
ಅಮೆರಿಕದಲ್ಲಿ ಕಳೆದ 27 ವರ್ಷಗಳಿಂದ ಯಾವುದೇ ಕ್ರಿಮಿನಲ್ ಹಿನ್ನೆಲೆಯಿಲ್ಲದೆ ಕಾನೂನುಬದ್ಧವಾಗಿ ವಾಸಿಸುತ್ತಿದ್ದ ಭಾರತೀಯ ಮೂಲದ ಗ್ರೀನ್ ಕಾರ್ಡ್ದಾರರಾದ ವೆಂಕಟ ನರಸಮಾಂಬ ವಾಸಮಸೆಟ್ಟಿ ಅವರನ್ನು ಯುಎಸ್ ವಲಸೆ ಮತ್ತು ಕಸ್ಟಮ್ಸ್ ಜಾರಿ ಇಲಾಖೆ (ICE) ಬಂಧಿಸಿದೆ. ನ್ಯಾಯಾಲಯವು ಅವರ ವಿರುದ್ಧದ ಗಡೀಪಾರು ಪ್ರಕರಣವನ್ನು ಈಗಾಗಲೇ ವಜಾಗೊಳಿಸಿದ್ದರೂ ಸಹ, ಆಗಸ್ಟ್ 11 ರಂದು ನಿಗದಿತ ಚೆಕ್ ಇನ್ ಸಮಯದಲ್ಲಿ ಅವರನ್ನು ವಶಕ್ಕೆ ಪಡೆದು ಜಾರ್ಜಿಯಾದ ಐಸಿಇ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ. ಈ ಕ್ರಮವನ್ನು ವಿರೋಧಿಸಿರುವ ಅವರ ಕುಟುಂಬಸ್ಥರು ಹಾಗೂ ವಕೀಲರು ತಕ್ಷಣವೇ ಅವರ ಬಿಡುಗಡೆಗೆ ಆಗ್ರಹಿಸಿದ್ದಾರೆ.
ಉತ್ತರ ಕೆರೊಲಿನಾದಲ್ಲಿ ವಿಶೇಷ ವಿದ್ಯಾರ್ಥಿಗಳಿಗೆ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ 60 ರ ಹರೆಯದ ವಾಸಮಸೆಟ್ಟಿ ಅವರು 2013 ರಿಂದ ಶಾಶ್ವತ ನಿವಾಸಿ (LPR) ಸ್ಥಾನಮಾನ ಹೊಂದಿದ್ದಾರೆ. ಅವರು ಇಬ್ಬರು ಯುಎಸ್ ನಾಗರಿಕ ಮಕ್ಕಳ ತಾಯಿ ಹಾಗೂ ಇಬ್ಬರು ಮೊಮ್ಮಕ್ಕಳ ಅಜ್ಜಿಯಾಗಿದ್ದಾರೆ. ಜುಲೈ 2022 ರಲ್ಲಿ, ಅವರು ಭಾರತದಲ್ಲಿದ್ದ ತಮ್ಮ ತೀವ್ರ ಅನಾರೋಗ್ಯ ಪೀಡಿತ ಪೋಷಕರನ್ನು ನೋಡಿಕೊಳ್ಳಲು ಬಂದಿದ್ದರು. ಈ ಸಂದರ್ಭದಲ್ಲಿ ಅವರಿಗೆ ಕೋವಿಡ್-19 ಸೋಂಕು ತಗುಲಿ, ಆಸ್ಪತ್ರೆಗೆ ದಾಖಲಾಗಬೇಕಾಯಿತು. ಇದರಿಂದಾಗಿ ಅವರು ಅಮೆರಿಕಕ್ಕೆ ಮರಳುವುದು ವಿಳಂಬವಾಯಿತು. ಅಂತಿಮವಾಗಿ ಫೆಬ್ರವರಿ 2023 ರಲ್ಲಿ, ಅಂದರೆ ಸುಮಾರು 7 ತಿಂಗಳ ನಂತರ ಅವರು ಅಮೆರಿಕಕ್ಕೆ ಹಿಂತಿರುಗಿದರು.
ಫೆಡರಲ್ ವಲಸೆ ಕಾನೂನಿನ ಪ್ರಕಾರ ಗ್ರೀನ್ ಕಾರ್ಡ್ದಾರರು 6 ತಿಂಗಳಿಗಿಂತ (180 ದಿನಗಳು) ಹೆಚ್ಚು ಕಾಲ ದೇಶದಿಂದ ಹೊರಗಿದ್ದರೆ, ಅವರು ತಮ್ಮ ಅಮೆರಿಕದ ನಿವಾಸವನ್ನು ತ್ಯಜಿಸಿದ್ದಾರೆ ಎಂದು ಪರಿಗಣಿಸುವ ಅವಕಾಶವಿರುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡ ಯುಎಸ್ ಗೃಹ ಭದ್ರತಾ ಇಲಾಖೆ (DHS), ವಾಸಮಸೆಟ್ಟಿ ಅವರು ತಮ್ಮ ಶಾಶ್ವತ ನಿವಾಸವನ್ನು ತ್ಯಜಿಸಿದ್ದಾರೆ ಎಂದು ಆರೋಪಿಸಿ ಅವರ ಗಡೀಪಾರು ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು.
ವಾಸಮಸೆಟ್ಟಿ ಅವರ ಕುಟುಂಬ ಮತ್ತು ವಲಸೆ ವಕೀಲರಾದ ಜೊಯಿ ವಿಲ್ಸನ್ ಹಾಗೂ ಹೆಲೆನ್ ಪಾರ್ಸನೇಜ್ ಈ ಆರೋಪವನ್ನು ಬಲವಾಗಿ ನಿರಾಕರಿಸಿದ್ದಾರೆ. ಭಾರತದಲ್ಲಿದ್ದಾಗಲೂ ಅವರು ಉತ್ತರ ಕೆರೊಲಿನಾದಲ್ಲಿ ತಮ್ಮ ಸ್ವಂತ ಮನೆ ಖರೀದಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರು ಮತ್ತು ಅವರ ವೃತ್ತಿಜೀವನ ಹಾಗೂ ಕುಟುಂಬ ಸಂಪೂರ್ಣವಾಗಿ ಅಮೆರಿಕದಲ್ಲೇ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ಗೃಹ ಭದ್ರತಾ ಇಲಾಖೆಯು ಸಾಕ್ಷ್ಯಗಳನ್ನು ಸಲ್ಲಿಸಲು ನಿಗದಿತ ಗಡುವನ್ನು ಪೂರೈಸದ ಕಾರಣ, ವಲಸೆ ನ್ಯಾಯಾಧೀಶರು ಮೇ 19, 2026 ರಂದು ಅವರ ವಿರುದ್ಧದ ಗಡೀಪಾರು ಪ್ರಕರಣವನ್ನು ಸಂಪೂರ್ಣವಾಗಿ ವಜಾಗೊಳಿಸಿದ್ದರು.
ಪ್ರಕರಣ ವಜಾಗೊಂಡ ನಂತರವೂ ಅವರು ನಿಯಮಿತವಾಗಿ ICE ಚೆಕ್-ಇನ್ಗಳಿಗೆ ಹಾಜರಾಗುತ್ತಿದ್ದರು. ಆದರೆ, ಆಗಸ್ಟ್ 11 ರಂದು ಷಾರ್ಲೆಟ್ ಕಚೇರಿಯಲ್ಲಿ ವರದಿ ಮಾಡಿದಾಗ, ಅವರು ಗ್ರೀನ್ ಕಾರ್ಡ್ ಹೊಂದಿರುವವರಲ್ಲ ಎಂದು ಹೇಳಿ ICE ಅವರನ್ನು ದಿಢೀರ್ ಬಂಧಿಸಿತು. ವಾಸಮಸೆಟ್ಟಿ ಅವರು ತೀವ್ರವಾದ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ನಿರಂತರ ಗ್ಲೂಕೋಸ್ ಮೇಲ್ವಿಚಾರಣೆ ಹಾಗೂ ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ.
ಅವರ ಕಾನೂನುಬಾಹಿರ ಬಂಧನವನ್ನು ಪ್ರಶ್ನಿಸಿ ವಕೀಲರ ತಂಡವು ಆಗಸ್ಟ್ 13 ರಂದು ತುರ್ತು ‘ಹೇಬಿಯಸ್ ಕಾರ್ಪಸ್’ ಅರ್ಜಿಯನ್ನು ಸಲ್ಲಿಸಿತು. ವಿಚಾರಣೆ ನಡೆಸಿದ ಫೆಡರಲ್ ನ್ಯಾಯಾಧೀಶರು ಬಂಧನಕ್ಕೆ ಸೂಕ್ತ ಕಾನೂನು ಕಾರಣ ನೀಡುವಂತೆ ವಲಸೆ ಅಧಿಕಾರಿಗಳಿಗೆ 3 ದಿನಗಳ ಕಾಲಾವಕಾಶ ನೀಡಿದ್ದಾರೆ. ಫೆಡರಲ್ ನ್ಯಾಯಾಲಯದ ನಿರ್ಧಾರದ ನಂತರ, ಮುಂದಿನ ಏಳು ದಿನಗಳಲ್ಲಿ ವಾಸಮಸೆಟ್ಟಿ ಅವರಿಗೆ ಬಾಂಡ್ ವಿಚಾರಣೆ ಸಿಗುವ ನಿರೀಕ್ಷೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ