Asianet Suvarna News Asianet Suvarna News

ಸಿಂದಗಿ ಬೈಪಾಸ್‌ ಬ್ರಿಡ್ಜ್‌ನಲ್ಲಿ ಜ್ಞಾನಯೋಗಿಯ ಪೇಂಟಿಂಗ್ ಮಾಡ್ತಿದ್ದ ಹುಡುಗನಿಗೆ ಸಿಕ್ತು ಅಜ್ಜನ ಸ್ಪೆಷಲ್ ಗಿಫ್ಟ್‌

ನಡೆದಾಡುವ ದೇವರು, ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳು ನಮ್ಮನ್ನೆಲ್ಲ ಅಗಲಿ ಇನ್ನೇನು ಒಂದು ವರ್ಷವೇ ತುಂಬಲಿದೆ.  ಈ ಸರಳ ಜೀವಿ,ಮಹಾನ್ ಚೇತನದ ಬಗ್ಗೆ ಜನರಿಗೆ ಎಷ್ಟು ಅಭಿಮಾನವಿದೆ ಎಂಬುದಕ್ಕೆ ವಿಜಯಪುರದಲ್ಲಿ ನಡೆದ ಈ ಘಟನೆಯೊಂದು ಸಾಕ್ಷಿಯಾಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

Vijayapura Elderly Man gave money to a young man who was doing Jnanayogi Siddeshwara Shri painting in Sindagi Bypass Bridge Video viral akb
Author
First Published Dec 9, 2023, 7:30 AM IST

ವಿಜಯಪುರ: ನಡೆದಾಡುವ ದೇವರು, ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳು ನಮ್ಮನ್ನೆಲ್ಲ ಅಗಲಿ ಇನ್ನೇನು ಒಂದು ವರ್ಷವೇ ತುಂಬಲಿದೆ. ಆದರೂ ಸಿದ್ದೇಶ್ವರ ಶ್ರೀಗಳ ಮಾಡಿದ ಕಾರ್ಯಗಳು, ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಅವರು ಕೈಗೊಂಡ ಕೆಲಸಗಳು ಹಾಗೂ ಅವರ ಸರಳತೆಯನ್ನು ಜನ ದಿನವೂ ನೆನಪು ಮಾಡಿಕೊಳ್ಳುತ್ತಿದ್ದಾರೆ. ಈ ಸರಳ ಜೀವಿ ಮಹಾನ್ ಚೇತನದ ಬಗ್ಗೆ ಜನರಿಗೆ ಎಷ್ಟು ಅಭಿಮಾನವಿದೆ ಎಂಬುದಕ್ಕೆ ವಿಜಯಪುರದಲ್ಲಿ ನಡೆದ ಈ ಘಟನೆಯೊಂದು ಸಾಕ್ಷಿಯಾಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ವಿಜಯಪುರ (Vijayapura) ನಗರದ ಸಿಂದಗಿ ಬೈಪಾಸ್ ಬ್ರಿಡ್ಜ್‌ನ (Sindagi Bypass Bridge) ಗೋಡೆಯ ಮೇಲೆ ಕಲಾವಿದನೋರ್ವ ಸಿದ್ದೇಶ್ವರ ಶ್ರೀಗಳ ಚಿತ್ರವನ್ನು ಸುಂದರವಾಗಿ ಬಿಡಿಸುತ್ತಿದ್ದು, ಇದನ್ನು ಗಮನಿಸಿದ ವೃದ್ಧರೊಬ್ಬರು ಆ ಕಲಾವಿದನಿಗೆ ಕರೆದು ಹಣ ನೀಡಿ ಗೌರವಿಸಿದ್ದಾರೆ. ಈ ಬ್ರಿಡ್ಜ್‌ ಕೆಳಗೆ ಅಜ್ಜ ಪ್ರಯಾಣಿಸುತ್ತಿದ್ದ ಬಸ್‌ನ್ನು ರಾಜಹಂಸ ಬಸ್ (Rajahamsa Bus) ನಿಲ್ಲಿಸಲಾಗಿತ್ತು. ಈ ವೇಳೆ ಆ ಪೇಂಟಿಂಗ್ ಪಕ್ಕದಲ್ಲೇ ಇದ್ದ ಯುವಕನನ್ನು ಕರೆದ ಅಜ್ಜ, ತಮ್ಮ ಜೋಬಿನಲ್ಲಿದ್ದ ಸ್ವಲ್ಪ ಹಣವನ್ನು ತೆಗೆದು ಆತನ ಕೈಗೆ ನೀಡಿ ಅಲ್ಲಿ ಸಿದ್ದೇಶ್ವರ ಶ್ರೀಗಳ ಚಿತ್ರ ಬಿಡಿಸುತ್ತಿದ್ದಾನಲ್ಲ ಆ ಯುವ ಕಲಾವಿದನಿಗೆ ಕೊಡು ಎಂದು ಮನವಿ ಮಾಡಿದ್ದಾರೆ. ಅಜ್ಜನ ಮನವಿಯಂತೆ ಏಣಿ ಮೇಲೆ ನಿಂತು ಚಿತ್ರ ಬಿಡಿಸುತ್ತಿದ್ದ ಯುವಕನನ್ನು ಕರೆದು ಕೆಳಗಿದ್ದ ಹುಡುಗ ಅಜ್ಜ ನೀಡಿದ ಹಣವನ್ನು ಆತನಿಗೆ ನೀಡಿದ್ದಾನೆ. ಈ ಮೂಲಕ ಹಿರಿಯರೊಬ್ಬರು ಕಲಾವಿದನಿಗೂ ಸಿದ್ದೇಶ್ವರ ಶ್ರೀಗಳಿಗೂ (Siddeshwara Shri) ಗೌರವ ಸೂಚಿಸಿದ್ದಾರೆ. 

ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಗುರುನಮನಕ್ಕೆ ಸಿದ್ಧಗೊಳ್ತಿದೆ ವಿಜಯಪುರ: ಪಾಲ್ಗೊಳ್ಳಲಿದ್ದಾರಾ ಪ್ರಧಾನಿ ಮೋದಿ?

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ ಆಗಿದೆ. ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ (artsachinchavan) ಸಚಿನ್ ಚೌಹಾಣ್ ಎಂಬುವವರು ಪೋಸ್ಟ್ ಮಾಡಿದ್ದಾರೆ. ಧನ್ಯವಾದಗಳು ಅಜ್ಜ ಜಾತಿಗೊಬ್ಬ ಸ್ವಾಮಿಗಳು ಆಗುವ ಬದಲು ಸಿದ್ಧೇಶ್ವರ ಶ್ರೀಗಳ ಹಾಗೆ ಮಾನವ ಕುಲಕ್ಕೆ ಸ್ವಾಮಿಗಳಾಗಬೇಕು. ನಮ್ಮ ಗಾನಯೋಗಿ ಸಂಘದ ವತಿಯಿಂದ ವಿಜಯಪುರ ನಗರದ ಸಿಂದಗಿ ಬೈಪಾಸ್ ಬ್ರಿಜ್ ಗೋಡೆಗೆ ಶತಮಾನದ ಸಂತ ಮತ್ತು ಆಧ್ಯಾತ್ಮಿಕ ದಿವ್ಯ ಚೇತನ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಛಾಯಾಚಿತ್ರವನ್ನು ಬಿಡಿಸಲಾಯಿತು.ಇಡೀ ಜಗತ್ತಿನಲ್ಲಿ ಪ್ರವಚನ ಸಾರುವ ಮೂಲಕ ಭಕ್ತರ ಮನದಲ್ಲಿ ಜ್ಞಾನದ ಬೆಳಕನ್ನು ಶ್ರೀಗಳು ಚೆಲ್ಲಿದ್ದಾರೆ. ಇಂತಹ ಶ್ರೇಷ್ಠ ಜ್ಞಾನದ ಬಿಂದುಗಳಾದ ಸಂತ ಸಿದ್ಧೇಶ್ವರ ಶ್ರೀಗಳು ಹೇಳಿಕೊಟ್ಟ ಮಾರ್ಗದಂತೆ ನಾವೆಲ್ಲರೂ ಬದುಕು ಸಾಗಿಸಬೇಕು ಎಂದು ಅವರು ಬರೆದು ಈ ವೀಡಿಯೋ ಪೋಸ್ಟ್ ಮಾಡಿದ್ದಾರೆ. 

ಕಾಂಗ್ರೆಸ್‌ ಕೈಬಿಟ್ಟ ಪಠ್ಯಕ್ಕೆ ವಿಜಯಪುರ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಪಾಠವನ್ನು ಸೇರಿಸಿ

ಸಚಿನ್‌ ಚೌಹಾಣ್ (Sachin chouhan) ಅವರ ಈ ಪೋಸ್ಟ್‌ಗೆ ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಅಜ್ಜ ನೀಡಿದ 20 ರೂಪಾಯಿ 20 ಸಾವಿರಾಗಲಿ ಎಂದು ಒಬ್ಬರು ಹಾರೈಸಿದ್ದಾರೆ. ಇದೇ ನೋಡಿ ನಮ್ಮ ಉತ್ತರ ಕರ್ನಾಟಕದ ಹಿರಿಜೀವಗಳ ದೊಡ್ಡಮನಸ್ಸು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ರಾಜಹಂಸದಲ್ಲಿ ರಾಜ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.  ಅವರು ಕೊಟ್ಟ ಮೊತ್ತ ಚಿಕ್ಕದಾಗಿರಬಹುದು ಆದರೆ ಸಿದ್ದೇಶ್ವರ ಸ್ವಾಮೀಜಿಯವರ ಮೇಲಿರುವ ಭಕ್ತಿಗೆ ಅವ್ರು ಬಿಡಿಸಿದ ಆ ಕಲೆಗೆ ಬೆಲೆಕಟ್ಟಲಾಗದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅದು ಬರಿ ಇಪ್ಪತ್ತು ರೂಪಾಯಿ ಅಲ್ಲ. ಅದು ಅಮೋಘ ಕಾಣಿಕೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಗೌರವ ಕಾಣಿಕೆ ಎಂದರಲ್ಲ ಅದು ಎಲ್ಲಾ ಪ್ರಶಸ್ತಿಗಳಿಗಿಂತ ಮಿಗಿಲು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಒಟ್ಟಿನಲ್ಲಿ ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು, ಸಿದ್ದೇಶ್ವರ ಶ್ರೀಗಳ ಸರಳತೆ, ಉದಾರತೆ ಈ ಹಿರಿಯಜ್ಜನ ನಡತೆಯಲ್ಲಿ ಎದ್ದು ಕಾಣುತ್ತಿದೆ.

 

Follow Us:
Download App:
  • android
  • ios