ತಾಯಿಯ ನೆನಪಿಗೆ ಮಗ ಮಾಡಿದ್ದನ್ನ ಕಂಡು ಹೆಮ್ಮೆಪಡ್ತಿದ್ದಾರೆ ಈ ಊರಿನ ಜನ!

Mar 26, 2022, 11:08 AM IST

ಕೆಟ್ಟ ಮಗನಿರಬಹುದು ಆದ್ರೆ ಕೆಟ್ಟ ತಾಯಿ ಇರೋಕೆ ಸಾಧ್ಯವಿಲ್ಲ. ತಾಯಿ (Mother) ಜೀವಂತ ದೇವರು ಇದ್ದಂತೆ. ಆದ್ರೆ ಕೆಲ ಮಕ್ಕಳು ತಮ್ಮನ್ನ ಹೆತ್ತು ಹೊತ್ತು ಬೆಳೆಸಿದ ತಾಯಿಯನ್ನ ಅವಳ ಸಂಧ್ಯಾಕಾಲದಲ್ಲಿ ಸೇವೆ ಮಾಡೋಕು ಹಿಂದೇಟು ಹಾಕ್ತಾರೆ. ಕೆಲವರಂತು ತಂದೆ-ತಾಯಿಗೆ ವಯಸ್ಸಾದ್ರೆ ಅವ್ರನ್ನ ವೃದ್ಧಾಶ್ರಮಕ್ಕೆ  ಬಿಟ್ಟು ಬಿಡ್ತಾರೆ. ಆದ್ರೆ ವಿಜಯಪುರ (Vijayapura) ಜಿಲ್ಲೆಯ ತಿಕೋಟ ತಾಲೂಕಿನ ಜಾಲಗೇರಿ ಗ್ರಾಮದ ಯಮನಪ್ಪ ಕಾಂಬಳೆ (ಸಿಂಗೆ) ಅಗಲಿದ ತನ್ನ ತಾಯಿಯ ನೆನಪಿಗಾಗಿ ಮಾಡಿದ್ದನ್ನ ನೋಡಿ..!

ಕಳೆದ 2021ರ ಮಾರ್ಚ್‌ ತಿಂಗಳಲ್ಲಿ, ಕೋವಿಡ್‌ (Covid 19) ಹೊತ್ತಿ ಉರಿಯುತ್ತಿದ್ದ ಸಮಯದಲ್ಲಿ ಯಮನಪ್ಪ ತಾಯಿ ಗುಜರಾಬಾಯಿಗು ಕೋವಿಡ್‌ ಸೋಂಕು ತಗುಲಿತ್ತು. ಈ ವೇಳೆ ಬಿಪಿ, ಶುಗರ್‌ ಅತಿಯಾಗಿ ಅಂಗಾಂಗ ವೈಪಲ್ಯದಿಂದ ಮೃತಪಟ್ಟರು. ಇದರಿಂದ ಬಹಳಷ್ಟು ನೊಂದು ಹೋದ ಯಮನಪ್ಪ ಹಗಲು ರಾತ್ರಿ ತಾಯಿಯನ್ನ ನೆನೆಯುತ್ತಲೆ ಕಣ್ಣೀರು ಹಾಕ್ತಿದ್ದ. ಜೊತೆಗೆ ತಾಯಿ ನೆನಪನ್ನ ಚಿರಸ್ಥಾಯಿಯಾಗಿಸಲು ಏನಾದ್ರು ಮಾಡಬೇಕು ಚಡಪಡಿಸುತ್ತಿದ್ದ. ಕೊನೆಗೆ ಜಾಲಗೇರಿ ಗ್ರಾಮದ ತನ್ನ ತೋಟದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ದೇಗುಲ ಕಟ್ಟಿದ್ದಾನೆ. ಜೊತೆಗೆ ಮಹಾರಾಷ್ಟ್ರದ ಪಂಡರಾಪುರದ ನುರಿತ ಶಿಲ್ಪಕಾರರಿಂದ  ಮಾರ್ಬಲ್‌ ನಲ್ಲಿ ತಾಯಿಯ ಮೂರ್ತಿಯನ್ನ ಕೆತ್ತಿಸಿ ತಂದು ಸ್ಥಾಪನೆ ಮಾಡಿದ್ದಾನೆ.. ಮಾರ್ಬಲ್‌ ಮೂರ್ತಿಗೆ ನಯವಾದ ಬಣ್ಣ ಲೇಪಿಸಿ ಥೇಟ್‌ ತಾಯಿಯಂತೆಯೇ ಕಾಣುವಹಾಗೇ ರೆಡಿ ಮಾಡಿಸಿದ್ದಾನೆ.

ಮಕ್ಕಳ ಮೇಲೆ ಬೇಕಾಬಿಟ್ಟಿ ಕಿರುಚಾಡ್ತೀರಾ? ತಾಳ್ಮೆಯಿಂದ ಇರೋದು ಹೇಗೆ ನಾವ್ ಹೇಳ್ತೀವಿ

ತಾಯಿ ಗುಜರಾಬಾಯಿ ಹಾಗೂ ತಂದೆ ದುಂಡಪ್ಪ ಕಾಂಬ್ಳೆ ದಂಪತಿಗೆ ಯಮನಪ್ಪ ಒಬ್ಬನೇ ಪುತ್ರ, ಇಬ್ಬರು ಪುತ್ರಿಯರಿದ್ದಾರೆ. ಪುತ್ರ ಯಮನಪ್ಪ, ಪುತ್ರಿಯರಾದ ರೇಣುಕಾ, ಶಾಂತಾಬಾಯಿ ಸೇರಿ ತಾಯಿ ಮೂರ್ತಿ ಕೆತ್ತಿಸಿದ್ದಾರೆ. ಕಳೆದ ದಿನಾಂಕ 21 ರಂದು ಪೂರ್ತಿಯ ಸ್ಥಾಪನೆ ಮಾಡಿದ್ದಾರೆ. ನಿತ್ಯ ತಾಯಿಯ ಮೂರ್ತಿಗೆ ಸ್ವತಃ ಯಮನಪ್ಪನೇ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುತ್ತಾನೆ. ಬೆಳಿಗ್ಗೆ ಹಾಗೂ ಸಂಜೆ ಎರೆಡು ಹೊತ್ತು ಪೂಜೆ  ನಡೆಸುತ್ತಾನೆ. ಪೂಜೆ ವೇಳೆ ಗುಜರಾಬಾಯಿ ಮೂರ್ತಿಗೆ ಹೂಗಳಿಂದ ಸಿಂಗರಿಸಲಾಗುತ್ತೆ. ಮಂಗಳರಾತಿ, ಪುಷ್ಪಾರ್ಚನೆಯನ್ನು ಮಾಡಲಾಗುತ್ತೆ. ಈ ಮೂಲಕ ತಾಯಿಯ ನೆನಪನ್ನ ಯಮನಪ್ಪ ಚಿರಸ್ಥಾಯಿಯಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ.

ಗುಜರಾಬಾಯಿ ಪತಿ ದುಂಡಪ್ಪ ಅಮೋಘ ಸಿದ್ದೇಶ್ವರ ದೇಗುಲದ ಕೊಂಬು ಕಹಳೆ ಊದುತ್ತಾರೆ. ಕೃಷಿ ಕೆಲಸವನ್ನ ಮಾಡಿಕೊಂಡಿದ್ದಾರೆ. ಗುಜರಾಬಾಯಿ ಜಾಲಗೇರಿ ಗ್ರಾಮದ ಗೌಡ್ರು, ಗ್ರಾಮಸ್ಥರೊಂದಿಗೆ ನಿಕಟ ಸಂಪರ್ಕ ಹೊಂದಿದವರು. ಗುಜರಾಬಾಯಿ ಅಗಲಿಕೆಗೆ ಈಗ ಒಂದು ವರ್ಷ ಕಳೆದಿದ್ದರಿಂದ ಮೂರ್ತಿ ಸ್ಥಾಪಿಸಿ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಸಹ ಮಾಡಲಾಗಿದೆ. ಗ್ರಾಮದ ಗೌಡ್ಕಿ ಮನೆತನದ ಗೀತಾಂಜಲಿ ಪಾಟೀಲ್ ಕುಟುಂಬಸ್ಥರು, ಗ್ರಾಮಸ್ಥರು ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಯಾವುದೇ ಜಾತಿ ಬೇಧವಿಲ್ಲದೆ ಗ್ರಾಮಸ್ಥರೆಲ್ಲ ಗುಜರಾಬಾಯಿ ಮೂರ್ತಿಗೆ ಹೂ ಮಾಲೆ, ಆರತಿ ಬೆಳಗಿ, ದೇವರಂತೆ ಕಂಡಿದ್ದು ವಿಶೇಷವಾಗಿತ್ತು. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆಗೆ ಮಾತನಾಡಿದ ಗ್ರಾಮದ ಗೌಡ್ತಿ ಗೀತಾಂಜಲಿ ಪಾಟೀಲ್‌ ನಮ್ಮ ಊರಲ್ಲಿ ಜಾತಿ ವ್ಯವಸ್ಥೆಗೆ ಅವಕಾಶ ಇಲ್ಲ, ಎಲ್ಲರೂ ಒಂದೇ, ನಮ್ಮ ಊರಲ್ಲಿ ತಾಯಿಗಾಗಿ ಮಗ ದೇಗುಲವನ್ನೆ ಕಟ್ಟಿದ್ದು ನಮ್ಮೆಲ್ಲರ ಹೆಮ್ಮೆ ಎಂದಿದ್ದಾರೆ.

ಇನ್ನು ವರ್ಷಕ್ಕೊಮ್ಮೆ ದೇಗುಲ ನಿರ್ಮಿಸಿದ ತೋಟದಲ್ಲೆ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಸಲು ಮಗ ಯಮನಪ್ಪ ಕಾಂಬಳೆ (ಸಿಂಗೆ) ನಿರ್ಧರಿಸಿದ್ದಾನೆ. ಪ್ರತಿ ವರ್ಷ ಮಾರ್ಚ್‌ ತಿಂಗಳಲ್ಲಿ ಪುಣ್ಯಸ್ಮರಣೆ ನಡೆಯಲಿದೆಯಂತೆ. ಜಾಲಗೇರಿ ಗ್ರಾಮಸ್ಥರು, ಗೌಡರು ಕೂಡ ಈ ಪುಣ್ಯಸ್ಮರಣೆಗೆ ಸಹಾಯ-ಸಹಕಾರ ನೀಡುವ ಭರವಸೆಯನ್ನ ನೀಡಿದ್ದಾರೆ. ತಾಯಿಗಾಗಿ ದೇಗುಲ, ನಿತ್ಯ ಪೂಜೆ, ವರ್ಷಕ್ಕೊಮ್ಮೆ ಪುಣ್ಯ ಸ್ಮರಣೆ ಮೂಲಕ ತಾಯಿಯ ಋಣತೀರಿಸುತ್ತಿದ್ದೇನೆ ಎನ್ತಾನೆ ಯಮನಪ್ಪ ಸಿಂಗೆ