
ಭೂಕುಸಿತ ಪ್ರವಾಹ ಮುಂತಾದ ಪ್ರಕೃತಿ ವಿಕೋಪಗಳು ಆಗದಂತೆ ಮುಂಜಾಗೃತೆ ವಹಿಸಬಹುದು. ಆದರೆ ಆಗದೆಯೇ ಇರುವಂತೆ ತಡೆಯುವುದು ಮಾನವನ ಕೈಯಲ್ಲಿ ಅಸಾಧ್ಯವಾದ ವಿಚಾರ. ಆದರೀಗ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜೋಂಗ್ ಪ್ರವಾಹ ಭೂಕುಸಿತವನ್ನು ತಡೆಯಲು ವಿಫಲರಾಗಿದ್ದಾರೆ ಎಂದು 30 ಅಧಿಕಾರಿಗಳನ್ನು ಗಲ್ಲಿಗೇರಿಸಿದ್ದಾರೆ ಎಂದು ವರದಿ ಆಗಿದೆ. ದಕ್ಷಿಣ ಕೊರಿಯಾದ ಹಲವು ಮಾಧ್ಯಮಗಳು ಹೀಗೆ ವರದಿ ಮಾಡಿವೆ.
ಹಲವು ವಿಚಿತ್ರ ಆದೇಶಗಳಿಂದಾಗಿ ಸದಾ ಸುದ್ದಿಯಲ್ಲಿರುವ ಉತ್ತರ ಕೊರಿಯಾ ನಾಯಕ ಕಿಮ್ ಜೋಂಗ್ ಈಗ ಈ ವಿಚಾರದಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಉತ್ತರ ಕೊರಿಯಾದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹದಿಂದಾಗಿ 4 ಸಾವಿರಕ್ಕೂ ಅಧಿಕ ಮನೆಗಳು ಹಾನಿಗೊಳಗಾಗಿದ್ದು, 15 ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿತ್ತು. ಈ ನೈಸರ್ಗಿಕ ವಿಕೋಪ ದುರಂತದಲ್ಲಿ ಅಂದಾಜು 1000 ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಭೂಕುಸಿತ ಪ್ರವಾಹದ ವೇಳೆ ಸಾವುನೋವು ತಡೆಯಲು ವಿಫಲರಾದ 30 ಸರ್ಕಾರಿ ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಉತ್ತರ ಕೊರಿಯಾ ನಾಯಕ ಕಿಮ್ ಜೊಂಗ್ ಆದೇಶಿಸಿದ್ದಾರೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ.
ದಕ್ಷಿಣ ಕೊರಿಯಾ ಅಥ್ಲೀಟ್ಸ್ ಜತೆ ನಗುತ್ತಾ ಸೆಲ್ಫಿ ತೆಗೆದ ಉತ್ತರ ಕೊರಿಯಾ ಅಥ್ಲೀಟ್ಗಳ ವಿರುದ್ಧ ಕ್ರಮ!
ಇತ್ತೀಚಿನ ಪ್ರವಾಹದಿಂದ ಉಂಟಾದ ಒಪ್ಪಿಕೊಳ್ಳಲಾಗದ ಜೀವಹಾನಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಉತ್ತರ ಕೊರಿಯಾದ ಅಧಿಕಾರಿಗಳನ್ನು ಉಲ್ಲೇಖಿಸಿ ಕಿಮ್ ಜೊನ್ ಉನ್ ಹೇಳಿದ್ದಾರೆ ಎಂದು ದಕ್ಷಿಣ ಕೊರಿಯಾದ ಚೋಸನ್ ಟಿವಿ ವರದಿ ಮಾಡಿದೆ. ಇದರ ಜೊತೆಗೆ ಈ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಮತ್ತು ಕರ್ತವ್ಯಲೋಪದ ಆರೋಪವನ್ನೂ ಹೊರಿಸಲಾಗಿದೆ. ಕಳೆದ ತಿಂಗಳ ಕೊನೆವಾರದಲ್ಲಿ ಅಧಿಕಾರಿಗಳನ್ನು ಗಲ್ಲಿಗೇರಿಸಲಾಗಿದೆ ಎಂದು ವರದಿಯಾಗಿದೆ. 'ಕಳೆದ ತಿಂಗಳ ಕೊನೆಯಲ್ಲಿ ಪ್ರವಾಹ ಪೀಡಿತ ಪ್ರದೇಶದಲ್ಲಿ 20 ರಿಂದ 30 ಸಿಬ್ಬಂದಿಯನ್ನು ಒಂದೇ ಸಮಯದಲ್ಲಿ ಗಲ್ಲಿಗೇರಿಸಲು ನಿರ್ಧರಿಸಲಾಯ್ತು ಎಂದು ಅಧಿಕಾರಿ ಹೇಳಿದ್ದಾಗಿ ದಕ್ಷಿಣ ಕೊರಿಯಾ ಮಾಧ್ಯಮಗಳು ವರದಿ ಮಾಡಿವೆ. .
ಆದರೆ ಮರಣದಂಡನೆಗೊಳಗಾದ ಅಧಿಕಾರಿಗಳ ಗುರುತನ್ನು ಇದುವರೆಗೆ ಬಹಿರಂಗಪಡಿಸಲಾಗಿಲ್ಲ. ಆದರೆ ಉತ್ತರ ಕೊರಿಯಾದ ಕೇಂದ್ರ ಸುದ್ದಿ ಸಂಸ್ಥೆಯ ವರದಿ ಪ್ರಕಾರ, 2019 ರಿಂದ ಚಗಾಂಗ್ ಪ್ರಾಂತ್ಯದ ಪ್ರಾಂತೀಯ ಪಕ್ಷದ ಸಮಿತಿಯ ಕಾರ್ಯದರ್ಶಿಯಾದ ಕಾಂಗ್ ಬಾಂಗ್ ಹೂನ್ ಅವರು ಕಿಮ್ ಜೊಂಗ್ ಅಧಿಕಾರದಿಂದ ಕಿತ್ತು ಹಾಕಿದ ನಾಯಕರಲ್ಲಿ ಒಬ್ಬರು ಎಂದು ಹೇಳಿದೆ.
ಜುಲೈನಲ್ಲಿ ಉತ್ತರ ಕೊರಿಯಾದಲ್ಲಿ ಸಂಭವಿಸಿದ ತೀವ್ರವಾದ ಭೂಕುಸಿತ ಹಾಗೂ ಪ್ರವಾಹದಿಂದ ಅಪಾರ ಹಾನಿ ಸಂಭವಿಸಿತ್ತು. ಈ ವೇಳೆ ಅಧ್ಯಕ್ಷ ಕಿಮ್ ಜೊಂಗ್ ಉನ್ ಸ್ವತಃ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು ಮತ್ತು ಪ್ರವಾಹದಿಂದ ಸಂಪೂರ್ಣವಾಗಿ ಮುಳುಗಿದ ನಗರಗಳನ್ನು ಮತ್ತೆ ಪುನರ್ನಿರ್ಮಿಸಲು ಹಲವು ತಿಂಗಳುಳು ಬೇಕಾಗುತ್ತದೆ ಎಂದು ಹೇಳಿದ್ದರು. ಅಲ್ಲದೇ 15 ಸಾವಿರಕ್ಕೂ ಅಧಿಕ ಜನರಿಗೆ ಪುನರ್ವಸತಿ ಕೇಂದ್ರ ಸ್ಥಾಪಿಸಿ ಆಶ್ರಯ ನೀಡಲಾಗಿತ್ತು. ಆದರೆ ಉತ್ತರ ಕೊರಿಯಾ ಪ್ರವಾಹದಿಂದ ತೀವ್ರ ಸಂಕಷ್ಟಕ್ಕೀಡಾಗಿದೆ ಅನೇಕರು ಅಲ್ಲಿ ಸಾವನ್ನಪ್ಪಿದ್ದಾರೆ ಎಂಬ ವರದಿಗಳನ್ನು ಕಿಮ್ ಜೊಂಗ್ ನಿರಾಕರಿಸಿದ್ದಾರೆ. ಉತ್ತರ ಕೊರಿಯಾದ ಹೆಸರು ಹಾಳು ಮಾಡಲು ದಕ್ಷಿಣ ಕೊರಿಯಾ ರೀತಿಯ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದೆ ಎಂದು ಕಿಮ್ ಜೊಂಗ್ ಆರೋಪಿಸಿದ್ದಾರೆ ಎಂದು ವರದಿ ಆಗಿದೆ.
ಕಿಮ್ ಜಾಂಗ್ಗೆ ಬಹು ಕೋಟಿಯ ರಷ್ಯನ್ ರೋಲ್ಸ್ರಾಯ್ Aurus Senat ಗಿಫ್ಟ್ ನೀಡಿದ ವ್ಲಾಡಿಮಿರ್ ಪುಟಿನ್!
ಆದರೆ ಕೊರಿಯಾ ಟೈಮ್ಸ್ ವರದಿ ಪ್ರಕಾರ ಕೋವಿಡ್ ನಂತರ ಉತ್ತರ ಕೊರಿಯಾದಲ್ಲಿ ಸಾರ್ವಜನಿಕವಾಗಿ ಮರಣದಂಡನೆ ಶಿಕ್ಷೆಗೊಳಗಾಗುವವರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆಯಂತೆ. ಕೋವಿಡ್ಗೆ ಮೊದಲು ವಾರ್ಷಿಕವಾಗಿ 10 ಮರಣದಂಡನೆ ಪ್ರಕರಣಗಳು ನಡೆಯುತ್ತಿದ್ದರೆ, ಕೋವಿಡ್ ನಂತರ ವರ್ಷಕ್ಕೆ ನೂರು ಜನ ಮರಣದಂಡನೆಗೆ ಗುರಿಯಾಗುತ್ತಿದ್ದಾರೆ. ಇದು ಹಿಂದಿಗಿಂತ ಹತ್ತು ಪಟ್ಟು ಜಾಸ್ತಿ ಎಂದು ವರದಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ