
ಇಸ್ಲಾಮಾಬಾದ್(ಏ.12): ಪಾಕಿಸ್ತಾನ ನೂತ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಸರ್ಕಾರಿ ನೌಕರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಾಕಿಸ್ತಾನದಲ್ಲಿನ ಆರ್ಥಿಕ ಪರಿಸ್ಥಿತಿ, ಹಣದುಬ್ಬರ ನಿಯಂತ್ರಿಸಲು ಶೆಹಬಾಜ್ ಷರೀಫ್ ಮಹತ್ವದ ಘೋಷಣೆ ಮಾಡಿದ್ದಾರೆ. ಎಲ್ಲಾ ಸರ್ಕಾರಿ ನೌಕರರಿಗೆ ವಾರದಲ್ಲಿ ಇದ್ದ ಎರಡು ದಿನ ರಜೆಯನ್ನು ಕಡಿತಗೊಳಿಸಿ ಒಂದು ದಿನಕ್ಕೆ ಇಳಿಸಲಾಗಿದೆ. ಇಷ್ಟೇ ಅಲ್ಲ ದಿನದ ಕೆಲಸದ ಸಮಯವನ್ನೂ ಹಚ್ಚಿಸಲಾಗಿದೆ.
ನೂತನ ಸರ್ಕಾರಕ್ಕೆ ಹಣದುಬ್ಬರ ನಿಯಂತ್ರಿಸುವುದು, ಆರ್ಥಿಕ ಪರಿಸ್ಥಿತಿಯನ್ನು ಸರಿದಾರಿಗೆ ತರುವುದೇ ಅತಿ ದೊಡ್ಡ ಸವಾಲು ಎಂದು ಪಾಕಿಸ್ತಾನದ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದರು. ಹೀಗಾಗಿ ಪಾತಾಳಕ್ಕೆ ಕುಸಿಯುತ್ತಿರುವ ಆರ್ಥಿಕತೆ ಹಾಗೂ ಹಣದುಬ್ಬರ ನಿಯಂತ್ರಿಸಲು ಶೆಬಬಜ್ ಷರೀಫ್, ಸರ್ಕಾರಿ ನೌಕರರಿಗೆ ವಾರದಲ್ಲಿ 6 ದಿನ ಕೆಲಸ ಎಂದು ಘೋಷಿಸಿದ್ದಾರೆ.
ಕೆಲಸದ ಸಮಯವವನ್ನು ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ವಿಸ್ತರಿಸಲಾಗಿದೆ. ಇನ್ನು ಮುಂದೆ ಪಾಕಿಸ್ತಾನದಲ್ಲಿ ಸರ್ಕಾರಿ ನೌಕರರು ಪ್ರತಿ ದಿನ 10 ಗಂಟೆ ಕೆಲಸ ಮಾಡಬೇಕು. ವಾರದಲ್ಲಿ ಕೇವಲ ಒಂದು ರಜೆ ಮಾತ್ರ ಇರಲಿದೆ ಎಂದು ಘೋಷಿಸಿದ್ದಾರೆ. ಇದು ಸರ್ಕಾರಿ ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ.
ಅಂತಾರಾಷ್ಟ್ರೀಯ ವೇದಿಕೆಗೆ ಕಾಶ್ಮೀರ ಸಮಸ್ಯೆ, ಭಾರತ ವಿರುದ್ಧ ಗುಡುಗಿದ ಪಾಕ್ ನೂತನ ಪ್ರಧಾನಿ!
ಇಷ್ಟು ದಿನ ವಾರದಲ್ಲಿ 5 ದಿನ ಕೆಲಸ ಹಾಗೂ ಪ್ರತಿ ದಿನ 8 ಗಂಟೆ ಮಾತ್ರ ಕೆಲಸದ ಸಮಯವಿತ್ತು. ಇದೀಗ ಹೊಸ ಆದೇಶ ಸರ್ಕಾರಿ ನೌಕರರ ನೆಮ್ಮದಿ ಕೆಡಿಸಿದೆ. ಇತ್ತ ಪಾಕಿಸ್ತಾನದ ವಿದೇಶಿ ವಿನಿಮಯ, ಆದಾಯ, ಉತ್ಪಾದನೆ ಕೂಡ ಕುಸಿದಿದೆ. ಸಾಲದ ಹೊರೆ ಹೆಚ್ಚಾಗಿದೆ. ಇದರ ನಡುವೆ ನೂತನ ಸರ್ಕಾರ ಕುರ್ಚಿ ಉಳಿಸಿಕೊಳ್ಳುವ ಜೊತೆಗೆ ಆರ್ಥಿಕತೆಯನ್ನು ಸರಿದೂಗಿಸಬೇಕಿದೆ.
ಷರೀಫ್ಗೆ ಮೋದಿ ಅಭಿನಂದನೆ: ಉಗ್ರವಾದ ನಿಗ್ರಹಕ್ಕೆ ಕರೆ
ಪಾಕಿಸ್ತಾನ ನೂತನ ಪ್ರಧಾನಿ ಮಹಮ್ಮದ್ ಶೆಹಬಾಜ್ ಷರೀಫ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ. ಸೋಮವಾರ ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ‘ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಆಯ್ಕೆಯಾದ ಶೆಹಬಾಜ್ ಷರೀಫ್ ಅವರಿಗೆ ಅಭಿನಂದನೆಗಳು. ಭಾರತವು ಭಯೋತ್ಪಾದನೆ ಮುಕ್ತ ಶಾಂತಿ ಮತ್ತು ಸ್ಥಿರತೆಯ ಪ್ರದೇಶವನ್ನು ಬಯಸುತ್ತದೆ. ಹೀಗಾದಾಗ ನಾವು ಅಭಿವೃದ್ಧಿ ಸವಾಲುಗಳ ಮೇಲೆ ಗಮನವನ್ನು ಕೇಂದ್ರೀಕರಿಸಬಹುದು. ತನ್ಮೂಲಕ ಜನರ ಯೋಗಕ್ಷೇಮ ಕಾಪಾಡುವ ಜೊತೆಜೊತೆಗೆ ದೇಶದಲ್ಲಿ ಸಮೃದ್ಧಿಯನ್ನು ತರಬಹುದು’ ಎಂದು ಹೇಳಿದ್ದಾರೆ.
ಇಮ್ರಾನ್ ವಿರುದ್ಧದ ದೇಶದ್ರೋಹ ಕೇಸ್ ವಜಾ: ರಂಜಾನ್ ಬಳಿಕ ನವಾಜ್ ಮರಳಿ ಪಾಕ್ಗೆ
ಪ್ರಧಾನಿ ಮೋದಿ ಅಭಿನಂದನೆಗೆ ಧನ್ಯವಾದ ಹೇಳಿರುವ ಷರೀಭ್, ಕಾಶ್ಮೀರ ವಿಚಾರವನ್ನು ಮತ್ತೆ ಕೆದಕಿದ್ದಾರೆ. ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ರಾಜೀ ಇಲ್ಲ ಎಂದು ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್ ಶರೀಫ್, ಹುದ್ದೆಗೆ ಏರುತ್ತಿದ್ದಂತೆಯೇ ಬೆನ್ನಲ್ಲೇ ಕಾಶ್ಮೀರ ಕ್ಯಾತೆ ತೆಗೆದಿದ್ದಾರೆ. ಸಂಸತ್ತಿನಲ್ಲಿ ಪ್ರಧಾನಿಯಾದ ನಂತರ ಮಾಡಿದ ಮೊದಲ ಭಾಷಣದಲ್ಲಿ ಕಾಶ್ಮೀರದಲ್ಲಿ 370 ವಿಧಿಯನ್ನು ರದ್ದುಗೊಳಿಸಿದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೇ ಕಾಶ್ಮೀರಿ ಜನರಿಗೆ ರಾಜತಾಂತ್ರಿಕ ಹಾಗೂ ನೈತಿಕ ಬೆಂಬಲ ಒದಗಿಸಲು ಪಾಕಿಸ್ತಾನ ಬದ್ಧವಾಗಿದೆ ಎಂದು ಘೋಷಿಸಿದ್ದಾರೆ.
ಪ್ರಧಾನಿಯಾಗಿ ಆಯ್ಕೆ ಆದ ನಂತರ ಸೋಮವಾರ ಸಂಜೆ ಮಾತನಾಡಿದ ಅವರು, ‘ಭಾರತದೊಂದಿಗೆ ಶಾಂತಿಯುತ ಸಂಬಂಧವನ್ನು ಕಾಯ್ದುಕೊಳ್ಳಲು ಬಯಸಿದ್ದೇನೆ. ಆದರೆ ಕಾಶ್ಮೀರದ ಬಿಕ್ಕಟ್ಟು ಪರಿಹಾರಕ್ಕೂ ಮುಂಚೆ ಅದು ಸಾಧ್ಯವಾಗುವುದಿಲ್ಲ. ಭಾರತ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಕಾಶ್ಮೀರಿಗರ ರಕ್ತದಿಂದ ಕಾಶ್ಮೀರದ ಕಣಿವೆಯೇ ಕೆಂಪಾಗಿದೆ’ ಎಂದು ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ