
ಇಸ್ಲಾಮಾಬಾದ್: ಅಮೆರಿಕ-ಇರಾನ್ ಶಾಂತಿ ಸಂಧಾನಕ್ಕೆ ಮಧ್ಯಸ್ಥಿಕೆ ವಹಿಸಿ ಜಾಗತಿಕ ಮಟ್ಟದಲ್ಲಿ ಹೀರೋ ಆಗಲು ಮುಂದಾಗಿದ್ದ ಪಾಕಿಸ್ತಾನಕ್ಕೆ ಆಂತರಿಕ ಗಲಭೆಗಳೇ ಹೈರಾಣಾಗಿಸಿವೆ. ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದ್ದು, ಇಂಧನದ ಮೇಲಿನ ತೆರಿಗೆ ಹಾಗೂ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಸಾವಿರಾರು ಜನರು ರಸ್ತೆಗಿಳಿದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಆರ್ಥಿಕವಾಗಿ ನಲುಗಿರುವ ಪಾಕಿಸ್ತಾನವು ಐಎಂಎಫ್ನಿಂದ ಸಾಲ ಪಡೆಯಲು ಅದರ ಕಠಿಣ ಷರತ್ತುಗಳಿಗೆ ಒಪ್ಪಿಕೊಂಡಿದೆ. ಇದರ ಭಾಗವಾಗಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಸರ್ಕಾರ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ಇದನ್ನು ಖಂಡಿಸಿ ಪ್ರಮುಖ ಧಾರ್ಮಿಕ-ರಾಜಕೀಯ ಪಕ್ಷವಾದ ಜಮಾತ್-ಎ-ಇಸ್ಲಾಮಿ ಪ್ರತಿಭಟನೆಗೆ ಕರೆ ನೀಡಿದೆ. ಪ್ರತಿಭಟನಾಕಾರರು ‘ಐಎಂಎಫ್ಗೆ ಧಿಕ್ಕಾರ’ ಎಂಬ ಘೋಷಣೆಗಳೊಂದಿಗೆ ಇಸ್ಲಾಮಾಬಾದ್, ಕರಾಚಿ, ಲಾಹೋರ್, ಪೇಶಾವರ ಮತ್ತು ಕ್ವೆಟ್ಟಾ ನಗರಗಳ ಪ್ರಮುಖ ಹೆದ್ದಾರಿಗಳನ್ನು ತಡೆದು ಧರಣಿ ನಡೆಸಿದ್ದಾರೆ.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಮಾತ್-ಎ-ಇಸ್ಲಾಮಿ ಮುಖ್ಯಸ್ಥ ಹಫೀಜ್ ನಯೀಮ್ ಉರ್ ರೆಹಮಾನ್, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಹಾಗೂ ಅವರ ಸಂಪುಟಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ‘ನೀವು ಐಎಂಎಫ್ ನೆಪ ಹೇಳಿ ಜನರ ಜೇಬಿಗೆ ಕನ್ನ ಹಾಕುವುದನ್ನು ಸಹಿಸುವುದಿಲ್ಲ. ಇಂಧನ ಮೇಲಿನ ಹೆಚ್ಚುವರಿ ತೆರಿಗೆಯನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು. ಶುಕ್ರವಾರ ನಡೆದ ಈ ಪ್ರತಿಭಟನೆಗಳು ಬರಿ ಟ್ರೇಲರ್ ಅಷ್ಟೇ, ಸರ್ಕಾರ ಸರಿದಾರಿಗೆ ಬಾರದಿದ್ದರೆ ಇಡೀ ದೇಶವನ್ನು ಬಂದ್ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ