
ಇಸ್ಲಾಮಾಬಾದ್: ಯುದ್ಧದಿಂದಾಗಿ ತಮ್ಮ ಊರು ತೊರೆದು ಹೋಗಿದ್ದ ಗಾಜಾ ನಿವಾಸಿಗಳು ಇಸ್ರೇಲ್ ಹಮಾಸ್ ನಡುವಣ ಕದನ ವಿರಾಮದ ನಂತರ ಮತ್ತೆ ತಮ್ಮ ನೆಲೆಗಳನ್ನು ಅರಸಿ ಬಂದಿದ್ದರೆ, ಇತ್ತ ಪಾಕಿಸ್ತಾನದಲ್ಲಿ ಇಸ್ರೇಲ್ ವಿರೋಧಿಸಿ ಪ್ಯಾಲೇಸ್ತೀನ್ ಬೆಂಬಲಿಸಿ ನಡೆದ ಪ್ರತಿಭಟನೆಯಲ್ಲಿ ಕೆಲವರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ. ಪಾಕಿಸ್ತಾನದ ಒಬ್ಬ ಅಧಿಕಾರಿ ಸೇರಿದಂತೆ ಅನೇಕ ಪ್ರತಿಭಟನಾಕಾರರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಲಾಹೋರ್ನಲ್ಲಿ ಇಸ್ರೇಲ್ ವಿರೋಧಿ ಮೆರವಣಿಗೆಯ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರೊಂದಿಗೆ ಘರ್ಷಣೆ ನಡೆದಿದೆ. ರಾಜಧಾನಿ ಇಸ್ಲಾಮಾಬಾದ್ ಕಡೆಗೆ ಮೆರವಣಿಗೆ ನಡೆಸುತ್ತಿದ್ದಾಗ ಪೊಲೀಸರು ಮತ್ತು ತೆಹ್ರೀಕ್-ಇ-ಲಬ್ಬಾಯಿಕ್ ಪಾಕಿಸ್ತಾನ್ (ಟಿಎಲ್ಪಿ) ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ದುರಂತ ಸಂಭವಿಸಿದೆ.
ಪ್ರತಿಭಟನಾಕಾರರು ಅಧಿಕಾರಿಗಳ ಮೇಲೆ ಗುಂಡು ಹಾರಿಸಿ ಅಧಿಕಾರಿಯೊಬ್ಬರನ್ನು ಸಾಯಿಸಿದರು. ಘಟನೆಯಲ್ಲಿ ಇತರರು ಗಾಯಗೊಂಡರು ಎಂದು ಪಂಜಾಬ್ ಪೊಲೀಸ್ ಮುಖ್ಯಸ್ಥ ಉಸ್ಮಾನ್ ಅನ್ವರ್ ಹೇಳಿದ್ದಾರೆ. ಪ್ರತಿಭಟನಾಕಾರರು ಮೃತರಾದ ಬಗ್ಗೆಅವರು ದೃಢಪಡಿಸಲಿಲ್ಲ, ಆದರೆ ಟಿಎಲ್ಪಿ ತನ್ನ ಅನೇಕ ಬೆಂಬಲಿಗರು ಸಹ ಕೊಲ್ಲಲ್ಪಟ್ಟಿದ್ದಾರೆ ಹಲವರು ಗಾಯಗೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಗಾಯಗೊಂಡವರಲ್ಲಿ ಟಿಎಲ್ಪಿ ಮುಖ್ಯಸ್ಥ ಸಾದ್ ರಿಜ್ವಿ ಕೂಡ ಸೇರಿದ್ದಾರೆ. ಅಧಿಕಾರಿಗಳು ಗುಂಡು ಹಾರಿಸಿದ್ದರಿಂದ ಹಲವರಿಗೆ ಗಾಯಗಳಾಗಿವೆ ಅವರ ಸ್ಥಿತಿ ಗಂಭೀರವಾಗಿದೆ ಎಂದು ಟಿಎಲ್ಪಿ ಹೇಳಿದೆ. ರಿಜ್ವಿಗೆ ಗುಂಡು ತಾಕುವ ಮೊದಲಿನ ವಿಡಿಯೋವನ್ನು ಟಿಎಲ್ಪಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಆ ವಿಡಿಯೋದಲ್ಲಿ ಅವರು ಭದ್ರತಾ ಸಿಬ್ಬಂದಿಗೆ ಗುಂಡು ಹಾರಿಸದಂತೆ ಮನವಿ ಮಾಡುವುದನ್ನು ಕಾಣಬಹುದು. ತಾವು ಮಾತುಕತೆಗೆ ಸಿದ್ದವಿರುವುದಾಗಿಯೂ ಅವರು ಹೇಳಿದ್ದಾರೆ. ರಿಜ್ವಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗಲೇ ಹಿನ್ನೆಲೆಯಲ್ಲಿ ಗುಂಡಿನ ಸದ್ದು ಕೇಳಬಹುದಾಗಿದೆ.
ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಲವು ವೀಡಿಯೋಗಳಲ್ಲಿ ಅನೇಕ ವಾಹನಗಳು ಬೆಂಕಿಗಾಹುತಿಯಾಗಿ ಉರಿಯುತ್ತಿರುವುದನ್ನು ಕಾಣಬಹುದು. ಹೀಗೆ ಹೊತ್ತಿ ಉರಿದ ವಾಹನಗಳಲ್ಲಿ ಪ್ರತಿಭಟನೆಗಾಗಿ ಇಸ್ಲಮಾಬಾದ್ನತ್ತ ಸಾಗುತ್ತಿದ್ದ ಟಿಎಲ್ಪಿ ನಾಯಕರನ್ನು ಕರೆದೊಯ್ಯುತ್ತಿದ್ದ ಟ್ರಕ್ಗಳು ಕೂಡ ಸೇರಿವೆ. ಈ ಪ್ರತಿಭಟನಾ ಮೆರವಣಿಗೆ ಶುಕ್ರವಾರವೇ ಪೂರ್ವ ಪಾಕಿಸ್ಥಾನದಲ್ಲಿ ಆರಂಭವಾಗಿದ್ದು, ಇದು ಭದ್ರತಾ ಪಡೆ ಹಾಗೂ ಪ್ರತಿಭಟನಾಕಾರರ ಮಧ್ಯೆ ಘರ್ಷಣೆಗೆ ಕಾರಣವಾಗಿದ್ದು, ಶನಿವಾರವೇ 100ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ಯಾಲೇಸ್ತೀನ್ ಪರವಾಗಿ ಇಸ್ಲಮಾಬಾದ್ನ ಯುಎಸ್ ರಾಯಭಾರ ಕಚೇರಿ ಮುಂದೆ ಪ್ರತಿಭಟನೆ
ಪ್ರತಿಭಟನಾಕಾರರು ಇಸ್ಲಮಾಬಾದ್ನಲ್ಲಿರುವ ಅಮೆರಿಕಾದ ರಾಯಭಾರಿ ಕಚೇರಿಯ ಮುಂದೆ ಪ್ಯಾಲೇಸ್ತೀನ್ ಪರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ, ಇಂದು ಪೊಲೀಸರು ರಸ್ತೆಯನ್ನು ಬ್ಲಾಕ್ ಮಾಡಲು ಇರಿಸಿದ ಕಂಟೈನರ್ಗಳನ್ನು ಪ್ರತಿಭಟನಾಕಾರರು ತೆಗೆಯುವುದಕ್ಕೆ ಮುಂದಾದಾಗ ಇಂದು ಹೊಸದಾಗಿ ಘರ್ಷಣೆ ನಡೆದಿದೆ. ಲಾಹೋರ್ನಲ್ಲಿ ಪ್ರತಿಭಟನಾಕಾರರು ಪೊಲೀಸರೊಂದಿಗೆ ಗಲಾಟೆ ಮಾಡಿದ್ದಾರೆ.
ಆದರೆ ಟಿಎಲ್ಪಿಯ ಈ ಪ್ರತಿಭಟನೆಗೆ ಪಾಕಿಸ್ತಾನದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗಾಜಾದಲ್ಲಿ ಯುದ್ಧ ಮುಗಿದ ನಂತರ ಟಿಎಲ್ಪಿ ಇಲ್ಲಿ ಪ್ರತಿಭಟನೆ ಮಾಡ್ತಿರುವುದಕ್ಕೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಮತ್ತೆ ಕೆಲವರು ಪ್ರತಿಭಟನೆ ಆರಂಭವಾಗುವುದಕ್ಕೆ ಮೊದಲೇ ಪ್ರತಿಭಟನಾಕಾರರನ್ನು ತಡೆಯುವುದಕ್ಕೆ ದೊಡ್ಡ ದೊಡ್ಡ ರಸ್ತೆಗಳನ್ನು ಬಂದ್ ಮಾಡುವ ಮೂಲಕ ಸರ್ಕಾರ ಓವರ್ಆಕ್ಟಿಂಗ್ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಡಿಸ್ನಿಲ್ಯಾಂಡ್ಲ್ಲೂ ವರ್ಣ ತಾರತಮ್ಯ: ಬಿಳಿ ಮಕ್ಕಳ ಮಾತ್ರ ತಬ್ಬಿಕೊಂಡು ಕಪ್ಪು ಕಂದನ ನಿರ್ಲಕ್ಷಿಸಿದ ಕಾರ್ಟೂನ್ ಪಾತ್ರಧಾರಿ
ಇದನ್ನೂ ಓದಿ: ಕೆಬಿಸಿ ಶೋದಲ್ಲಿ ಅಮಿತಾಬ್ಗೆ ಅವಮಾನಿಸಿದ ಬಾಲಕ 5ನೇ ರೌಂಡಲ್ಲೇ ಔಟ್: ಇದು ಪೋಷಕರಿಗೊಂದು ಪಾಠ ಎಂದ ನೆಟ್ಟಿಗರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ