ಕೆಲ ದಿನಗಳ ಹಿಂದೆ ಶ್ವಾನವೊಂದು ತನ್ನ ಮಾಲೀಕ ತೀರಿಕೊಂಡ ನಂತರವೂ ವರ್ಷಗಳ ಕಾಲ ರೈಲು ನಿಲ್ದಾಣದಲ್ಲಿ ತನ್ನ ಮಾಲೀಕನಿಗಾಗಿ ಕಾಯುತ್ತಿದ್ದ ಜಪಾನ್ನ ನಿಷ್ಠಾವಂತ ನಾಯಿ ಹಿಚಿಕೊದ ಕತೆಯನ್ನು ಕೇಳಿರಬಹುದು. ಈಗ ಅದೇ ರೀತಿಯ ಶ್ವಾನವೊಂದರ ನಿಷ್ಠೆಯ ಕತೆ ವೈರಲ್ ಆಗಿದೆ. ಇದು ಅಫ್ಘಾನಿಸ್ತಾನದ ಶ್ವಾನವೊಂದರ ಕತೆ. ಇತ್ತೀಚೆಗಷ್ಟೇ ಅಫ್ಘಾನಿಸ್ತಾನದಲ್ಲಿ ಭಾರಿ ಭೂಕಂಪವುಂಟಾಗಿ 1000 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಆದರೆ ಈ ಅನಾಹುತದಲ್ಲಿ ಬದುಕುಳಿದ ಶ್ವಾನವೊಂದು ಮತ್ತೆ ಮತ್ತೆ ಬಂದು ತಾನು ವಾಸವಿದ್ದ ಹಳೆಯ ಮನೆಯ ಸಮೀಪ ಬಂದು ಪಳೆಯುಳಿಕೆಯಲ್ಲಿ ತನ್ನವರಾರಾದರು ಇದ್ದಾರೋ ಎಂದು ನೋಡುತ್ತಿದೆ.
ಕಳೆದ ಬುಧವಾರ (ಜೂನ್ 22) ಮುಂಜಾನೆ ಪೂರ್ವ ಅಫ್ಘಾನಿಸ್ತಾನದ ಗ್ರಾಮೀಣ, ಪರ್ವತ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ನಂತರ, ಸಾವಿರಾರು ಜನರು ಸಾವನ್ನಪ್ಪಿದರು ಮತ್ತು ಸಾವಿರಾರು ಜನರು ಗಾಯಗೊಂಡರು. ರಿಕ್ಟರ್ ಮಾಪಕದಲ್ಲಿ ಈ ಭೂಕಂಪನದ ತೀವ್ರತೆ 6.1 ರ ದಾಖಲಾಗಿತ್ತು. ಹಲವು ಮನೆಗಳು ಈ ಭೂಕಂಪನದಿಂದ ಕುಸಿದು ಧ್ವಂಸಗೊಂಡಿದ್ದವು. ಇಂತಹ ಅನೇಕ ಧ್ವಂಸಗೊಂಡ ಮನೆಗಳ ಅವಶೇಷಗಳಿರುವ ಸ್ಥಳಕ್ಕೆ ಶ್ವಾನವೊಂದು ಪ್ರತಿದಿನವೂ ಬಂದು ಯಾರನ್ನೋ ಹುಡುಕುವುದನ್ನು ಜನ ಗಮನಿಸಿದ್ದಾರೆ.
ಈ ನಾಯಿಯನ್ನು ಸಾಕುತ್ತಿದ್ದ ಮನೆಯ ಜನ ಎಲ್ಲರೂ ಭೂಕಂಪನದಲ್ಲಿ ಸಾವನ್ನಪ್ಪಿದ್ದಾರೆ. ಹೀಗಾಗಿ ಈ ಶ್ವಾನವನ್ನು ನಾವು ಕರೆದುಕೊಂಡು ಹೋಗಿ ಆಹಾರ ನೀಡುತ್ತಿದ್ದೇವೆ. ಆದರೆ ಈ ಶ್ವಾನ ಮತ್ತೆ ಮತ್ತೆ ಈ ಧ್ವಂಸಗೊಂಡಿರುವ ತನ್ನ ಹಳೆಯ ಮನೆ ಬಳಿ ಬಂದು ಅಲ್ಲಿ ಯಾರಾದರೂ ತನ್ನ ಯಜಮಾನ ಅಥವಾ ಕುಟುಂಬದವರು ಇದ್ದಾರೋ ಎಂದು ಸುತ್ತಮುತ್ತ ನೋಡಲು ಶುರು ಮಾಡುತ್ತದೆ. ಅಲ್ಲದೇ ಜೋರಾಗಿ ಅಳುವಂತೆ ಬೊಬ್ಬಿಡುತ್ತದೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. ಅಫ್ಘಾನಿಸ್ತಾನದ ಪಕ್ಟಿಕಾದ ಗಯಾನ್ನಲ್ಲಿರುವ ಒಚ್ಕಿ ಗ್ರಾಮ ಈ ಘಟನೆ ನಡೆದಿದೆ. ತನ್ನ ಮಾಲೀಕನ ಹುಡುಕಾಟದಲ್ಲಿ ಹತಾಶವಾಗಿರುವ ನಾಯಿಯ ಹೃದಯ ವಿದ್ರಾವಕ ಫೋಟೋಗೆ ನೆಟ್ಟಿಗರು ಭಾವುಕರಾಗಿದ್ದಾರೆ.
ಭೂಕಂಪದಿಂದ ನಲುಗಿದ ಆಫ್ಘಾನ್ಗೆ ಭಾರತ ತುರ್ತು ನೆರವು, ಕಾಬೂಲ್ನಲ್ಲಿ ರಾಯಭಾರ ಕಚೇರಿ ಆರಂಭ!
ಅಫ್ಘಾನಿಸ್ತಾನದಲ್ಲಿ (Afghanistan) ಸಂಭವಿಸಿದ ಭೀಕರ ಭೂಕಂಪವು (Earthquake) ಇಡೀ ದೇಶವನ್ನು ಅಕ್ಷರಶಃ ನರಕವನ್ನಾಗಿ ಮಾಡಿದೆ. ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ಹೆಚ್ಚಿನ ಮಾಹಿತಿಗಳೂ ಸಿಗದೇ ಇದ್ದರೂ, ಕೆಲವೊಂದು ಚಿತ್ರಗಳು ಬೆಟ್ಟಗುಡ್ಡಗಳಿಂದಲೇ ತುಂಬಿರುವ ದೇಶದಲ್ಲಿ ಯಾವ ರೀತಿಯ ವಿನಾಶವಾಗಿದೆ ಎನ್ನುವುದನ್ನು ಸಾರಿ ಹೇಳುವಂತಿತ್ತು.
ಭೂಕಂಪದಲ್ಲಿ ಅಫ್ಘಾನಿಸ್ತಾನದಲ್ಲಿ 1 ಸಾವಿರಕ್ಕೂ ಅಧಿಕ ಜನ ಸಾವಿಗೀಡಾಗಿದ್ದಾರೆ. ಸಾವಿರಾರು ಜನರು ಗಾಯಗೊಂಡಿದ್ದಾರೆ. ಜವಾಬ್ದಾರಿಯುತ ಸರ್ಕಾರವಿಲ್ಲದೆ, ಭಯೋತ್ಪಾದಕ ಗುಂಪು ತಾಲಿಬಾನ್ (Taliban) ಆಡಳಿತದಲ್ಲಿ ಅಫ್ಘನ್ ಜನತೆ ದಿನ ದೂಡುತ್ತಿದ್ದಾರೆ. ಈ ಮಧ್ಯ ಭೂಕಂಪದ ನಡುವೆ ಅಫ್ಘಾನಿಸ್ತಾನದ 3 ವರ್ಷದ ಬಾಲಕಿಯ ಹೃದಯ ವಿದ್ರಾವಕ ಚಿತ್ರ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral) ಆಗಿದ್ದು, ಅಫ್ಘನ್ ದೇಶದ ಪರಿಸ್ಥಿತಿಯನ್ನು ವಿವರಿಸುತ್ತಿದೆ.
ಅಫ್ಘನ್ ಭೂಕಂಪದಲ್ಲಿ ತನ್ನವರನ್ನೆಲ್ಲಾ ಕಳೆದುಕೊಂಡ 3 ವರ್ಷದ ಮಗುವಿಗೆ ಮರುಗಿದ ಜನ!
ಭೂಕಂಪದಲ್ಲಿ 3 ವರ್ಷದ ಬಾಲಕಿಯ ಕುಟುಂಬದ ಎಲ್ಲಾ ಸದಸ್ಯರು ಸಾವು ಕಂಡಿದ್ದು, ಈಕೆಯೊಬ್ಬಳೇ ಬದುಕುಳಿದಿದ್ದಾಳೆ. ಸಂಪೂರ್ಣ ನಾಮಾವಶೇಷವಾಗಿರುವ ಮನೆಯ ಮುಂದೆ ನಿಂತಿರುವ ಬಾಲಕಿಯ ಚಿತ್ರವನ್ನು ಅನಾಮಧೇಯ ವ್ಯಕ್ತಿಯೊಬ್ಬರು ಸೆರೆಹಿಡಿದ್ದಾರೆ. ಈ ಬಾಲಕಿಯ ಚಿತ್ರವನ್ನು ನೋಡಿ ನೆಟಿಜನ್ಸ್ಗಳು ಭಾವುಕರಾಗಿದ್ದಾರೆ. ಚಿತ್ರದಲ್ಲಿ ಮಗುವಿನ ಮುಖದ ಮೇಲೆ ಕೆಸರಿದ್ದು, ಮುರಿದು ಬಿದ್ದ ಮನೆ ಆಕೆಯ ಹಿಂದೆ ಕಾಣುತ್ತಿದೆ. ಇದರ ನಡುವೆ ಭಾರತ ಸರ್ಕಾರ ಮಾನವೀಯತೆ ಆಧಾರದಲ್ಲಿ ನೆರೆ ರಾಷ್ಟ್ರಕ್ಕೆ ನೆರವು ಘೋಷಿಸಿದೆ.
ಆಫ್ಘಾನ್ ಜನರೊಂದಿಗೆ ಭಾರತ ಐತಿಹಾಸಿಕ ಹಾಗೂ ನಾಗರೀಕ ಸಂಬಂಧ ಹೊಂದಿದೆ. ಹೀಗಾಗಿ ಆಫ್ಘಾನಿಸ್ತಾನಕ್ಕೆ ಭಾರತ ನೆರವು ಘೋಷಿಸಿದೆ. ಆಫ್ಘಾನಿಸ್ತಾನದಲ್ಲಿ ವೈದ್ಯಕೀಯ, ಆಹಾರ ಸೇರಿದಂತೆ ಹಲವು ರೀತಿಯಲ್ಲಿ ನೆರವು ನೀಡಲು ಭಾರತ ಸಿದ್ಧವಾಗಿದೆ. ಇದಕ್ಕಾಗಿ ಸ್ಥಗಿತಗೊಂಡಿದ್ದ ಭಾರತದ ರಾಯಭಾರ ಕಚೇರಿಯನ್ನು ಮತ್ತೆ ಕಾಬೂಲ್ನಲ್ಲಿ ಆರಂಭಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ