ಪೊಲೀಸರ ಅಮಾನವೀಯ ಕೃತ್ಯಕ್ಕೆ ಸಿಕ್ತು ಸಾಕ್ಷಿ: ಹಿಂದೂ ಕಾರ್ಯಕರ್ತನ ಕಿವಿ ತಮಟೆ ಡ್ಯಾಮೇಜ್‌

May 24, 2023, 11:39 AM IST

ಪುತ್ತೂರು (ಮೇ.24): ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಮಾಜಿ ಸಿಎಂ ಡಿ.ವಿ ಸದಾನಂದ ಗೌಡ ಅವರ ಭಾವಚಿತ್ರದ ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಪೊಲೀಸ್‌ ದೌರ್ಜನ್ಯಕ್ಕೆ ಒಳಗಾದ ಇಬ್ಬರು ಗಾಯಾಳುಗಳ ಪೈಕಿ ಅಭಿ ಯಾನೆ ಅವಿನಾಶ್‌ ಎಂಬವರ ಕಿವಿಯ ತಮಟೆಗೆ ತೀವ್ರ ಹಾನಿಯಾಗಿದೆ ಎಂಬ ವೈದ್ಯಕೀಯ ವರದಿಗಳು ಇದೀಗ ವೈರಲ್‌ ಆಗಿದೆ. ಯುವಕನ ಕಿವಿಯದ್ದು ಎಂದು ಹೇಳಲಾದ ಸ್ಕ್ಯಾ‌ನಿಂಗ್‌ ಫೋಟೋಗಳು ಹಾಗೂ ಅದರ ವರದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿವೆ. ಈ ವರದಿಗಳು ವೈರಲ್‌ ಆಗುತ್ತಿದ್ದಂತೆ ಪುತ್ತೂರಿನ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಅವರು ದ.ಕ. ಜಿಲ್ಲಾ ಎಸ್ಪಿ ಅವರನ್ನು ಭೇಟಿಯಾಗಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುರ್ಮಾ ಕಟೀಲ್‌ ಹಾಗೂ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಚಪ್ಪಲಿ ಹಾರ ಹಾಕಿ ಶ್ರದ್ಧಾಂಜಲಿ ಬ್ಯಾನರ್‌ ಹಾಕಿದ ಪ್ರಕರಣ ಮೇ 14ರಂದು ತಡರಾತ್ರಿ ಪುತ್ತೂರು ಬಸ್‌ ನಿಲ್ದಾಣದ ಬಳಿಯಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 5ರಂದು 9 ಜನರನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿಗಳನ್ನು ಡಿವೈಎಸ್ಪಿ ಕಚೇರಿಗೆ ಕೊಂಡೊಯ್ದು ದೌರ್ಜನ್ಯ ನಡೆಸಿರುವುದಾಗಿ ಆರೋಪಿಸಲಾಗಿತ್ತು. ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯ ಎಸ್‌ಐ ಮತ್ತು ಓರ್ವ ಪಿಸಿಯನ್ನು ಅಮಾನತು ಮಾಡಲಾಗಿತ್ತು. ಡಿವೈಎಸ್ಪಿ ಅವರನ್ನು ರಜೆಯಲ್ಲಿ ಕಳುಹಿಸಲಾಗಿದೆ. ಈ ಪ್ರಕರಣ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಕಂಪ್ಲಿಟ್ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.