ಬಾಂಗ್ಲಾದೇಶದಲ್ಲಿ ಹಿಂದೂ ದೇಗುಲಗಳು ಮತ್ತು ಹಿಂದೂಗಳನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿ ಪ್ರಕರಣಗಳು ಮತ್ತಷ್ಟು ವ್ಯಾಪಕವಾಗುತ್ತಿದೆ.
ಡಾಕಾ (ಅ. 18): ಬಾಂಗ್ಲಾದೇಶದಲ್ಲಿ ಹಿಂದೂ ದೇಗುಲಗಳು ಮತ್ತು ಹಿಂದೂಗಳನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿ ಪ್ರಕರಣಗಳು ಮತ್ತಷ್ಟು ವ್ಯಾಪಕವಾಗುತ್ತಿದೆ. ವಿಜಯದಶಮಿ ಹಿನ್ನೆಲೆ ಹಿಂದೂಗಳು ದೇಗುಲದಲ್ಲಿ ಕಾಳಿಮಾತೆಯ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಮುಸ್ಲಿಂ ಧಾರ್ಮಿಕ ಮುಖಂಡ ಇಮಾಮ್ನ ಪ್ರಚೋದನೆಯಿಂದ ದೇಗುಲಕ್ಕೆ ನುಗ್ಗಿದ ಆರೋಪಿಗಳು, ಅರ್ಚಕರು ಸೇರಿದಂತೆ ಭಕ್ತರ ಮೇಲೆ ಹಲ್ಲೆ ನಡೆಸಿ, ಐದು ಮೂರ್ತಿಗಳನ್ನು ಭಗ್ನಗೊಳಿಸಿ ದೇಗುಲವನ್ನು ಧ್ವಂಸಗೊಳಿಸಿದ್ದಾರೆ. ನಾಲ್ವರು ಹಿಂದೂಗಳನ್ನು ಹತ್ಯೆಗೈದಿದ್ದಾರೆ.
ಬಾಂಗ್ಲಾದ 8 ಆಡಳಿತಾತ್ಮಕ ವಿಭಾಗಗಳ 64 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ ಕಳೆದ ಬುಧವಾರದಿಂದೀಚೆಗೆ ಹಿಂಸಾಚಾರ ನಡೆದಿದ್ದು, ಒಂದು ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ದೊಂಬಿ, ಗಲಭೆ ತಡೆಗೆ ಬಾಂಗ್ಲಾ ಸರ್ಕಾರ 22 ಜಿಲ್ಲೆಗಳಲ್ಲಿ ಅರೆಸೇನಾ ಪಡೆ ನಿಯೋಜಿಸಿದೆ. ಅದರ ಹೊರತಾಗಿಯೂ, ಹಿಂಸೆ ನಿಯಂತ್ರಣಕ್ಕೆ ಬರುವ ಯಾವುದೇ ಸುಳಿವು ಕಂಡುಬರುತ್ತಿಲ್ಲ. ಇದು ಸ್ಥಳೀಯ ಅಲ್ಪಸಂಖ್ಯಾತ ಹಿಂದೂ ಸಮುದಾಯದಲ್ಲಿ ಭಾರೀ ಆತಂಕ ಹುಟ್ಟುಹಾಕಿದೆ.