ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಮತ್ತೊಂದು ಕುಡಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಮತ್ತೊಬ್ಬ ಪುತ್ರ ಸೂರಜ್ ರೇವಣ್ಣ ವಿಧಾನ ಪರಿಷತ್ ಚುನಾವಣೆಯಲ್ಲಿ ಹಾಸನದಿಂದ ಕಣಕ್ಕಿಳಿದಿದ್ದಾರೆ.
ಬೆಂಗಳೂರು (ನ. 21): ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ (HD Devegowda) ಕುಟುಂಬದ ಮತ್ತೊಂದು ಕುಡಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಮತ್ತೊಬ್ಬ ಪುತ್ರ ಸೂರಜ್ ರೇವಣ್ಣ (Sooraj Revanna) ವಿಧಾನ ಪರಿಷತ್ ಚುನಾವಣೆಯಲ್ಲಿ ಹಾಸನದಿಂದ (Hassan) ಕಣಕ್ಕಿಳಿದಿದ್ದಾರೆ. ಇದರೊಂದಿಗೆ ದೇವೇಗೌಡರ ಕುಟುಂಬದ 8ನೇ ವ್ಯಕ್ತಿ ರಾಜಕೀಯಕ್ಕೆ ಪ್ರವೇಶಿಸಿದಂತಾಗಿದೆ. ಅಲ್ಲದೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಕುಟುಂಬದ ಎಲ್ಲರೂ ರಾಜಕೀಯಕ್ಕೆ ಪ್ರವೇಶಿಸಿದಂತಾಗಿದೆ.
ಮಾಜಿ ಪ್ರಧಾನಿ ದೇವೇಗೌಡರು ಇಳಿ ವಯಸ್ಸಿನಲ್ಲೂ ರಾಜಕೀಯದಲ್ಲಿ (Politics) ಸಕ್ರಿಯರಾಗಿದ್ದಾರೆ. ಅವರ ಪುತ್ರರೂ ರಾಜಕೀಯ ಕಣದಲ್ಲಿದ್ದಾರೆ. ಎಚ್.ಡಿ.ರೇವಣ್ಣ ರಾಜಕೀಯದಲ್ಲಿದ್ದಾರೆ. ಇನ್ನು ಅವರ ಪತ್ನಿ ಭವಾನಿ ರೇವಣ್ಣ ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿದ್ದರು. ಎರಡನೇ ಪುತ್ರ ಪ್ರಜ್ವಲ್ ರೇವಣ್ಣ ಹಾಸನದಿಂದ ಸಂಸದರಾಗಿದ್ದರೆ, ಈಗ ಸೂರಜ್ ವಿಧಾನ ಪರಿಷತ್ ಚುನಾವಣೆಗೆ ಕಣಕ್ಕಿಳಿಯುವ ಮೂಲಕ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.
ಗೌಡರ ಕುಟುಂಬ ರಾಜಕಾರಣಕ್ಕೆ ಇತರ ರಾಜಕೀಯ ನಾಯಕರು ವ್ಯಂಗ್ಯವಾಡಿದ್ದಾರೆ. 'ಇಡೀ ದೇಶದಲ್ಲಿ ಒಂದೇ ಕುಟುಂಬದ ಎಂಟು ಜನರು ರಾಜಕಾರಣದಲ್ಲಿರುವ ಏಕೈಕ ಕುಟುಂಬವೆಂದರೆ ಅದುವೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ' ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ಛೇಡಿಸಿದ್ದಾರೆ.