಲ್ಲಿಸಿತ್ತು. ಇದರ ಜೊತೆಗೆ ಇನ್ನು 5 ಸಂಸ್ಥೆಗಳು ಬಿಡ್ ಸಲ್ಲಿಸಿತ್ತು. ಅಂತಿಮವಾಗಿ ಟಾಟಾ ಸನ್ಸ್ ಬಿಡ್ ಗೆದ್ದುಕೊಂಡಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ(DIPAM) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಹೇಳಿದ್ದಾರೆ.
ಬಿಡ್ ಪ್ರಕ್ರಿಯೆ ಅಂತ್ಯಗೊಂಡ ಬಳಿಕ ತುಹಿನ್ ಕಾಂತ ಪಾಂಡೆ ಹಾಗೂ ನಾಗರೀಕ ವಿಮಾನಯಾನ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಜಂಟಿಯಾಗಿ ಸುದ್ಧಿಗೋಷ್ಠಿ ನಡೆಸಿದ್ದಾರೆ.
ಒಪ್ಪಂದದ ಪ್ರಕಾರ ಕೇಂದ್ರ ಸರ್ಕಾರ, ಏರ್ ಇಂಡಿಯಾದ ಶೇಕಡಾ 100ರಷ್ಟು ಪಾಲನ್ನು ಟಾಟಾ ಸನ್ಸ್ ಸಂಸ್ಥೆಗೆ ಮಾರಾಟ ಮಾಡಿದೆ. ಏರ್ ಇಂಡಿಯಾ ಮೇಲಿನ ಸಾಲದ ಪೈಕಿ 15,300 ಕೋಟಿ ರೂಪಾಯಿ ಸಾಲದ ಜವಾಬ್ದಾರಿಯನ್ನು ಟಾಟಾ ಹೊತ್ತುಕೊಳ್ಳಲಿದೆ. ಇನ್ನು ಬಾಕಿ ಇರುವ 46,262 ಕೋಟಿ ರೂಪಾಯಿ ಸಾಲದ ಜವಾಬ್ದಾರಿ ಸರ್ಕಾರದ ಮೇಲಿದೆ.
ಏರ್ ಇಂಡಿಯಾ ಖರೀದಿಗೆ ಟಾಟಾ ಸೇರಿದಂತೆ 7 ಸಂಸ್ಥೆಗಳು ಬಿಡ್ ಸಲ್ಲಿಸಿತ್ತು. ಕೊನೆಗೂ ಏರ್ ಇಂಡಿಯಾ ಟಾಟಾ ಗ್ರೂಪ್ ಪಾಲಾಗಿದೆ. ಏರ್ ಇಂಡಿಯಾ ಮಾರಾಟಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟಾಟಾ ಸಂಸ್ಥೆಯಡಿ ಏರ್ ಇಂಡಿಯಾ ದೇಶದ ಪ್ರತಿಷ್ಠಿತ ಹಾಗೂ ಲಾಭದಾಯಕ ಕಂಪನಿಯಾಗಲಿದೆ ಎಂದಿದ್ದಾರೆ. ಆದರೆ ಮತ್ತೆ ಕೆಲವರು ಸರ್ಕಾರ ಎಲ್ಲವನ್ನು ಖಾಸಗೀಕರಣ ಮಾಡುತ್ತಾ ದೇಶವನ್ನೇ ಖಾಸಗಿ ಕೈಗೆ ನೀಡುತ್ತಿದೆ ಎಂದು ಟೀಕಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.