Russia Ukraine Crisis: ಪುಟಿನ್ ಎದುರು ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಪಾಕ್ ಪ್ರಧಾನಿ!

By Suvarna NewsFirst Published Feb 25, 2022, 2:56 PM IST
Highlights

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್-ವ್ಲಾಡಿಮಿರ್ ಪುಟಿನ್ ಮಾತುಕತೆ

ಈ ವೇಳೆ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಇಮ್ರಾನ್ ಖಾನ್

ಎರಡು ದಿನಗಳ ಮಾಸ್ಕೋ ಭೇಟಿಯಲ್ಲಿರುವ ಪಾಕಿಸ್ತಾನ ಪ್ರಧಾನಿ

ಮಾಸ್ಕೋ (ಫೆ.25): ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣವನ್ನು ಜಗತ್ತು ಆಘಾತದಿಂದ ನೋಡುತ್ತಿರುವಾಗ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ( Pakistan PM Imran Khan) ತಮ್ಮ ಕೀಟಲೆ ಬುದ್ಧಿಯನ್ನು ಮುಂದುವರಿಸಿದ್ದಾರೆ. ಉಕ್ರೇನ್ (Ukraine) ಮೇಲೆ ರಷ್ಯಾ (Russia ) ಆಕ್ರಮಣ ಮಾಡಿರುವ ವಿಚಾರದಲ್ಲಿ ವಿಶ್ವದ ಹಲವು ದೇಶಗಳಿಂದ ನಿರ್ಬಂಧ ಎದುರಿಸುತ್ತಿರುವ ರಷ್ಯಾದ ಮುಂದೆ ಕಾಶ್ಮೀರದ ಸಮಸ್ಯೆಯ (Kashmir issue) ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.

ಗುರುವಾರ ರಷ್ಯಾ ದೇಶವು ಉಕ್ರೇನ್ ನ ಮೇಲೆ ಅಕ್ರಮಣ ಮಾಡಿದ ದಿನದಂದೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ನಡುವೆ ಮೊಟ್ಟಮೊದಲ ದ್ವಿಪಕ್ಷೀಯ ಸಭೆ ನಡೆಯಿತು. ಖಾನ್ ಅವರು ರಷ್ಯಾದ ಜೊತೆ "ದೀರ್ಘಾವಧಿಯ ಮತ್ತು ಬಹು ಆಯಾಮದ" ಸಂಬಂಧಕ್ಕೆ ಬದ್ಧರಾಗಿದ್ದರೂ ಸಹ ಕಾಶ್ಮೀರ ಸಮಸ್ಯೆಗೆ ಶಾಂತಿಯುತ ಪರಿಹಾರದ "ಅವಶ್ಯಕತೆ" ಯನ್ನು ಒತ್ತಿಹೇಳಿದರು. ಪಾಕಿಸ್ತಾನದ ಪ್ರಧಾನಿ ಅವರು ತಮ್ಮ ಸಂಪುಟ ಸದಸ್ಯರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಎರಡು ದಿನಗಳ (ಫೆಬ್ರವರಿ 23-24) ರಷ್ಯಾಕ್ಕೆ ಭೇಟಿ ನೀಡಿದ್ದರು. ಇದು 23 ವರ್ಷಗಳ ನಂತರ ಮಾಸ್ಕೋಗೆ ಪಾಕಿಸ್ತಾನದ ಪ್ರಧಾನಿಯ ಮೊದಲ ಅಧಿಕೃತ ಭೇಟಿಯಾಗಿದೆ.

ಉಕ್ರೇನ್ ನಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸುವ ಘೋಷಣೆ ಹೊರಬಿದ್ದ ಬಳಿಕ ಪಾಕಿಸ್ತಾನ ಪ್ರಧಾನಿ ಹಾಗೂ ಪುಟಿನ್ ನಡುವೆ ಮೂರು ಗಂಟೆಗಳ ಕಾಲ ಸಭೆ ನಡೆಯಿತು. ರಷ್ಯಾದ ನಿರ್ಧಾರ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದ್ದು, ವಿಶೇಷವಾಗಿ ಅಮೆರಿಕ ಸೇರಿದಂತೆ ಹಲವು ದೇಶಗಳು ಮಾಸ್ಕೋದ ಮೇಲೆ ಕಠಿಣ ನಿರ್ಬಂಧಗಳನ್ನು ಈಗಾಗಲೇ ಪ್ರಕಟಿಸಿವೆ. ಸಭೆಯ ನಂತರ ಪಾಕಿಸ್ತಾನ ಸರ್ಕಾರವು ಪತ್ರಿಕಾ ಹೇಳಿಕೆಯನ್ನು ನೀಡಿದ್ದು, ಕಾಶ್ಮೀರ ಸಮಸ್ಯೆ ಮತ್ತು ದ್ವಿಪಕ್ಷೀಯ ಬಾಂಧವ್ಯ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಯಾಗಿದೆ. ಅದರೊಂದಿಗೆ ಉಕ್ರೇನ್ ಸಂಘರ್ಷದ ಬಗ್ಗೆ ವಿಷಾದ ವ್ಯಕ್ತಪಡಿಸಿದೆ ಎಂದು ತಿಳಿಸಿದೆ.

Russia Ukraine War: ಗಡಿಭಾಗದ ದೇಶಗಳ ಮೂಲಕ ಭಾರತೀಯರ ರಕ್ಷಣೆ
"ದಕ್ಷಿಣ ಏಷ್ಯಾದ ಪರಿಸ್ಥಿತಿಯ ಕುರಿತು, ಪ್ರಧಾನ ಮಂತ್ರಿಗಳು IIOJK (ಭಾರತದ ಅಕ್ರಮ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ) ದಲ್ಲಿ ಗಂಭೀರ ಮಾನವ ಹಕ್ಕುಗಳ ಪರಿಸ್ಥಿತಿಯನ್ನು ಎತ್ತಿ ತೋರಿಸಿದರು ಮತ್ತು ಜಮ್ಮು ಮತ್ತು ಕಾಶ್ಮೀರ ವಿವಾದವನ್ನು ಶಾಂತಿಯುತವಾಗಿ ಪರಿಹರಿಸುವ ಅಗತ್ಯವನ್ನು ಒತ್ತಿಹೇಳಿದರು" ಎಂದು ಹೇಳಿಕೆ ತಿಳಿಸಿದೆ.

ಕಾಶ್ಮೀರ ವಿವಾದದ ಕುರಿತು ಲಾಹೋರ್ ಮತ್ತು ಶಿಮ್ಲಾ ಒಪ್ಪಂದಗಳನ್ನು ಮಾಸ್ಕೋ ಅನುಸರಿಸುತ್ತದೆ ಎಂದು ಭಾರತದಲ್ಲಿನ ರಷ್ಯಾದ ರಾಯಭಾರ ಕಚೇರಿ ಹೇಳಿದ ಕೆಲವೇ ವಾರಗಳಲ್ಲಿ ಪಾಕಿಸ್ತಾನದಿಂದ ಈ ಉದ್ಧಟತನದ ಪ್ರದರ್ಶನವಾಗಿದೆ. ಲಾಹೋರ್  ಮತ್ತು ಶಿಮ್ಲಾ ಒಪ್ಪಂದದ ಪ್ರಕಾರ, ಕಾಶ್ಮೀರ ಸಮಸ್ಯೆ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಮಸ್ಯೆ ಎನ್ನುವುದನ್ನು ಒತ್ತಿ ಹೇಳುತ್ತದೆ.
ರಷ್ಯಾದ ಮಾಧ್ಯಮ ಕಂಪನಿ ಆರ್‌ಟಿಗೆ ಸಂಯೋಜಿತವಾಗಿರುವ - ರಶ್ಯಾ ಬೆಂಬಲಿತ ರೆಡ್‌ಫಿಶ್ ಮೀಡಿಯಾದ ಸಾಕ್ಷ್ಯಚಿತ್ರವು ಕಾಶ್ಮೀರ ಸಮಸ್ಯೆಯನ್ನು ಪ್ಯಾಲಸ್ತೇನ್ ಗೆ ಹೋಲಿಕೆ ಮಾಡಿದ್ದವು. ಇದರ ಬೆನ್ನಲ್ಲಿಯೇ ಸಾಕ್ಷ್ಯಚಿತ್ರದ ಬಿಡುಗಡೆಯನ್ನು ಮುಂದೂಡಿಕೆ ಮಾಡಲಾಗಿತ್ತು. ಈ ಕುರಿತಾಗಿ ರಾಯಭಾರ ಕಚೇರಿಯು ತನ್ನ ಹೇಳಿಕೆಯನ್ನು ನೀಡಿತ್ತು. ಇದಕ್ಕೂ ಮುನ್ನ ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಾವು ಕಾಶ್ಮೀರದ "ಬ್ರಾಂಡ್ ಅಂಬಾಸಿಡರ್" ಎಂದು ಭರವಸೆ ನೀಡಿದ್ದರು.

Russia Ukraine War: ಸಬ್‌ವೇ ಆಶ್ರಯ ಪಡೆದ ನೂರಾರು ಮಹಿಳೆಯರು, ಮಕ್ಕಳು
ಈ ನಡುವೆ ಮಾಸ್ಕೋ ಕೂಡ ತನ್ನ ಪ್ರಕಟಣೆಯನ್ನು ನೀಡಿದ್ದು “ಉಭಯ ದೇಶಗಳ ನಾಯಕರು ದ್ವಿಪಕ್ಷೀಯ ಸಹಕಾರದ ಮುಖ್ಯ ಅಂಶಗಳನ್ನು ಚರ್ಚಿಸಿದರು ಮತ್ತು ದಕ್ಷಿಣ ಏಷ್ಯಾದ ಬೆಳವಣಿಗೆಗಳು ಸೇರಿದಂತೆ ಪ್ರಸ್ತುತ ಪ್ರಾದೇಶಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು" ಎಂದು ಹೇಳಿದೆ.

Latest Videos

click me!