
ನವದೆಹಲಿ (ಸೆ.4): ನಗರದಲ್ಲಿ ತಮ್ಮದೇ ಆದ ಒಂದು ಪುಟ್ಟ ಮನೆ ಮಾಡಬೇಕು ಅನ್ನೋದು ದುಡಿಯುವ ಪ್ರತಿಯೊಬ್ಬರ ಕನಸು. ಆದರೆ, ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ವ್ಯಕ್ತಿಗಳಿಗೆ ಸಿಗುವ ಸಂಬಳದಲ್ಲಿ ಮನೆ ಮಾಡುವ ಕನಸು ಕಾಣುವುದೇ ಈಗ ದುಬಾರಿಯಾಗಿದೆ. ಅದರಲ್ಲೂ ಬೆಂಗಳೂರಿನಂಥ ನಗರಗಳಲ್ಲಿ ಜಾಗ ಅಥವಾ ಮನೆಯಂಥ ಆಸ್ತಿಗಳನ್ನು ಖರೀದಿ ಮಾಡೋ ನಿರ್ಧಾರ ಮಾಡಿದರೆ, ಸರ್ಕಾರಕ್ಕೆ ಲಕ್ಷ ಲಕ್ಷ ಹಣವನ್ನು ನೋಂದಣಿಯ ರೂಪದಲ್ಲಿ ಕಟ್ಟಬೇಕು. ರಾಜ್ಯದಲ್ಲಿ ಪರಿಸ್ಥಿತಿ ಹೀಗಿರುವಾಗ ದೂರದ ಪೋಲೆಂಡ್ ದೇಶ ಆಸ್ತಿ ಖರೀದಿಯ ವಿಚಾರದಲ್ಲಿ ಕ್ರಾಂತಿಕಾರಿ ನಿರ್ಧಾರ ಮಾಡಿದೆ. ದೇಶದಲ್ಲಿ ಮೊದಲ ಬಾರಿಗೆ ಯಾರಾದರೂ ಮನೆ ಖರೀದಿ ಮಾಡಿದಲ್ಲಿ ಅವರಿಗೆ ಆಸ್ತಿ ತೆರಿಗೆ ವಿನಾಯಿತಿಯನ್ನು ಘೋಷಣೆ ಮಾಡಿದೆ. ಪೋಲೆಂಡ್ ಮೊದಲ ಬಾರಿಗೆ ಗೃಹ ಖರೀದಿದಾರರಿಗೆ 2% ವಹಿವಾಟು ತೆರಿಗೆ ವಿನಾಯಿತಿಯನ್ನು ಪರಿಚಯಿಸಿದೆ. ಈ ವಿನಾಯಿತಿಯು ತಮ್ಮ ಮೊದಲ ಮನೆಯನ್ನು ಖರೀದಿಸಲು ಪ್ರಯತ್ನಿಸುತ್ತಿರುವ ಯುವಜನರ ಮೇಲಿನ ಹಣಕಾಸಿನ ಹೊರೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಇದು ಸೆಕೆಂಡರಿ ಮಾರುಕಟ್ಟೆಯಲ್ಲಿ ಎಲ್ಲಾ ಮೊದಲ ಬಾರಿಗೆ ಖರೀದಿದಾರರಿಗೆ ಅನ್ವಯಿಸುತ್ತದೆ.
ಮೊದಲ ಬಾರಿಗೆ ಖರೀದಿಸುವವರಿಗೆ ತೆರಿಗೆಯ ಮೊತ್ತವು ಆಸ್ತಿಯ ಮೌಲ್ಯದ ಮೇಲೆ ಬದಲಾಗಬಹುದು. ಉದಾಹರಣೆಗೆ, ಯಾರಾದರೂ 500,000 ಜೋಲ್ಟಿ (€111,940) ಮೌಲ್ಯದ ಆಸ್ತಿಯನ್ನು ಖರೀದಿಸಿದರೆ, ಅವರು 10,000 ಜೋಲ್ಟೆ (€ 2,239 ) ವರೆಗೆ ವಿನಾಯಿತಿ ಗಳಿಸಬಹುದು. ಪ್ರಾಪರ್ಟಿಯ ಮೌಲ್ಯದೊಂದಿಗೆ ತೆರಿಗೆ ವಿನಾಯಿತಿ ಮೌಲ್ಯ ಕೂಡ ಹೆಚ್ಚಾಗುತ್ತದೆ. ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಹೇಳುವುದಾದರೆ, 1 ಕೋಟಿ ರೂಪಾಯಿ ಆಸ್ತಿಯನ್ನು ಖರೀದಿ ಮಾಡಿದಲ್ಲಿ, 2 ಲಕ್ಷ ರೂಪಾಯಿ ತೆರಿಗೆ ವಿನಾಯಿತಿ ಇವರಿಗೆ ಸಿಗಲಿದೆ.
ಇನ್ನು 2024ರ ಜನವರಿ 1 ರಿಂದ, 6% ವಹಿವಾಟು ತೆರಿಗೆಯನ್ನು ವೈಯಕ್ತಿಕವಾಗಿ ಆರನೇ ಅಥವಾ ಹೆಚ್ಚಿನ ಕಟ್ಟಡವನ್ನು ಖರೀದಿಸುವುದರ ಮೇಲೆ ವಿಧಿಸಲಾಗುತ್ತದೆ. ಈ ತೆರಿಗೆ ಹೆಚ್ಚಳವು ಬೃಹತ್ ಆಸ್ತಿಯ ಖರೀದಿಗಳನ್ನು ಮತ್ತು ವಸತಿ ಮಾರುಕಟ್ಟೆಯಲ್ಲಿ ನಿರ್ದಿಷ್ಟ ಹೂಡಿಕೆಯನ್ನು ಪ್ರೋತ್ಸಾಹಿಸಲು ಉದ್ದೇಶಿಸಲಾಗಿದೆ. ಪೋಲೆಂಡ್ನಲ್ಲಿ ಯುವ ಜನಾಂಗ ಹಾಗೂ ಬಡವರಿಗೆ ಮನೆಗಳು ಸಿಗಬೇಕು. ಸ್ವಂತ ಸೂರು ಅವರದು ಕೂಡ ಆಗಬೇಕು ಎನ್ನುವ ನಿಟ್ಟಿನಲ್ಲಿ ಪೋಲೆಂಡ್ ಸರ್ಕಾರ ಮಾಡುತ್ತಿರುವ ವ್ಯಾಪಕ ಪ್ರಯತ್ನದ ಭಾಗವಾಗಿ ಈ ನಿರ್ಧಾರ ಮಾಡಲಿದೆ. ಪೋಲೆಂಡ್ನಲ್ಲಿ ವಸತಿಯ ಕೊರತೆ ವ್ಯಾಪಕವಾಗಿದೆ.
ಪೋಲಿಷ್ ರಾಜಕೀಯದಲ್ಲಿ ವಸತಿ ನೀತಿಗಳು ಒಂದು ಚರ್ಚಾಸ್ಪದ ವಿಷಯವಾಗಿ ಮಾರ್ಪಟ್ಟಿವೆ, ವಿವಿಧ ಪಕ್ಷಗಳ ಬೆಂಬಲದೊಂದಿಗೆ ವಸತಿ ಸಮಸ್ಯೆಯನ್ನು ಹೋಗಲಾಡಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮೊದಲ ಬಾರಿಗೆ ವಸತಿ ಖರೀದಿ ಮಾಡುವವರಿಗೆ ರಾಜ್ಯ ನೀಡುವ ಸಾಲಗಳಿಗೆ ಸಬ್ಸಿಡಿಗಳನ್ನು ನೀಡಬೇಕು ಎಂದು ಹೇಳಿದ್ದರೆ, ಇನ್ನೂ ಕೆಲವು ಪಕ್ಷಗಳು ಕೈಗೆಟುಕುವ ದರದಲ್ಲಿ ಸರ್ಕಾರವೇ ವಸತಿಗಳನ್ನು ಹಂಚಬೇಕು ಎಂದು ಪ್ರಸ್ತಾಪಿಸಿವೆ.
'ಮೂರು ವರ್ಷ ಮನೆ ಬಾಡಿಗೆ ಏರಿಸೋ ಹಾಗಿಲ್ಲ..' ಹೊಸ ರೂಲ್ಸ್ ಶಿಫಾರಸು ಮಾಡಿದ ಸರ್ಕಾರ!
ದೇಶದ ಪ್ರತಿಯೊಬ್ಬ ನಾಗರೀಕನೂ ಸ್ವಂತ ಮನೆಯನ್ನು ಹೊಂದಬೇಕು ಎನ್ನುವ ಗುರಿಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಅದರಲ್ಲೂ ಯುವ ಜನಾಂಗ ಸ್ವಂತ ಮನೆಗಳನ್ನು ಖರೀದಿ ಮಾಡಬೇಕು ಎನ್ನುವುದಾಗಿದೆ. ಇದು ಮೊದಲ ಬಾರಿಗೆ ಖರೀದಿದಾರರನ್ನು ಬೆಂಬಲಿಸುವ ಮತ್ತು ನಿರ್ದಿಷ್ಟ ಆಸ್ತಿ ಹೂಡಿಕೆಗಳನ್ನು ಪ್ರೋತ್ಸಾಹಿಸುವ ನಡುವೆ ಸಮತೋಲನವನ್ನು ಸಾಧಿಸುವ ಗುರಿಯನ್ನು ಹೊಂದಿದೆ.
UPI Payment: ತರಕಾರಿ ಮಾರ್ಕೆಟ್ನಲ್ಲಿ QR Code ಸ್ಕ್ಯಾನ್ ಮಾಡಿ ಹಣ ಪಾವತಿಸಿದ ಜರ್ಮನಿ ಸಚಿವ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ