ಯುದ್ಧಭೂಮಿಯಲ್ಲಿ Asianet News: ಪ್ರಜೆಗಳ ರಕ್ಷಿಸಲು ಆಪರೇಷನ್ ಗಂಗಾ, ಮೋದಿಗೆ ವಿದೇಶೀ ನಾಯಕರ ಮೆಚ್ಚುಗೆ!

Mar 6, 2022, 12:38 PM IST

ಕೀವ್(ಮಾ.06): ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ, ಭಾರತ ಸರ್ಕಾರವು ತನ್ನ ಸುಮಾರು 14,000 ನಾಗರಿಕರನ್ನು ಉಕ್ರೇನ್‌ನಿಂದ ಸ್ಥಳಾಂತರಿಸಿದೆ. ತೆರವು ಕಾರ್ಯಾಚರಣೆಯ ಮೇಲ್ವಿಚಾರಣೆಯಲ್ಲಿ ನಾಲ್ವರು ಕೇಂದ್ರ ಸಚಿವರು ಸ್ವತಃ ಪೋಲೆಂಡ್, ರೊಮೇನಿಯಾ, ಸ್ಲೋವಾಕಿಯಾ, ಹಂಗೇರಿ ಮತ್ತು ಮೊಲ್ಡೊವಾಗೆ ತಲುಪಿದ್ದಾರೆ. ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ರಕ್ಷಿಸಲು ನಾಲ್ವರು ಸಚಿವರನ್ನೊಳಗೊಂಡ ತಂಡವನ್ನು ನಿಯೋಜಿಸಿದ ಏಕೈಕ ದೇಶ ಭಾರತ. ಖುದ್ದು ಪ್ರಧಾನಿ ಮೋದಿ ಅವರೇ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಮೋದಿ ಸರ್ಕಾರದ ಈ ನಡೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ನಡೆಯುತ್ತಿರುವ ಆಪರೇಷನ್ ಗಂಗಾ ಕಾರ್ಯಾಚರಣೆಯ ನಡುವೆಯೇ ಏಷ್ಯಾನೆಟ್ ನ್ಯೂಸ್ ಪೋಲೆಂಡ್ ಗಡಿ ತಲುಪಿದೆ. ಹೀಗಿರುವಾಗ ಜನರಲ್ ವಿ.ಕೆ.ಸಿಂಗ್ ಕಾರ್ಯಾಚರಣೆಯ ನಿಗಾದಲ್ಲಿ ನಿರತರಾಗಿದ್ದರು. ಪೋಲೆಂಡ್‌ನಲ್ಲಿರುವ ಭಾರತದ ರಾಯಭಾರಿ ನಗ್ಮಾ ಎಂ ಮಲಿಕ್ ವರದಿಗಾರ ಪ್ರಶಾಂತ್ ರಘುವಂಶಮ್ ಜೊತೆ ಮಾತನಾಡಿ ನಮ್ಮ ರಾಜ್ಯ ಸಚಿವ ಜನರಲ್ ವಿಕೆ ಸಿಂಗ್ ಇಲ್ಲಿಗೆ ಬಂದು ಅತ್ಯಂತ ಉತ್ಸಾಹ ಮತ್ತು ವೇಗದಿಂದ ಕಾರ್ಯಾಚರಣೆಗೆ ಆದೇಶ ನೀಡಿದ್ದಕ್ಕಾಗಿ ನಾನು ತುಂಬಾ ಕೃತಜ್ಞಳಾಗಿದ್ದೇನೆ ಎಂದು ಹೇಳಿದರು. ಅವರು ಇಲ್ಲಿಗೆ ಬಂದಿದ್ದರಿಂದ ನಮಗೆ ವೇಗವಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಯನ್ನು ನಾನು ಚೆನ್ನಾಗಿ ನೋಡಿದ್ದೇನೆ ಎಂದು ನಗ್ಮಾ ಏಷ್ಯಾನೆಟ್ ನ್ಯೂಸ್‌ಗೆ ತಿಳಿಸಿದರು.