Chikkamagaluru : ಕೇರಳ ಪೊಲೀಸರಿಂದ ಶೃಂಗೇರಿ ಮೂಲದ ನಕ್ಸಲರ ಬಂಧನ

Nov 10, 2021, 10:15 AM IST

ಬೆಂಗಳೂರು (ನ. 10): ಮೂರು ರಾಜ್ಯದ ಪೊಲೀಸರಿಗೆ ಬೇಕಾಗಿದ್ದ ಕರ್ನಾಟಕ ಮೂಲದ ಕುಖ್ಯಾತ ನಕ್ಸಲ್‌ (Naxal) ನಾಯಕರಾದ ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರನ್ನು ಕೇರಳದ ಭಯೋತ್ಪಾದನಾ ನಿಗ್ರಹ ಪಡೆ ದಳ  ಬಂಧಿಸಿದೆ.

ಕರ್ನಾಟಕ ಮತ್ತು ವಯನಾಡು ಗಡಿ ಪ್ರದೇಶದಲ್ಲಿ ಎಟಿಎಸ್‌ ನಡೆಸಿದ ಕಾರ್ಯಾಚರಣೆ ವೇಳೆ ಪಶ್ಚಿಮ ಘಟ್ಟವಲಯ ಸಮಿತಿ ಕಾರ್ಯದರ್ಶಿ ಬಿ.ಜಿ.ಕೃಷ್ಣಮೂರ್ತಿ ಮತ್ತು ಕಬನಿದಳಂ ಕೇಡರ್‌ನ ಸಾವಿತ್ರಿಯನ್ನು ಬಂಧಿಸಲಾಗಿದೆ. ಕೃಷ್ಣಮೂರ್ತಿ, ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಮೂಲದ ವ್ಯಕ್ತಿಯಾಗಿದ್ದರೆ, ಸಾವಿತ್ರಿ ಚಿಕ್ಕಮಗಳೂರು ಜಿಲ್ಲೆ ಕಳಸ ಮೂಲದವಳು.

ಕೃಷ್ಣಮೂರ್ತಿ ಶೃಂಗೇರಿ ತಾಲೂಕು ಭುವನಹಡ್ಲು ಗ್ರಾಮದವನು. ಶಿವಮೊಗ್ಗದಲ್ಲಿ ನ್ಯಾಯಾಂಗ ಪದವಿ ಪಡೆದಿದ್ದ ಈತ, ಅಲ್ಲಿಯೇ ಸಾಕಷ್ಟುಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ. ಬಳಿಕ ಪಶ್ಚಿಮಘಟ್ಟಉಳಿಸಿ ಹೋರಾಟ, ಕುದುರೆಮುಖ ಉಳಿಸಿ ಮೊದಲಾದ ಹೋರಾಟಗಳ ಮೂಲಕ ಪ್ರವರ್ಧಮಾನಕ್ಕೆ ಬಂದು ಬಳಿಕ ಇದ್ದಕ್ಕಿದ್ದಂತೆ ನಕ್ಸಲ್‌ ವಲಯದಲ್ಲಿ ಕಾಣಿಸಿಕೊಂಡಿದ್ದ. ಬಳಿಕ ಕರ್ನಾಟಕದಲ್ಲಿ ನಕ್ಸಲ್‌ ಚಳವಳಿಯನ್ನು ಕಾಯ್ದಿಡುವಲ್ಲಿ, ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.