BIG 3: ರಸ್ತೆ ಸರಿ ಮಾಡಿಸಿ, ಇಲ್ಲಾ ದಯಾಮರಣ ಕೊಡಿ: ರಾಷ್ಟ್ರಪತಿಗೆ 78 ಕುಟುಂಬಗಳ ಅರ್ಜಿ

May 30, 2022, 11:17 AM IST

ರಾಯಚೂರು (ಮೇ. 30): ರಸ್ತೆ ಸರಿ ಮಾಡಿ ಇಲ್ಲ ದಯಾಮರಣ (Mercy Killing) ನೀಡಿ ಎನ್ನುತ್ತಿದ್ದಾರೆ ರಾಯಚೂರು ಜಿಲ್ಲೆ ಜಾಲಾಪುರ ಕ್ಯಾಂಪ್‌ನಲ್ಲಿ. ಇಲ್ಲಿನ ಜನರು ಭೂಮಿ ಖರೀದಿಸಿ, ಮನೆ ಕಟ್ಟಿಕೊಂಡು ವಾಸವಿದ್ದಾರೆ. ಓಡಾಟಕ್ಕೆಂದು 78 ನಿವಾಸಿಗಳು ಕಾಲುದಾರಿಯೊಂದನ್ನು ಬಿಟ್ಟುಕೊಂಡು ಓಡಾಟ ಮಾಡುತ್ತಿದ್ದರು. ಇತ್ತೀಚಿಗೆ ಈ ಕಾಲುದಾರಿಗೆ ಗ್ರಾಪಂನಿಂದ ಸಿಸಿರಸ್ತೆ ಹಾಕಿದ್ದಾರೆ. ಹೀಗಾಗಿ ಈ ರಸ್ತೆ ಮೇಲೆ ಪಕ್ಕದ ಜಮೀನಿನ ಕಣ್ಣು ಬಿದ್ದಿದೆ. ತನ್ನ ಜಮೀನಿಗೆ 30 ಫೀಟ್ ರಸ್ತೆ ಬಿಡಿ ಎಂದು ಇಲ್ಲಿನ ನಿವಾಸಿಗಳಿಗೆ ಕಿರುಕುಳ ನೀಡುತ್ತಿದ್ದಾನೆ. ಈತನ ಕಿರುಕುಳಕ್ಕೆ ಬೇಸತ್ತ ನಿವಾಸಿಗಳು, ಅಧಿಕಾರಿಗಳಿಗೆ ದೂರು ನೀಡಿದರೆ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಸಮಸ್ಯೆಯನ್ನು ಬಗೆಹರಿಸಿ ಇಲ್ಲಾಂದ್ರೆ ನಮಗೆ ದಯಾಮರಣ ಕೊಡಿ ಎಂದು ರಾಷ್ಟ್ರಪತಿಯವರಿಗೆ ಅರ್ಜಿ ಸಲ್ಲಿಸಿದ್ದಾರೆ.