Russia Ukraine Crisis: ಉಕ್ರೇನ್‌ನಲ್ಲಿ ಕನ್ನಡಿಗರ ನೆರವಿಗೆ ನಿಂತ ಉದ್ಯಮಿ ಡಾ. ರವಿ!

Feb 25, 2022, 10:42 AM IST

ಕೀವ್‌ (ಫೆ. 25) : ಕಳೆದ ಕೆಲವು ದಿನಗಳಿಂದ ಯುದ್ಧದ ಬೆದರಿಕೆ ಹಾಕುತ್ತಲೇ ಬಂದಿದ್ದ ರಷ್ಯಾ, ನೆರೆಯ ಉಕ್ರೇನ್‌ ಮೇಲೆ ಸಮರ ಆರಂಭಿಸಿದೆ. ಉಕ್ರೇನ್‌ನ ಬಂಡುಕೋರರ ವಶದಲ್ಲಿರುವ ಪ್ರದೇಶಗಳಿಗೆ ನೆರವಾಗುವ ಹೆಸರಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಯುದ್ಧ ಘೋಷಣೆ ಮಾಡಿದ್ದು, ಗುರುವಾರ ಬೆಳಗ್ಗೆಯಿಂದಲೇ ಉಕ್ರೇನ್‌ ದೇಶವನ್ನು ಸುತ್ತುವರೆದು ಕ್ಷಿಪಣಿ, ವಿಮಾನ, ಕಾಪ್ಟರ್‌ಗಳ ಮೂಲಕ ಭಾರೀ ದಾಳಿ ಆರಂಭಿಸಿದ್ದಾರೆ. ಪರಿಣಾಮ ರಾಜಧಾನಿ ಕೀವ್‌ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಬಾಂಬ್‌ಗಳು ಸ್ಫೋಟಿಸಿದ ಹಾಗೂ ದಟ್ಟಹೊಗೆ ಆಕಾಶದತ್ತ ಏಳುತ್ತಿರುವ ದೃಶ್ಯಗಳು ಕಂಡುಬಂದಿವೆ.

ಇದನ್ನೂ ಓದಿ: Russia-Ukraine Crisis: ಬ್ಲಾಸ್ಟ್‌ ಆಗ್ತಿದೆ, ನಮ್ಮನ್ನು ಕರ್ಕೊಂಡು ಹೋಗಿ: ಉಕ್ರೇನ್‌ನಲ್ಲಿ ಕನ್ನಡಿಗರ ಆಕ್ರಂದನ

ಇತ್ತ ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರು ತಮ್ಮ ಜೀವದ ಬಗ್ಗೆ ಆತಂಕಕ್ಕೀಡಾಗಿದ್ದು, ತಮ್ಮ ರಕ್ಷಣೆಗಾಗಿ ಭಾರತ ಸರ್ಕಾರ ಏನಾದರೂ ಮಾಡಲೇಬೇಕು ಎಂದು ಕೋರಿಕೊಂಡಿದ್ದಾರೆ.  ಈ ಮಧ್ಯೆ ಉಕ್ರೇನ್‌ನಲ್ಲಿರುವ ಕನ್ನಡಿಗರ ನೆರವಿಗೆ  ಹೊಸಕೋಟೆಯ ಉದ್ಯಮಿ ಡಾ. ರವಿ ನಿಂತಿದ್ದಾರೆ.  ಉಕ್ರೇನ್‌ನ  ಜೋಲೋತೋನೊಶಾದಲ್ಲಿ ಫೇಸ್‌ ಉಕರ್‌ (FES UKR) ಎಂಬ ಹೆಸರಿನ  ಕಾಫಿ ಫ್ಯಾಕ್ಟರಿ ಡಾ. ರವಿ ನಡೆಸುತ್ತಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರಿಗೆ, ಉದ್ಯಮಿ ಡಾ.ರವಿ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಿದ್ದಾರೆ.