
ಡಾಕಾ: ಬಾಂಗ್ಲಾದೇಶದ ನಿವಾಸಿಗಳು ಪಾಕಿಸ್ತಾನಕ್ಕೆ ಶಾಕ್ ನೀಡಿ ಭಾರತಕ್ಕೆ ಧನ್ಯವಾದಗಳನ್ನು ಸಲ್ಲಿಕೆ ಮಾಡಿದ್ದಾರೆ. ವರದಿಗಳ ಪ್ರಕಾರ, 11,500 ಮೆಟ್ರಿಕ್ ಟನ್ ಅಕ್ಕಿ ಹೊತ್ತ ಹಡಗು ಬಾಂಗ್ಲಾದೇಶದ ಚಿತ್ತಗಾಂಗ್ ಬಂದರು ತಲುಪಿದೆ .ಮುಕ್ತ ಟೆಂಡರ್ ಒಪ್ಪಂದದ ಅಡಿಯಲ್ಲಿ ಅಕ್ಕಿಯನ್ನು ಭಾರತದಿಂದ ಬಾಂಗ್ಲಾದೇಶಕ್ಕೆ ಕಳುಹಿಸಿದೆ. ಪಾಕಿಸ್ತಾನದ ಅಕ್ಕಿಯನ್ನು ಬಾಂಗ್ಲಾದೇಶ ತಿರಸ್ಕರಿಸಿದೆ. ಕಳೆದ ಕೆಲವು ತಿಂಗಳಿನಿಂದ ಭಾರತ ಅಕ್ಕಿಯನ್ನು ರಫ್ತು ಮಾಡುತ್ತಿದೆ ಎಂದು ಬಾಂಗ್ಲಾದೇಶದ ಆಹಾರ ಸಚಿವಾಲಯ ಮಾಹಿತಿ ನೀಡಿದೆ.
ಶೇಖ್ ಹಸಿನಾ ಸರ್ಕಾರ ಪತನವಾದ ಬಳಿಕ ಬಾಂಗ್ಲಾದೇಶದ ಆಡಳಿತ ಯುನೂಸ್ ಅವರ ಕೈಯಲ್ಲಿದೆ. ಆದ್ರೆ ಅತಿಯಾದ ಹಣದುಬ್ಬರದಿಂದ ಬಾಂಗ್ಲಾದೇಶದಲ್ಲಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ರಂಜಾನ್ ಮಾಸದಲ್ಲಿಯೂ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದ್ದರಿಂದ ಜನ ಸಾಮಾನ್ಯರು ಕಷ್ಟಪಡುತ್ತಿದ್ದಾರೆ. ಹಣದುಬ್ಬರ ನಿಯಂತ್ರಿಸಲು ವಿಫಲವಾಗಿರುವ ಯುನೂಸ್ ಸರ್ಕಾರ, ಭಾರತ ಸೇರಿದಂತೆ ಇತರೆ ದೇಶಗಳಿಂದ ಅಕ್ಕಿ ಖರೀದಿಸಲು ಪ್ರಯತ್ನಿಸಿದೆ.
ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಬಾಂಗ್ಲಾದೇಶಕ್ಕೆ ಅಕ್ಕಿ ರವಾನಿಸಲು ಮುಂದಾಗಿದ್ದವು. ಆದ್ರೆ ಪಾಕಿಸ್ತಾನದ ಅಕ್ಕಿ ರುಚಿ ಹೊಂದಿರದ ಕಾರಣ ಬಾಂಗ್ಲಾದಲ್ಲಿ ಬೇಡಿಕೆ ಕುಸಿತಗೊಂಡಿದೆ. ಮತ್ತೊಂದೆಡೆ ಭಾರತದ ಅಕ್ಕಿಗೆ ಬಾಂಗ್ಲಾದಲ್ಲಿ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ. ಬಾಂಗ್ಲಾದೇಶಕ್ಕೆ ಅಕ್ಕಿ ಕಳುಹಿಸಲು ಮುಂದಾಗಿದ್ದ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿದೆ.
ಬಾಂಗ್ಲಾದೇಶಕ್ಕೆ ಭಾರತದಿಂದ ನಿರಂತರವಾಗಿ ಅಕ್ಕಿ ಪೂರೈಕೆಯಾಗುತ್ತಿದೆ ಎಂದು ಸ್ಥಳೀಯ ಪತ್ರಿಕೆ ಕಲೇರ್ ಕಾಂತ್ ವರದಿ ಮಾಡಿದೆ. ಈ ವರದಿ ಪ್ರಕಾರ, 11,500 ಮೆಟ್ರಿಕ್ ಟನ್ ಅಕ್ಕಿ ಚಿತ್ತಗಾಂಗ್ ಬಂದರು ತಲುಪಿದೆ. ಭಾರತದಿಂದ ಒಟ್ಟು 4 ಲಕ್ಷ 50 ಸಾವಿರ ಮೆಟ್ರಿಕ್ ಟನ್ ಅಕ್ಕಿ ಪೂರೈಕೆಗೆ ಬಾಂಗ್ಲಾದೇಶ ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ 2 ಲಕ್ಷ 85 ಸಾವಿರ 769 ಮೆಟ್ರಿಕ್ ಟನ್ ಅಕ್ಕಿ ತಲುಪಿದೆ. ಇನ್ನುಳಿದ ಅಕ್ಕಿ ಈದ್ಗೂ ಮೊದಲೇ ತಲುಪಲಿದೆ ಎಂದು ವರದಿಯಾಗಿದೆ . ಭಾರತದ ಅಕ್ಕಿ ಮಾದರಿಯನ್ನು ಪರೀಕ್ಷೆ ಮಾಡಲಾಗಿದ್ದು, ಪೂರೈಕೆಯೂ ನಡೆಯುತ್ತಿದೆ. ಹಬ್ಬಕ್ಕೂ ಮೊದಲೇ ಒಪ್ಪಂದ ಪ್ರಮಾಣದ ಅಕ್ಕಿ ಬಾಂಗ್ಲಾ ತಲುಪಲಿದೆ.
ಇದನ್ನೂ ಓದಿ: ಕದ್ದಿರುವ ಭೂಭಾಗ ವಾಪಸ್ ನೀಡಿದ್ರೆ ಕಾಶ್ಮೀರ ವಿಷಯ ಇತ್ಯರ್ಥ; ಪಾಕ್ ಪತ್ರಕರ್ತರಿಗೆ ಜೈಶಂಕರ್ ಟಾಂಗ್!
ಭಾರತದಿಂದ ಬಾಂಗ್ಲಾದೇಶಕ್ಕೆ ಸಿಹಿ
ಉತ್ತರ ಪ್ರದೇಶದ ಮುಜಫರ್ನಗರದಿಂದ 30 ಟನ್ ಜಿಐ ಟ್ಯಾಗ್ ಹೊಂದಿರುವ ಬೆಲ್ಲವನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ. ಉತ್ತರ ಪ್ರದೇಶದ ಮುಜಫರ್ನಗರ ಮತ್ತು ಶಾಮ್ಲಿಯಲ್ಲಿ ಸಿದ್ಧವಾಗುವ ಬೆಲ್ಲ ಜಿಐ ಟ್ಯಾಗ್ ಹೊಂದಿದ್ದು, ಪ್ರಪಂಚದಾದ್ಯಂತ ಬೇಡಿಕೆಯನ್ನು ಹೊಂದಿದೆ. ಉತ್ತರ ಪ್ರದೇಶದಿಂದ ಬಾಂಗ್ಲಾದೇಶಕ್ಕೆ ಬೆಲ್ಲದ ನೇರ ರಫ್ತಿನ ಆರಂಭ ಇದಾಗಿದ್ದು, ರೈತ ಉತ್ಪಾದಕ ಸಂಸ್ಥೆಗಳು (FPOಗಳು) ಮತ್ತು ರೈತ ಉತ್ಪಾದಕ ಕಂಪನಿಗಳು (FPCಗಳು) ನೇರವಾಗಿ ತಮ್ಮ ಬೆಲ್ಲವನ್ನು ಯಾವುದೇ ದೇಶಗಳಿಗೆ ನೇರವಾಗಿ ಮಾರಾಟ ಮಾಡಬಹುದಾಗಿದೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಪ್ರತ್ಯೇಕತಾವಾದಕ್ಕೆ ತಿಲಾಂಜಲಿ: 2 ಹುರಿಯತ್ ಬಣಗಳ ನಿರ್ಧಾರ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ