ಸ್ಯಾಂಟ್ರೋ ರವಿ ಪ್ರಕರಣ: ಎಚ್‌ಡಿಕೆ ಮತ್ತೊಂದು ಸ್ಫೋಟಕ ಹೇಳಿಕೆ

Jan 14, 2023, 4:32 PM IST

ಬೆಂಗಳೂರು (ಜ.14): ರಾಜ್ಯದಲ್ಲಿ ಹೈಟೆಕ್ ವೇಶ್ಯಾವಾಟಿಕೆ, ಅತ್ಯಾಚಾರ, ಮಹಿಳೆಯರಿಗೆ ವಂಚನೆ ಸೇರಿದಂತೆ ಹಲವು ಪ್ರಕರಣಗಳ ಆರೋಪಿ ಸ್ಯಾಂಟ್ರೋ ರವಿ ಪ್ರಕರಣವನ್ನು ನಾನು ಬಯಲಿಗೆ ಎಳೆಯದಿದ್ದರೆ ಬಿಜೆಪಿ ಸರ್ಕಾರ ಮುಚ್ಚಿ ಹಾಕುತ್ತಿತ್ತು. ದೂರು ದಾಖಲಿಸಿದ ಮೇಲೆ ನಾಪತ್ತೆಯಾಗಿ ಪೂನಾದಲ್ಲಿದ್ದ ಸ್ಯಾಂಟ್ರೋ ರವಿಯನ್ನ ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ ಗುಜರಾತ್‌ಗೆ ಕರೆಸಿಕೊಂಡು, ಕೆಲವೊಂದು ಭರವಸೆ ಕೊಟ್ಟು ಪೊಲೀಸರ ಕೈಗೆ ಸಿಗುವಂತೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ನನ್ನ ಕಾಲದಲ್ಲಿ ನನ್ನ ಚೇಂಬರ್ ಗೆ ಬ್ರೋಕರ್ ಗಳು ಬರಲು ಅವಕಾಶ ಕೊಡುತ್ತಿರಲಿಲ್ಲ. ಈಗಿನ ಬಿಜೆಪಿ ಸರ್ಕಾರ ಬ್ರೋಕರ್ ಗಳಿಗೆ ಹೆಚ್ಚಿನ ಮಣೆ ಹಾಕಿದೆ. ನಾನು ಸುದ್ದಿಗೋಷ್ಠಿ ಮೂಲಕ ಸ್ಯಾಂಟ್ರೋ ರವಿಯ ಅಕ್ರಮಗಳ ಬಗ್ಗೆ ಮಾಹಿತಿ ಬಿಚ್ಚಿಟ್ಟ ನಂತರ ಹಲವು ಪ್ರಕರಣಗಳು ದಾಖಲಾದವು. ಇದಾದ ನಂತರ ಪೊಲೀಸರು ಬಂಧನಕ್ಕೆ ಬಲೆ ಬೀಸಿದಾಗ ಸ್ಯಾಂಟ್ರೋ ರವಿ ನಾಪತ್ತೆಯಾಗಿ ಪೂನಾದಲ್ಲಿ ಅಡಗಿಕೊಂಡಿದ್ದನು. ಆದರೆ, ಪೂನಾದಿಂದ ಗುಜರಾತ್ ಗೆ ಯಾಕೆ ಕರೆಸ್ಕೊಂಡರು ಗೊತ್ತಿಲ್ಲ. ಅಲ್ಲಿ ಅವನಿಗೆ ಏನೇನು ಭರವಸೆ ಕೊಟ್ರು? ಇದೆಲ್ಲ ಹೊರಗೆ ಬರಬೇಕು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಆರೋಪ ಮಾಡಿದ್ದಾರೆ.