
ನವದೆಹಲಿ(ನ.22): 26/11 ಎಂದೇ ಜನಮಾನಸದಲ್ಲಿ ಬೇರೂರಿರುವ ಮುಂಬೈ ಮೇಲಿನ ದಾಳಿ ಪ್ರಕರಣದ 12ನೇ ವರ್ಷಾಚರಣೆ ಸಂದರ್ಭ ಬೃಹತ್ ಪ್ರಮಾಣದ ಭಯೋತ್ಪಾದಕ ಕೃತ್ಯ ನಡೆಸಲು ಪಾಕಿಸ್ತಾನ ಮೂಲದ ಭಯೋತ್ಪಾದಕರು ರೂಪಿಸಿದ್ದ ಸಂಚಿಗೆ ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆ ಸಂಸ್ಥಾಪಕ ಮೌಲಾನಾ ಮಸೂದ್ ಅಜರ್ ಕಿರಿಯ ಸೋದರನೇ ರೂವಾರಿಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
26/11 ಮಾದರಿ ‘ದೊಡ್ಡ ದಾಳಿ’ಗೆ ಪಾಕ್ ಸಂಚು?: ಉಗ್ರರ ಹತ್ಯೆಯಿಂದ ಪ್ಲಾನ್ ಬಹಿರಂಗ!
ಗುರುವಾರ ಜಮ್ಮು-ಕಾಶ್ಮೀರದ ನಗ್ರೋಟಾದಲ್ಲಿ ನಡೆದ ಎನ್ಕೌಂಟರ್ನಲ್ಲಿ ಹತರಾದ ನಾಲ್ವರು ಉಗ್ರರ ಬಳಿ ಪತ್ತೆಯಾಗಿರುವ ಜಿಪಿಎಸ್ ಸಾಧನ ಹಾಗೂ ಮೊಬೈಲ್ ಫೋನ್ಗಳ ಪರಿಶೀಲನೆಯಿಂದ ಈ ಗುಮಾನಿ ವ್ಯಕ್ತವಾಗಿದೆ. ನಾಲ್ವರೂ ಉಗ್ರರು ಮೌಲಾನಾ ಮಸೂದ್ ಅಜರ್ ಸೋದರನಾದ ಜೈಷ್ ಎ ಮೊಹಮ್ಮದ್ ಆಪರೇಷನಲ್ ಕಮಾಂಡರ್ ಮುಫ್ತಿ ರೌಫ್ ಅಸ್ಘರ್ ಜತೆ ಸಂಪರ್ಕ ಹೊಂದಿದ್ದರು ಎಂಬುದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.
2019ರಲ್ಲಿ 40 ಸಿಆರ್ಪಿಎಫ್ ಯೋಧರ ಬಲಿ ಪಡೆದ ಪುಲ್ವಾಮಾ ದಾಳಿಯ ಹಿಂದೆಯೂ ಜೈಷ್ ಸಂಘಟನೆಯ ಕೈವಾಡ ಇತ್ತು. ಅದಕ್ಕೆ ಪ್ರತೀಕಾರವಾಗಿ ಭಾರತವು ಬಾಲಾಕೋಟ್ನಲ್ಲಿ ಜೈಷ್ ಸಂಘಟನೆ ಹೊಂದಿದ್ದ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿ ನಾಶಗೊಳಿಸಿತ್ತು. ಇಷ್ಟಾದರೂ ಜೈಷ್ ಮತ್ತೊಂದು ಉಗ್ರ ದಾಳಿಗೆ ಸಂಚು ನಡೆಸಿರುವುದು ಆತಂಕಕಾರಿಯಾಗಿದೆ.
ಮುಂಬೈ ದಾಳಿ ಸಂಚುಕೋರಗೆ 10 ವರ್ಷ ಜೈಲು
ಗಡಿಯಾಚೆಯಿಂದ ಉಗ್ರರನ್ನು ಭಾರತಕ್ಕೆ ಕಳುಹಿಸಿ ದಾಳಿ ನಡೆಸಲು ಜೈಷ್ ಎ ಮೊಹಮ್ಮದ್ನಂತಹ ಇಸ್ಲಾಮಿಕ್ ಜಿಹಾದಿ ಗುಂಪುಗಳನ್ನು ಪಾಕಿಸ್ತಾನ ಬಳಸಿಕೊಳ್ಳುತ್ತಿದೆ. ಭಾರತ ತನ್ನ ಯುದ್ಧ ವಿಮಾನಗಳನ್ನು ಬಳಸಿ ನಾಶಪಡಿಸಿರುವ ಬಾಲಾಕೋಟ್ ಉಗ್ರಗಾಮಿ ತರಬೇತಿ ಘಟಕವನ್ನು ಮತ್ತೆ ಜೈಷ್ ಸಂಘಟನೆಗೆ ಹಸ್ತಾಂತರಿಸಲು ಪಾಕಿಸ್ತಾನ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಹತರಾದ ನಾಲ್ವರೂ ಉಗ್ರರು ಶಾಕರಗಢದ ಗಡಿ ಮೂಲಕ ಸಾಂಬಾ ವಲಯಕ್ಕೆ ನುಸುಳಿದ್ದರು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ